ಹಿಂದೂ ಮಹಾಗಣಪತಿ ವಿಸರ್ಜನೆ: ಕೇಸರಿಮಯವಾದ ಶಿವಮೊಗ್ಗ..!

First Published Sep 28, 2023, 11:48 AM IST

ಶಿವಮೊಗ್ಗ(ಸೆ.28):  ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಶಿವಮೊಗ್ಗ ಈಗ ಸಂಪೂರ್ಣ ಕೇಸರಿಮಯವಾಗಿದೆ. ಗುರುವಾರ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳು ಕೇಸರಿಮಯಗೊಂಡಿವೆ.

ಮಲೆನಾಡು ಜಿಲ್ಲೆ, ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಶಿವಮೊಗ್ಗ ಜಿಲ್ಲೆ ಈಚೇಗೆ ಕೋಮುದಳ್ಳುರಿಯಿಂದ ನಲುಗಿಹೋಗಿದೆ. ಪದೇಪದೇ ಅಶಾಂತಿಯಿಂದ ಶಿವಮೊಗ್ಗದಲ್ಲಿ ಶಾಂತಿ, ಸುವ್ಯವಸ್ಥೆ ಕದಡುವಂತಾಗಿತ್ತು. ಈ ಬಾರಿ ಹಿಂದು ಮಹಾಸಭಾ ಗಣಪತಿ ವಿಸರ್ಜನೆ ಶಾಂತಿಯುತವಾಗಿ ನಡೆಯಲು ಮುಸ್ಲಿಂ ಸಮುದಾಯದವರು ಕೈ ಜೋಡಿಸಿದ್ದು, ಗುರುವಾರ ನಡೆಯಬೇಕಿದ್ದ ಈದ್‌ ಮಿಲಾದ್‌ ಹಬ್ಬದ ಮೆರವಣಿಯನ್ನು ಮುಂದೂಡಿದ್ದಾರೆ. ಶಾಂತಿ-ಸೌಹಾರ್ದತೆಯಿಂದ ಗಣಪತಿ ವಿಸರ್ಜನೆಗೆ ಎಲ್ಲ ಸಮುದಾಯದವರು ಸಹಕಾರ ನೀಡಿದ್ದಾರೆ.

ಇಡೀ ಶಿವಮೊಗ್ಗದಲ್ಲಿ ಕೇಸರಿಮಯವಾದ ಅಲಂಕಾರ ಮಾಡಲಾಗಿದ್ದು, ಅದರಲ್ಲೂ ಗಾಂಧಿ ಬಜಾರ್‌ನ ಮುಖ್ಯದ್ವಾರದಲ್ಲಿ ನಿರ್ಮಾಣ ಮಾಡಲಾಗಿರುವ ಉಗ್ರನರಸಿಂಹನ ಪ್ರತಿರೂಪದ ಅಲಂಕಾರವಂತೂ ಕಣ್ಣಿಗೆ ಕಟ್ಟುವಂತೆ ರಾರಾಜಿಸುತ್ತಿದೆ. ಶಿವಪ್ಪ ನಾಯಕ ವೃತ್ತದಲ್ಲಿ ಶ್ರೀರಾಮ ಹಾಗೂ ಶಿವಾಜಿ ಮಹಾರಾಜರ ವಿಗ್ರಹ, ಅಮೀರ್ ಅಹಮ್ಮದ್ ವೃತ್ತದಿಂದ ಶಿಶಿರನ ಅಂಗಳಕ್ಕೆ ಚಿಮ್ಮಲು ಸಜ್ಜಾದ ಚಂದ್ರಯಾನ-3, ನ್ಯೂಮಂಡ್ಲಿ ಬಳಿ ರಾಮದ್ವಾರ ನಿರ್ಮಾಣ. ಹೀಗೆ ಹಲವಡೆ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ವಿಶೇಷ ಅಲಂಕಾರಗಳು ತಲೆಯೆತ್ತಿವೆ.

ಇನ್ನೂ ಶಿವಮೊಗ್ಗ ಪೊಲೀಸ್‌ ಇಲಾಖೆಯೂ ವಿಘ್ನನಿವಾರಕನ ಮೆರವಣಿಗೆ ಶಾಂತಿಯುತವಾಗಿ ನಡೆಯಲಿ ಎಂಬ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ಜನರು ಕುಟುಂಬ ಸಮೇತರಾಗಿ ಬಂದು ನೋಡಲಿ ಎಂಬ ನಿಟ್ಟಿನಲ್ಲಿ ಶಿವಮೊಗ್ಗವನ್ನು ವಿಶೇಷ ಅಲಂಕಾರ ಮಾಡಲಾಗಿದೆ. ಎಲ್ಲೆಲ್ಲೂ, ಬೀದಿ, ಬೀದಿಗಳಲ್ಲಿ ವೃತ್ತಗಳಲ್ಲಿ ಸಂಪೂರ್ಣ ಕೇಸರಿಮಯವಾಗಿ ಕಂಗೊಳಿಸುತ್ತಿದೆ.

ಎಸ್‌ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಬಿ.ಎಚ್.ರಸ್ತೆ, ಅಶೋಕ ವೃತ್ತ, ನೆಹರೂ ರಸ್ತೆ, ಗೋಪಿವೃತ್ತ, ದುರ್ಗಿಗುಡಿ, ಮಹಾವೀರ ವೃತ್ತ, ಬಾಲರಾಜ್ ಅರಸು ರಸ್ತೆ ಸೇರಿದಂತೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಕೇಸರಿ ಬಾವುಟ, ಬ್ಯಾನರ್, ಬಂಟಿಂಗ್ಸ್ ರಾರಾಜಿಸುತ್ತಿವೆ. ಪ್ರಮುಖ ವೃತ್ತಗಳನ್ನು ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ತಳಿರು ತೋರಣಗಳು ಕೇಸರಿ ಬಾವುಟಗಳನ್ನು ಕಟ್ಟಲಾಗಿದೆ.

ಉಗ್ರ ನರಸಿಂಹಸ್ವಾಮಿಯು ಹಿರಣ್ಯ ಕಶ್ಯಪನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸಂಹಾರ ಮಾಡಿದ್ದ. ಅದರ ಪ್ರತಿರೂಪವನ್ನು ಗಾಂಧಿ ಬಜಾರ್ ಮುಖ್ಯ ದ್ವಾರದಲ್ಲಿ ಚಿತ್ರಿಸಲಾಗಿದೆ. ಇದು ನೋಡುಗರನ್ನು ಹುಬ್ಬೇರಿಸುವಂತಿದೆ. ಈ ವಿಗ್ರಹವನ್ನು ನೋಡಲು ಜನಸ್ತೋಮವೇ ತಂಡೋಪತಂಡವಾಗಿ ಬರುತ್ತಿದ್ದಾರೆ. ವಿಗ್ರಹದ ಮುಂದೆ ಜನರು ಸೆಲ್ಪಿ ತೆಗೆದುಕೊಳ್ಳುತ್ತಿದ್ದಾರೆ.

ಓತಿಘಟ್ಟದಲ್ಲಿರುವ ಜೀವನ್ ಕಲಾ ಸನ್ನಿಧಿಯಲ್ಲಿ ಕಲಾವಿದ ಜೀವನ್ ಮತ್ತು ಅವರ ತಂಡ ಈ ಬಾರಿಯ ನರಸಿಂಹಸ್ವಾಮಿಯ ಉಗ್ರಾವತಾರದ ಪ್ರತಿಮೆ ನಿರ್ಮಿಸಿದ್ದಾರೆ. ಮೂರು ತಿಂಗಳು 20 ಕಲಾವಿದರು ಇದಕ್ಕಾಗಿ ಕೆಲಸ ಮಾಡಿದ್ದಾರೆ.

ನಗರದ ನ್ಯೂಮಂಡ್ಲಿ ಬಳಿ ರಾಮದ್ವಾರ ನಿರ್ಮಾಣ ಮಾಡಲಾಗಿದೆ. ದ್ವಾರದ ಮೇಲಿಂದ ಶ್ರೀರಾಮ ಬಾಣ ಬಿಡುತ್ತಿರುವ ಕಲಾಕೃತಿ ನಿರ್ಮಾಣ ಮಾಡಲಾಗಿದೆ. ಇನ್ನು ಶಿವಪ್ಪ ನಾಯಕ ವೃತ್ತದ ಬಳಿ ಶ್ರೀರಾಮ, ಆಂಜನೇಯ ಹಾಗೂ ಶಿವಾಜಿ ಮಹಾರಾಜರ ವಿಗ್ರಹ ಸ್ಥಾಪನೆ ಮಾಡಲಾಗಿದೆ.

ವಿಶ್ವ ಹಿಂದೂ ಪರಿಷದ್‌ನಿಂದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಟಾಪಿಸಿರುವ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಸೆ.28ರಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ. ಬಜರಂಗದಳ, ವಿಶ್ವ ಹಿಂದು ಪರಿಷತ್, ಹಿಂದು ಮಹಾಸಭಾ ಸೇರಿದಂತೆ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು, ಅಪಾರ ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಲಿದ್ದಾರೆ.

ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಗರದ ಎಲ್ಲೆಡೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಸಿಸಿ ಟಿವಿ, ದಿವ್ಯದೃಷ್ಠಿ ಕಣ್ಗಾವಲು ಹಾಗೂ ಡ್ರೋಣ್ ಕ್ಯಾಮೆರಾಗಳಲ್ಲಿ ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಲಾಗಿದೆ. ಎ.ಎ. ಸರ್ಕಲ್‌ನಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಆರೆಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ. ಪೊಲೀಸರು ವಿಶೇಷವಾಗಿ ಮಫ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಗುರುವಾರ ನಡೆಯಲಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ಕಾರ್ಯಕ್ಕೆ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.

Latest Videos

click me!