ಧರ್ಮಸ್ಥಳ ಲಕ್ಷದೀಪೋತ್ಸವ: ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

First Published Dec 8, 2023, 4:09 PM IST

ಅರವಿಂದ್
ದ್ವಿತೀಯ ಎಂಸಿಜೆ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ

ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದ ಲಕ್ಷದೀಪೋತ್ಸವ ಪ್ರಯುಕ್ತ ಇಲ್ಲಿಯ ಪ್ರೌಢಶಾಲಾ ಆವರಣದಲ್ಲಿ ರಾಜ್ಯಮಟ್ಟದ 44ನೇ ವರ್ಷದ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದ ಲಕ್ಷದೀಪೋತ್ಸವ ಪ್ರಯುಕ್ತ ಇಲ್ಲಿಯ ಪ್ರೌಢಶಾಲಾ ಆವರಣದಲ್ಲಿ ರಾಜ್ಯಮಟ್ಟದ 44ನೇ ವರ್ಷದ ವಸ್ತು ಪ್ರದರ್ಶನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಸಮಕ್ಷಮದಲ್ಲಿ ಪುತ್ತೂರು ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ. ಚಾಲನೆ ನೀಡಿದರು. ಬಳಿಕ ವಸ್ತು ಪ್ರದರ್ಶನಾಲಯದ ಪ್ರತಿ ಮಳಿಗೆಗಳಿಗೆ ಭೇಟಿ ನೀಡಿ ಶುಭ ಹಾರೈಸಿದರು.
 

ವಿಶೇಷವೆಂಬಂತೆ ಈ ಬಾರಿ 350 ಕ್ಕೂ ಹೆಚ್ಚಿನ ಮಳಿಗೆಗಳು ವಸ್ತು ಪ್ರದರ್ಶನಾಲಯದಲ್ಲಿ ಪಾಲ್ಗೊಂಡಿವೆ. ಕಾಸರಗೋಡು, ಬೆಂಗಳೂರು, ಮೈಸೂರು , ಬೆಳಗಾವಿ , ಹುಬ್ಬಳ್ಳಿ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ವಸ್ತುಪ್ರದರ್ಶನಾಲಯಕ್ಕೆ ಪ್ರತಿನಿಧಿಗಳು ಆಗಮಿಸಿದ್ದಾರೆ. ಸರ್ಕಾರಿ ಇಲಾಖೆಯ ಮಳಿಗೆಗಳ ಜೊತೆಗೆ ಶಿಕ್ಷಣ ಸಂಸ್ಥೆಗಳು, ಪುಸ್ತಕ ಮಳಿಗೆಗಳು, ಗ್ರಾಮಾಭಿವೃದ್ಧಿ , ಸಿರಿ ಉತ್ಪನ್ನಗಳು , ವಾಹನ ಪ್ರದರ್ಶನ , ಕೃಷಿ ಯಂತ್ರೋಪಕರಣಗಳು , ಕೈಗಾರಿಕೆ , ಕರಕುಶಲ ವಸ್ತು, ಔಷಧಿಗಳು , ತಿಂಡಿ ತಿನಸುಗಳು ಸೇರಿದಂತೆ ವಿವಿಧ ಉತ್ಪನ್ನಗಳ ಮಾರಾಟ ಮಳಿಗೆಗಳು ವಸ್ತು ಪ್ರದರ್ಶನಾಲಯದಲ್ಲಿ ಗಮನ ಸೆಳೆದವು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ವಸ್ತು ಪ್ರದರ್ಶನ ಮಳಿಗೆಗಳ ಮಹತ್ವವನ್ನು ವಿವರಿಸಿದರು. ವಿವಿಧ ಕ್ಷೇತ್ರಗಳ ಮಾಹಿತಿಗಳನ್ನು ಅರಿತುಕೊಳ್ಳಲು ಬೇಕಾದ ಪೂರಕ ಅವಕಾಶಗಳನ್ನು ವಸ್ತುಪ್ರದರ್ಶನಾಲಯಗಳು ಕಲ್ಪಿಸಿಕೊಡುತ್ತವೆ. ಇದು ಗ್ರಾಮೀಣ ಭಾಗದ ಉತ್ಪನ್ನಗಳನ್ನು ಜನರಿಗೆ ಪರಿಚಯಿಸಲು ಮುಖ್ಯ ವೇದಿಕೆಯಾಗಿದೆ. ಬ್ಯಾಂಕ್ ಹಾಗೂ ಕುಟುಂಬ ಕಲ್ಯಾಣದಂತಹ ಸರ್ಕಾರಿ ಇಲಾಖೆಯ ಮಳಿಗೆಗಳಿರುವುದರಿಂದ ಜನರು ಮುಕ್ತವಾಗಿ ಸಂಸ್ಥೆಗಳ ಸವಲತ್ತುಗಳನ್ನು ಸದುಪಯೋಗಿಸಿಕೊಳ್ಳಬಹುದು ಎಂದು ಹೇಳಿದರು.
 

ಈ ಸಂದರ್ಭದಲ್ಲಿ ಹೆಗ್ಗಡೆಯವರ ಪುತ್ರಿ ಶ್ರದ್ಧಾ ಅಮಿತ್, ಆಪ್ತ ಸಹಾಯಕ ವೀರು ಶೆಟ್ಟಿ, ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಮಂಜುನಾಥ್ , ಸಿ.ಇ.ಒ. ಅನಿಲ್ ಕುಮಾರ್, ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್, ಉಜಿರೆ ಎಸ್‌ಡಿಎಂ ಆಸ್ಪತ್ರೆಯ ಆಡಳಿತಾಧಿಕಾರಿ ಜನಾರ್ದನ, ಜನಜಾಗೃತಿ ವೇದಿಕೆ ರಾಜ್ಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಿಸ್, ರತ್ನರಾಜ ಹೆಗ್ಡೆ, ರಾಮಕೃಷ್ಣ ಗೌಡ, ಮೊದಲಾದವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

click me!