ಶಿವರಾತ್ರಿಗೆ ಅನ್ಯಕೋಮಿನವರಿಂದ ಶಿವಲಿಂಗಕ್ಕೆ ಪುಷ್ಪಾಲಂಕಾರ; ಗೋಮೂತ್ರದಿಂದ ಮಂದಿರ 'ಶುದ್ಧೀಕರಿಸಿದ' ಹಿಂದೂ ಸೇನೆ!

Published : Feb 16, 2026, 02:18 PM IST

ಕಲಬುರಗಿಯ ರಾಮತೀರ್ಥ ಶಿವ ಮಂದಿರದಲ್ಲಿ ಮಹಾಶಿವರಾತ್ರಿಯಂದು ಅನ್ಯಕೋಮಿನ ಯುವಕರಿಂದ ಶಿವಲಿಂಗಕ್ಕೆ ಪುಷ್ಪಾಲಂಕಾರ ಮಾಡಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಕ್ರಮವನ್ನು ಖಂಡಿಸಿದ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು, ದೇವಸ್ಥಾನದ ಆವರಣವನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
15

ಕಲಬುರಗಿ (ಫೆ.16): ಮಹಾಶಿವರಾತ್ರಿಯ ಸಂಭ್ರಮದ ನಡುವೆಯೇ ಕಲಬುರಗಿ ನಗರದ ರಾಮತೀರ್ಥದಲ್ಲಿರುವ ಪುರಾತನ ಶಿವನ ಮಂದಿರದಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದೆ. ಶಿವಲಿಂಗಕ್ಕೆ ಅನ್ಯಕೋಮಿನ ಯುವಕರಿಂದ ಪುಷ್ಪಾಲಂಕಾರ ಮಾಡಿಸಿದ ದೇವಸ್ಥಾನದ ಟ್ರಸ್ಟ್‌ನ ಕ್ರಮವನ್ನು ಖಂಡಿಸಿರುವ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು, ಇಂದು ದೇವಸ್ಥಾನದ ಆವರಣವನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

25

ನಿನ್ನೆ ರಾಜ್ಯಾದ್ಯಂತ ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿಯನ್ನು ಆಚರಿಸಲಾಯಿತು. ಕಲಬುರಗಿ ನಗರದ ರಾಮತೀರ್ಥದಲ್ಲಿರುವ ಪ್ರಸಿದ್ಧ ಶಿವನ ಮಂದಿರದಲ್ಲಿಯೂ ವಿಶೇಷ ಪೂಜೆ ಹಾಗೂ ಅಲಂಕಾರಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದೇವಸ್ಥಾನದ ಟ್ರಸ್ಟ್ ವತಿಯಿಂದ ಶಿವಲಿಂಗಕ್ಕೆ ಮಾಡಲಾಗುವ ಪುಷ್ಪಾಲಂಕಾರದ ಜವಾಬ್ದಾರಿಯನ್ನು ಅನ್ಯಕೋಮಿನ ಕೆಲ ಯುವಕರಿಗೆ ವಹಿಸಲಾಗಿತ್ತು ಎನ್ನಲಾಗಿದೆ. ಶಿವಲಿಂಗವನ್ನು ಅನ್ಯಕೋಮಿನವರು ಸ್ಪರ್ಶಿಸಿ ಅಲಂಕಾರ ಮಾಡಿರುವುದು ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿತ್ತು.

35

ದೇವಸ್ಥಾನದ ಟ್ರಸ್ಟ್‌ನ ಈ ನಿರ್ಧಾರದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕೆಂಡಾಮಂಡಲವಾದ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ಲಗ್ಗೆ ಇಟ್ಟರು. ಅನ್ಯಕೋಮಿನವರಿಂದ ಪವಿತ್ರ ಶಿವಲಿಂಗಕ್ಕೆ ಅಲಂಕಾರ ಮಾಡಿಸಿದ್ದು ಧಾರ್ಮಿಕ ನಿಯಮಗಳಿಗೆ ವಿರುದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ತಮ್ಮೊಂದಿಗೆ ತಂದಿದ್ದ ಗೋಮೂತ್ರವನ್ನು ದೇವಸ್ಥಾನದ ಆವರಣ ಹಾಗೂ ಗರ್ಭಗುಡಿಯ ಸುತ್ತಲೂ ಸಿಂಪಡಿಸಿ 'ಶುದ್ಧೀಕರಣ' ಕಾರ್ಯ ನೆರವೇರಿಸಿದರು.

45

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜಾಗೃತಿ ಸೇನೆಯ ಮುಖಂಡ ಲಕ್ಷ್ಮೀಕಾಂತ ಸ್ವಾದಿ, 'ಶಿವನ ಮಂದಿರದ ಪವಿತ್ರತೆಯನ್ನು ಕಾಪಾಡುವುದು ಟ್ರಸ್ಟ್‌ನ ಕರ್ತವ್ಯ. ಆದರೆ ರಾಮತೀರ್ಥ ಟ್ರಸ್ಟ್‌ನವರು ಉದ್ದೇಶಪೂರ್ವಕವಾಗಿ ಅನ್ಯಕೋಮಿನವರಿಂದ ಶಿವಲಿಂಗಕ್ಕೆ ಪುಷ್ಪಾಲಂಕಾರ ಮಾಡಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಹಿಂದೂ ದೇವಸ್ಥಾನಗಳಲ್ಲಿ ಸನಾತನ ಧರ್ಮದ ವಿಧಿವಿಧಾನಗಳನ್ನು ಪಾಲಿಸುವವರಿಂದಲೇ ಇಂತಹ ಕಾರ್ಯಗಳು ನಡೆಯಬೇಕು. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ' ಎಂದು ಕಿಡಿಕಾರಿದರು.

55

ಟ್ರಸ್ಟ್‌ನ ಈ ನಡೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಟ್ರಸ್ಟ್ ಸದಸ್ಯರು ಈ ಬಗ್ಗೆ ಮೌನ ವಹಿಸಿದ್ದು, ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನದ ಸುತ್ತಮುತ್ತ ಪೊಲೀಸರು ನಿಗಾ ವಹಿಸಿದ್ದಾರೆ.

Read more Photos on
click me!

Recommended Stories