'ಬ್ಯಾಟಿಂಗ್‌ ಮಾಡುವಾಗ ಬೌಲರ್‌ ಯಾರು ಅನ್ನೋದನ್ನ ನೋಡೋದಿಲ್ಲ': ಆರ್‌ಸಿಬಿ ವಿರುದ್ಧದ ಇನ್ನಿಂಗ್ಸ್ ಬಳಿಕ ವೈಭವ್‌ ಗುಡುಗು

Published : Apr 11, 2026, 10:24 AM IST

ಯುವ ಕ್ರಿಕೆಟಿಗ ವೈಭವ್, ಬುಮ್ರಾರಂತಹ ಬೌಲರ್‌ಗಳನ್ನು ನಿರ್ಭೀತಿಯಿಂದ ಎದುರಿಸಿ ಕೇವಲ 15 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದಾರೆ. ಪಂದ್ಯದ ನಂತರವೂ ಸಂಭ್ರಮಕ್ಕಿಂತ ಶಿಸ್ತಿಗೆ ಆದ್ಯತೆ ನೀಡಿದ ಅವರ ವೃತ್ತಿಪರತೆ ಮತ್ತು ತಂದೆ-ಕೋಚ್‌ರ ಮಾರ್ಗದರ್ಶನವನ್ನು ನೆನಪಿಸಿಕೊಂಡಿದ್ದಾರೆ.

PREV
15
ಬೌಲರ್ ನೋಡಿ ಹೆದರಲಿಲ್ಲ, ಚೆಂಡನ್ನು ಮಾತ್ರ ಗಮನಿಸಿದೆ

ಜೋಶ್ ಹ್ಯಾಸಲ್‌ವುಡ್‌ ಮತ್ತು ಜಸ್ಪ್ರೀತ್ ಬುಮ್ರಾರಂತಹ ಅಪಾಯಕಾರಿ ಬೌಲರ್‌ಗಳ ಎದುರು ಬ್ಯಾಟ್ ಬೀಸುವಾಗ ಭಯವಾಗಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ವೈಭವ್, "ಯಾರು ಬೌಲಿಂಗ್ ಮಾಡುತ್ತಿದ್ದಾರೆ ಎಂಬುದು ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಓಡುತ್ತಿರುತ್ತದೆ. ಆದರೆ ಬ್ಯಾಟಿಂಗ್ ಮಾಡುವಾಗ ನನ್ನ ಸಂಪೂರ್ಣ ಗಮನ ಚೆಂಡಿನ ಮೇಲಿತ್ತೇ ಹೊರತು ಬೌಲರ್ ಮೇಲಲ್ಲ. ಚೆಂಡಿನ ವೇಗ ಮತ್ತು ಲೈನ್ ನೋಡಿ, ನಾನು ಅಭ್ಯಾಸ ಮಾಡಿದ್ದನ್ನೇ ಮೈದಾನದಲ್ಲಿ ಅಳವಡಿಸಿಕೊಂಡೆ. ನನ್ನ ಸಹಜ ಆಟಕ್ಕೆ ನಾನು ಒತ್ತು ನೀಡಿದೆ" ಎಂದು ಹೇಳಿದ್ದಾರೆ.

25
ಮಿಂಚಿನ ಅರ್ಧಶತಕದಲ್ಲಿ ಸಿಕ್ಸರ್‌ ಮಳೆ

ಆರ್‌ಸಿಬಿ ನೀಡಿದ್ದ 202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಕೇವಲ 26 ಎಸೆತಗಳಲ್ಲಿ 78 ರನ್ ಚಚ್ಚಿದ ವೈಭವ್, ಎದುರಾಳಿ ತಂಡಕ್ಕೆ ಶಾಕ್ ನೀಡಿದರು. ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 7 ಗಗನಚುಂಬಿ ಸಿಕ್ಸರ್‌ಗಳು ಸೇರಿದ್ದವು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್‌, ಐಪಿಎಲ್ ಇತಿಹಾಸದಲ್ಲಿ ಜಂಟಿಯಾಗಿ ಅತಿ ವೇಗದ ಅರ್ಧಶತಕ ಬಾರಿಸಿದ ಮೂರನೇ ಭಾರತೀಯ ಎಂಬ ದಾಖಲೆ ಬರೆದರು. ವಿಶೇಷವೆಂದರೆ ಇದೇ ಸೀಸನ್‌ನಲ್ಲಿ ಸಿಎಸ್‌ಕೆ ವಿರುದ್ಧವೂ ಇವರು 15 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು.

35
ಶಿಸ್ತಿಗೆ ಹೆಚ್ಚಿನ ಆದ್ಯತೆ

ಗೆಲುವಿನ ನಂತರ ಇಂದು ರಾತ್ರಿ ಕೇಕ್ ಕತ್ತರಿಸಿ ಸಂಭ್ರಮಿಸುತ್ತೀರಾ? ಎಂಬ ಆಂಕರ್ ಪ್ರಶ್ನೆಗೆ ಮುಗುಳ್ನಕ್ಕ ವೈಭವ್, "ಇಲ್ಲ ಸರ್, ಅಂತಹದ್ದೇನೂ ಇಲ್ಲ. ನಮಗೆ ಬೆಳಿಗ್ಗೆ ಬೇಗ ಫ್ಲೈಟ್ ಇರುವುದರಿಂದ ನಾವು ಇಂದು ಸ್ವಲ್ಪ ಬೇಗ ಮಲಗಬೇಕು ಮತ್ತು ಬೇಗ ಹೊರಡಬೇಕು" ಎಂದು ಹೇಳುವ ಮೂಲಕ ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ.

45
ತಂದೆ, ಕೋಚ್‌ ಕಿವಿಮಾತು

ತಮ್ಮ ಯಶಸ್ಸಿನ ಹಾದಿಯ ಬಗ್ಗೆ ಮಾತನಾಡಿದ 15 ವರ್ಷದ ಈ ಯುವಕ, "ನನ್ನ ತಂದೆ, ನನ್ನ ಕೋಚ್ ಮತ್ತು ನನ್ನ ಮಾರ್ಗದರ್ಶಿ ರೋಹಿತ್ ಸರ್ ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಾರೆ. ಇದು ಸುದೀರ್ಘ ಪ್ರಯಾಣ, ಇದು ಕೇವಲ ಆರಂಭವಷ್ಟೇ ಎಂದು ಹೇಳಿದ್ದಾರೆ. ಬೇರೆ ಯಾವುದಕ್ಕೂ ಗಮನ ಕೊಡದೆ ಕೇವಲ ನಿಮ್ಮ ಕೆಲಸ ಮತ್ತು ಪ್ರಕ್ರಿಯೆಯ ಮೇಲೆ ಗಮನಹರಿಸಿ ಎಂಬುದು ಅವರ ಕಿವಿಮಾತು" ಎಂದು ತಿಳಿಸಿದರು.

55
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮನಗೆದ್ದ ವೈಭವ್

ವೈಭವ್ ಅವರ ಈ ಸರಳ ಮತ್ತು ಸ್ಪಷ್ಟ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿವೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಸ್ಟಾರ್ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸಿದ ಧೈರ್ಯ ಮತ್ತು ಪಂದ್ಯದ ನಂತರದ ಅವರ ನಮ್ರತೆ ಅಭಿಮಾನಿಗಳ ಹೃದಯ ಗೆದ್ದಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories