ಇಂಟಲಿಜೆನ್ಸ್PSI ವಿರೇಶ್ ಆಲೂರು, 8 ವರ್ಷಗಳಿಂದ ಪ್ರೀತಿಸುತ್ತಿದ್ದ ಮಹಿಳಾ ಪೇದೆ ಜಾತಿ ಕಾರಣ ನೀಡಿ ಮದುವೆಗೆ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆಕೆಯ ಕುಟುಂಬಕ್ಕೆ 35 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದು, ಇದೀಗ ಬೇರೊಬ್ಬರೊಂದಿಗೆ ಮದುವೆ ನಿಶ್ಚಯವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ತನಗೆ ಮಹಿಳಾ ಪೇದೆಯಿಂದ ಮೋಸವಾಗಿದೆ ಎಂದು ಯಾದಗಿರಿ ಜಿಲ್ಲೆಯ ಶಹಾಪುರ ಠಾಣೆಯಲ್ಲಿ ಇಂಟಲಿಜೆನ್ಸ್ ಪಿಎಸ್ಐ ವಿರೇಶ್ ಆಲೂರು ಮಾಧ್ಯಮಗಳ ಮುಂದೆ ಗಂಭೀರ ಆರೋಪ ಮಾಡಿದ್ದಾರೆ. ನಾವಿಬ್ಬರು ಕಳೆದ ಎಂಟು ವರ್ಷಗಳಿಂದ ಸಂಬಂಧದಲ್ಲಿದ್ದು, ಇದೀಗ ಜಾತಿ ಕಾರಣ ನೀಡಿ ನನ್ನನ್ನು ದೂರ ಮಾಡ್ತಿದ್ದಾರೆ ಎಂದು ವಿರೇಶ್ ಆರೋಪಿಸಿದ್ದಾರೆ. ಮೇ 7ರಂದು ರಾಯಚೂರಿನಲ್ಲಿ ಮಹಿಳಾ ಪೇದೆಯ ಮದುವೆ ನಡೆಯಲಿದೆ.
25
ಇಬ್ಬರು ವಿಜಯಪುರ ಜಿಲ್ಲೆಯ ಮೂಲದವರು
ವೀರೇಶ್ ಆಲೂರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡದ ಮೂಲ ನಿವಾಸಿಯಾಗಿದ್ದು, ಮಹಿಳಾ ಪೇದೆ ಸುಮಾ (ಹೆಸರು ಬದಲಾಯಿಸಲಾಗಿದೆ) ವಿಜಯಪುರ ಜಿಲ್ಲೆಯ ಆಲ್ಮೇಲ್ ತಾಲೂಕಿನ ಬಳಗಾನೂರಿನವರು. ಎಂಟು ವರ್ಷದ ಹಿಂದೆ ಸಿಂದಗಿಯ ಶ್ರೀ ಮಾತಾ ಕೋಚಿಂಗ್ ಸೆಂಟರ್ನಲ್ಲಿ ವಿರೇಶ್ ಆಲೂರು ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಸುಮಾ ಪರಿಚಯವಾಗಿತ್ತು.
35
ಮೂರು ಬಾರಿ ಗರ್ಭಪಾತದ ಆರೋಪ
ಮೊದಲಿಗೆ ಪರಿಚಯ, ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಇದಾದ ಮೇಲೆ ಇಬ್ಬರ ನಡುವೆ ಹಲವು ಬಾರಿ ದೈಹಿಕ ಸಂಪರ್ಕ ನಡೆದಿದೆ. ರಾಯಚೂರಿನ ಬಾಲಮರೆಮ್ಮ ಟೆಂಪಲ್ ನಲ್ಲಿ ಹಾರ ಬದಲಿಸಿಕೊಂಡು ಗಂಡ ಹೆಂಡತಿಯಂತೆ ಒಂದೇ ರೂಮಿನಲ್ಲಿ ಸಂಸಾರ ನಡೆಸಿದ್ದೇವೆ. ಬಳಿಕ ಆರೋಗ್ಯ ಸಮಸ್ಯೆಯ ಕಾರಣ ನೀಡಿ ಮೂರು ಬಾರಿ ಸುಮಾ ಗರ್ಭಪಾತ ಮಾಡಿಸಿಕೊಂಡಿದ್ದಾಳೆ ಎಂದು ವಿರೇಶ್ ಆರೋಪಿಸುತ್ತಾರೆ.
ಮೊದಲಿಗೆ ಸುಮಾಗೆ ಎಸ್ಡಿಎ ಹುದ್ದೆಗೆ ಆಯ್ಕೆ ಕೊಪ್ಪಳದಲ್ಲಿ ಡ್ಯೂಟಿ ಇತ್ತು.ಇತ್ತ ಪ್ರೊಬೇಷನರಿ ಪಿಎಸ್ಐ ಆಗಿ ಹೊಸಪೇಟೆಯಲ್ಲಿ ನನ್ನ ಕೆಲಸವಿತ್ತು. ಕೊಪ್ಪಳದಲ್ಲಿ ಇಬ್ಬರೂ ಒಂದೇ ರೂಮಿನಲ್ಲಿ 3 ವರ್ಷ ವಾಸವಾಗಿದ್ದೀವಿ. ಎಸ್ಡಿಎ ಹುದ್ದೆ ಬಿಟ್ಟು ಪೇದೆ ಹುದ್ದೆಗೆ ಸುಮಾ ಆಯ್ಕೆಯಾಗಿ ಸದ್ಯ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಡ್ಯೂಟಿಯಲ್ಲಿದ್ದಾರೆ. ರಾಯಚೂರಿನಲ್ಲೂ 3 ವರ್ಷ ಒಂದೇ ರೂಮಿನಲ್ಲಿದ್ದೀವಿ. ಬೆಂಗಳೂರಿಗೆ ವರ್ಗಾವಣೆಯಾದ್ರೂ ರಾಯಚೂರಿಗೆ ಬಂದು ಹೋಗುತ್ತಿದ್ದೆ ಎಂದು ಹೇಳುತ್ತಾರೆ ವಿರೇಶ್.
ಸುಮಾ ಕುಟುಂಬಕ್ಕೆ 35 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದು, ಈ ಹಣದಿಂದಲೇ ಮನೆ ಕಟ್ಟಿಸಿಕೊಂಡಿದ್ದಾರೆ. ಆಕೆಯ ತಮ್ಮನಿಗೂ ಟ್ರಾಕ್ಟರ್ ಕೊಡಿಸಿದ್ದೇನೆ. ಮದುವೆ ವಿಷಯ ಬಂದಾಗ ಜಾತಿ ಕಾರಣ ನೀಡಲಾಗುತ್ತಿದೆ. ನನಗೆ ಸುಮಾ ಬೇಕು ಎಂದು ವಿರೇಶ್ ಹೇಳುತ್ತಾರೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಸುಮಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.