ಗೊಲ್ಲರಹಟ್ಟಿ ಕಾವ್ಯಾಳನ್ನು 8 ವರ್ಷ ಪ್ರೀತಿಸಿ, ನಿಶ್ಚಿತಾರ್ಥ ಬಳಿಕ ವರದಕ್ಷಿಣೆಗಾಗಿ ಕೈಕೊಡಲು ಮುಂದಾದ ಶಿಕ್ಷಕ!

Published : Feb 27, 2026, 07:43 PM IST

ಚಿತ್ರದುರ್ಗದಲ್ಲಿ ಎಂಟು ವರ್ಷ ಪ್ರೀತಿಸಿ ವರದಕ್ಷಿಣೆಗಾಗಿ ಮದುವೆಗೆ ನಿರಾಕರಿಸಿದ ಸರ್ಕಾರಿ ಶಾಲಾ ಶಿಕ್ಷಕನ ವಿರುದ್ಧ ಯುವತಿ ದೂರು ನೀಡಿದ್ದಾಳೆ. ದೂರಿನ ನಂತರ ಪ್ರೇಯಸಿಯನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದು, ಮದುವೆ ನೋಂದಣಿ ವೇಳೆ ಮತ್ತೆ ಹೈಡ್ರಾಮಾ ನಡೆಸಿ ಗೊಂದಲ ಸೃಷ್ಟಿಸಿದ್ದಾನೆ.

PREV
17
ಎಂಟು ವರ್ಷಗಳ ಪ್ರೀತಿಗೆ ಮೋಸ

ಚಿತ್ರದುರ್ಗ ಜಿಲ್ಲೆಯಲ್ಲಿ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಶಿಕ್ಷಕನಿಂದಲೇ ಮೋಸವಾಗಿದೆ ಎಂದು ಆರೋಪಿಸಿ ಯುವತಿ ಪೊಲೀಸರ ಮೊರೆ ಹೋಗಿರುವ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ನಿಶ್ಚಿತಾರ್ಥದವರೆಗೆ ಬಂದಿದ್ದ ಸಂಬಂಧವನ್ನು ಏಕಾಏಕಿ ಮುರಿದುಕೊಂಡು, ವರದಕ್ಷಿಣೆ ಆಸೆಗೆ ಬೇರೊಬ್ಬರೊಂದಿಗೆ ಮದುವೆಗೆ ಸಿದ್ಧನಾಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

27
ಪೊಲೀಸ್ ಠಾಣೆಯಲ್ಲಿ ದೂರು

ಚಿತ್ರದುರ್ಗ ತಾಲೂಕಿನ ಇಸಾಮುದ್ರ ಗೊಲ್ಲರಹಟ್ಟಿ ಗ್ರಾಮದ ಕಾವ್ಯ ಎಂಬ ಯುವತಿ, ತಣಿಗೆಹಳ್ಳಿಯ ಹರೀಶ್ ಎಂಬ ಸರ್ಕಾರಿ ಶಾಲಾ ಶಿಕ್ಷಕನ ವಿರುದ್ಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಚಳ್ಳಕೆರೆ ತಾಲೂಕಿನ ಪರಶುರಾಂಪುರದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಹರೀಶ್, ತಾನು ಮದುವೆಯಾಗುವುದಾಗಿ ಭರವಸೆ ನೀಡಿ ಎಂಟು ವರ್ಷಗಳಿಂದ ಪ್ರೀತಿಸಿ ನಂತರ ವಂಚನೆ ನಡೆಸಿದ್ದಾನೆ ಎಂದು ಕಾವ್ಯ ಆರೋಪಿಸಿದ್ದಾರೆ.

37
ಸಂಬಂಧಿಕರಾಗಿದ್ದು, ಪ್ರೀತಿಸುತ್ತಿದ್ದರು

ಕಾವ್ಯ ಮತ್ತು ಹರೀಶ್ ಪರಸ್ಪರ ಸಂಬಂಧಿಕರಾಗಿದ್ದು, ಈ ಪರಿಚಯವೇ ಪ್ರೀತಿಗೆ ಕಾರಣವಾಗಿದೆ. ಕಳೆದ ಎಂಟು ವರ್ಷಗಳಿಂದ ಇಬ್ಬರ ನಡುವಿನ ಸಂಬಂಧ ಗಟ್ಟಿಯಾಗಿದ್ದು, ಮದುವೆಯಾಗುವುದಾಗಿ ಹರೀಶ್ ಸ್ಪಷ್ಟ ಭರವಸೆ ನೀಡಿದ್ದನೆಂದು ಕಾವ್ಯ ಹೇಳಿದ್ದಾಳೆ. ನಿಶ್ಚಿತಾರ್ಥದ ಮಾತುಕತೆಗಳೂ ನಡೆದಿದ್ದವು ಎನ್ನಲಾಗಿದೆ. ಆದರೆ ಇತ್ತೀಚೆಗೆ ವರದಕ್ಷಿಣೆ ಆಸೆಗೆ ಬೇರೊಬ್ಬರೊಂದಿಗೆ ಮದುವೆಯಾಗಲು ಹರೀಶ್ ಸಿದ್ಧತೆ ನಡೆಸುತ್ತಿದ್ದಾನೆ ಎಂಬ ವಿಚಾರ ತಿಳಿದ ಬಳಿಕ ಕಾವ್ಯ ಆಘಾತಕ್ಕೊಳಗಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಭರಮಸಾಗರ ಪೊಲೀಸ್ ಠಾಣೆಯನ್ನು ಕಾವ್ಯ ಸಂಪರ್ಕಿಸಿದ್ದಾಳೆ.

47
ಪೊಲೀಸರ ವಿಚಾರಣೆ, ಕುಟುಂಬಸ್ಥರ ಆಕ್ರೋಶ

ದೂರು ದಾಖಲಾದ ಬಳಿಕ ಭರಮಸಾಗರ ಪೊಲೀಸರು ಆರೋಪಿ ಹರೀಶ್‌ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ಈ ವೇಳೆ ಕಾವ್ಯ ಹಾಗೂ ಆಕೆಯ ಸಂಬಂಧಿಕರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪೊಲೀಸ್ ಠಾಣೆ ಆವರಣದಲ್ಲಿ ಎರಡೂ ಕಡೆಯವರ ನಡುವೆ ತೀವ್ರ ವಾಗ್ವಾದವೂ ನಡೆದಿದೆ. ಈ ಪ್ರಕರಣ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

57
ಪ್ರೇಯಸಿ ಪೊಲೀಸರ ಮೊರೆ, ಮದುವೆ ತೀರ್ಮಾನ

ಪ್ರೇಯಸಿ ಪೊಲೀಸರ ಮೊರೆ ಹೋದ ಬೆನ್ನಲ್ಲೇ, ಮದುವೆ ಆಗುವುದಾಗಿ ಶಿಕ್ಷಕ ಹರೀಶ್ ಒಪ್ಪಿಕೊಂಡಿದ್ದಾನೆ ಬಳಿಕ ಭರಮಸಾಗರದ ಎಪಿಎಂಸಿ ಮಾರುಕಟ್ಟೆ ಬಳಿಯ ಗಣೇಶ ದೇಗುಲದಲ್ಲಿ ಹರೀಶ್ ಮತ್ತು ಕಾವ್ಯ ಮದುವೆಯಾದ ಘಟನೆ ನಡೆದಿದೆ.

67
ಸಬ್‌ ರಿಜಿಸ್ಟ್ರಾರ್ ಕಚೇರಿ ಬಳಿ ಹೈಡ್ರಾಮಾ

ಆದರೆ ಮದುವೆ ನಂತರವೂ ಗೊಂದಲಗಳು ಮುಂದುವರಿದಿವೆ. ಚಿತ್ರದುರ್ಗದ ಸಬ್‌ ರಿಜಿಸ್ಟ್ರಾರ್ ಕಚೇರಿಗೆ ಮದುವೆ ನೋಂದಣಿಗಾಗಿ ಬಂದ ಸಂದರ್ಭದಲ್ಲಿ ಶಿಕ್ಷಕ ಹರೀಶ್ ಹೈಡ್ರಾಮಾ ನಡೆಸಿದ್ದಾನೆ ಅಗತ್ಯ ದಾಖಲೆಗಳನ್ನು ನೀಡಲು ಹಿಂದೇಟು ಹಾಕಿದ ಹರೀಶ್,

“ನನ್ನ ಪತ್ನಿ ಕಾವ್ಯಳನ್ನು ನಾನು ಕರೆದುಕೊಂಡು ಹೋಗುತ್ತೇನೆ. ನಾಳೆ ರಿಜಿಸ್ಟ್ರಾರ್ ಮದುವೆ ಮಾಡುತ್ತೇನೆ” ಎಂದು ಕಿಡಿಕಾರಿದ್ದಾನೆ. ಈ ವೇಳೆ “ನನ್ನನ್ನು ಕೇಳಲು ನೀವ್ಯಾರು?” ಎಂದು ಪ್ರಶ್ನಿಸುತ್ತಾ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಾ ಗಲಾಟೆ ನಡೆಸಿದ್ದಾನೆ. ನಂತರ ಆಟೋದಲ್ಲಿ ಕಾವ್ಯಳನ್ನು ಕರೆದುಕೊಂಡು ಹೋಗಿದ್ದಾನೆ.

77
ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ

ಘಟನೆಯ ಕುರಿತು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಮಹಿಳಾ ಹಕ್ಕು ಸಂಘಟನೆಗಳು ಕೂಡ ಪ್ರಕರಣದ ಮೇಲೆ ನಿಗಾ ವಹಿಸಿವೆ. ಎಂಟು ವರ್ಷಗಳ ಪ್ರೀತಿಯ ಅಂತ್ಯ ನ್ಯಾಯಾಲಯದ ಮೆಟ್ಟಿಲೇರಬಹುದೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.

Read more Photos on
click me!

Recommended Stories