ಈ ತಿಂಗಳ ಆರಂಭದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಮಾಡಿದ್ದ ಪೋಸ್ಟ್ಗೆ ಸಂಬಂಧಪಟ್ಟಂತೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಅತುಲ್ಯ ಅಶೋಕನ್ ಅಲಿಯಾಸ್ ಆಲಿಯಾ ಕೊನೆಗೂ ಮೌನ ಮುರಿದಿದ್ದಾರೆ.
ಮದುವೆಯಾದ ಕೇವಲ ಏಳು ತಿಂಗಳಿಗೆ ಪತಿ ರೈಸಲ್ ಮನ್ಸೂರ್ರಿಂದ ಬೇರೆಯಾಗಿರುವ ಅತುಲ್ಯ ಅಶೋಕನ್ ತಮ್ಮ ಜೀವನವನ್ನು ಕೇರಳ ಸ್ಟೋರಿ ಸಿನಿಮಾಗೆ ಹೋಲಿಸಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿ ಬರೆದುಕೊಂಡಿದ್ದಾರೆ.
ಕೇರಳ ಸ್ಟೋರಿ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಅತುಲ್ಯ ಅಶೋಕನ್ ಇಸ್ಲಾಂಗೆ ಮತಾಂತರವಾಗಿ ಆಲಿಯಾ ಆಗಿ ಬದಲಾಗಿದ್ದರು. ಬಳಿಕ ರೈಸಲ್ ಮನ್ಸೂರ್ನನ್ನು ಮದುವೆಯಾಗಿದ್ದರು. ಈ ಹಂತದಲ್ಲಿ ಬಂದ ಕೇರಳ ಸ್ಟೋರಿ ಚಿತ್ರವನ್ನು ಟೀಕಿಸಿದವರ ಪೈಕಿ ಅತುಲ್ಯ ಮೊದಲಿಗರಾಗಿ ಕಾಣಿಸಿಕೊಂಡಿದ್ದರು.
ಅದಕ್ಕೆ ತನ್ನ ಜೀವನವನ್ನೇ ಉದಾಹರಣೆಯಾಗಿ ನೀಡಿದ್ದ ಅತುಲ್ಯ ಅಶೋಕನ್, ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ನಾನು ಖುಷಿಯಾಗಿಯೇ ಇದ್ದೇನೆ ಎಂದು ಹೇಳಿದ್ದರು.
ಈ ತಿಂಗಳ ಆರಂಭದಲ್ಲಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಮುಂದೆ ನನಗೇನಾದರೂ ಆದಲ್ಲಿ ಅದಕ್ಕೆ ನನ್ನ ಕುಟುಂಬ ಕಾರಣವಲ್ಲ. ಅದಕ್ಕೆ ರೈಸಲ್ ಮನ್ಸೂರ್ (ಆಕೆಯ ಪತಿ) ಏಕೈಕ ಕಾರಣ ಎಂದು ಸ್ಟೋರಿ ಹಾಕಿದ್ದರು. ಬಳಿಕ ಇದನ್ನೂ ಡಿಲೀಟ್ ಮಾಡಿದರಾದರೂ, ಮೀಡಿಯಾಗಳು ೀಕೆಯ ಜೀವನವನ್ನು ಕೇರಳ ಸ್ಟೋರಿ ಸಿನಿಮಾಗೆ ಹೋಲಿಸಿದ್ದರು.
ತನ್ನ ಪತಿ ರೈಸಲ್ ಮನ್ಸೂರ್ನಿಂದ ಒಂದು ತಿಂಗಳ ಹಿಂದೆಯೇ ಬೇರ್ಪಟ್ಟಿದ್ದೇನೆ ಮತ್ತು ಭಾವನಾತ್ಮಕವಾಗಿ ನಾನು ಕುಗ್ಗಿ ಹೋಗಿದ್ದೆ ಎಂದು ಅವರು ಇತ್ತೀಚಿನ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ತನ್ನ ಜೀವನದ ನಿರ್ಧಾರಗಳಿಂದ ತನ್ನ ಕುಟುಂಬವು ತೊಂದರೆಗೊಳಗಾಗಬಾರದು ಎಂದು ಬಯಸಿದ್ದ ಕಾರಣಕ್ಕಾಗಿ ಆ ಪೋಸ್ಟ್ಅನ್ನು ಹಾಕಿದ್ದೆ ಎಂದು ಹೇಳಿದ್ದಾರೆ.
ನನ್ನ ವೈಯಕ್ತಿಕ ಜೀವನದ ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ಮಾಧ್ಯಮಗಳು ಹಾಗೂ ಜನರು ಕೋಮುದ್ವೇಷದ ವಿಚಾರವನ್ನಾಗಿ ಬಳಸಿಕೊಳ್ಳಬಾರದು ಎಂದು ಬರೆದುಕೊಂಡಿದ್ದಾರೆ.
ಕೇರಳ ಸ್ಟೋರಿ ಚಿತ್ರಕ್ಕೂ ನನ್ನ ಮದುವೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಕಳೆದ ಏಳು ತಿಂಗಳಿನಿಂದಲೂ ನನ್ನ ಮದುವೆಯ ಬಗ್ಗೆ ಇಂಥದ್ದೇ ವಿಚಾರಗಳನ್ನು ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಕೇರಳ ಸ್ಟೋರಿ ಸಿನಿಮಾಗೂ ನನ್ನ ಜೀವನಕ್ಕೂ ಸಂಬಂಧವಿಲ್ಲ. ನನ್ನ ವಿಚಾರವನ್ನು ಒಂದು ಕೋಮಿನ ಕುರಿತಾಗಿ ಕೆಟ್ಟದಾಗಿ ಮಾತನಾಡಲು ಬಳಸಿಕೊಳ್ಳಬೇಡಿ. ಇದು ಅವಮಾನ ಎಂದಿದ್ದಾರೆ.
ನನಗೇನಾದರೂ ಆದರೆ ಪತಿಯೇ ಹೊಣೆ ಎಂದು ಬರೆದಿದ್ದ ಪೋಸ್ಟ್ಗೆ ಸಂಬಂಧಪಟ್ಟಂತೆ ತಿಳಿಸಿರುವ ಆಕೆ, ನಾನು ಸಂಪೂರ್ಣವಾಗಿ ಸೇಫ್ ಆಗಿದ್ದೇನೆ ಈ ಬಗ್ಗೆ ಯಾರಿಗೂ ಯೋಚನೆ ಬೇಡ ಎಂದು ಹೇಳಿದ್ದಾರೆ.
ನಾವಿಬ್ಬರೂ ನಮ್ಮೂರಿನಲ್ಲಿ ಭೇಟಿಯಾಗಿದ್ದೆವು. ಆರಂಭದಲ್ಲಿ ಮಾತನಾಡಿದೆವು. ಬಳಿಕ ನೇರಾನೇರ ಭೇಟಿಯಾದೆವು.ಪ್ರೀತಿಯಲ್ಲಿ ಬಿದ್ದೆವು. ನನ್ನ ಮದುವೆಯ ದಿನದವರೆಗೂ ಇದು ನನ್ನ ಸ್ನೇಹಿತೆಯರಿಗೆ ಯಾರಿಗೂ ತಿಳಿದಿರಲಿಲ್ಲ ಎಂದು ಅತುಲ್ಯಾ ಬರೆದಿದ್ದಾರೆ.