ಕೋಲಾರಮ್ಮನ ಪವಾಡ: ಉಗ್ರರೂಪಿ ದೇವಿಯನ್ನ ನೋಡೋದೇ ಅಸಾಧ್ಯ! ಚೇಳು ಕಚ್ಚಿದವರಿಗೆ ಮದ್ದಿದೆ ಇಲ್ಲಿ!

First Published Jun 7, 2024, 5:32 PM IST

ಮೈಸೂರನ್ನು ಕಾಪಾಡಲು ಚಾಮುಂಡೇಶ್ವರಿ ನೆಲೆಸಿರುವಂತೆ ಕೋಲಾರವನ್ನು ಕಾಪಾಡಲು ಅಲ್ಲಿ ನೆಲೆಸಿದ್ದಾಳೆ ಕೋಲಾರಮ್ಮನ ರೂಪದಲ್ಲಿ ಪಾರ್ವತಿ ದೇವಿ. ಈ ದೇವಸ್ಥಾನದ ರಹಸ್ಯಗಳನ್ನ ತಿಳಿಯಿರಿ. 
 

ಕರ್ನಾಟಕವು ದೇಗುಲಗಳ ತವರೂರು. ರಾಜ್ಯಾದ್ಯಂತ ಗಂಗ, ಚೋಳ, ಚಾಲುಕ್ಯರು ಹೀಗೆ ಶತಮಾನಗಳ ಹಿಂದೆ ನಿರ್ಮಿತವಾದ ಅದೆಷ್ಟೋ ದೇಗುಲಗಳಿವೆ. ಇವೆಲ್ಲವೂ ಹಲವು ರಹಸ್ಯಗಳನ್ನು ತನ್ನಲ್ಲಿ ಹೊತ್ತ ದೇಗುಲವಾಗಿದೆ. ಇಂತಹ ರಹಸ್ಯ ಹಾಗೂ ಪವಾಡವನ್ನು ಮಾಡುವಂತ ದೇಗುಲಗಳಲ್ಲಿ ಒಂದು ಕೋಲಾರದಲ್ಲಿರೋ ಕೋಲಾರಮ್ಮ ದೇಗುಲ (Koalaramma Temple). 
 

ಕೋಲಾರಮ್ಮ ಕೋಲಾರದ ನಗರ ದೇವತೆ. ಶಿವನ ಪತ್ನಿ ಪಾರ್ವತಿಯೇ (Parvathi) ಉಗ್ರ ರೂಪಿಯಾಗಿ ಇಲ್ಲಿ ನೆಲೆಸಿದ್ದಾಳೆಂಬ ಪ್ರತೀತಿ ಇದೆ. ಈ ಶಕ್ತಿ ದೇವತೆ ಕೋಲಾರದಲ್ಲಿ ನೆಲಸಿ ನೂರಾರು ವರುಷಗಳಿಂದ ಜನರನ್ನು ರಕ್ಷಿಸುತ್ತ ಬಂದಿರುವ ದೇವತೆಯೂ ಹೌದು. ಕೋಲಾರಮ್ಮ ನಾಡ ದೇವತೆ ಚಾಮುಂಡೆಶ್ವರಿಯ ಪ್ರತಿರೂಪವೂ ಹೌದೆಂಬ ನಂಬಿಕೆ ಜನರದ್ದು. 
 

Latest Videos


ಈ ದೇಗುಲಕ್ಕೂ ಮೈಸೂರಿನ ರಾಜೆಮನೆತನಕ್ಕೂ (Mysore Kingdom) ಸಂಬಂಧ ಇದೆ ಎನ್ನುತ್ತೆ ಇಲ್ಲಿನ ಕಥೆಗಳು. ನಾಡ ಪ್ರಭುಗಳಾಗಿದ್ದ ಮೈಸೂರಿನ ಅರಸರ ಕುಲ ದೇವತೆ ಇದೇ ಕೋಲಾರಮ್ಮ. ಹಾಗಾಗಿಯೇ ಹಿಂದೆ ಪ್ರತಿ ವರ್ಷ ಮೈಸೂರಿನ ಮಹಾರಾಜರು ತಪ್ಪದೇ ಕೋಲಾರಕ್ಕೆ ಬಂದು ದೇವಿಗೆ ಪೂಜೆ ಸಲ್ಲಿಸುತ್ತಿದ್ದರಂತೆ, ಆದರೆ ಸ್ವಾತಂತ್ರದ ನಂತರ ಈ ಸಂಪ್ರದಾಯ ಮುಂದುವರಿಯಲಿಲ್ಲ. 
 

ಕೋಲಾರಮ್ಮ ದೇಗುಲವನ್ನು ಶತಮಾನಗಳ ಹಿಂದೆ ಗಂಗರು ನಿರ್ಮಿಸಿದರಂತೆ. ಈ ದೇಗುಲವು ದ್ರಾವಿಡ ಶೈಲಿಯಲ್ಲಿದ್ದು, ಇಲ್ಲಿನ ಶಿಲ್ಪಕಲೆಗಳು ಅದ್ಭುತವಾಗಿದ್ದು, ಕೆಲವೊಂದು ಶಿಲ್ಪಗಳು ಭಯಾನಕವೂ ಆಗಿದೆಯಂತೆ. ಇಲ್ಲಿ ಅನೇಕ ಪವಾಡ ನಡೆದಿರುವ ಬಗ್ಗೆ ಕೂಡ ಜನರು ಹೇಳುತ್ತಾರೆ. ಹಾಗಾಗಿಯೇ ದೂರ ದೂರದೂರಿನಿಂದ ಜನರು ಕೋಲಾರಮ್ಮನ ಸನ್ನಿಧಿಗೆ ಬಂದು ಬೇಡಿಕೊಳ್ಳುತ್ತಾರೆ. 
 

ಕೋಲಾರಮ್ಮನನ್ನು ಶಕ್ತಿ ದೇವತೆ (powerful Goddess) ಎನ್ನಲಾಗುವುದು. ಈ ದೇವತೆಯನ್ನು ಯಾರೂ ಕೂಡ ನೇರವಾಗಿ ನೋಡಬಾರದಂತೆ, ಯಾಕಂದ್ರೆ ಈ ದೇವಿಯ ರೂಪವು ಅತ್ಯಂತ ಉಗ್ರವಾಗಿರುತ್ತೆ. ಅಷ್ಟಭುಜಗಳುಳ್ಳ ಮಹಿಷಾಸುರ ಮರ್ಧಿನಿ ರೂಪದಲ್ಲಿರುವ ದೇವಿಯ ಭಯಾನಕ ರೂಪವನ್ನು ಬರಿಗಣ್ಣಲ್ಲಿ, ನೇರವಾಗಿ ನೋಡಿದ್ರೆ ಅಪಾಯ ಎನ್ನುವ ಪ್ರತೀತಿ ಇದೆ.  ಹಾಗಾಗಿಯೇ ದೇವತೆಯ ದರ್ಶನವನ್ನು ಗರ್ಭ ಗುಡಿಯಲ್ಲಿ ಇರುವ ಕನ್ನಡಿ ಮೂಲಕ ನೋಡಬೇಕಾಗುವುದು ಇಲ್ಲಿನ ವಿಶೇಷತೆ. ಇನ್ನು ದೇವಿಯ ವಿಗ್ರಹದ ಮೇಲೆ ವೃಶ್ವಿಕದ ಶಿಲ್ಪವೂ ಇದೆ. ಆಕೆ ಎಷ್ಟೇ ಉಗ್ರ ರೂಪದಲ್ಲಿದ್ದರೂ ಜನರ ಮನೋಕಾಮನೆಗಳನ್ನು ಈಡೇರಿಸುವ ಕರುಣಾಮಯಿ ಅವಳು. 
 

ಈಗಿನ ಕೋಲಾರಮ್ಮ ದೇವಸ್ಥಾನವನ್ನು ಚೋಳರ ಕಾಲದಲ್ಲಿ ಕಟ್ಟಿಸಿದರಾದರು ಅದಕ್ಕೂ ಮೊದಲೇ ಸಾವಿರಾರು ವರ್ಷಗಳ ಹಿಂದೆಯೇ ಇಲ್ಲಿ ದೇಗುಲ ಇತ್ತೆಂಬ ನಂಬಿಕೆ ಇದೆ. ಇಲ್ಲಿರುವ ದ್ವಾರಗೋಫುರಗಳು 20 ಅಡಿಗೂ ಎತ್ತರವಾಗಿದ್ದು, ಅಲ್ಲಿ ಅದ್ಭುತವಾದ ಶಿಲ್ಪಗಳನ್ನು ಕೆತ್ತಲಾಗಿದೆ. ಕೃಷ್ಣ, ಪರಶುರಾಮ, ಬಲರಾಮ, ಬಿಲ್ಲು ಹಿಡದ ಸ್ತ್ರೀವಿಗ್ರಹ, ಕುಂಭ, ಶುಕ,ಮಿಥುನ ಶಿಲ್ಪಗಳು, ಸಪ್ತಮಾತ್ರಿಕೆಯರು (Saptmatrika), ಭಯಾನಕವಾದ ಕೆಲವೊಂದು ಶಿಲ್ಪಗಳನ್ನು ಇಲ್ಲಿ ಕಾಣಬಹುದು. 
 

ಇಲ್ಲಿನ ದೇವಿಯ ವಿಗ್ರಹದ ಮೂಗು ವಿರೂಪವಾಗಿರುವ ಕಾರಣ ಇದನ್ನು 'ಮೂಕನಾಚ್ಚಾರಮ್ಮ' ಎಂದೂ ಸ್ಥಳೀಯರು ಕರೆಯುತ್ತಾರೆ. ಈ ದೇವಿಗೆ ಪೂಜೆ ಮಾಡಿಸಿ, ತಾಯಿತ ಕಟ್ಟಿಸಿಕೊಳ್ಳಲು ನಿತ್ಯ ದೂರದೂರುಗಳಿಂದ ಭಕ್ತರು ಆಗಮಿಸುತ್ತಾರೆ.  ಅಷ್ಟೇ ಅಲ್ಲ ಕೋಲಾರಮ್ಮ ಗರ್ಭ ಗುಡಿಯ ಪಕ್ಕದಲ್ಲಿಯೇ ಚೇಳಮ್ಮ (Chelamma) ನೆಲೆಸಿದ್ದಾಳೆ. ಚೇಳು ಕಚ್ಚಿದವರು ಇಲ್ಲಿ ಬಂದರೆ ಬೇಗ ಗುಣಮುಖರಾಗುತ್ತಾರೆಂಬ ಪ್ರತೀತಿ ಇದೆ. ಅಷ್ಟೇ ಅಲ್ಲ ಇಲ್ಲಿ ಚೇಳಮ್ಮನ ಕಾಲಿನ ಕೆಳಗೆ ಒಂದು ಗೂಡಿನಂತಹ ರಚನೆ ಇದೆಯಂತೆ, ಅಲ್ಲಿ ಚೇಳುಗಳು ಇವೆ ಎಂದು ಸಹ ಹೇಳಲಾಗುತ್ತೆ. 
 

ಈ ದೇಗುಲದ ರಹಸ್ಯ (mystery of temple) ಅಥವಾ ಪವಾಡದ ಬಗ್ಗೆ ತಿಳಿಯಬೇಕು ಅಂದ್ರೆ, ಈ ದೇಗುಲವನ್ನು ಪರೀಕ್ಷಿಸಲು ಬಂದಂತಹ ಪುರಾತತ್ವಶಾಸ್ತ್ರಜ್ಞರೊಬ್ಬರು ಇಲ್ಲಿ ಅವರಿಗೆ ಆದಂತಹ ವಿಚಿತ್ರ ಕ್ಷಣಗಳನ್ನು ಈ ಹಿಂದೆ ತಿಳಿಸಿದ್ದರು. ಕಲ್ಲು, ಮಣ್ಣಿನ ಪರೀಕ್ಷೆಗೆ ಬಂದ ಒಬ್ಬ ಪುರಾತತ್ವಶಾಸ್ತ್ರಜ್ಞರು ಹೀಗೆ ಹೇಳಬೇಕು ಅಂದ್ರೆ ಆ ದೇವಿಗೆ ಅದೆಷ್ಟು ಶಕ್ತಿ ಇದೆ ಅನ್ನೋದನ್ನು ನೀವು ತಿಳಿಯಬಹುದು. ಅಷ್ಟಕ್ಕೂ ಅವರು ಬಿಚ್ಚಿಟ್ಟ ಸತ್ಯ ಏನ್ ಗೊತ್ತಾ? 
 

ಅನಿಕಾ ಮನ್ ಎನ್ನುವ ಪುರಾತತ್ವಶಾಸ್ತ್ರಜ್ಞೆಯೊಬ್ಬರು (Archaelogist) ತಮ್ಮ ಗೆಳತಿಯೊಂದಿಗೆ ಈ ದೇಗುಲಕ್ಕೆ ಇತಿಹಾಸ ತಿಳಿಯೋದಕ್ಕೆ ಮತ್ತು, ದೇವರುಗಳ ಬಗ್ಗೆ ತಿಳಿದುಕೊಳ್ಳೋದಕ್ಕೆ ಬಂದಿದ್ರಂತೆ. ಆದರೆ ಇಲ್ಲಿನ ಭಯಾನಕ ರೂಪದಲ್ಲಿರುವ ದೇವತೆಗಳು, ಸಪ್ತಮಾತೃಕೆಯರು ಅವರಿಗೆ ಭಯ ಹುಟ್ಟಿಸಿದವಂತೆ. ಆ ಭಯದಿಂದಾಗಿ ರಾತ್ರಿ ನಿದ್ರೆ ಮಾಡೋದಕ್ಕೂ ಸಾಧ್ಯವಾಗಲಿಲ್ಲವಂತೆ. ಆದರೆ ಆ ದೇಗುಲದ ಪಾಸಿಟಿವ್ ಎನರ್ಜಿ (Positive Energy) ಎಷ್ಟಿತ್ತು ಅಂದ್ರೆ ಆ ಕ್ಷಣದಲ್ಲಿ ಅವರು ಬೇಡಿಕೊಂಡದ್ದೆಲ್ಲಾ ಸಿಗುವಂತೆ ಇತ್ತು. ಪುರಾತತ್ವಶಾಸ್ತ್ರಜ್ಞೆ ಆ ದೇವಿಯಲ್ಲಿ ಬೇಡಿಕೊಂಡದ್ದು ಇದೆ ಅಂತೆ, ಆ ಬೇಡಿಕೆ ಈಡೆರಿದ್ದು ಇದೆಯಂತೆ. ಹಾಗಾಗಿ ಇವರು ಯಾವಾಗೆಲ್ಲ ಬೆಂಗಳೂರು ಕಡೆ ಬರುತ್ತಾರೋ, ಆವಾಗ ಈ ದೇಗುಲಕ್ಕೆ ಭೇಟಿ ನೀಡೋದನ್ನು ಮರೆಯೋದಿಲ್ಲವಂತೆ. 
 

click me!