UPSCಗಾಗಿ 20 ಲಕ್ಷದ ಆಫರ್ ತಿರಸ್ಕರಿಸಿದ ಇಶಾ, IPS ಆಗುವ ಕನಸು ನನಸು!

First Published Oct 4, 2021, 6:06 PM IST

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ 24 ರಂದು ಹೊರಬಿದ್ದಿದೆ. ಅಂತಿಮ ಫಲಿತಾಂಶದಲ್ಲಿ ಒಟ್ಟು 761 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಏಷ್ಯಾನೆಟ್‌ ನ್ಯೂಸ್‌(Asianet News) UPSC ಆಯ್ಕೆ ಮಾಡಿದ 100 ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದೆ. ಈ ಸರಣಿಯ ಮೊದಲ ಸಂದರ್ಶನ(UPSC Interview) ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ನಿಂದ ಪದವಿ ಪಡೆದ, UPSCಯಲ್ಲಿ 191 ನೇ ಸ್ಥಾನ ಪಡೆದ ಇಶಾ ಸಿಂಗ್‌ರದ್ದಾಗಿದೆ. ಇನ್ನು ಇಶಾ ಜೊತೆ ವ್ಯಾಸಂಗ ನಡೆಸಿದವರು ವಿದೇಶಗಳಲ್ಲಿ ಅತ್ಯತ್ತಮ ವೇತನಕ್ಕೆ ದುಡಿಯುತ್ತಿದ್ದಾರೆ. ಇನ್ನು ಇಶಾಗೆ ಬರೋಬ್ಬರಿ 20 ಲಕ್ಷ ಪ್ಯಾಕೇಜ್‌ಗೆ ಕಾನೂನು ಸಂಸ್ಥೆಯಲ್ಲಿ ಉದ್ಯೋಗದ ಆಫರ್ ಕೂಡ ಸಿಕ್ಕಿತ್ತು. ಆದರೆ ಇಶಾ ಸಿಂಗ್ ಸ್ವದೇಶದಲ್ಲಿದ್ದೇ ಸಾಮಾಜಿಕ ಸೇವೆ ಮಾಡಲು ನಿರ್ಧರಿಸಿದ್ದರು. ಹಾಗಾದ್ರೆ UPSC ಜರ್ನಿ ಹೇಗಿತ್ತು? ಇಲ್ಲಿದೆ ವಿವರ

ತಂದೆಯ ಕೆಲಸ ಕಂಡು ಪ್ರೇರಣೆ

ಅವರ ತಂದೆ ವೈಪಿ ಸಿಂಗ್(YP Singh) ಅವರು ಜೌನ್‌ಪುರದ ರಾಮನಗರ ಅಭಿವೃದ್ಧಿ ಬ್ಲಾಕ್ ಪ್ರದೇಶದ ಜವಾನ್ಸಿಪುರ ಗ್ರಾಮದ ನಿವಾಸಿಯಾಗಿದ್ದು, ಮುಂಬೈನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದಾರೆ. ಇಶಾ ಸಿಂಗ್ ಬಾಲ್ಯದಿಂದಲೂ ತನ್ನ ತಂದೆಯ ಕೆಲಸವನ್ನು ಹತ್ತಿರದಿಂದ ನೋಡಿ ಬಲ್ಲವರಾಗಿದ್ದರು. ತನ್ನ ತಂದೆ ಸಾರ್ವಜನಿಕರಿಗೆ ಸಂಬಂಧಿಸಿದ ವಿಷಯಗಳಲ್ಲಿ ಹೊಂದಿದ್ದ ಆಸಕ್ತಿ ಹಾಗೂ ಸಾಮಾನ್ಯ ಮನುಷ್ಯನಿಗೆ ನ್ಯಾಯ ದೊರಕಿಸಿಕೊಡಲು ಕೆಲಸ ಮಾಡುತ್ತಿದ್ದ ರೀತಿ ನೋಡಿದ್ದರು. ಆಗಲೇ ಅವರು ಭಾರತೀಯ ಪೊಲೀಸ್ ಸೇವೆಗೆ (IPS) ಸೇರಲು ಮನಸ್ಸು ಮಾಡಿದ್ದರು. ಈಗ ಅವರ ಕನಸು ನನಸಾಗಿದೆ. ಕಾನೂನು ಅಧ್ಯಯನ ಮಾಡಿದ ನಂತರ, ಅವರು ತಮ್ಮ ತಾಯಿಯೊಂದಿಗೆ ಕಾನೂನು ಅಭ್ಯಾಸ ಮಾಡಲು ಪ್ರಾರಂಭಿಸಿದರು. ಸ್ವಚ್ಛತಾ ಕಾರ್ಮಿಕರ ವಿಧವೆಯರ ಹಕ್ಕುಗಳ ಹೋರಾಟದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದರು. ಇಶಾರ ಆರಂಭಿಕ ಶಿಕ್ಷಣ ಲಕ್ನೋದ ಮಾರ್ಟಿನಿಯರ್ ಗರ್ಲ್ಸ್‌ ಕಾಲೇಜ್ ಮತ್ತು ಮುಂಬೈನ ಜೆಬಿ ಪೆಟಿಡ್ ಮತ್ತು ಕ್ಯಾಥೆಡ್ರಲ್ ಸ್ಕೂಲ್ನಲ್ಲಿ ನಡೆಯಿತು.

ತಾಯಿ ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ವಕೀಲೆ, ತಂದೆ ಮಾಜಿ ಐಪಿಎಸ್


ಇಶಾ ಸಿಂಗ್ ಅವರ ತಾಯಿ ಅಭಾ ಸಿಂಗ್ ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ವಕೀಲರಾಗಿದ್ದಾರೆ. ಅವರು ಭಾರತೀಯ ಅಂಚೆ ಸೇವೆಯಲ್ಲಿ ಅಧಿಕಾರಿಯಾಗಿದ್ದರು. ಸಲ್ಮಾನ್ ಖಾನ್ ವಿರುದ್ಧದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅವರು ವಾದಿಸಿದ್ದಾರೆ. ಅಭಾ ಸಿಂಗ್ ಮುಂಬೈನಲ್ಲಿಯೇ ಕಾನೂನು ಅಭ್ಯಾಸ ಮಾಡಿದ್ದಾರೆ. ಅವರು ನವೆಂಬರ್ 2012 ರಲ್ಲಿ ಸೇವೆಯಿಂದ VRS ತೆಗೆದುಕೊಂಡರು. ಇನ್ನು ಇಶಾರ ತಂದೆ ತಂದೆ ವೈಪಿ ಸಿಂಗ್ 1985 ರ ಬ್ಯಾಚ್ ಐಪಿಎಸ್ ಅಧಿಕಾರಿ. ಅವರೂ ಕೂಡಾ 2004 ರಲ್ಲಿ ಭಾರತೀಯ ಪೊಲೀಸ್ ಸೇವೆಯಿಂದ VRS ತೆಗೆದುಕೊಂಡಿದ್ದು, ಈಗ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ. ವೈಪಿ ಸಿಂಗ್ ಅವರನ್ನು ಖಡಕ್‌ ಅಧಿಕಾರಿ ಎಂದೇ ಗುರುತಿಸಲಾಗುತ್ತದೆ. ಇಶಾ ಸಿಂಗ್ ಅವರ ಚಿಕ್ಕಪ್ಪ ರಾಜೇಶ್ವರ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯದಲ್ಲಿ ನೇಮಿಸಲಾಗಿದೆ. ಅವರ ತಾಯಿಯ ಅಪ್ಪ ರಣಬಹದ್ದೂರ್ ಸಿಂಗ್ ಕೂಡ ಐಪಿಎಸ್ ಅಧಿಕಾರಿಯಾಗಿದ್ದರು ಎಂಬುವುದು ಉಲ್ಲೇಖನೀಯ.

UPSCಗೆ ತಯಾರಿ ನಡೆಸುತ್ತೀರೆಂದಾದರೆ ನೀವು ಯಾವತ್ತೂ ಸೋಲಲ್ಲ

ತನ್ನ ಬಾಲ್ಯದಲ್ಲಿ ತಾನು ಹೆಚ್ಚು ಮೇಧಾವಿ ಹುಡುಗಿಯಾಗಿರಲಿಲ್ಲ ಎಂದು ಇಶಾ ಹೇಳಿದ್ದಾರೆ. 10, 12 ಮತ್ತು ಲಾ ಸ್ಕೂಲ್‌ನಲ್ಲಿ ಉತ್ತಮ ಫಲಿತಾಂಶ ಬಂದಿತ್ತು. ಆದರೆ ಯುಪಿಎಸ್‌ಸಿ ಅಧ್ಯಯನ ನಡೆಸಲು ಉತ್ತಮ ಅವಕಾಶವನ್ನು ನೀಡಿದೆ. ನೀವು ಯುಪಿಎಸ್ಸಿಯಲ್ಲಿ ಆಯ್ಕೆಯಾಗುತ್ತೀರೋ, ಇಲ್ಲವೋ ಆದರೆ ಇದು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ನೀವು ಅರ್ಥಶಾಸ್ತ್ರ, ರಾಜಕೀಯ, ಭೂಗೋಳ, ಸಾಮಾನ್ಯ ಅಧ್ಯಯನ ಮತ್ತು ಇತಿಹಾಸದಂತಹ ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡುತ್ತೀರಿ. ಇದು ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ ಅದು ಯಾವಾಗಲೂ ಉಪಯುಕ್ತವಾಗಿದೆ. ಈ ಪರೀಕ್ಷೆಗೆ ಹಾಜರಾದ ನಂತರ ನೀವು ಎಂದಿಗೂ ಸೋಲಲು ಸಾಧ್ಯವಿಲ್ಲ. ನೀವು ಯುಪಿಎಸ್‌ಸಿಗೆ ಅಧ್ಯಯನ ಮಾಡಿದ್ದರೆ ಅದು ನಿಮ್ಮ ನಿತ್ಯದ ಜೀವನದಲ್ಲಿ ಉಪಯೋಗಕ್ಕೆ ಬರುತ್ತದೆ. ನಿಮ್ಮನ್ನು ನೀವು ವೈಯಕ್ತಿಕವಾಗಿ ಅಭಿವೃದ್ಧಿಪಡಿಸಿಕೊಳ್ಳುವತ್ತ ಗಮನ ಹರಿಸಬೇಕಷ್ಟೇ ಎಂದು ಹೇಳಿದ್ದಾರೆ.

ಪರೀಕ್ಷೆಗೆ ಒಂದು ವಾರ ಮೊದಲು ವಿಧವೆಯರಿಗೆ ನ್ಯಾಯ ಸಿಕ್ಕಿತು

ಇನ್ನು ಪರೀಕ್ಷೆಗೆ ಒಂದು ವಾರ ಮುಂಚಿತವಾಗಿ, ಸ್ವಚ್ಛತಾ ಕಾರ್ಮಿಕರು ಮುಂಬೈನಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಅವರ ವಿಧವೆಯರು ತಲಾ ಹತ್ತು ಲಕ್ಷ ಪರಿಹಾರ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮುಂಬೈ ಹೈಕೋರ್ಟ್, ಇದುವರೆಗೆ ಸರ್ಕಾರವು ಎಷ್ಟು ಕೈಯಾರೆ ಸ್ಕ್ಯಾವೆಂಜರ್‌ಗಳನ್ನು ಗುರುತಿಸಿದೆ ಎಂದು ಮಹಾರಾಷ್ಟ್ರ ಸರ್ಕಾರದಿಂದ ಮಾಹಿತಿ ಕೇಳಿದೆ. ಅಪರಾಧ ನ್ಯಾಯ ಮತ್ತು ಮಹಿಳಾ ಸಬಲೀಕರಣದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ನೀತಿ ಬದಲಾವಣೆ ತರಲು ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಲಾಗಿದೆ. ನಾನು ಎಲ್ಲ ಕೆಲಸ ಬಿಟ್ಟು UPSC ಪರೀಕ್ಷೆಗೆ ಮಾತ್ರ ತಯಾರಿ ನಡೆಸಿದ್ದೇನೆ ಎಂದು ಹೇಳಲ್ಲ ಎಂದಿದ್ದಾರೆ ಇಶಾ ಸಿಂಗ್.

ಕೆಲಸದ ಮೂಲಕ ಸಮಾಜದಲ್ಲಿ ಬದಲಾವಣೆ, ಅದೇ ಯಶಸ್ಸು

ಯುಪಿಎಸ್‌ಸಿ ಪರೀಕ್ಷೆಗೆ ನೀವು ಸಿದ್ಧತೆ ವೇಳೆ ನೀವು ಏನೆಲ್ಲಾ ಕಲಿಯುತ್ತೀರೋ ಅದೇ ನಿಮ್ಮನ್ನು ಬೆಳೆಯುವಂತೆ ಮಾಡುತ್ತದೆ. ಕೆಲಸವನ್ನು ಮಾಡುವುದಷ್ಟೇ ನಿಮ್ಮ ಕೈಯ್ಯಲ್ಲಿರುತ್ತದೆ, ಅದರ ಪ್ರತಿಫಲದ ಬಗ್ಗೆ ಚಿಂತಿಸಬೇಡ. ನಿಮ್ಮ ಕೆಲಸದಲ್ಲಿ ನೀವು ಆಸಕ್ತಿ ಹೊಂದಿರುವಾಗ, ಅದು ನಿಮಗೆ ಕಷ್ಟ ಎಂದು ಅನಿಸುವುದೇ ಇಲ್ಲ. ನಾವು ನಮ್ಮ ಕೆಲಸದ ಮೂಲಕ ಸಮಾಜದಲ್ಲಿ ಯಾವಾಗ ಬದಲಾವಣೆ ತರಬಹುದೋ, ಆಗಲೇ ನಮ್ಮ ಕೆಲಸ ಆರಂಭವಾಗುವುದು. ಯಾರಿಗಾದರೂ ನ್ಯಾಯ ಸಿಕ್ಕಿದರೆ, ನಾವು ಅದನ್ನು ನಮ್ಮ ಯಶಸ್ಸು ಎಂದು ಪರಿಣಿಸಬೇಕು ಎಂದಿದ್ದಾರೆ.
 

ಸಂಕುಚಿತ ಮನೋಭಾವದಿಂದ ಹೊರಬನ್ನಿ

ಹಿಂದಿನ ಬಾರಿ ಸಂದರ್ಶನದವರೆಗೆ ಹೋಗಿದ್ದರೂ ನಾನು ಉತ್ತಮ ಫಲಿತಾಂಶ ಗಳಿಸಲು ಸಾಧ್ಯವಾಗಿರಲಿಲ್ಲ. ಆದರೂ ಯಾವುದಾದರೊಂದು ಕೆಲಸದಲ್ಲಿ ನಿರತರಾಗಿರುತ್ತಿದ್ದೆ. ಪ್ರತಿ 15 ದಿನಗಳಿಗೊಮ್ಮೆ ಯಾರನ್ನಾದರೂ ಭೇಟಿಯಾಗುತ್ತಿದ್ದೆ. ಇದಕ್ಕಾಗಿ ನಾನು ನನ್ನ ಸ್ನೇಹಿತರಿಗೆ ಕೃತಜ್ಞಳಾಗಿದ್ದೇನೆ. ಳಿಗ್ಗೆ ಅಧ್ಯಯನ ಮಾಡಲು ನನಗೆ ಇಷ್ಟ, ಹಾಗಾಗಿ ನಾನು ಬೆಳಿಗ್ಗೆ ಅಧ್ಯಯನವನ್ನು ಮಾಡುತ್ತಿದ್ದೆ. ಸಂಕುಚಿತ ಮನೋಭಾವದಿಂದ ಹೊರಬರಬೇಕು ಎಂದು ಪರೀಕ್ಷೆಗಳು ನನಗೆ ಕಲಿಸಿದವು. ಸ್ವತಂತ್ರವಾಗಿ ಯೋಚಿಸಲು ಕಲಿಯಬೇಕು. ಹೀಗಾಗಿ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ವಿಶ್ಲೇಷಿಸಿ ಮತ್ತು ಅದಕ್ಕೆ ತಕ್ಕಂತೆ ಕಾರ್ಯತಂತ್ರವನ್ನು ರೂಪಿಸಬೇಕು ಎಂದು ಇಶಾ ಸಿಂಗ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇವರಿಗೆ ಸಲ್ಲುತ್ತೆ ಇಶಾ ಯಶಸ್ಸಿನ ಕೀರ್ತಿ

ಇಶಾ ಸಿಂಗ್ ತನ್ನ ಯಶಸ್ಸಿಗೆ ತನ್ನ ತಂದೆ ವೈಪಿ ಸಿಂಗ್, ತಾಯಿ ಅಭಾ ಸಿಂಗ್, ಭೋನು ಭಯ್ಯಾ ಮತ್ತು ತಾಯಿಯ ಅಜ್ಜಿಯೇ ಕಾರಣ ಎಂದಿದ್ದಾರೆ. ತಾಯಿ ಅಧ್ಯಯನದ ಸಮಯದಲ್ಲಿ ನನ್ನೊಂದಿಗಿದ್ದರು. ಯುಪಿಎಸ್‌ಸಿ ಸಿದ್ಧತೆಗೆ ತಂದೆಯೂ ಸಹಾಯ ಮಾಡುತ್ತಿದ್ದರು. ಅವರು ಪ್ರತೀ ಕ್ಷಣ ನನ್ನನ್ನು ಪ್ರೇರೇಪಿಸುತ್ತಿದ್ದರು ಎಂದು ಇಶಾ ಸಿಂಗ್ ಹೇಳಿದ್ದಾರೆ. ಮುಕ್ತ ಆಲೋಚನೆಗಳೊಂದಿಗೆ ಮುಂದುವರೆಯುವಂತೆ ಹೆತ್ತವರು ಹೇಳಿ ಕೊಟ್ಟಿದ್ದರು. ಸಂದರ್ಶನದಲ್ಲಿ, ನಾನು ನನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸಬೇಕು ಎಂಬ ಆಲೋಚನೆಯೊಂದಿಗೆ ಹೋಗಿದ್ದೆ ಎಂದಿದ್ದಾರೆ.

ಯುಪಿಎಸ್‌ಸಿಗೆ ತಯಾರಿ ನಡೆಸುತ್ತಿರುವ ಯುವಕರು ಏನು ಮಾಡಬೇಕು? ಮಾಡಬಾರದು?

ಯುಪಿಎಸ್‌ಸಿಗೆ ತಯಾರಿ ನಡೆಸುತ್ತಿರುವ ಯುವಕರಿಗೆ ಯಾರಿಗೂ ಮಾರುಹೋಗಬೇಡಿ ಎಂದು ಹೇಳಲು ಬಯಸುತ್ತೇನೆ. ಸಂಕುಚಿತ ಮನೋಭಾವ ಬಿಟ್ಟುಬಿಡಿ. ನಾನು ಈ ಪರೀಕ್ಷೆಯನ್ನು ಕೆಲವರು ನಾನು ಈ ಬಾರಿ ಪರೀಕ್ಷೆ ಸುಮ್ಮನೆ ಬರೆಯುತ್ತಿದ್ದೇನೆ, ಮುಂದಿನ ವರ್ಷ ಮತ್ತೆ ಪರೀಕ್ಷೆ ಬರೆಯುತ್ತೇನೆ ಎನ್ನುತ್ತಾರೆ. ಈ ಪರೀಕ್ಷೆಯು ತುಂಬಾ ಕಷ್ಟಕರವಾಗಿದೆ ಎಂದು ಅನೇಕ ಜನರು ಹೇಳುತ್ತಾರೆ. ಹೀಗೆ ಹೇಳುವವರಿಂದ ಸಾಧ್ಯವಾದಷ್ಟು ದೂರವಿರಿ. ಸ್ವತಂತ್ರವಾಗಿ ಯೋಚಿಸಿ. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ವಿಶ್ಲೇಷಿಸಿ. ಮೆಟೀರಿಯಲ್‌ಗಳ ಮೇಲೆ ಹೆಚ್ಚು ಅವಲಂಭಿತರಾಗಬೇಡಿ, ಏಕೆಂದರೆ ಅವುಗಳಿದ್ದರೆ ವ್ಯಕ್ತಿ ಅದನ್ನೇ ಓದುವುದರಲ್ಲಿ ವ್ಯಸ್ತನಾಗುತ್ತಾನೆ ಈ ನಡುವೆ ಅನೇಕ ವಿಚಾರಗಳು ನಡೆಯುತ್ತಿರುತ್ತವೆ. ಹೀಗಾಗಿ ಪ್ರಸ್ತುತ ವಿದ್ಯಮಾನಗಳಿಗೆ ಗಮನ ಕೊಡಿ. ದಿನಪತ್ರಿಕೆಗಳನ್ನು ತುಂಬಾ ಓದಿ, ನಿಮ್ಮ ಕುತೂಹಲವನ್ನು ಹೆಚ್ಚಿಸಿ. ಮೆಟೀರಿಯಲ್ ಕಡಿಮೆ ಮಾಡಿ, ಪ್ರ್ಯಾಕ್ಟೀಸ್‌ ಹೆಚ್ಚಿಸಿ. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳಲ್ಲಿ ಕೆಲಸ ಮಾಡಿ. ಪರೀಕ್ಷೆ ತೆಗೆದುಕೊಳ್ಳುವ ಮೊದಲು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ ಎಂದಿದ್ದಾರೆ.
 

ಯುವಕರಿಗೆ ಸಂದೇಶ

ನಿಮ್ಮನ್ನು ನೀವು ಕೀಳಾಗಿ ಕಾಣಬೇಡಿ. ನಿಮ್ಮ ಕನಸುಗಳ ಬೆನ್ನತ್ತಿ ಈಡೇರಿಸಿ. ಭಾರತವನ್ನು ಮುಂದೆ ಕೊಂಡೊಯ್ಯಿರಿ. ಇದು ಯುವಕರಿಗೆ ನನ್ನ ವಿನಂತಿ. ನೀವು ಏನೇ ಮಾಡಿದರೂ ದೇಶ ಮತ್ತು ಪ್ರಜೆಗಳನ್ನು ನಿಮ್ಮ ಹೃದಯದಲ್ಲಿ ಇರಿಸಿಕೊಳ್ಳಿ. ನಮ್ಮ ಯುವಕರಲ್ಲಿ ಸಾಕಷ್ಟು ಪ್ರತಿಭೆಗಳಿವೆ. ನಾವು ಅಭಿವೃದ್ಧಿ ಹೊಂದಿದ ದೇಶಗಳನ್ನು ಹಿಂದಿಕ್ಕಬಹುದು. ಜೀವನದಲ್ಲಿ ಯಶಸ್ವಿಯಾಗಲು, ಯಾರು ಏನೇ ಹೇಳಿದರೂ ಸರಿ ಎಂದು ನೀವು ಹಠವಾದಿಯಾಗಬೇಕು ಎಂದಿದ್ದಾರೆ. 

click me!