ಹಾಸನದಲ್ಲಿ ಉಪಟಳ ನೀಡುತ್ತಿದ್ದ 3 ಕಾಡಾನೆಗಳ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು!
ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಬೇಲೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿತ್ತು. ಅರಣ್ಯ ಇಲಾಖೆಯು ಕಾರ್ಯಾಚರಣೆ ನಡೆಸಿ ಮೂರು ಆನೆಗಳನ್ನು ಸೆರೆ ಹಿಡಿದಿದೆ.
ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಬೇಲೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿತ್ತು. ಅರಣ್ಯ ಇಲಾಖೆಯು ಕಾರ್ಯಾಚರಣೆ ನಡೆಸಿ ಮೂರು ಆನೆಗಳನ್ನು ಸೆರೆ ಹಿಡಿದಿದೆ.
ಹಾಸನ/ಬೆಂಗಳೂರು (ಮಾ.23): ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಬೇಲೂರು ಸುತ್ತಮುತ್ತ ಅನೇಕ ಗ್ರಾಮಗಳಿಗೆ ಭೀಕರ ಸಮಸ್ಯೆಯಾಗಿದ್ದ ಆನೆಗಳ ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, 'ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ಸುತ್ತಮುತ್ತ ಜನರಿಗೆ ತೀವ್ರ ಉಪಟಳ ನೀಡುತ್ತಿದ್ದ ಆನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಸಕಲೇಶಪುರ ಮತ್ತು ಬೇಲೂರು ಸುತ್ತಮುತ್ತ ಅನೇಕ ಗ್ರಾಮಗಳಿಗೆ ಭೀಕರ ಸಮಸ್ಯೆಯಾಗಿದ್ದ ಆನೆಗಳ ಉಪಟಳ ತಡೆಯಲು ಅರಣ್ಯ ಇಲಾಖೆ ಮಾರ್ಚ್ 16ರಿಂದ ಕಾರ್ಯಾಚರಣೆ ಆರಂಭಿಸಿತ್ತು. ಇಂದು, ಹೆಬ್ಬನಹಳ್ಳಿ ಗ್ರಾಮದ ಬಳಿ 3ನೇ ಆನೆಯನ್ನೂ ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಈ ಮೂಲಕ ಕಳೆದ ಒಂದು ವಾರದಲ್ಲಿ ಒಟ್ಟು 3 ಆನೆಗಳನ್ನು ಸೆರೆ ಹಿಡಿಯಲಾಗಿದ್ದು, ಈ ಭಾಗದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಪ್ರಾಣದ ಹಂಗು ತೊರೆದು ಪುಂಡಾನೆಗಳ ಸೆರೆ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಮಾವುತರು, ಪಶುವೈದ್ಯರು ಮತ್ತು ಮುಂಚೂಣಿ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಮಾನವ-ಆನೆ ಸಂಘರ್ಷ ನಿಯಂತ್ರಿಸಲು ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ಮತ್ತೊಮ್ಮೆ ಪುನರುಚ್ಛರಿಸುತ್ತೇನೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.