ಅಹಮದಾಬಾದ್‌ ಏರ್ ಇಂಡಿಯಾ ದುರಂತ, ಕುಳಿತ ಸ್ಥಿತಿಯಲ್ಲೇ ಏರ್ ಇಂಡಿಯಾ ಕ್ಯಾಪ್ಟನ್ ಶವ ಇತ್ತು: ಪ್ರತ್ಯಕ್ಷದರ್ಶಿ ಹೇಳಿಕೆ

Published : May 21, 2026, 12:25 PM IST

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಶವಾಗಾರದಲ್ಲಿ ಕಂಡ ಆಘಾತಕಾರಿ ದೃಶ್ಯವನ್ನು ಹಂಚಿಕೊಂಡಿದ್ದಾರೆ. ವಿಮಾನದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ಮೃತದೇಹವು,  ಸ್ಟೀರಿಂಗ್ ಹಿಡಿದ ಸ್ಥಿತಿಯಲ್ಲೇ ಇತ್ತು ಎಂದು ಅವರು ವಿವರಿಸಿದ್ದಾರೆ.

PREV
17
ಸ್ಟೀರಿಂಗ್‌ ಹಿಡಿದ ಸ್ಥಿತಿಯಲ್ಲಿ ಸಭರ್ವಾಲ್ ಶವ

ಅಹಮದಾಬಾದ್‌: ಕಳೆದ ವರ್ಷ ಜೂನ್‌ನಲ್ಲಿ ನಡೆದ ಏರ್ ಇಂಡಿಯಾ AI-171 ವಿಮಾನ ದುರಂತದ ಭೀಕರತೆ ಮತ್ತು ಕಣ್ಣೀರು ತರಿಸುವ ಕಟು ಸತ್ಯಗಳು ಈಗ ಒಂದೊಂದಾಗಿ ಹೊರಬರುತ್ತಿವೆ. ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೂವರು ಕುಟುಂಬ ಸದಸ್ಯರನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು, ‘ಅಹಮದಾಬಾದ್‌ನ ಶವಾಗಾರದೊಳಗೆ ವಿಮಾನದ ಕ್ಯಾಪ್ಟನ್‌ನ ಮೃತದೇಹವನ್ನು ನೋಡಿದೆ. ಅದು ಕುಳಿತಿರುವ ಸ್ಥಿತಿಯಲ್ಲಿತ್ತು. ಅವರ ಕೈಗಳು ವಿಮಾನದ ಸ್ಟೀರಿಂಗ್‌ ಅನ್ನು ಹಿಡಿದುಕೊಂಡ ರೀತಿಯಲ್ಲೇ ಇದ್ದವು’ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

27
ಶವ ನೋಡಿದ್ದಾಗಿ ಮೃತರ ಸಂಬಂಧಿ ಹೇಳಿಕೆ

ದುರಂತದಲ್ಲಿ ಗುಜರಾತ್‌ನ ಖೇಡಾ ಜಿಲ್ಲೆಯ ರೋಮಿನ್‌ ವೋಹ್ರಾ ಎಂಬುವವರ ಕುಟುಂಬದ ಮೂವರು ಮೃತಪಟ್ಟಿದ್ದರು. ಚಿಕ್ಕಮ್ಮ ಯಾಶ್ಮಿನ್, ಲಂಡನ್ ಅಮೆಜಾನ್ ಉದ್ಯೋಗಿಯಾಗಿದ್ದ ಸಹೋದರ ಪರ್ವೇಜ್ ಮತ್ತು ಮೂರು ವರ್ಷದ ಪುಟ್ಟ ಸೊಸೆಯನ್ನು ಕಳೆದುಕೊಂಡರು. ಶವಗಳನ್ನು ಅಹಮದಾಬಾದ್‌ನ ಸಿವಿಲ್‌ ಆಸ್ಪತ್ರೆಯ ಶವಾಗಾರದಲ್ಲಿಟ್ಟಾಗ ಕಂಡ ದೃಶ್ಯವನ್ನು ರೋಮಿನ್‌ ಹಂಚಿಕೊಂಡಿದ್ದಾರೆ. ‘ನನ್ನ ಸೋದರ, ಸೋದರನ ಮಗಳು ಮತ್ತು ನನ್ನ ಚಿಕ್ಕಮ್ಮ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಒಂದು ದಿನದ ನಂತರ ನಾನು ಶವಗಳನ್ನು ಗುರುತಿಸಲು ಹೋಗಿದ್ದೆ. ಕ್ಯಾಪ್ಟನ್ ಸುಮೀತ್‌ ಸಭರ್ವಾಲ್ ಅವರ ದೇಹವನ್ನು ಇತರರಿಂದ ಪ್ರತ್ಯೇಕವಾಗಿ ಇರಿಸಲಾಗಿತ್ತು. ಆ ಸಮಯದಲ್ಲಿ, ದೇಹವು ಸೆಟೆದುಕೊಂಡಿತ್ತು ಮತ್ತು ಕುಳಿತುಕೊಂಡ ಸ್ಥಿತಿಯಲ್ಲಿತ್ತು. ಅವರು ಇನ್ನೂ ಸ್ಟೀರಿಂಗ್‌ ಅನ್ನು ಹಿಡಿದುಕೊಂಡ ರೀತಿಯಲ್ಲೇ ಇದ್ದರು. ಸಮವಸ್ತ್ರವನ್ನು ತೊಟ್ಟಿದ್ದರು. ಹಿಂಭಾಗ ಹೆಚ್ಚು ಸುಟ್ಟುಹೋಗಿತ್ತು. ಮುಂಭಾಗ ಮತ್ತು ಮುಖ ಅಷ್ಟೊಂದು ಸುಟ್ಟುಹೋಗಿರಲಿಲ್ಲ’ ಎಂದರು.

37
ಶವಾಗಾರದೊಳಗೆ ಕಂಡ ನರಕಸದೃಶ ದೃಶ್ಯ

ವೋಹ್ರಾ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ರೋಗಶಾಸ್ತ್ರ ಪ್ರಯೋಗಾಲಯದ ಸಹಾಯಕರಾಗಿ ಕೆಲಸ ಮಾಡಿದ್ದರಿಂದ, ಅವರಿಗೆ ಶವಾಗಾರದೊಳಗೆ ಪ್ರವೇಶ ಸಿಕ್ಕಿತ್ತು. ತಮ್ಮ ಕುಟುಂಬದವರ ಮೃತದೇಹಗಳನ್ನು ಗುರುತಿಸುವ ಆಶಯದೊಂದಿಗೆ ಒಳಗೆ ಹೋದ ವೋಹ್ರಾ ಅವರಿಗೆ ಅಲ್ಲಿ ಕಂಡ ದೃಶ್ಯಗಳು ಜನ್ಮದಲ್ಲಿ ಮರೆಯಲಾಗದ ಆಘಾತವನ್ನು ನೀಡಿವೆ.

"ಅಲ್ಲಿನ ದೃಶ್ಯಗಳು ನರಕದಂತಿದ್ದವು. ನೆಲದ ಮೇಲೆ ನೂರಾರು ಶವಗಳನ್ನು ಅಕ್ಕಪಕ್ಕದಲ್ಲಿ ಇಡಲಾಗಿತ್ತು. ಕತ್ತರಿಸಿದ ತಲೆಗಳು, ಕೈಕಾಲುಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ತನ್ನ ಮಗುವನ್ನು ಎದೆಗೆ ಬಿಗಿದಪ್ಪಿಕೊಂಡ ಸ್ಥಿತಿಯಲ್ಲೇ ಸುಟ್ಟು ಕರಕಲಾಗಿದ್ದ ತಾಯಿಯ ಶವ ಕರುಳು ಹಿಂಡುವಂತಿತ್ತು. ನನ್ನ ಮೂರು ವರ್ಷದ ಸೊಸೆಯ ತಲೆಯನ್ನು ಆಕೆಯ ಛಾಯಾಚಿತ್ರದೊಂದಿಗೆ ಹೊಂದಿಸಲು ನಾನು ನಡೆಸಿದ ಪ್ರಯತ್ನ ತೀವ್ರ ಆಘಾತಕಾರಿಯಾಗಿತ್ತು," ಎಂದು ವೋಹ್ರಾ ನೆನೆದಿದ್ದಾರೆ.

47
ಗಮನ ಸೆಳೆದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮೃತದೇಹ

ಶವಾಗಾರದ ಮೂಲೆಯೊಂದರಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದ್ದ ವಿಮಾನದ ಮುಖ್ಯ ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ಮೃತದೇಹ ರೋಮಿನ್ ಅವರ ಗಮನ ಸೆಳೆಯಿತು. ಆ ದೃಶ್ಯ ಇಡೀ ವಿಮಾನ ದುರಂತದ ಕಡೆಯ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತಿತ್ತು. ಮೃತದೇಹವು ಶವಾಗಾರದಲ್ಲೂ ವಿಮಾನದ ಕಾಕ್‌ಪಿಟ್‌ನಲ್ಲಿ ಕುಳಿತುಕೊಳ್ಳುವ ಭಂಗಿಯಲ್ಲೇ ಇತ್ತು. ಕ್ಯಾಪ್ಟನ್ ಧರಿಸಿದ್ದ ನಾಲ್ಕು ಚಿನ್ನದ ಪಟ್ಟಿಗಳಿರುವ ಬಿಳಿ ಸಮವಸ್ತ್ರದ ಶರ್ಟ್, ಕಪ್ಪು ಟೈ, ಪ್ಯಾಂಟ್ ಮತ್ತು ಬೂಟುಗಳು ಸಂಪೂರ್ಣವಾಗಿ ಸುಡದೆ ಹಾಗೇ ಇದ್ದವು. ಮೃತರ ಬೆನ್ನಿನ ಭಾಗ ಸುಟ್ಟುಹೋಗಿತ್ತಾದರೂ ಮುಂಭಾಗ ಸುಟ್ಟಿರಲಿಲ್ಲ.

57
ಕರ್ತವ್ಯ ನಿರತ ವೈದ್ಯರೊಬ್ಬರು ಕೂಡ ಈ ವಾದವನ್ನು ಪುಷ್ಟೀಕರಿಸಿದ್ದಾರೆ

ಅತ್ಯಂತ ಆಶ್ಚರ್ಯಕರ ಮತ್ತು ಆಘಾತಕಾರಿ ವಿಷಯವೆಂದರೆ, ಕ್ಯಾಪ್ಟನ್ ಸಭರ್ವಾಲ್ ಅವರ ಕೈಗಳು ಇನ್ನೂ ವಿಮಾನದ ಸ್ಟೀರಿಂಗ್ ಕಾಲಮ್ (ಯೋಕ್ - Yoke) ಅನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದವು. ಅಪಘಾತದ ತೀವ್ರತೆಗೆ ಅಥವಾ ರಕ್ಷಣಾ ತಂಡ ಕಾಕ್‌ಪಿಟ್‌ನಿಂದ ಹೊರತೆಗೆಯುವಾಗ ಆ ಸ್ಟೀರಿಂಗ್ ಮುರಿದು ಅವರ ಕೈಯಲ್ಲೇ ಉಳಿದುಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಶವಾಗಾರದಲ್ಲಿದ್ದ ಕರ್ತವ್ಯ ನಿರತ ವೈದ್ಯರೊಬ್ಬರು ಕೂಡ ಈ ವಾದವನ್ನು ಪುಷ್ಟೀಕರಿಸಿದ್ದಾರೆ.

ವೋಹ್ರಾ ಅವರ ಈ ಹೇಳಿಕೆ ನಿಖರವಾಗಿದ್ದರೆ, ಇದು ತನಿಖೆಗೆ ಹೊಸ ಆಯಾಮ ನೀಡಲಿದೆ ಎಂದು ವಾಯುಯಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಮಾನವು ತಾಂತ್ರಿಕ ದೋಷಕ್ಕೆ ಒಳಗಾದಾಗ ಕ್ಯಾಪ್ಟನ್ ಸಭರ್ವಾಲ್ ಅವರು ಹೆದರಿ ಹಿಂದೆ ಸರಿಯದೆ, ಕೊನೆಯ ಸೆಕೆಂಡಿನವರೆಗೂ ಪ್ರಯಾಣಿಕರ ಜೀವ ಉಳಿಸಲು ವಿಮಾನವನ್ನು ನಿಯಂತ್ರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದರು ಎಂಬುದಕ್ಕೆ ಇದು ಬಲವಾದ ಸಾಕ್ಷಿಯಾಗಿದೆ.

67
ಪ್ರಾಥಮಿಕ ವರದಿಯಲ್ಲೇನಿದೆ?

ಕಳೆದ ವರ್ಷ ಜುಲೈ 12 ರಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಬಿಡುಗಡೆ ಮಾಡಿದ ಪ್ರಾಥಮಿಕ ವರದಿಯ ಪ್ರಕಾರ, ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಎರಡೂ ಎಂಜಿನ್‌ಗಳಿಗೆ ಸರಬರಾಜಾಗುತ್ತಿದ್ದ ಇಂಧನ ಪೂರೈಕೆಯು ಕೇವಲ ಒಂದು ಸೆಕೆಂಡ್ ಅಂತರದಲ್ಲಿ ಕಡಿತಗೊಂಡಿತ್ತು. ಇದು ಕಾಕ್‌ಪಿಟ್‌ನಲ್ಲಿ ತೀವ್ರ ಗೊಂದಲ ಮತ್ತು ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿತ್ತು ಎಂದು ಹೇಳಲಾಗಿತ್ತು.

77
ಒಟ್ಟು 260 ಮಂದಿ ಸಜೀವ ದಹನ

ಲಂಡನ್‌ಗೆ ಹೊರಟಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಹಮದಾಬಾದ್‌ನ ಬಿ.ಜೆ. ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಭೀಕರ ದುರಂತದಲ್ಲಿ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಹಾಗೂ ನೆಲದ ಮೇಲಿದ್ದ 19 ಜನರು ಸೇರಿದಂತೆ ಒಟ್ಟು 260 ಮಂದಿ ಸಜೀವ ದಹನವಾಗಿದ್ದರು. ಕೇವಲ ಓರ್ವ ಮಾತ್ರ ಪವಾಡಸದೃಶವಾಗಿ ಬದುಕುಳಿದಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories