ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ನದಿಗಳ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾಗಿದೆ. ಶೃಂಗೇರಿಯಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದ್ದು, ಸೇತುವೆ ಕಾಮಗಾರಿಯ ಕ್ರೇನ್ ಒಂದು ನದಿಯಲ್ಲಿ ಮುಳುಗಡೆಯಾಗಿದೆ.
ಕುದುರೆಮುಖ, ಕೆರೆಕಟ್ಟೆ ಹಾಗೂ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ, ಈ ವರ್ಷ ಮೊದಲ ಬಾರಿಗೆ ತುಂಗಾ ನದಿ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ನದಿಯಲ್ಲಿನ ನೀರಿನ ಪ್ರಮಾಣ ಏರಿಕೆಯಾಗಿದ್ದನ್ನು ಕಂಡು ಸ್ಥಳೀಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
25
ಶೃಂಗೇರಿಯಲ್ಲಿ ಪ್ರವಾಹದ ದೃಶ್ಯ
ಸೋಮವಾರ ಮಧ್ಯಾಹ್ನದಿಂದಲೂ ಕೆರೆಕಟ್ಟೆ ವ್ಯಾಪ್ತಿಯಲ್ಲಿ ಬಿಡದೆ ಮಳೆ ಸುರಿಯುತ್ತಿರುವುದರಿಂದ ರಾತ್ರೋರಾತ್ರಿ ನದಿಯ ಹರಿವು ಹೆಚ್ಚಾಗಿದೆ. ಸದ್ಯ ಶೃಂಗೇರಿ ದೇಗುಲದ ಪಾರ್ಕಿಂಗ್ ಲಾಟ್ ಬಳಿ ತುಂಗಾ ನದಿ ನೀರು ಏರಿಕೆಯಾಗಿದೆ. ಮಳೆ ಹೀಗೆ ಮುಂದುವರಿದ್ರೆ ಪ್ರವಾಹದ ಆತಂಕ ಎದುರಾಗಿದೆ.
35
ಬರಿದಾಗಿದ್ದ ನದಿಗೆ ಜೀವಕಳೆ
ಕಳೆದ 3-4 ದಶಕಗಳ ಬಳಿಕ ಜೂನ್ ತಿಂಗಳ ಕೊನೆಯಲ್ಲೂ ಮಲೆನಾಡು ಭಾಗದಲ್ಲಿ ಬಿರುಬಿಸಿಲು ಕಾಣಿಸಿಕೊಂಡಿತ್ತು. ಈ ವೇಳೆಗಾಗಲೇ ತುಂಬಿ ಹರಿಯಬೇಕಿದ್ದ ನದಿಗಳ ಒಡಲು ಸಂಪೂರ್ಣ ಬರಿದಾಗಿತ್ತು. ಆದರೆ ನಿನ್ನೆಯಿಂದ ಸುರಿಯುತ್ತಿರುವ ಸಾಧಾರಣ ಮಳೆಯು ನದಿಯ ನೀರಿನ ಪ್ರಮಾಣವನ್ನು ಹೆಚ್ಚಿಸಿದೆ. ಕಳೆದುಹೋಗಿದ್ದ ಮಳೆಯ ಲಕ್ಷಣಗಳು ಮತ್ತೆ ಮರಳಿರುವುದರಿಂದ, ತುಂಗಾ ನದಿ ನೀರನ್ನೇ ನಂಬಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ರೈತರು ಮತ್ತು ಬೆಳೆಗಾರರಲ್ಲಿ ಸದ್ಯ ಸಂತಸ ಮನೆಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಐದು ತಾಲೂಕುಗಳಲ್ಲಿ ನಿನ್ನೆಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಭದ್ರಾ ನದಿಯ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ನದಿಯ ಅಬ್ಬರಕ್ಕೆ ಸೇತುವೆ ಕಾಮಗಾರಿ ಕೆಲಸಕ್ಕಾಗಿ ನದಿ ದಡದಲ್ಲಿ ನಿಲ್ಲಿಸಲಾಗಿದ್ದ ಕ್ರೇನ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ.
ನದಿಯಲ್ಲಿ ನೀರು ಕಡಿಮೆ ಇದ್ದ ಕಾರಣ ಚಾಲಕ ಕ್ರೇನ್ ಅನ್ನು ಅಲ್ಲೇ ಬಿಟ್ಟು ಹೋಗಿದ್ದನು. ಆದರೆ, ಕಳಸ ತಾಲೂಕಿನ ಕುದುರೆಮುಖ ಹಾಗೂ ಶೃಂಗೇರಿಯ ಕೆರೆಕಟ್ಟೆ ಘಟ್ಟಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನದಿಂದ ಸುರಿದ ನಿರಂತರ ಮಳೆಯಿಂದಾಗಿ ನದಿಯ ನೀರಿನ ಮಟ್ಟ ದಿಢೀರ್ ಹೆಚ್ಚಳವಾಗಿದೆ.
ಇಷ್ಟು ದಿನ ಮಳೆಗಾಗಿ ಮುಗಿಲು ನೋಡುತ್ತಿದ್ದ ಮಲೆನಾಡಿನ ರೈತರು ಮತ್ತು ಬೆಳೆಗಾರರ ಮೊಗದಲ್ಲಿ ಈ ಮಳೆ ಮಂದಹಾಸ ಮೂಡಿಸಿದೆ. ಅಂತರ್ಜಲ ವೃದ್ಧಿಗೆ ಈ ರೀತಿಯ ಸಾಧಾರಣ ಮಳೆಯೇ ಸೂಕ್ತ ಎಂದು ಬಯಸುತ್ತಿರುವ ಮಲೆನಾಡಿಗರು ಹಾಗೂ ರೈತ ಸಮೂಹ, ಮಳೆ ಹೀಗೆಯೇ ಮುಂದುವರೆಯಲಿ ಎಂದು ಪ್ರಕೃತಿಯಲ್ಲಿ ಬೇಡಿಕೊಳ್ಳುತ್ತಿದ್ದಾರೆ.