ಕರಾಚಿ: ಟಿ20 ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರದಿಂದ ಹಿಂದೆ ಸರಿಯಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿ ಮುಂದೆ ಹಲವು ಷರತ್ತುಗಳನ್ನು ಇಟ್ಟಿದೆ. ಪಿಸಿಬಿ ಇಟ್ಟಿರುವ ಮೂರಕ್ಕೂ ಹೆಚ್ಚು ಬೇಡಿಕೆಗಳಲ್ಲಿ ಪ್ರಮುಖವಾದವುಗಳು ಇಲ್ಲಿವೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಬಾಂಗ್ಲಾದೇಶ ತಂಡವನ್ನು ಕಿಕೌಟ್ ಮಾಡಿದ್ದನ್ನು ವಿರೋಧಿಸಿ, ಪಾಕಿಸ್ತಾನ ತಂಡವು ಫೆಬ್ರವರಿ 15ರಂದು ನಿಗದಿಯಾಗಿರುವ ಭಾರತ ಎದುರಿನ ಪಂದ್ಯವನ್ನು ಬಾಯ್ಕಾಟ್ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಘೋಷಿಸಿದೆ. ಹೀಗಾಗಿ ಭಾರತ-ಪಾಕ್ ನಡುವಿನ ಹೈವೋಲ್ಟೇಜ್ ಮ್ಯಾಚ್ ನಡೆಯುತ್ತೋ ಅಥವಾ ಇಲ್ಲವೇ ಎನ್ನುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.
26
ಬಾಂಗ್ಲಾದೇಶ ಬೆನ್ನಿಗೆ ನಿಂತ ಪಾಕಿಸ್ತಾನ
ಭದ್ರತೆಯ ಕುಂಟು ನೆಪವೊಡ್ಡಿ ಭಾರತಕ್ಕೆ ತಂಡವನ್ನು ಕಳುಹಿಸಲು ನಿರಾಕರಿಸಿದ್ದಕ್ಕಾಗಿ ಐಸಿಸಿ ಬಾಂಗ್ಲಾದೇಶವನ್ನು ಟೂರ್ನಿಯಿಂದ ಕಿಕೌಟ್ ಮಾಡಿತ್ತು. ಐಸಿಸಿಯ ಈ ಕ್ರಮವನ್ನು ವಿರೋಧಿಸಿ, ಪಾಕಿಸ್ತಾನವು ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸಿದೆ. ಇದರ ಜತೆಗೆ ಜಾಗತಿಕ ಕ್ರಿಕೆಟ್ನಲ್ಲಿ ಬಾಂಗ್ಲಾದೇಶದ ಬೆಳವಣಿಗೆಯನ್ನು ಪರಿಗಣಿಸಿ, ಐಸಿಸಿ ಅವರಿಗೆ ನೀಡುವ ಆರ್ಥಿಕ ಪಾಲನ್ನು ಹೆಚ್ಚಿಸಬೇಕು ಎಂದು ಪಾಕಿಸ್ತಾನ ಒತ್ತಾಯಿಸಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಹೊಸ ಪ್ರತಿಭೆಗಳನ್ನು ಬೆಳೆಸಲು ಈ ಹಣಕಾಸಿನ ನೆರವು ಅಗತ್ಯ ಎಂದು ಪಿಸಿಬಿ ವಾದಿಸುತ್ತಿದೆ.
36
ಐಸಿಸಿ ತಮಗೆ ಹೆಚ್ಚು ಅನುದಾನ ನೀಡಬೇಕು ಎಂದು ಕಂಡೀಷನ್ ಹಾಕಿದ ಪಿಸಿಬಿ
ಐಸಿಸಿ ಆದಾಯದ ಪಾಲಿನಲ್ಲಿ ತಮಗೂ ಅನುದಾನವನ್ನು ಹೆಚ್ಚಳ ಮಾಡಬೇಕು ಎಂದು ಪಾಕಿಸ್ತಾನ ಪಟ್ಟು ಹಿಡಿದಿದ್ದು, ಐಸಿಸಿ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳಲ್ಲಿ ಇದೂ ಒಂದಾಗಿದೆ. ಸದ್ಯ ಪಾಕಿಸ್ತಾನವು ಐಸಿಸಿಯಿಂದ ವಾರ್ಷಿಕ ಆದಾಯದಿಂದ 34.5 ಮಿಲಿಯನ್ ಡಾಲರ್ ಪಡೆಯುತ್ತಿದೆ. ಈ ಮೂಲಕ ಗರಿಷ್ಠ ಅನುದಾನ ಪಡೆಯುತ್ತಿರುವ ತಂಡಗಳ ಪಟ್ಟಿಯಲ್ಲಿ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಂತರ ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ.
ಭಾರತದ ಆಟಗಾರರು ಪಾಕ್ ಪ್ಲೇಯರ್ ಜತೆ ಹ್ಯಾಂಡ್ಶೇಕ್ ಮಾಡಲು ಒತ್ತಾಯ
ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತೀಯ ಆಟಗಾರರು ಹಸ್ತಲಾಘವ (ಹ್ಯಾಂಡ್ಶೇಕ್) ಮಾಡಲು ಸಿದ್ಧರಿರಬೇಕು ಎಂದು ಪಿಸಿಬಿ ಒತ್ತಾಯಿಸಿದೆ. ಸದ್ಯಕ್ಕೆ ಎರಡೂ ತಂಡಗಳ ಆಟಗಾರರು ಹಸ್ತಲಾಘವ ಮಾಡುತ್ತಿಲ್ಲ. ಏಷ್ಯಾಕಪ್ ಟೂರ್ನಿಯಲ್ಲೂ ಭಾರತದ ಆಟಗಾರರು ಪಾಕಿಸ್ತಾನದ ಜತೆ ಹ್ಯಾಂಡ್ ಶೇಕ್ ಮಾಡಿರಲಿಲ್ಲ. ಆದರೆ ಈ ವಿಶ್ವಕಪ್ನಲ್ಲಿ ಭಾರತ ಆಟಗಾರರು ಪಾಕ್ ಆಟಗಾರರ ಜತೆ ಹಸ್ತಲಾಘವ ಮಾಡಬೇಕು ಎಂದು ಐಸಿಸಿ ಮುಂದೆ ಪಿಸಿಬಿ ಡಿಮ್ಯಾಂಡ್ ಇಟ್ಟಿದೆ.
56
ಬಾಂಗ್ಲಾದೇಶಕ್ಕೆ 'ಪಾರ್ಟಿಸಿಪೇಷನ್ ಫೀ' ನೀಡಲು ಪಿಸಿಬಿ ಒತ್ತಾಯ
ವಿಶ್ವಕಪ್ನಿಂದ ಹೊರಗುಳಿದಿದ್ದರೂ, ಸಿದ್ಧತೆಗಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಿರುವ ಬಾಂಗ್ಲಾದೇಶಕ್ಕೆ 'ಪಾರ್ಟಿಸಿಪೇಷನ್ ಫೀ'ಯನ್ನು ಐಸಿಸಿ ಖಚಿತಪಡಿಸಬೇಕು. ಮುಂಬರುವ ಯಾವುದೇ ಐಸಿಸಿ ಟೂರ್ನಮೆಂಟ್ಗೆ ಆತಿಥ್ಯ ವಹಿಸುವ ಹಕ್ಕನ್ನು ಬಾಂಗ್ಲಾದೇಶಕ್ಕೂ ನೀಡಬೇಕು. ಇದು ಅವರ ಕ್ರಿಕೆಟ್ ಆರ್ಥಿಕತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಪಿಸಿಬಿ, ಐಸಿಸಿ ಎದುರು ವಾದಿಸಿದೆ.
66
ಇಂದು ಅಂತಿಮ ನಿರ್ಧಾರ ಘೋಷಿಸುವ ಸಾಧ್ಯತೆ
ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ-ಪಾಕ್ ಪಂದ್ಯದ ವಿಷಯದಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಇನ್ನೂ ತಮ್ಮ ಪಟ್ಟು ಸಡಿಲಿಸಿಲ್ಲ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅವರು ಇಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾಗಲಿದ್ದಾರೆ. ಸರ್ಕಾರದ ನಿಲುವು ತಿಳಿದ ನಂತರವೇ ಪಿಸಿಬಿ ಐಸಿಸಿಗೆ ಉತ್ತರ ನೀಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.