3ನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಕೋಲ್ಕತಾ ನೈಟ್ ರೈಡರ್ಸ್‌ಗೆ ಬಿಗ್ ಶಾಕ್..!

First Published Mar 15, 2024, 10:58 AM IST

ನವದೆಹಲಿ: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿರುವ ಬೆನ್ನಲ್ಲೇ ಕೋಲ್ಕತಾ ನೈಟ್ ರೈಡರ್ಸ್ ಪಾಳಯದಲ್ಲಿ ಬಿಗ್ ಶಾಕ್ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 22ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.
 

ಇನ್ನು ಪದೇ ಪದೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ತಾರಾ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆ. ಇದರೊಂದಿಗೆ ಅಯ್ಯರ್‌ 17ನೇ ಆವೃತ್ತಿ ಐಪಿಎಲ್‌ನಿಂದಲೇ ಹೊರಬೀಳುವ ಭೀತಿ ಎದುರಾಗಿದೆ.
 

ಮುಂಬೈ ತಂಡದ ಪರ ರಣಜಿ ಟ್ರೋಫಿ ಫೈನಲ್‌ನಲ್ಲಿ ಆಡುತ್ತಿದ್ದ ಶ್ರೇಯಸ್‌ 2ನೇ ಇನ್ನಿಂಗ್ಸ್‌ನಲ್ಲಿ 95 ರನ್‌ ಸಿಡಿಸಿದ್ದರು. ಆದರೆ 3ನೇ ದಿನ ಮತ್ತೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಪಂದ್ಯದ ಕೊನೆ 2 ದಿನಗಳಾದ ಬುಧವಾರ, ಗುರುವಾರ ಅವರು ಫೀಲ್ಡ್‌ ಮಾಡಲಿಲ್ಲ. 

ಅವರ ಗಾಯದ ಪ್ರಮಾಣ ಎಷ್ಟಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಸಂಪೂರ್ಣ ಐಪಿಎಲ್‌ಗೆ ಅಲಭ್ಯರಾದರೂ ಅಚ್ಚರಿಯಿಲ್ಲ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಭಾರತ ಪರ ಮೊದಲೆರಡು ಟೆಸ್ಟ್ ಪಂದ್ಯ ಆಡಿದ್ದ ಶ್ರೇಯಸ್‌, ಮೊದಲ ಟೆಸ್ಟ್‌ ಬಳಿಕ ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿದ್ದರು. 

ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದ ಅವರು ಬಳಿಕ ಚೇತರಿಸಿ, ಮುಂಬೈ ರಣಜಿ ತಂಡ ಸೇರಿದ್ದರು. ಈ ನಡುವೆ ರಣಜಿ ತಪ್ಪಿಸಿದ ಕಾರಣ ಬಿಸಿಸಿಐ ಕೇಂದ್ರೀಯ ಗುತ್ತಿಗೆಯಿಂದಲೂ ಶ್ರೇಯಸ್‌ ಹೊರಬಿದ್ದಿದ್ದರು.

ಶ್ರೇಯಸ್‌ ಸದ್ಯ ಐಪಿಎಲ್‌ನಲ್ಲಿ ಕೋಲ್ಕತಾ ತಂಡದ ನಾಯಕನಾಗಿದ್ದು, ಮಾ.23ರಂದು ಸನ್‌ರೈಸರ್ಸ್‌ ಹೈದ್ರಾಬಾದ್‌ ವಿರುದ್ಧ ಆಡುವ ಮೂಲಕ ಕೆಕೆಆರ್‌ ಈ ಬಾರಿ ಅಭಿಯಾನ ಆರಂಭಿಸಲಿದೆ.

ಈಗಾಗಲೇ ಎರಡು ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿರುವ ಕೋಲ್ಕತಾ ನೈಟ್ ರೈಡರ್ಸ್ 3ನೇ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ. ಹೀಗಿರುವಾಗಲೇ ಶ್ರೇಯಸ್ ಅಯ್ಯರ್ ಗಾಯದ ಭೀತಿ ತಂಡದ ತಲೆನೋವು ಹೆಚ್ಚುವಂತೆ ಮಾಡಿರುವುದಂತೂ ಸುಳ್ಳಲ್ಲ.

click me!