ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರ 21 ದಿನಗಳ ಉಪವಾಸ ಸತ್ಯಾಗ್ರಹವನ್ನು ದೆಹಲಿ ಪೊಲೀಸರು ಬಲವಂತವಾಗಿ ಅಂತ್ಯಗೊಳಿಸಿದ್ದಾರೆ. ಈ ಘಟನೆಯು ನಾಲ್ಕು ದಶಕಗಳ ಹಿಂದೆ ಲಡಾಖ್ನ ಹಿತಕ್ಕಾಗಿ ಅವರ ತಂದೆ ಸೋನಂ ವಾಂಗ್ಚಾಲ್ ನಡೆಸಿದ ಐತಿಹಾಸಿಕ ಉಪವಾಸವನ್ನು ನೆನಪಿಸುತ್ತದೆ.
ಇಂದು (ಶನಿವಾರ) ಬೆಳಿಗ್ಗೆ ದೆಹಲಿಯ ಜಂತರ್ ಮಂತರ್ನಲ್ಲಿ ಕಂಡುಬಂದ ದೃಶ್ಯಗಳು ನಾಟಕೀಯವಾಗಿದ್ದವು. 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 59 ವರ್ಷದ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಸುತ್ತುವರಿದು, ಜನರ ಕಣ್ಣಿಗೆ ಕಾಣದಂತೆ ಬಿಳಿ ಪರದೆಗಳನ್ನು ಅಡ್ಡ ಹಿಡಿದು, ಬಲವಂತವಾಗಿ ಅಂಬ್ಯುಲೆನ್ಸ್ಗೆ ಹತ್ತಿಸಿ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದರು.
ಆರೋಗ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಸೂಚನೆ ಹಾಗೂ ವೈದ್ಯಕೀಯ ಸಲಹೆಯ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ವಾಂಗ್ಚುಕ್ ಅವರನ್ನು ಬಲವಂತವಾಗಿ ತೆರವುಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ಇಡೀ ಘಟನೆ ನಾಲ್ಕು ದಶಕಗಳ ಹಿಂದಿನ ಲಡಾಖ್ನ ಇತಿಹಾಸವನ್ನು ನೆನಪಿಸುವಂತಿದೆ. ಅಂದು ಸೋನಂ ವಾಂಗ್ಚುಕ್ ಅವರ ತಂದೆ ಸೋನಂ ವಾಂಗ್ಚಾಲ್ (Sonam Wangyal) ಕೂಡ ಇದೇ ರೀತಿ ಲಡಾಖ್ ಹಿತಕ್ಕಾಗಿ ಉಪವಾಸ ಕುಳಿತಿದ್ದರು.
25
ಯಾರು ಈ ಸೋನಂ ವಾಂಗ್ಚಾಲ್?
ಸೋನಂ ವಾಂಗ್ಚುಕ್ ಅವರ ತಂದೆ ಸೋನಂ ವಾಂಗ್ಚಾಲ್ ಕೇವಲ ರಾಜಕಾರಣಿಯಲ್ಲ, ಅವರು ದೇಶದ ಸಾಹಸಿ ಪುರುಷರಲ್ಲಿ ಒಬ್ಬರು. 1965 ರಲ್ಲಿ ಕೇವಲ 23 ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಅತಿ ಕಿರಿಯ ವ್ಯಕ್ತಿ ಎಂಬ ದಾಖಲೆಯನ್ನು ಅವರು ಬರೆದಿದ್ದರು. 1923ರಲ್ಲಿ ಬಡ ಕೃಷಿಕ ಕುಟುಂಬದಲ್ಲಿ ಜನಿಸಿದ ಇವರು ಜಮ್ಮು ಮತ್ತು ಕಾಶ್ಮೀರದ ಶಾಸಕಾಂಗ ಮಂಡಳಿಯ ಸದಸ್ಯರಾಗಿ, ಶಾಸಕರಾಗಿ ಮತ್ತು ಸಚಿವರಾಗಿ ಸೇವೆ ಸಲ್ಲಿಸಿದ್ದರು.
35
1984ರ ಉಪವಾಸ ಸತ್ಯಾಗ್ರಹ
1980ರ ದಶಕದಲ್ಲಿ ಲಡಾಖ್ ಪ್ರದೇಶವು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿತ್ತು. ತನ್ನ ವಿಶಿಷ್ಟ ಸಾಮಾಜಿಕ ಮತ್ತು ಸಾಂಸ್ಕೃತಿಕ ಗುರುತನ್ನು ಉಳಿಸಿಕೊಳ್ಳಲು ಲಡಾಖ್ಗೆ 'ಪರಿಶಿಷ್ಟ ಪಂಗಡ' (ST) ಸ್ಥಾನಮಾನದ ಅಗತ್ಯವಿತ್ತು. ಈ ಬೇಡಿಕೆಗಾಗಿ 1984 ರಲ್ಲಿ ಸೋನಂ ವಾಂಗ್ಚಾಲ್ ಅವರು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಲೇಹ್ಗೆ ಭೇಟಿ ನೀಡಿ ಭರವಸೆ ನೀಡಿದ ನಂತರ ಆ ಉಪವಾಸ ಕೊನೆಗೊಂಡಿತ್ತು. ಅಂತಿಮವಾಗಿ ಐದು ವರ್ಷಗಳ ನಂತರ, ಅಂದರೆ 1989ರಲ್ಲಿ ಸಂವಿಧಾನದ 342 ನೇ ವಿಧಿಯಡಿ ಲಡಾಖ್ನ ಎಂಟು ಸಮುದಾಯಗಳಿಗೆ (ಬಾಲ್ಟಿ, ಬೇಡಾ, ಬೋಟ್, ಬ್ರೋಕ್ಪಾ, ಚಾಂಗ್ಪಾ, ಗಾರ್ರಾ, ಮೊನ್ ಮತ್ತು ಪುರಿಗ್ಪಾ) ಅಧಿಕೃತವಾಗಿ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಲಾಯಿತು. ಇದು ಲಡಾಖ್ ಪಾಲಿನ ಐತಿಹಾಸಿಕ ಜಯವಾಗಿತ್ತು.
ಇಂದು ಸೋನಂ ವಾಂಗ್ಚುಕ್ ಅವರ ಹೋರಾಟ ಕೂಡ ಅಷ್ಟೇ ತೀವ್ರವಾಗಿದೆ. ಈಗ ಅವರ ಹೋರಾಟ ಕೇವಲ ಲಡಾಖ್ಗೆ ಸೀಮಿತವಾಗಿಲ್ಲ. ಕಳೆದ ವರ್ಷ ಅವರು ಲಡಾಖ್ಗೆ ರಾಜ್ಯದ ಸ್ಥಾನಮಾನ ಮತ್ತು 6ನೇ ವೇಳಾಪಟ್ಟಿಯ ರಕ್ಷಣೆಗಾಗಿ 35 ದಿನಗಳ ಕಾಲ ಉಪವಾಸ ಮಾಡಿದ್ದರು. ಪ್ರಸ್ತುತ ದೆಹಲಿಯಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವು NEET ಪರೀಕ್ಷಾ ಹಗರಣ ಮತ್ತು ಪೇಪರ್ ಲೀಕ್ನಿಂದ ಅನ್ಯಾಯಕ್ಕೊಳಗಾದ ಭಾರತದ ವಿದ್ಯಾರ್ಥಿಗಳ ಪರವಾಗಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಅವರು 21 ದಿನಗಳಿಂದ ಅನ್ನ ನೀರು ಬಿಟ್ಟಿದ್ದರು. 17 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದಕ್ಕೆ ಹೊಣೆ ಯಾರು? ಎಂಬುದು ಅವರ ಕಳಕಳಿಯ ಪ್ರಶ್ನೆಯಾಗಿದೆ.
55
ಹಸಿವನ್ನೇ ಅಸ್ತ್ರವಾಗಿಸಿಕೊಂಡ ಕುಟುಂಬ
ತಂದೆ 1980ರ ದಶಕದಲ್ಲಿ ಲಡಾಖ್ನ ಜನರಿಗಾಗಿ ಉಪವಾಸ ಮಾಡಿದ್ದರು. ದಶಕಗಳ ನಂತರ ಮಗ ಇಡೀ ದೇಶದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಉಪವಾಸ ಕುಳಿತಿದ್ದಾರೆ. ಕಾಲ ಬದಲಾಗಿದೆ, ಸಮಸ್ಯೆಗಳು ಬದಲಾಗಿವೆ, ಆದರೆ ದೇಶದ ಗಮನ ಸೆಳೆಯಲು ಈ ತಂದೆ-ಮಗ ಬಳಸಿದ ಅಸ್ತ್ರ ಮಾತ್ರ. ವ್ಯವಸ್ಥೆಯ ವಿರುದ್ಧ ದನಿ ಎತ್ತಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಈ ಹೋರಾಟದ ಪರಂಪರೆ ಭಾರತೀಯ ಇತಿಹಾಸದಲ್ಲಿ ಒಂದು ವಿಶಿಷ್ಟ ಅಧ್ಯಾಯವಾಗಿ ಉಳಿಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ