
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 'ಬಾಕ್ಸಿಂಗ್ ಡೇ ಟೆಸ್ಟ್' ಮೆಲ್ಬರ್ನ್ನಲ್ಲಿ ನಡೆಯುತ್ತಿದೆ. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 474 ರನ್ಗಳಿಸಿತು. ಭಾರತದ ಟಾಪ್ ಆರ್ಡರ್ ವೈಫಲ್ಯದ ಜೊತೆಗೆ, ವೇಗಕ್ಕೆ ಸಹಕಾರಿಯಾದ ಪಿಚ್ನಲ್ಲಿ ಆಸೀಸ್ 474 ರನ್ ಗಳಿಸಿರುವುದು ಬಹಳ ದೊಡ್ಡ ಮೊತ್ತ. 7ನೇ ವಿಕೆಟ್ಗೆ ಕಮಿನ್ಸ್ ಮತ್ತು ಸ್ಮಿತ್ ಜೋಡಿ 25 ಓವರ್ಗಳಲ್ಲಿ 120ಕ್ಕೂ ಹೆಚ್ಚು ರನ್ ಗಳಿಸಿದ್ದು ಭಾರತದ ಬೌಲಿಂಗ್ ದೌರ್ಬಲ್ಯವನ್ನು ಎತ್ತಿ ತೋರಿಸಿದೆ.
ಇದಕ್ಕೆ ಪ್ರಮುಖ ಕಾರಣ ಸಿರಾಜ್ ಎಂದರೆ ತಪ್ಪಾಗಲಾರದು. ಬುಮ್ರಾ ಅವರನ್ನು ಎಚ್ಚರಿಕೆಯಿಂದ ಆಡಿದ ಆಸೀಸ್ ಬ್ಯಾಟ್ಸ್ಮನ್ಗಳು ಆಕಾಶ್ ದೀಪ್ ಮತ್ತು ಸಿರಾಜ್ ಅವರನ್ನು ಚೆನ್ನಾಗಿ ದಂಡಿಸಿದರು. ಈ ಸರಣಿಯಲ್ಲಿ 2ನೇ ಪಂದ್ಯ ಆಡುತ್ತಿರುವ ಆಕಾಶ್ ದೀಪ್ ಉತ್ತಮವಾಗಿ ಬೌಲ್ ಮಾಡದಿದ್ದರೂ ಮೊದಲ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಪಡೆದರು. ಆದರೆ ಸರಣಿಯ ಆರಂಭದಿಂದಲೂ ಆಡುತ್ತಿರುವ ಸಿರಾಜ್ ಮೊದಲ ಇನ್ನಿಂಗ್ಸ್ನಲ್ಲಿ 23 ಓವರ್ಗಳಲ್ಲಿ 122 ರನ್ ನೀಡಿ ಒಂದೇ ಒಂದು ವಿಕೆಟ್ ಪಡೆಯದಿರುವುದು ಭಾರತಕ್ಕೆ ಹಿನ್ನಡೆಯಾಗಿದೆ. ಬುಮ್ರಾ ಹೊಸ ಮತ್ತು ಹಳೆಯ ಎರಡೂ ಬಾಲ್ಗಳಿಂದ ವಿಕೆಟ್ ಪಡೆಯುತ್ತಿರುವಾಗ, ಸಿರಾಜ್ ರನ್ಗಳನ್ನು ಧಾರಾಳವಾಗಿ ನೀಡುತ್ತಿರುವುದು ಆಸೀಸ್ಗೆ ಅನುಕೂಲವಾಗಿದೆ.
ವೇಗಕ್ಕೆ ಸಹಕಾರಿಯಾದ ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಒಟ್ಟು 5 ವಿಕೆಟ್ ಪಡೆದಿದ್ದ ಸಿರಾಜ್, ಮುಂದಿನ ಟೆಸ್ಟ್ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಅಡಿಲೇಡ್ನಲ್ಲಿ ನಡೆದ 2ನೇ ಟೆಸ್ಟ್ನಲ್ಲಿ 4 ವಿಕೆಟ್ ಪಡೆದರೂ 24 ಓವರ್ಗಳಲ್ಲಿ 98 ರನ್ ನೀಡಿದರು. ಈ ಸರಣಿಯಲ್ಲಿ ಸಿರಾಜ್ 13 ವಿಕೆಟ್ಗಳನ್ನು ಪಡೆದಿದ್ದಾರೆ, ಆದರೆ ಅವರಲ್ಲಿ ಹೆಚ್ಚಿನವು ಬಾಲಂಗೋಚಿಗಳು. ಮೊದಲ ಟೆಸ್ಟ್ ಹೊರತುಪಡಿಸಿ ಉಳಿದ 3 ಟೆಸ್ಟ್ಗಳಲ್ಲಿ, ತಂಡಕ್ಕೆ ಅಗತ್ಯವಿರುವ ಹಂತದಲ್ಲಿ ಮತ್ತು ಆಸೀಸ್ ಬ್ಯಾಟ್ಸ್ಮನ್ಗಳು ಪಾಲುದಾರಿಕೆ ಹೊಂದಿರುವಾಗ ಅವರು ವಿಕೆಟ್ ಪಡೆದಿಲ್ಲ.
ಹೊಸ ಚೆಂಡಿನಲ್ಲಿ ಅವರು ವಿಕೆಟ್ ಪಡೆಯಲು ಪರದಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸಿರಾಜ್ ಅವರ ಬಲವೇ ಸರಿಯಾದ ಲೈನ್ ಮತ್ತು ಲೆಂತ್ನಲ್ಲಿ ಸ್ಟಂಪ್ಗಳನ್ನು ಗುರಿಯಾಗಿಸಿಕೊಂಡು ಬೌಲ್ ಮಾಡುವುದು. ಆದರೆ ಈ ಸರಣಿಯಲ್ಲಿ ಲೈನ್ ಮತ್ತು ಲೆಂತ್ನಲ್ಲಿ ತಪ್ಪುಗಳನ್ನು ಮಾಡುತ್ತಿರುವ ಸಿರಾಜ್, ಬ್ಯಾಟ್ಸ್ಮನ್ಗಳು ಸುಲಭವಾಗಿ ಹೊಡೆಯಬಹುದಾದ ಶಾರ್ಟ್ ಪಿಚ್ ಮತ್ತು ಔಟ್ಸೈಡ್ ಆಫ್ ಸ್ಟಂಪ್ ಚೆಂಡುಗಳನ್ನು ಹೆಚ್ಚಾಗಿ ಎಸೆದಿದ್ದಾರೆ. 4ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಆಸೀಸ್ ಬ್ಯಾಟ್ಸ್ಮನ್ಗಳಿಗೆ ಸವಾಲೊಡ್ಡುವ ಒಂದೆರಡು ಚೆಂಡುಗಳನ್ನು ಮಾತ್ರ ಎಸೆದ ಅವರು ಉಳಿದ ಚೆಂಡುಗಳನ್ನು ತುಂಬಾ ಸಾಮಾನ್ಯವಾಗಿ ಎಸೆದ ಕಾರಣ ಎದುರಾಳಿ ಬ್ಯಾಟ್ಸ್ಮನ್ಗಳು ಚೆನ್ನಾಗಿ ಬಾರಿಸಿದರು.
2020-21ರ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾದಲ್ಲಿ 3 ಪಂದ್ಯಗಳಲ್ಲಿ 13 ವಿಕೆಟ್ ಪಡೆದ ಸಿರಾಜ್, ಭಾರತ ತಂಡವು ಸರಣಿಯನ್ನು ಗೆಲ್ಲಲು ಪ್ರಮುಖ ಕಾರಣರಾಗಿದ್ದರು. ಆ ಸರಣಿಯಲ್ಲಿ ಅವರು ಹೊಸ ಚೆಂಡಿನಲ್ಲಿ ಸ್ಟಂಪ್ಗಳನ್ನು ಗುರಿಯಾಗಿಸಿಕೊಂಡು ಸರಿಯಾದ ಲೈನ್ ಮತ್ತು ಲೆಂತ್ನಲ್ಲಿ ಚೆಂಡುಗಳನ್ನು ಎಸೆದ ಕಾರಣ ಆಸೀಸ್ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಬೇಗನೆ ವಿಕೆಟ್ ಕಳೆದುಕೊಂಡರು. ಆ ಹಳೆಯ ಸಿರಾಜ್ ಈಗಿನ ಆಸ್ಟ್ರೇಲಿಯಾ ಸರಣಿಯಲ್ಲಿ ಕಾಣೆಯಾಗಿರುವುದು ನನಗೆ ಬೇಸರ ತಂದಿದೆ. ವಿರಾಟ್ ಕೊಹ್ಲಿ ಅವರ ಶಿಷ್ಯನಾಗಿರುವ ಸಿರಾಜ್, ಗುರುವಿನಂತೆಯೇ ಮೈದಾನದಲ್ಲಿ ಎದುರಾಳಿ ಆಟಗಾರರನ್ನು ಕೆಣಕಿ ಆಕ್ರಮಣಕಾರಿಯಾಗಿ ಆಡುತ್ತಾರೆ. ಆದರೆ ಈ ಸರಣಿಯಲ್ಲಿ ಸಿರಾಜ್ನಿಂದ ಕೇವಲ ಆಕ್ರಮಣಶೀಲತೆ ಮಾತ್ರ ಕಾಣಿಸುತ್ತಿದೆಯೇ ಹೊರತು, ಅವರ ಸಂಪೂರ್ಣ ಪ್ರತಿಭೆ ಹೊರಬರುತ್ತಿಲ್ಲ.
ಆದರೆ ಪ್ರಸ್ತುತ ಆಸ್ಟ್ರೇಲಿಯಾ ಸರಣಿಯಲ್ಲಿ ಸಿರಾಜ್ನಿಂದ ಕೇವಲ ಆಕ್ರಮಣಶೀಲತೆ ಮಾತ್ರ ಕಾಣಿಸುತ್ತಿದೆಯೇ ಹೊರತು, ಅವರ ಸಂಪೂರ್ಣ ಪ್ರತಿಭೆ ಹೊರಬರುತ್ತಿಲ್ಲ. ಡಿಎಸ್ಪಿ ಸಿರಾಜ್ ಮತ್ತೆ ಹಳೆಯ ಫಾರ್ಮ್ಗೆ ಮರಳಿ ಭಾರತ ತಂಡದ ಗೆಲುವಿಗೆ ಕೈಜೋಡಿಸಬೇಕೆಂಬುದು ಕೋಟ್ಯಂತರ ಅಭಿಮಾನಿಗಳ ಆಶಯ. ಇಲ್ಲದಿದ್ದರೇ ಸಿರಾಜ್ ತಂಡದಿಂದ ಹೊರಬಿದ್ದರೇ ಅಚ್ಚರಿಯೇನಿಲ್ಲ.