
ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ದಿನ ಸಾಯಲೇಬೇಕು ಎಂಬುದು ಪ್ರಕೃತಿ ನಿಯಮ. ಸಾವು ಎಂಬ ಮಾತು ಕೇಳಿದ ಕೂಡಲೇ ಎದೆ ಝಲ್ ಎನ್ನುತ್ತದೆ. ಸಾವಿನ ನಂತರ ನಡೆಯುವ ಪ್ರತಿಯೊಂದು ಘಟನೆಯೂ ದೈವಕ್ಕೆ ಸಂಬಂಧಿಸಿದ್ದು. ವ್ಯಕ್ತಿಯ ಮರಣದ ನಂತರ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಒಂದು ಜೀವ ಸತ್ತ ನಂತರ, ಆ ಆತ್ಮದ ಪ್ರಯಾಣ ಶುರುವಾಗುತ್ತದೆ. ಈ ಬಗ್ಗೆ ಗರುಡ ಪುರಾಣವು ಹಲವು ಮಾಹಿತಿಗಳನ್ನು ನೀಡುತ್ತದೆ.
ಹಿಂದೂ ಧರ್ಮದಲ್ಲಿರುವ 18 ಮಹಾಪುರಾಣಗಳಲ್ಲಿ ಗರುಡ ಪುರಾಣವೂ ಒಂದು. ಇದರಲ್ಲಿ ವ್ಯಕ್ತಿಯ ಮರಣದ ನಂತರ ಏನಾಗುತ್ತದೆ? ಆತ್ಮದ ಪ್ರಯಾಣ ಮತ್ತು ಅದರ ಚಲನವಲನಗಳ ಬಗ್ಗೆ ಹಲವು ಮಾಹಿತಿಗಳನ್ನು ವಿವರಿಸಲಾಗಿದೆ. ಗರುಡ ಪುರಾಣದ ಪ್ರಕಾರ, ವ್ಯಕ್ತಿಯ ಮರಣದ ನಂತರ ಅವನ ಆತ್ಮವು ತಕ್ಷಣವೇ ಮನೆಯನ್ನು ಶಾಶ್ವತವಾಗಿ ಬಿಟ್ಟು ಹೋಗುವುದಿಲ್ಲ. ದೇಹ ನಾಶವಾದರೂ, ಕುಟುಂಬ ಮತ್ತು ಮನೆಯ ಮೇಲಿನ ವ್ಯಾಮೋಹದಿಂದಾಗಿ ಆತ್ಮವು ಕೆಲವು ದಿನಗಳ ಕಾಲ ಅಲ್ಲಿಯೇ ಸುತ್ತಾಡುತ್ತಿರುತ್ತದೆ
ಒಬ್ಬ ವ್ಯಕ್ತಿ ಸತ್ತ ತಕ್ಷಣ, ಯಮದೂತರು ಅವನ ಆತ್ಮವನ್ನು ಹಿಡಿದು ಯಮಲೋಕಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಚಿತ್ರಗುಪ್ತನು ಆತ್ಮದ ಪಾಪ-ಪುಣ್ಯಗಳ ಲೆಕ್ಕವನ್ನು ಪರಿಶೀಲಿಸುತ್ತಾನೆ. ಈ ಮೊದಲ ಪ್ರಯಾಣವು ಬಹಳ ಕಡಿಮೆ ಸಮಯ ಇರುತ್ತದೆ. ಲೆಕ್ಕಾಚಾರಗಳನ್ನು ನೋಡಿದ ನಂತರ, ಯಮದೂತರು ಆತ್ಮವನ್ನು ಮತ್ತೆ ಅದರ ಸ್ವಂತ ಮನೆಗೆ ತಂದು ಬಿಡುತ್ತಾರೆ. ಈ ಘಟನೆಯು ವ್ಯಕ್ತಿ ಸತ್ತ ಮೊದಲ 24 ಗಂಟೆಗಳ ಒಳಗೆ ನಡೆದುಹೋಗುತ್ತದೆ.
ಮನೆಗೆ ಮರಳಿದ ಆತ್ಮವು ತನ್ನ ದೇಹವನ್ನು ಸುಟ್ಟ ಬೂದಿ ಅಥವಾ ಹೂಳಿದ ಸ್ಥಳದ ಬಳಿ ಮತ್ತು ತಾನು ವಾಸಿಸುತ್ತಿದ್ದ ಮನೆಯ ಸುತ್ತಲೂ ಸುಳಿದಾಡುತ್ತದೆ. ಈ ದಿನಗಳಲ್ಲಿ, ಆತ್ಮಕ್ಕೆ ಕೇವಲ ಸೂಕ್ಷ್ಮ ಶರೀರ ಮಾತ್ರ ಇರುತ್ತದೆ. ಕುಟುಂಬದವರು ಮಾಡುವ ಪಿಂಡದಾನ ಮತ್ತು ಇತರ ಕ್ರಿಯೆಗಳು ಆ ಆತ್ಮಕ್ಕೆ ಆಹಾರವಾಗುತ್ತದೆ ಮತ್ತು ಮುಂದಿನ ಪ್ರಯಾಣಕ್ಕೆ ಶಕ್ತಿಯಾಗಿ ಬದಲಾಗುತ್ತದೆ. ಈ ಪ್ರಕ್ರಿಯೆಯು ವ್ಯಕ್ತಿ ಸತ್ತ 10 ದಿನಗಳವರೆಗೆ ನಡೆಯುತ್ತದೆ.
ವ್ಯಕ್ತಿ ಸತ್ತ 11 ಮತ್ತು 12ನೇ ದಿನಗಳಲ್ಲಿ ಮಾಡುವ ವಿಶೇಷ ವಿಧಿವಿಧಾನಗಳು, ದಾನಗಳು ಮತ್ತು ಇತರ ಕಾರ್ಯಗಳಿಂದ ಆತ್ಮವು ತನ್ನ ಹಸಿವನ್ನು ನೀಗಿಸಿಕೊಂಡು, ಭೂಲೋಕದ ಮೇಲಿನ ವ್ಯಾಮೋಹವನ್ನು ನಿಧಾನವಾಗಿ ಬಿಡಲು ಪ್ರಾರಂಭಿಸುತ್ತದೆ. ಇದು ಆತ್ಮವು ಯಮಲೋಕದ ಪ್ರಯಾಣಕ್ಕೆ ಸಿದ್ಧವಾಗುತ್ತಿರುವುದನ್ನು ಸೂಚಿಸುತ್ತದೆ. ಈ ಸಮಯದಲ್ಲಿ ನಾವು ಮಾಡುವ ಪೂಜೆಗಳು ಮತ್ತು ಸಂಜೆ ಹೊತ್ತಿಸುವ ದೀಪದ ಬೆಳಕಿನ ಸಹಾಯದಿಂದ ಆತ್ಮವು ಯಮಲೋಕದ ಪ್ರಯಾಣಕ್ಕೆ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತದೆ.
ಗರುಡ ಪುರಾಣದ ಪ್ರಕಾರ, ಮರಣದ ನಂತರ 13ನೇ ದಿನದಂದು ಆತ್ಮವು ಮನೆಯನ್ನು ಶಾಶ್ವತವಾಗಿ ತೊರೆಯುತ್ತದೆ. ಕೇವಲ ಮನೆಯನ್ನಷ್ಟೇ ಅಲ್ಲ, ಈ ಭೂಲೋಕವನ್ನೇ ಶಾಶ್ವತವಾಗಿ ಬಿಟ್ಟು ಹೋಗುತ್ತದೆ. 13ನೇ ದಿನದ ವಿಧಿವಿಧಾನಗಳ ನಂತರ, ಯಮದೂತರು ಆತ್ಮವನ್ನು ಯಮಲೋಕದ ಕಡೆಗೆ ಕರೆದೊಯ್ಯಲು ಪ್ರಾರಂಭಿಸುತ್ತಾರೆ. ಈ ಪ್ರಯಾಣವು ಸುಮಾರು 47 ದಿನಗಳವರೆಗೆ ಅಥವಾ ಕೆಲವು ಧಾರ್ಮಿಕ ಗ್ರಂಥಗಳ ಪ್ರಕಾರ ಒಂದು ವರ್ಷದವರೆಗೆ ಮುಂದುವರಿದು, ಆತ್ಮವು ತನ್ನ ಮುಂದಿನ ಹಂತವನ್ನು ತಲುಪುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಸತ್ತ ಮೊದಲ ದಿನ ಯಮಲೋಕಕ್ಕೆ ಹೋಗಿಬರುವ ಆತ್ಮ, 13 ದಿನಗಳ ಕಾಲ ತನ್ನ ಮನೆಯಲ್ಲೇ ಇರುತ್ತದೆ. 13ನೇ ದಿನದ ವಿಧಿವಿಧಾನಗಳು ಮುಗಿದ ನಂತರ, ಅದು ಮನೆಯನ್ನು ಸಂಪೂರ್ಣವಾಗಿ ತೊರೆದು ತನ್ನ ಅಂತಿಮ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಇದಕ್ಕಾಗಿಯೇ 13 ದಿನಗಳ ಕಾಲ ಸೂತಕವನ್ನು ಆಚರಿಸಿ, ವಿಧಿವಿಧಾನಗಳನ್ನು ಸಂಪೂರ್ಣವಾಗಿ ಮಾಡಲಾಗುತ್ತದೆ. ಸಾವು ಸಂಭವಿಸಿದ ಮನೆಯಲ್ಲಿ 13 ದಿನಗಳ ಕಾಲ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಮುಂಜಾನೆ ಎದ್ದು ಸ್ನಾನ ಮಾಡಬೇಕು. ರಾತ್ರಿ ಅಳುವುದನ್ನು ತಪ್ಪಿಸಬೇಕು. ಸತ್ತವರನ್ನು ಪದೇ ಪದೇ ಕರೆಯಬಾರದು. ಹಾಗೆ ಮಾಡುವುದು ಮೃತರ ಆತ್ಮಕ್ಕೆ ನೋವನ್ನು ಉಂಟುಮಾಡಬಹುದು.
13 ದಿನಗಳ ಕಾಲ ಸತ್ತವರನ್ನು ಮನಃಪೂರ್ವಕವಾಗಿ ನೆನೆದು ಅವರ ಆತ್ಮಕ್ಕೆ ಮುಕ್ತಿ ಸಿಗಲೆಂದು ಶ್ರದ್ಧೆಯಿಂದ ಪೂಜೆಗಳನ್ನು ಮಾಡಬೇಕು. ಮದ್ಯಪಾನ, ಧೂಮಪಾನ, ಮಾಂಸಾಹಾರ ಸೇವನೆ ಮಾಡಬಾರದು. ಸತ್ತವರಿಗೆ ಇಷ್ಟವಾದ ಆಹಾರ, ತಿಂಡಿಗಳನ್ನು ನೈವೇದ್ಯ ಮಾಡಿ ದೀಪ ಹಚ್ಚಿ ಪೂಜಿಸಬೇಕು. ಸತ್ತವರನ್ನು ನೆನೆದು ಅಳುವುದು ಅಥವಾ ಅವರನ್ನು ಮತ್ತೆ ಬರುವಂತೆ ಕರೆಯುವುದು ಆ ಆತ್ಮಕ್ಕೆ ನೋವನ್ನುಂಟು ಮಾಡುತ್ತದೆ. ಇದು ಭೂಲೋಕದ ಮೇಲಿನ ಅವರ ವ್ಯಾಮೋಹವನ್ನು ಕಡಿಮೆ ಮಾಡದೆ, ಆತ್ಮಕ್ಕೆ ಶಾಂತಿ ಸಿಗುವ ಬದಲು ದುಃಖವನ್ನು ಹೆಚ್ಚಿಸಬಹುದು.