ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮದಲ್ಲಿ, ಬಟ್ಟೆ ತೊಳೆಯಲು ಕೃಷಿಹೊಂಡಕ್ಕೆ ತೆರಳಿದ್ದ ಇಬ್ಬರು ಬಾಲಕಿಯರು ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಲಕ್ಷ್ಮವ್ವ (15) ಮತ್ತು ಮುತ್ತವ್ವ (8) ಮೃತಪಟ್ಟಿದ್ದು, ಈ ಹೃದಯವಿದ್ರಾವಕ ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಬಟ್ಟೆ ತೊಳೆಯಲು ಹೋದ ಇಬ್ಬರು ಬಾಲಕಿಯರು ಕೃಷಿಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಗದಗ ತಿಮ್ಮಾಪೂರ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯರನ್ನು ಲಕ್ಷ್ಮವ್ವ ಹರಣಶಿಕಾರಿ(15), ಮುತ್ತವ್ವ ಹರಣಶಿಕಾರಿ(8) ಎಂದು ಗುರುತಿಸಲಾಗಿದೆ.
24
ಲಕ್ಷ್ಮವ್ವ ಮತ್ತು ಮುತ್ತವ್ವ
ಗ್ರಾಮದ ಕೆರೆಯಲ್ಲಿ ನೀರು ಇಲ್ಲದ ಕಾರಣ ಲಕ್ಷ್ಮವ್ವ ಮತ್ತು ಮುತ್ತವ್ವ ಜೊತೆಯಾಗಿ ಬಟ್ಟೆ ತೊಳೆಯಲು ಕೃಷಿಹೊಂಡಕ್ಕೆ ತೆರಳಿದ್ದರು. ಗ್ರಾಮದ ಹೊರವಲಯದ ತಿಮ್ಮಾಪೂರ-ಯರೇಹಂಚಿನಾಳ ರಸ್ತೆಯಲ್ಲಿರುವ ಕೃಷಿಹೊಂಡದಲ್ಲಿ ಇಬ್ಬರು ಆಯತಪ್ಪಿ ಬಿದ್ದಿದ್ದಾರೆ.
34
ಕುಟುಂಬಸ್ಥರ ಕಣ್ಣೀರು
ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರೇ ಕೃಷಿಹೊಂಡಕ್ಕೆ ಇಳಿದು ಇಬ್ಬರು ಬಾಲಕಿಯರ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಕೃಷಿಹೊಂಡದ ಬಳಿ ತಿಮ್ಮಾಪೂರ ಗ್ರಾಮಸ್ಥರು ನೆರೆದಿದ್ದು, ಕುಟುಂಬಸ್ಥರು ಶವಗಳನ್ನು ಬಿಗಿದಪ್ಪಿಕೊಂಡು ಕಣ್ಣೀರು ಹಾಕುತ್ತಿದ್ದು, ಇಡೀ ಊರಿಗೆ ಊರೇ ಮೌನವಾಗಿದೆ.
ಸ್ಥಳಕ್ಕೆ ಕೊಪ್ಪಳ ಜಿಲ್ಲೆ ಕುಕನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು. ಬಾಲಕಿಯರು ಹೇಗೆ ಕೃಷಿಹೊಂಡಕ್ಕೆ ಬಿದ್ರು ಎಂಬುದರ ಬಗ್ಗೆ ಸ್ಪಷ್ಟತೆ ಲಭ್ಯವಾಗಿಲ್ಲ. ಈ ಸಂಬಂಧ ಪೊಲೀಸರು ಕುಟುಂಬಸ್ಥರು ಮತ್ತು ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕುಕನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.