ಹುಸ್ಕೂರು ಮದ್ದೂರಮ್ಮ ಜಾತ್ರೆ ಕುರ್ಜುಗಳ ಎತ್ತರಕ್ಕೆ ಬಿದ್ದ ಕಡಿವಾಣ; ಗಲಿವರನ ಬದಲು ಛೋಟಾ ಭೀಮ್ ನೋಡಿದಂಗಾಯ್ತೆಂದ ಜನ!

Published : Mar 15, 2026, 10:50 AM IST

ಆನೇಕಲ್‌ನ ಐತಿಹಾಸಿಕ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಕಳೆದ ವರ್ಷ 150 ಅಡಿ ಎತ್ತರದ ಕುರ್ಜು ನಿರ್ಮಿಸಿದಾಗ ನಡೆದ ದುರಂತದ ಹಿನ್ನೆಲೆಯಲ್ಲಿ, ಕುರ್ಜುಗಳ ಎತ್ತರವನ್ನು 80 ಅಡಿಗೆ ಸೀಮಿತಗೊಳಿಸಲಾಗಿತ್ತು. ಆದರೆ, ಜನರು ಅಜಾನುಬಾಹು ಗಲಿವರನನ್ನು ನೋಡುತ್ತಿದ್ದ ನಮಗೆ ಛೋಟಾ ಭೀಮ್ ನೊಡಿದಂಗಾಯ್ತು ಎಂದರು.

PREV
15
ಮದ್ದೂರಮ್ಮ ಜಾತ್ರೆ ಕುರ್ಜುಗಳ ಎತ್ತರಕ್ಕೆ ಮಿತಿ

ಬೆಂಗಳೂರು ಗ್ರಾಮಾಂತರ (ಮಾ.15): ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಹಾಗೂ ಧರ್ಮರಾಯ ಸ್ವಾಮಿ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಈ ಭಾಗದ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿರುವ ಗಗನಚುಂಬಿ 'ಕುರ್ಜು'ಗಳ (Kurju) ಮೆರವಣಿಗೆಯು ಸಾವಿರಾರು ಭಕ್ತಾದಿಗಳ ಕಣ್ಮನ ಸೆಳೆಯಿತು. ಕಳೆದ ಬಾರಿಯ ಕಹಿ ಘಟನೆಯ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾಡಳಿತದ ಕಟ್ಟುನಿಟ್ಟಿನ ನಿಯಮಗಳ ನಡುವೆಯೇ ಜಾತ್ರೆ ಯಶಸ್ವಿಯಾಗಿ ನೆರವೇರಿತು.

25
ಕುರ್ಜುಗಳ ಕಲರವ

ಹುಸ್ಕೂರು ಜಾತ್ರೆಯ ಪ್ರಮುಖ ಆಕರ್ಷಣೆಯೇ ಕುರ್ಜುಗಳು. ಸುಂದರವಾಗಿ ಅಲಂಕರಿಸಲ್ಪಟ್ಟ ಈ ಎತ್ತರದ ಗೋಪುರ ಮಾದರಿಯ ಕುರ್ಜುಗಳನ್ನು ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಜನಸಾಗರವೇ ಹರಿದುಬಂದಿತ್ತು. ಈ ಬಾರಿ ಒಟ್ಟು 17 ಕುರ್ಜುಗಳನ್ನು ವಿವಿಧ ಗ್ರಾಮಗಳ ಜನರು ಶ್ರದ್ಧಾ ಭಕ್ತಿಯಿಂದ ನಿರ್ಮಿಸಿ ಮದ್ದೂರಮ್ಮ ದೇವಿಯ ಸನ್ನಿಧಿಗೆ ತಂದಿದ್ದರು. ಇದರಲ್ಲಿ ದೊಡ್ಡನಾಗಮಂಗಲ ಗ್ರಾಮದ ಕುರ್ಜು ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು.

35
ಸುರಕ್ಷತೆಗೆ ಆದ್ಯತೆ - 80 ಅಡಿಗೆ ಮಿತಿ

ಕಳೆದ ವರ್ಷ ಜಾತ್ರೆಯ ವೇಳೆ 150 ಅಡಿಗೂ ಅಧಿಕ ಎತ್ತರದ ಕುರ್ಜುಗಳನ್ನು ನಿರ್ಮಿಸಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಎರಡು ಕುರ್ಜುಗಳು ನಿಯಂತ್ರಣ ತಪ್ಪಿ ನೆಲಕ್ಕುರುಳಿದ ಕಾರಣ ಮೂವರು ಪ್ರಾಣ ಕಳೆದುಕೊಂಡಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಈ ದುರಂತದಿಂದ ಎಚ್ಚೆತ್ತ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ, ಈ ಬಾರಿ ಭಕ್ತರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದೆ. ಯಾವುದೇ ಕಾರಣಕ್ಕೂ ಕುರ್ಜುಗಳ ಎತ್ತರ 80 ಅಡಿ ಮೀರಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿತ್ತು. ಅದರಂತೆ ಈ ಬಾರಿ ಎಲ್ಲಾ ಕುರ್ಜುಗಳು 80 ಅಡಿಗೆ ಸೀಮಿತವಾಗಿದ್ದು, ಯಾವುದೇ ಅಪಾಯವಿಲ್ಲದಂತೆ ಶಾಂತಿಯುತವಾಗಿ ಸಾಗಿದವು.

45
ಆನೆ ಮತ್ತು ಒಂಟೆಗಳ ಸಾರಥ್ಯ

ಸಾಮಾನ್ಯವಾಗಿ ಕುರ್ಜುಗಳನ್ನು ಎತ್ತುಗಳ ಸಹಾಯದಿಂದ ಎಳೆಯಲಾಗುತ್ತಿತ್ತು. ಆದರೆ ಈ ಬಾರಿ ಮೆರವಣಿಗೆಗೆ ಹೊಸ ಮೆರುಗು ನೀಡುವ ಸಲುವಾಗಿ ಆನೆ ಮತ್ತು ಒಂಟೆಗಳನ್ನು ಬಳಸಲಾಗಿತ್ತು. ಆನೆ ಮತ್ತು ಒಂಟೆಗಳು ಗಂಭೀರವಾಗಿ ಹೆಜ್ಜೆ ಹಾಕುತ್ತಾ ಭವ್ಯ ಕುರ್ಜುಗಳನ್ನು ಎಳೆಯುತ್ತಿರುವ ದೃಶ್ಯ ನೋಡುಗರಿಗೆ ರೋಮಾಂಚನ ನೀಡಿತು.

55
ಮದ್ಯ ಮಾರಾಟ ನಿಷೇಧ

ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್ ಅವರು ಮದ್ಯ ಮಾರಾಟ ನಿಷೇಧಿಸಿ ಆದೇಶಿಸಿದ್ದರು. ಪರಪ್ಪನ ಅಗ್ರಹಾರ ಹಾಗೂ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ 14ರ ಬೆಳಗ್ಗೆ 6 ಗಂಟೆಯಿಂದ ಮಾರ್ಚ್ 15ರ ರಾತ್ರಿ 11 ಗಂಟೆಯವರೆಗೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಸ್ಟಾರ್ ಹೋಟೆಲ್ ಮತ್ತು ಕ್ಲಬ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿತ್ತು.

Read more Photos on
click me!

Recommended Stories