ಐಪಿಎಲ್‌ ಭಾಗ-2 ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್

First Published Aug 31, 2021, 1:02 PM IST

ನವದೆಹಲಿ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಯುಎಇ ಚರಣದ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಎಲ್ಲಾ ತಂಡಗಳು ಐಪಿಎಲ್‌ ಭಾಗ-2ಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿವೆ. ಇದೆಲ್ಲದರ ನಡುವೆ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಬಿಗ್‌ ಶಾಕ್ ಎದುರಾಗಿದೆ. ತಂಡದ ಪ್ರಮುಖ ಸ್ಟಾರ್ ಆಲ್ರೌಂಡರ್‌ ವಾಷಿಂಗ್ಟನ್ ಸುಂದರ್‌ ಯುಎಇ ಚರಣದ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ.
 

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಯುಎಇ ಚರಣದ ಪಂದ್ಯಾವಳಿಗಳು ಸೆಪ್ಟೆಂಬರ್ 19ರಿಂದ ಆರಂಭವಾಗಲಿವೆ. ಹೀಗಿರುವಾಗಲೇ ವಿರಾಟ್ ಕೊಹ್ಲಿ ಪಡೆಗೆ ದೊಡ್ಡ ಹಿನ್ನೆಡೆಯೊಂದು ಎದುರಾಗಿದೆ.

ಇಂಗ್ಲೆಂಡ್‌ ಪ್ರವಾಸದಲ್ಲಿರುವಾಗ ಬೆರಳಿನ ಗಾಯಕ್ಕೆ ತುತ್ತಾಗಿದ್ದ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ, 14ನೇ ಆವೃತ್ತಿಯ ಐಪಿಎಲ್‌ ಭಾಗ-2ರಿಂದ ಹೊರಬಿದ್ದಿದ್ದಾರೆ. 

ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್‌ ಸರಣಿ ಆರಂಭಕ್ಕೆ ಕೆಲವೇ ದಿನಗಳಿರುವಾಗ ವಾಷಿಂಗ್ಟನ್ ಸುಂದರ್‌ ಗಾಯಗೊಂಡಿದ್ದರು. ಅಭ್ಯಾಸ ಪಂದ್ಯದ ವೇಳೆ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ ವೇಳೆ ಸುಂದರ್ ಬಲಗೈ ಬೆರಳು ಗಾಯಗೊಂಡಿತ್ತು

2018ರಿಂದಲೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿದ್ದ ಸುಂದರ್, ಪವರ್‌-ಪ್ಲೇನಲ್ಲಿ ಪ್ರಮುಖ ಬೌಲರ್‌ ಆಗಿ ತಂಡಕ್ಕೆ ಆಪತ್ಭಾಂದವನಾಗಿದ್ದರು. ಇದೀಗ ವಾಷಿಂಗ್ಟನ್‌ ಹೊರಬಿದ್ದಿರುವುದು ಆರ್‌ಸಿಬಿಗೆ ಹಿನ್ನಡೆ ಉಂಟು ಮಾಡಿದೆ. 

ಅವರ ಬದಲಿಗೆ ಬೆಂಗಾಲ್‌ ಕ್ರಿಕೆಟಿಗ ಆಕಾಶ್‌ ದೀಪ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆಕಾಶ್‌ ದೀಪ್‌ ಈ ಮೊದಲು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನೆಟ್‌ ಬೌಲರ್ ಆಗಿದ್ದರು. 24 ವರ್ಷದ ಆಕಾಶ್‌ ದೀಪ್‌ ಟಿ20 ಮಾದರಿಯಲ್ಲಿ 21 ವಿಕೆಟ್ ಕಬಳಿಸಿದ್ದಾರೆ.

ಅಕಾಶ್‌ ದೀಪ್‌ ಯುಎಇ ಚರಣಕ್ಕೆ ಆರ್‌ಸಿಬಿ ತಂಡ ಕೂಡಿಕೊಂಡ 5ನೇ ಕ್ರಿಕೆಟಿಗ ಎನಿಸಿದ್ದಾರೆ. ಈ ಮೊದಲು ವನಿಂದು ಹಸರಂಗ, ಟಿಮ್‌ ಡೇವಿಡ್, ದುಸ್ಮಂತ್ ಚಮೀರಾ ಹಾಗೂ ಜಾರ್ಜ್‌ ಗಾರ್ಟನ್‌ ಆರ್‌ಸಿಬಿ ತಂಡ ಕೂಡಿಕೊಂಡಿದ್ದಾರೆ.

ವಾಷಿಂಗ್ಟನ್‌ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಆಯ್ಕೆಯಾಗುವ ಸಾಧ್ಯತೆ ಕ್ಷೀಣಿಸಿದೆ. ವಾಷಿಂಗ್ಟನ್ ಸುಂದರ್ ಅನುಪಸ್ಥಿತಿಯಲ್ಲಿ ರವಿಚಂದ್ರನ್ ಅಶ್ವಿನ್ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

click me!