ಬಾಂಗ್ಲಾದೇಶ ಎದುರಿನ ಟಿ20 ಸರಣಿಗೂ ಮುನ್ನ ಭಾರತಕ್ಕೆ ಶಾಕ್; ಬಿಗ್ ಹಿಟ್ಟರ್ ಟೂರ್ನಿಯಿಂದ ಔಟ್

First Published Oct 6, 2024, 12:00 PM IST

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯಕ್ಕೆ ಮುನ್ನ ಭಾರತ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಸ್ಟಾರ್ ಆಲ್ರೌಂಡರ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಶಿವಂ ದುಬೆ

ಬೆನ್ನು ನೋವಿನ ಕಾರಣ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಿಂದ ಶಿವಂ ದುಬೆ ಹೊರಬಿದ್ದಿದ್ದಾರೆ.  ಅಕ್ಟೋಬರ್ 6 ರಂದು ಗ್ವಾಲಿಯರ್‌ನ ಮಾಧವರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ಭಾರತ-ಬಾಂಗ್ಲಾದೇಶ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ಶಿವಂ ದುಬೆ ಈ ಸರಣಿಯಲ್ಲಿ ಇಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಅವರ ಸ್ಥಾನಕ್ಕೆ ಭಾರತ ತಂಡಕ್ಕೆ ತಿಲಕ್ ವರ್ಮಾ ಆಯ್ಕೆಯಾಗಿದ್ದಾರೆ.

ಶಿವಂ ದುಬೆ ಗಾಯ

ಅಭ್ಯಾಸದ ವೇಳೆ ಶಿವಂ ಗಾಯಗೊಂಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದರಿಂದಾಗಿ ಅವರು ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಆಡುವುದಿಲ್ಲ. ಇತ್ತೀಚೆಗೆ, ಶಿವಂ ದುಬೆ ಸೀಮಿತ ಓವರ್‌ಗಳ ಭಾರತ ತಂಡದಲ್ಲಿ ಕಾಣಿಸಿಕೊಳ್ಳುತ್ತಾ ಬಂದಿದ್ದಾರೆ. ಈಗ ಅವರು ಗಾಯದ ಕಾರಣ ಹೊರಬಿದ್ದಿರುವುದರಿಂದ ತಿಲಕ್‌ ವರ್ಮಾಗೆ ತಮ್ಮ ಸಾಮಾರ್ಥ್ಯ ಅನಾವರಣ ಮಾಡಲು ಅವಕಾಶ ಸಿಕ್ಕಿದೆ.

ಆದಾಗ್ಯೂ, ಶಿವಂ ದುಬೆ ಬ್ಯಾಟಿಂಗ್‌ನಂತೆಯೇ ಬೌಲಿಂಗ್‌ನಲ್ಲೂ ಭಾರತ ತಂಡಕ್ಕೆ ಸಹಾಯ ಮಾಡಬಲ್ಲರು, ಆದರೆ ತಿಲಕ್‌ಗೆ ಅದು ಸಾಧ್ಯವಿಲ್ಲ. ಶಿವಂ ದುಬೆ ಅವರ ಗಾಯ ಎಷ್ಟು ಗಂಭೀರವಾಗಿದೆ, ಅವರು ಎಷ್ಟು ಕಾಲ ವಿಶ್ರಾಂತಿ ಪಡೆಯಬೇಕಾಗುತ್ತದೆ ಎಂಬುದರ ಕುರಿತು ಬಿಸಿಸಿಐ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.

Latest Videos


ಐಪಿಎಲ್‌ನಲ್ಲಿ ತಿಲಕ್ ಅವರ ಅದ್ಭುತ ಪ್ರದರ್ಶನ

ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ತಿಲಕ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿಯೇ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಯಿತು. ಆದರೆ ಇಂದು ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಆಡುವ ಸಾಧ್ಯತೆ ಇಲ್ಲ. ಏಕೆಂದರೆ, ಇಂದು ಬೆಳಿಗ್ಗೆ ತಿಲಕ್ ಗ್ವಾಲಿಯರ್‌ಗೆ ಆಗಮಿಸಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

21 ವರ್ಷದ ತಿಲಕ್ ವರ್ಮಾ ದೊಡ್ಡ ಹೊಡೆತಗಳನ್ನು ಬಾರಿಸಬಲ್ಲ ಸ್ಫೋಟಕ ಬ್ಯಾಟ್ಸ್‌ಮನ್. ಟಿ20 ಕ್ರಿಕೆಟ್‌ಗೆ ಸೂಕ್ತ ಆಟಗಾರ. ಬಾಂಗ್ಲಾದೇಶ ವಿರುದ್ಧ ಆಡಲು ಅವಕಾಶ ಸಿಕ್ಕರೆ, ತಂಡವು ದೊಡ್ಡ ಮೊತ್ತವನ್ನು ಗಳಿಸಲು ಸಹಾಯ ಮಾಡಬಹುದು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಅವರು ನೀಡಿದ ಪ್ರದರ್ಶನವನ್ನು ಬಾಂಗ್ಲಾದೇಶ ವಿರುದ್ಧ ಪುನರಾವರ್ತಿಸಿದರೆ, ತಂಡಕ್ಕೆ ದೊಡ್ಡ ಬಲ ಸಿಗಲಿದೆ ಎಂಬುದು ಗಮನಾರ್ಹ.

ಗ್ವಾಲಿಯರ್‌ನಲ್ಲಿ ಬಿಗಿ ಭದ್ರತೆ

ಇಂದು ಗ್ವಾಲಿಯರ್‌ನಲ್ಲಿ ಹಿಂದೂ ಮಹಾಸಭಾ ಬಂದ್‌ಗೆ ಕರೆ ನೀಡಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯವನ್ನು ರದ್ದುಗೊಳಿಸಬೇಕೆಂದು ಸಂಘಟನೆ ಒತ್ತಾಯಿಸಿದೆ. ಇದರಿಂದಾಗಿ ಗ್ವಾಲಿಯರ್‌ನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಈಗಾಗಲೇ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿರುವ ಭಾರತ ತಂಡ 3 ಪಂದ್ಯಗಳ ಟಿ20 ಸರಣಿಯನ್ನು ಕೂಡ ವಶಪಡಿಸಿಕೊಳ್ಳಲು ಹೋರಾಟ ನಡೆಸಲಿದೆ. ಬಾಂಗ್ಲಾದೇಶ ತಂಡ ಕೂಡ ಅಷ್ಟೇ. ಟೆಸ್ಟ್ ಸರಣಿಯನ್ನು ಕಳೆದುಕೊಂಡಿರುವ ಬಾಂಗ್ಲಾ ಟಿ20 ಸರಣಿಯನ್ನು ಗೆಲ್ಲುವತ್ತ ಗಮನ ಹರಿಸಿದೆ. ಟಿ20 ವಿಶ್ವಕಪ್ ಗೆದ್ದ ನಂತರ ಭಾರತ ತಂಡ ಸತತವಾಗಿ ಟಿ20 ಸರಣಿಗಳನ್ನು ಗೆಲ್ಲುತ್ತಾ ಬಂದಿದೆ.

click me!