ಕಲಬುರಗಿಯ ಹೈಕೋರ್ಟ್ ವೃತ್ತದಲ್ಲಿ ಅಭಿಮಾನಿಗಳು ರಾತ್ರೋರಾತ್ರಿ ಅನಧಿಕೃತವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ 9 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಿದ್ದರು. ವಿಷಯ ತಿಳಿದ ತಕ್ಷಣ ಎಚ್ಚೆತ್ತ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಬೆಳಗಿನ ಜಾವವೇ ಪ್ರತಿಮೆಯನ್ನು ತೆರವುಗೊಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಅತಿದೊಡ್ಡ ನಗರ ಕಲಬುರಗಿಯ ಪ್ರಮುಖ ವೃತ್ತವೊಂದರಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೆ, ರಾತ್ರೋರಾತ್ರಿ ಸ್ಥಾಪಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮಾಜಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಸದ್ಯ ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ, ಅಭಿಮಾನಿಗಳು ಈ ರೀತಿ ಮೂರ್ತಿ ಪ್ರತಿಷ್ಠಾಪಿಸಿರುವುದು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
25
ರಾತ್ರೋರಾತ್ರಿ ಪ್ರತಿಷ್ಠಾಪನೆಗೊಂಡ 9 ಅಡಿ ಮೂರ್ತಿ:
ಕಲಬುರಗಿ ನಗರದ ಜನನಿಬಿಡ ಹೈಕೋರ್ಟ್ ಕ್ರಾಸ್ (ವೃತ್ತ) ಬಳಿ ಗುರುವಾರ ಮುಂಜಾನೆ ಸುಮಾರು 9 ಅಡಿ ಎತ್ತರದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರತಿಮೆ ಕಾಣಿಸಿಕೊಂಡಿತ್ತು. ಏಳೆಂಟು ಜನರ ಅಭಿಮಾನಿಗಳ ಗುಂಪು ರಾತ್ರೋರಾತ್ರಿ ಯಾವುದೇ ಅಧಿಕೃತ ಅನುಮತಿಯನ್ನು ಪಡೆಯದೆ ಈ ಪ್ರತಿಮೆಯನ್ನು ರಹಸ್ಯವಾಗಿ ಪ್ರತಿಷ್ಠಾಪಿಸಿತ್ತು. ಇದರೊಂದಿಗೆ ಈ ಹಿಂದೆ ಯಾವುದೇ ಅಧಿಕೃತ ಅನುಮತಿ ಇಲ್ಲದೆಯೇ 'ಸಿದ್ದರಾಮಯ್ಯ ಸರ್ಕಲ್' ಹೆಸರಿನ ಬ್ಯಾನರ್ ಅಳವಡಿಸಲಾಗಿತ್ತು ಎಂಬ ಅಂಶವೂ ಮುನ್ನೆಲೆಗೆ ಬಂದಿದೆ.
35
ಜನರು ನೋಡುವ ಮುನ್ನವೇ ಮುಖ ಮುಚ್ಚಿದ ಪಾಲಿಕೆ:
ಇನ್ನು ರಾತ್ರಿ ವೇಳೆ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿದ ನಂತರ, ರಾತ್ರಿಯೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ವೈರಲ್ ಆಗಿದ್ದವು. ಆದರೆ, ಈ ಬಗ್ಗೆ ಹಿರಿಯ ಅಧಿಕಾರಿಗಳು ಅನುಮತಿ ಕೊಟ್ಟಿದ್ದಾದರೂ ಯಾರು ಎಂದು ಪ್ರಶ್ನೆ ಮಾಡಿದಾಗ ಅನುಮತಿ ಪಡೆಯದೇ ಅನಧಿಕೃತವಾಗಿ ಪ್ರತಿಮೆ ನಿಲ್ಲಿಸಿರುವುದು ತಿಳಿದುಬಂದಿದೆ. ಹೀಗಾಗಿ, ಬೆಳಗ್ಗೆ ಜನರು ಬಂದು ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ನೋಡುವ ಮುನ್ನವೇ ಪಾಲಿಕೆ ಸಿಬ್ಬಂದಿ ಪ್ರತಿಮೆಯ ಮುಖವನ್ನು ಮುಚ್ಚಿದ್ದರು.
ಅನುಮತಿಯಿಲ್ಲದೆ ಪ್ರತಿಮೆ ಸ್ಥಾಪಿಸಿರುವ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ, ಪಾಲಿಕೆ ಸಿಬ್ಬಂದಿ ಹೈಕೋರ್ಟ್ ವೃತ್ತದಲ್ಲಿ ಅಳವಡಿಸಿದ್ದ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಬೆಳಗಿನ ಜಾವವೇ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.
55
ರಾಜ್ಯಮಟ್ಟದಲ್ಲಿ ಚರ್ಚೆಗೆ ಕಾರಣ:
ವಿಶೇಷವೆಂದರೆ, ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿಗಳು ಹಾಗೂ ಗಣ್ಯರು ಕಲಬುರಗಿ ಪ್ರವಾಸದಲ್ಲಿದ್ದಾರೆ. ಸಿದ್ದರಾಮಯ್ಯ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿರುವ ಅದೇ ವೃತ್ತದ ಮೂಲಕ ಅಫಜಲಪುರಕ್ಕೆ ತೆರಳಬೇಕಿದ್ದ ಈ ಸಂದರ್ಭದಲ್ಲಿ, ಈ ಅಕ್ರಮ ಪ್ರತಿಮೆ ತೆರವು ಕಾರ್ಯಾಚರಣೆ ನಡೆದಿರುವುದು ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ. ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮೂರ್ತಿಗಳನ್ನು ಸ್ಥಾಪಿಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.