ಪಶ್ಚಿಮ ಬಂಗಾಳ ಬಿಜೆಪಿ ಗೆಲುವಿನ ಹಿಂದೆ ಕನ್ನಡಿಗ ಅರುಣ್ ಬಿನ್ನಡಿ ಮೋಡಿ; ಇಲ್ಲಿದೆ ನೋಡಿ ಕಾಫಿನಾಡು ಯುವಕನ ಐಡಿಯಾಲಜಿ!

Published : May 06, 2026, 06:45 PM IST

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಸಿಲಿಗುರಿ ನಾರ್ತ್ ಜೋನ್ ಪ್ರಭಾರಿಯಾಗಿದ್ದ ಮೂಡಿಗೆರೆಯ ಅರುಣ್ ಬಿನ್ನಡಿ, ತಮ್ಮ ಚಾಣಾಕ್ಷ ತಂತ್ರಗಾರಿಕೆಯಿಂದ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಕಾಫಿನಾಡಿನ ಈ ಯುವಕನ ಸಾಧನೆಯ ಕಥೆ ಇಲ್ಲಿದೆ.

PREV
15
ಪಶ್ಚಿಮ ಬಂಗಾಳ ಬಿಜೆಪಿ ಪ್ರಾಬಲ್ಯದ ಹಿಂದೆ ಕನ್ನಡಿಗನ ಕೈಚಳಕ

ಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮೆರೆದಿದೆ. ಈ ಗೆಲುವಿನ ಹಿಂದೆ ಕೇವಲ ಘಟಾನುಘಟಿ ನಾಯಕರಷ್ಟೇ ಅಲ್ಲದೆ, ತೆರೆಯ ಮರೆಯಲ್ಲಿ ನಿಂತು ತಂತ್ರ ರೂಪಿಸಿದ ಯುವ ನಾಯಕರ ಶ್ರಮವೂ ದೊಡ್ಡದಿದೆ. ಈ ಸಾಲಿನಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿನ್ನಡಿ ಗ್ರಾಮದ ಅರುಣ್ ಬಿನ್ನಡಿ ಅವರದ್ದು. ಕಾಫಿನಾಡಿನ ಈ ಸಾಮಾನ್ಯ ಯುವಕ ಇಂದು ದೇಶದ ರಾಜಕೀಯ ಭೂಪಟದಲ್ಲಿ ಚಾಣಾಕ್ಷ ಸಂಘಟನಾಕಾರನಾಗಿ ಹೊರಹೊಮ್ಮಿದ್ದಾರೆ.

25
ಕೈತುಂಬಾ ಸಂಬಳದ ಕೆಲಸ ಬಿಟ್ಟು ದೇಶಸೇವೆಗೆ:

ಅರುಣ್ ಬಿನ್ನಡಿ ಅವರು ಮೂಲತಃ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪವಿರುವ ಬಿನ್ನಡಿ ಗ್ರಾಮದವರು. ವೃತ್ತಿಯಲ್ಲಿ ಪ್ರತಿಭಾವಂತ ಎಂಜಿನಿಯರ್ ಆಗಿದ್ದ ಅರುಣ್, ಆರಂಭದಲ್ಲಿ ಕೈತುಂಬಾ ಸಂಬಳ ಬರುವ ಖಾಸಗಿ ಕಂಪನಿಯ ಕೆಲಸದಲ್ಲಿದ್ದರು. ಆದರೆ, ದೇಶಸೇವೆ ಮತ್ತು ರಾಷ್ಟ್ರೀಯ ಸಿದ್ಧಾಂತದ ಮೇಲಿದ್ದ ಅತೀವ ಆಸಕ್ತಿಯಿಂದಾಗಿ ಆ ಉದ್ಯೋಗವನ್ನು ತ್ಯಜಿಸಿ ಸಕ್ರಿಯ ರಾಜಕೀಯ ಸಂಘಟನೆಗೆ ಇಳಿದರು. ಇವರ ಈ ಧೈರ್ಯ ಮತ್ತು ಬದ್ಧತೆ ಇಂದು ಇವರನ್ನು ರಾಷ್ಟ್ರೀಯ ಮಟ್ಟದ ನಾಯಕನನ್ನಾಗಿ ರೂಪಿಸಿದೆ.

35
ಬಂಗಾಳದಲ್ಲಿ ಗೆಲುವಿನ ತಂತ್ರ ರೂಪಿಸಿದ ಅರುಣ್:

ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಅರುಣ್ ಅವರಿಗೆ ‘ಸಿಲಿಗುರಿ ನಾರ್ತ್ ಜೋನ್’ ಸಂಘಟನಾ ಪ್ರಭಾರಿಯಾಗಿ ಹೊಣೆಗಾರಿಕೆ ನೀಡಲಾಗಿತ್ತು. ಬಂಗಾಳದ ಕಠಿಣ ರಾಜಕೀಯ ಪರಿಸ್ಥಿತಿ ಮತ್ತು ಅಡೆತಡೆಗಳ ನಡುವೆಯೂ ತಿಂಗಳಾನುಗಟ್ಟಲೆ ಆನ್-ಗ್ರೌಂಡ್ (On-ground) ಕೆಲಸ ಮಾಡಿದ ಇವರು, ಮನೆ ಮನೆಗೂ ತೆರಳಿ ಪಕ್ಷವನ್ನು ಸಂಘಟಿಸಿದರು. ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಅರಿತು, ಅವುಗಳಿಗೆ ತಕ್ಕಂತೆ ಗೆಲುವಿನ ಮಂತ್ರ ರೂಪಿಸುವಲ್ಲಿ ಅರುಣ್ ಬಿನ್ನಡಿ ಅವರ ಚಾಣಾಕ್ಷತನ ಕೆಲಸ ಮಾಡಿದೆ.

45
ಹಿಂದಿನ ಗೆಲುವುಗಳಲ್ಲೂ ಪ್ರಮುಖ ಪಾತ್ರ:

ಅರುಣ್ ಅವರ ಸಾಧನೆ ಕೇವಲ ಬಂಗಾಳಕ್ಕೆ ಸೀಮಿತವಾಗಿಲ್ಲ. 2019ರ ಲೋಕಸಭಾ ಚುನಾವಣೆ ಹಾಗೂ ಕಲ್ಬುರ್ಗಿಯ ಮಹತ್ವದ ಚುನಾವಣಾ ಅಖಾಡದಲ್ಲೂ ಇವರು ಪ್ರಮುಖ ಪಾತ್ರ ವಹಿಸಿದ್ದರು. ಅಂದಿನಿಂದಲೂ ಬಿಜೆಪಿ ಹೈಕಮಾಂಡ್‌ನ ವಿಶ್ವಾಸಾರ್ಹ ಯುವ ನಾಯಕರಲ್ಲಿ ಒಬ್ಬರಾಗಿ ಅರುಣ್ ಗುರುತಿಸಿಕೊಂಡಿದ್ದಾರೆ.

55
ಊರಿನಲ್ಲಿ ಆತ್ಮೀಯ ಸನ್ಮಾನ:

ಬಂಗಾಳದ ಯಶಸ್ಸಿನ ಬಳಿಕ ತವರು ಗ್ರಾಮ ಬಿನ್ನಡಿಗೆ ಆಗಮಿಸಿದ ಅರುಣ್ ಅವರಿಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಭವ್ಯ ಸನ್ಮಾನ ಮಾಡಿದರು. ಮಲೆನಾಡಿನ ಮಣ್ಣಿನ ಮಗ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದನ್ನು ಕಂಡು ಗ್ರಾಮಸ್ಥರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಶ್ರಮಜೀವಿ ನಾಯಕನಾಗಿ ಗುರುತಿಸಿಕೊಂಡಿರುವ ಅರುಣ್ ಬಿನ್ನಡಿ ಅವರಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

Read more Photos on
click me!

Recommended Stories