ಸೂರತ್‌ನಲ್ಲಿ ಅಗ್ನಿ ಅವಘಡ: ಪ್ರಾಣ ಉಳಿಸಿಕೊಳ್ಳಲು 5ನೇ ಮಹಡಿಯಿಂದ ಹಾರಿದ ಕಾರ್ಮಿಕರು!

First Published Oct 18, 2021, 1:25 PM IST

ಗುಜರಾತ್‌ನ ಸೂರತ್‌ನಲ್ಲಿ ಬಹುದೊಡ್ಡ ಅಗ್ನಿ ಅನಾಹುತ ಸಂಭವಿಸಿದೆ. ಇಲ್ಲಿನ ವಿವಾ ಪ್ಯಾಕೇಜಿಂಗ್ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಒಳಗೆ ಕೆಲಸ ಮಾಡುವ ಕಾರ್ಮಿಕರು ತಮ್ಮ ಜೀವವನ್ನು ಉಳಿಸಿಕೊಳ್ಳಲು 5 ಅಂತಸ್ತಿನ ಕಟ್ಟಡದಿಂದ ಜಿಗಿದಿದ್ದಾರೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. 125 ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸೂರತ್‌ನ ಎಸ್‌ಡಿಎಂ (ಎಸ್‌ಡಿಎಂ) ಕೆಜಿ ವಘೇಲಾ ಒಬ್ಬ ಸಾವನ್ನಪ್ಪಿರುವ ಮಾಹಿತಿ ಖಚಿತಪಡಿಸಿದ್ದಾರೆ.

ಕಾರ್ಮಿಕರು ಬೆಳಿಗ್ಗೆ ಘಟಕದಲ್ಲಿ ಕೆಲಸ ಮಾಡುತ್ತಿದ್ದರು

ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡ ಬಳಿಕ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಬಾರ್ಡೋಲಿ ವಿಭಾಗದ ಉಪ ಎಸ್ಪಿ ರೂಪಲ್ ಸೋಲಂಕಿ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿವೆ. ಘಟನೆಯ ಸಮಯದಲ್ಲಿ, ಕಾರ್ಮಿಕರು ವಿವ ಪ್ಯಾಕೇಜಿಂಗ್ ಘಟಕದಲ್ಲಿ ಐದನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.
 

ಜ್ವಾಲೆ ಹರಡಿದಾಗ ಕೆಲಸಗಾರರು ಕೆಳಗೆ ಜಿಗಿಯಲು ಆರಂಭಿಸಿದರು

ನೋಡ ನೊಡುತ್ತಿದ್ದಂತೆಯೇ ಘಟಕದಲ್ಲಿ ಬೆಂಕಿ ಜ್ವಾಲೆ ಆವರಿಸಿದೆ. ಕಾರ್ಮಿಕರು ಹೆದರಿ ತಮ್ಮ ಜೀವವನ್ನು ಉಳಿಸಿಕೊಳ್ಳಲು ಐದನೇ ಮಹಡಿಯಿಂದ ಜಿಗಿಯಲು ಆರಂಭಿಸಿದ್ದಾರೆ. ಈ ಘಟನೆಯಲ್ಲಿ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದಾನೆ. ಮಾಹಿತಿ ಪಡೆದ ನಂತರ, ಅಗ್ನಿಶಾಮಕ ದಳದ ಸಿಬ್ಬಂದಿ ಹೈಡ್ರಾಲಿಕ್ ಲಿಫ್ಟ್ ಅನ್ನು ತಲುಪಿಸಿ ಕಾರ್ಮಿಕರನ್ನು ಕೆಳಕ್ಕೆ ಇಳಿಸಿದರು. ಪ್ಯಾಕೇಜಿಂಗ್ ಘಟಕದಿಂದ 125 ಜನರನ್ನು ರಕ್ಷಿಸಲಾಗಿದೆ ಎಂದು ಹೇಳಲಾಗಿದೆ.

12 ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ನಿರತ

ಪ್ರಸ್ತುತ, ಸುಮಾರು 12 ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಇನ್ನು ಸೂರತ್ SDM KG ವಘೇಲಾ ಒಬ್ಬ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ. ಒಬ್ಬ ವ್ಯಕ್ತಿ ಕಟ್ಟಡದ ಮೇಲಿನ ಮಹಡಿಯಿಂದ ಜಿಗಿದ ಕಾರಣ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಅಗ್ನಿಶಾಮಕ ದಳದ ತಂಡವು 125 ಜನರನ್ನು ಕಟ್ಟಡದಿಂದ ರಕ್ಷಿಸಿದೆ ಎಂದು ಅವರು ಹೇಳಿದರು.

ಎರಡು ಸಾವುಗಳನ್ನು ಪೊಲೀಸರು ಖಚಿತಪಡಿಸಿದ್ದಾರೆ

ನೆಲಮಾಳಿಗೆಯಲ್ಲಿ ಸರಕುಗಳನ್ನು ಇರಿಸಲಾಗಿತ್ತು ಎಂದು ಹೇಳಲಾಗಿದೆ. ಇದು ಬೆಂಕಿಗೆ ಆಹುತಿಯಾಗಿದ್ದು ಅದು ವೇಗವಾಗಿ ಹರಡಿ ಇಡೀ ಕಟ್ಟಡವನ್ನು ಆವರಿಸಿದೆ. ಬಾರ್ಡೋಲಿ ವಿಭಾಗದ ಉಪ ಎಸ್ಪಿ ರೂಪಲ್ ಸೋಲಂಕಿ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು. ಹೊಗೆಯಿಂದಾಗಿ ಒಬ್ಬ ಕಾರ್ಮಿಕ ಉಸಿರುಗಟ್ಟಿ ಮೃತಪಟ್ಟಿದ್ದಾನೆಂದು ಹೇಳಲಾಗಿದೆ.
 

ಘಟನೆಗೆ ಕಾರಣವನ್ನು ಪತ್ತೆ ಮಾಡಲಾಗುವುದು

ಸೂರತ್‌ನ ಉನ್ನತ ಅಧಿಕಾರಿಗಳು ಬೆಂಕಿಯನ್ನು ನಿಯಂತ್ರಣಕ್ಕೆ ತರುವುದರ ಜೊತೆಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ಒತ್ತು ನೀಡಲಾಗುತ್ತಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. ಇದರೊಂದಿಗೆ, ಘಟನೆಗೆ ಕಾರಣಗಳನ್ನು ಸಹ ಕಂಡುಹಿಡಿಯಲಾಗುತ್ತದೆ.

click me!