ಭಾರತದ ಟಿ20 ವಿಶ್ವಕಪ್ ಗೆಲುವು ಸುಲಭವಾಗಿರಲಿಲ್ಲ, ಬದಲಿಗೆ ಹಲವು ಪಂದ್ಯಗಳಲ್ಲಿ ಸೋಲಿನ ಭೀತಿಯಿಂದ ಪಾರಾಗಿ ಬಂದಿತ್ತು. ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ಬುಮ್ರಾ ಮತ್ತು ಅಕ್ಷರ್ ಪಟೇಲ್ ಅವರಂತಹ ಆಟಗಾರರ ನಿರ್ಣಾಯಕ, ಪವಾಡ ಸದೃಶ ಪ್ರದರ್ಶನಗಳು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದವು.
ಭಾರತ ಈ ಬಾರಿ ಟಿ20 ವಿಶ್ವಕಪ್ ಟ್ರೋಫಿಯನ್ನು ಏಕಪಕ್ಷೀಯವಾಗಿ ಗೆದ್ದಿದ್ದಲ್ಲ. ತಂಡ ಕೆಲ ಪಂದ್ಯಗಳಲ್ಲಿ ಸೋಲಿನ ಭೀತಿಯಲ್ಲಿದ್ದರೆ, ಇನ್ನೂ ಕೆಲ ಪಂದ್ಯಗಳಲ್ಲಿ ಒದ್ದಾಡಿ ಗೆಲುವು ಸಾಧಿಸಿದೆ. ಇನ್ನೇನು ತಂಡ ಸೋಲಲಿದೆ ಎನ್ನುವಷ್ಟರಲ್ಲಿ ಪವಾಡ ರೀತಿಯಲ್ಲಿ ಗೆಲುವು ಒಲಿದಿದೆ. ಅಂಥ ಸೂಪರ್ ಕ್ಷಣಗಳನ್ನು ಒಮ್ಮೆ ಮೆಲುಕು ಹಾಕೋಣ.
27
ಅಮೆರಿಕ ವಿರುದ್ಧ ಭಾರತಕ್ಕೆ ಬೆಳಕಾದ ನಾಯಕ ಸೂರ್ಯ
ಭಾರತ ತನ್ನ ಆರಂಭಿಕ ಪಂದ್ಯದಲ್ಲಿ, ಅದು ಕೂಡಾ ಅಮೆರಿಕ ವಿರುದ್ಧ ಸೋಲುವ ಭೀತಿಯಲ್ಲಿತ್ತು. ಆ ಪಂದ್ಯದಲ್ಲಿ ಭಾರತ 13 ಓವರ್ವರೆಗೂ 80ರ ಗಡಿ ದಾಟಿರಲಿಲ್ಲ. ಈ ವೇಳೆ ತಂಡಕ್ಕೆ ಆಪತ್ಬಾಂಧವರಾಗಿ ಬಂದಿದ್ದು ನಾಯಕ ಸೂರ್ಯ. 49 ಎಸೆತದಲ್ಲಿ ಅವರು ಗಳಿಸಿದ 84 ರನ್ ಪಂದ್ಯದ ಚಿತ್ರಣ ಬದಲಿಸಿತು. ಭಾರತ 9 ವಿಕೆಟ್ಗೆ 161 ರನ್ ಸಿಡಿಸಿ, 29 ರನ್ಗಳಿಂದ ಪಂದ್ಯ ಗೆದ್ದಿತು.
37
ಪಾಕ್ ವಿರುದ್ಧ ಗೆಲುವಿನ ರೂವಾರಿ ಇಶಾನ್ ಕಿಶನ್
ಸ್ಪಿನ್ನರ್ಗಳಿಂದಲೇ ಭಾರತವನ್ನು ಕಟ್ಟಿಹಾಕುವ ಯೋಜನೆಯಲ್ಲಿದ್ದ ಪಾಕ್, ತನ್ನ ಬೌಲಿಂಗ್ನಲ್ಲಿ ಹೆಚ್ಚೂಕಡಿಮೆ ಮೇಲುಗೈ ಸಾಧಿಸಿತ್ತು. ಆದರೆ ಬಹುತೇಕ ಎಲ್ಲಾ ಬ್ಯಾಟರ್ಸ್ ಎಸೆತಕ್ಕೆ ಒಂದರಂತೆ ರನ್ ಗಳಿಸುತ್ತಿದ್ದರೆ, ಇಶಾನ್ ಮಾತ್ರ ಸ್ಫೋಟಕ ಆಟವಾಡಿದರು. ಕೇವಲ 40 ಎಸೆತದಲ್ಲಿ 77 ರನ್ ಚಚ್ಚಿದರು. ತಂಡ 175 ರನ್ ಕಲೆಹಾಕಿತು. ಇದರಿಂದ ಒತ್ತಡಕ್ಕೊಳಗಾಗಿ ಆಡಿದ ಪಾಕ್, ಕೇವಲ 114ಕ್ಕೆ ಆಲೌಟಾಯಿತು.
ಗುಂಪು ಹಂತದಲ್ಲಿ ನೆದರ್ಲೆಂಡ್ಸ್ ವಿರುದ್ಧ ಶಿವಂ ದುಬೆ ಆಟ ಅಮೋಘ. ನಿಧಾನಗತಿಯಲ್ಲಿದ್ದ ತಂಡದ ಸ್ಕೋರಿಂಗ್ ವೇಗವನ್ನು ಹೆಚ್ಚಿಸಿ ಕೇವಲ 31 ಎಸೆತದಲ್ಲಿ 212.90ರ ಸ್ಟ್ರೈಕ್ರೇಟ್ನಲ್ಲಿ 66 ರನ್ ಗಳಿಸಿದ ದುಬೆ, ಬೌಲಿಂಗ್ನಲ್ಲೂ ತಂಡವನ್ನು ಕಾಪಾಡಿದರು. 2 ವಿಕೆಟ್ ಕಿತ್ತು ತಂಡಕ್ಕೆ ಮೇಲುಗೈ ಒದಗಿಸಿದರು.
57
ದೀರ್ಘಕಾಲ ನೆನಪಿನಲ್ಲಿರಲಿದೆ ಸಂಜು ಸ್ಯಾಮ್ಸನ್ರ 2 ಇನ್ನಿಂಗ್ಸ್
ಭಾರತ ಈಗ ವಿಶ್ವ ಚಾಂಪಿಯನ್ ಆಗಿದ್ದರೆ ಅದರ ಹಿಂದೆ ಸಂಜು ಸ್ಯಾಮ್ಸನ್ರ 2 ಅಮೋಘ, ನಿರ್ಣಾಯಕ ಇನ್ನಿಂಗ್ಸ್ನ ಪಾತ್ರ ಬಲುದೊಡ್ಡದು. ಸೂಪರ್-8ನ ವಿಂಡೀಸ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಸಂಜು, ಆ ಪಂದ್ಯವನ್ನು ಏಕಾಂಗಿಯಾಗಿಯೇ ಗೆಲ್ಲಿಸಿಕೊಟ್ಟರು. ಇತರರು ಕೈಕೊಟ್ಟ ಪಂದ್ಯದಲ್ಲಿ 50 ಎಸೆತದಲ್ಲಿ ಔಟಾಗದೆ 97 ರನ್ ಗಳಿಸಿದರು. ಸೆಮೀಸ್ನಲ್ಲೂ ಸಂಜು ಭಾರತದ ಪಾಲಿನ ಹೀರೋ. ಇಂಗ್ಲೆಂಡ್ ವಿರುದ್ಧ 42 ಎಸೆತಕ್ಕೆ 89 ರನ್ ಗಳಿಸಿ ತಂಡವನ್ನು ಫೈನಲ್ಗೇರಿಸಿದರು.
67
ಡೆತ್ ಓವರಲ್ಲಿ ಬೂಮ್ರಾ 2 ಓವರ್ ಡೆಡ್ಲಿ ಬೌಲಿಂಗ್
ಸೆಮೀಸ್ನಲ್ಲಿ 254 ರನ್ ಗುರಿ ಬೆನ್ನತ್ತಿ, ಗೆಲುವಿನ ಸನಿಹದಲಿದ್ದ ಇಂಗ್ಲೆಂಡ್ಗೆ ಬೂಮ್ರಾ ನೀಡಿದ ಆಘಾತವನ್ನು ಭಾರತೀಯ ಅಭಿಮಾನಿಗಳು, ಇಂಗ್ಲೆಂಡ್ ಕ್ರಿಕೆಟಿಗರು ಇನ್ನೊಂದಿಷ್ಟು ವರ್ಷ ಮರೆಯಲು ಸಾಧ್ಯವಿಲ್ಲ. ಇಂಗ್ಲೆಂಡ್ ಕೊನೆ 30 ಎಸೆತದಲ್ಲಿ 69 ರನ್ ಗಳಿಸಬೇಕಿತ್ತು. ಬೂಮ್ರಾ 16ನೇ ಓವರ್ನಲ್ಲಿ 8 ಹಾಗೂ 18ನೇ ಓವರ್ನಲ್ಲಿ ಕೇವಲ 6 ರನ್ ನೀಡಿದರು. ಅಲ್ಲಿಗೆ ಪಂದ್ಯದ ಚಿತ್ರಣ ಬದಲಾಯಿತು. ಬಾಕಿ 3 ಓವರ್ನಲ್ಲಿ ಇಂಗ್ಲೆಂಡ್ 47 ರನ್ ಬಾರಿಸಿದರೂ ಗೆಲ್ಲಲಾಗಲಿಲ್ಲ.
ಸೆಮೀಸ್ನಲ್ಲಿ ಅಕ್ಷರ್ ಪಟೇಲ್ 2 ಅತ್ಯದ್ಭುತ ಕ್ಯಾಚ್ ಪಡೆಯದೇ ಇದ್ದಿದ್ದರೆ ಭಾರತ ಫೈನಲ್ಗೇರುತ್ತಿರಲಿಲ್ಲ, ಕಪ್ ಕೂಡಾ ಸಿಗುತ್ತಿರಲಿಲ್ಲ. 5ನೇ ಓವರ್ನಲ್ಲಿ ಬ್ರೂಕ್ ಬಾರಿಸಿದ ಚೆಂಡನ್ನು ಡೀಪ್ ಪಾಯಿಂಟ್ವರೆಗೆ ಹಿಂದಕ್ಕೆ ಓಡಿ ಅಕ್ಷರ್ ಪಡೆದ ಕ್ಯಾಚ್ ಅಮೋಘ. ಬಳಿಕ 14ನೇ ಓವರ್ನಲ್ಲಿ ಅಪಾಯಕಾರಿ ಜ್ಯಾಕ್ಸ್ ಬಾರಿಸಿದ ಚೆಂಡು ಇನ್ನೇನು ಬೌಂಡರಿ ಲೈನ್ ದಾಟಿತು ಎನ್ನುವಷ್ಟರಲ್ಲಿ ಅಕ್ಷರ್ ಪಟೇಲ್ ಸಾಹಸಿಕವಾಗಿ ಹಿಡಿದು, ಶಿವಂ ದುಬೆ ಅವರತ್ತ ಎಸೆದರು. ದುಬೆ ಕ್ಯಾಚ್ ಪಡೆದು, ಜ್ಯಾಕ್ಸ್ ಔಟಾದರು. ಭಾರತ ಗೆಲುವಿನ ಹಾದಿ ಸುಗಮಗೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.