
ಮಾರ್ಗೋ(ನ.20): 8ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) (Indian Super Kings) ಫುಟ್ಬಾಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಎಟಿಕೆ ಮೋಹನ್ ಬಗಾನ್ (ATK Mohun Bagan) ತಂಡ ಕೇರಳ ಬ್ಲಾಸ್ಟರ್ಸ್ (Kerala Blasters) ವಿರುದ್ಧ 4-2 ಗೋಲುಗಳಿಂದ ಜಯಗಳಿಸಿದೆ.
ಮೂರು ಬಾರಿಯ ಚಾಂಪಿಯನ್ ಎಟಿಕೆ ಪರ ಹ್ಯೂಗೊ ಬೌಮಸ್ 2, ರಾಯ್ ಕೃಷ್ಣ ಹಾಗೂ ಲಿಸ್ಟನ್ ಕೊಲಾಸೊ ತಲಾ 1 ಗೋಲು ಹೊಡೆದರು. ಕೇರಳ ಪರ ಸಹಲ್ ಸಮದ್, ಜಾರ್ಜ್ ಪೆರೆಯ್ರ ಗೋಲು ಬಾರಿಸಿದರು. ಶನಿವಾರ ಮಾಜಿ ಚಾಂಪಿಯನ್ ಬೆಂಗಳೂರು ಎಫ್ಸಿ ತಂಡ ನಾರ್ತ್ಈಸ್ಟ್ ವೆಸ್ಟರ್ನ್ ಎಫ್ಸಿ ವಿರುದ್ಧ ಆಡಲಿದೆ.
ಏಷ್ಯನ್ ಹಾಕಿಗೆ ಭಾರತ ಮಹಿಳಾ ತಂಡ ಪ್ರಕಟ
ನವದೆಹಲಿ: ಮುಂದಿನ ತಿಂಗಳು ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗೆ 18 ಮಂದಿಯ ಭಾರತ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಟೋಕಿಯೋ ಒಲಿಂಪಿಕ್ಸ್ (Tokyo Olympics) ಬಳಿಕ ಮಹಿಳಾ ತಂಡಕ್ಕೆ ಇದು ಮೊದಲ ಟೂರ್ನಿಯಾಗಿದ್ದು, ನಾಯಕಿ ರಾಣಿ ರಾಂಪಾಲ್ಗೆ (Rani Rampal) ವಿಶ್ರಾಂತಿ ನೀಡಲಾಗಿದೆ.
ಅವರ ಬದಲು ಗೋಲ್ಕೀಪರ್ ಸವಿತಾ ಪೂನಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ಡಿ.5ರಂದು ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ ಸೆಣಸಲಿದೆ. ಡಿ.6ಕ್ಕೆ ಮಲೇಷ್ಯಾ, ಡಿ.8ಕ್ಕೆ ಹಾಲಿ ಚಾಂಪಿಯನ್ ದ.ಕೊರಿಯಾ, ಡಿ.9 ಹಾಗೂ ಡಿ.11ರಂದು ಕ್ರಮವಾಗಿ ಚೀನಾ ಹಾಗೂ ಜಪಾನ್ ವಿರುದ್ಧ ಆಡಲಿದೆ. ಅಗ್ರ 2 ತಂಡಗಳು ಡಿ.12ರಂದು ಫೈನಲ್ನಲ್ಲಿ ಸೆಣಸಲಿವೆ.
ಏಷ್ಯನ್ ಆರ್ಚರಿ: ಒಟ್ಟು 7 ಪದಕ ಗೆದ್ದ ಭಾರತ
ಢಾಕಾ: ಕೊನೆ ದಿನ 3 ಪದಕ ಗೆಲ್ಲುವುದರೊಂದಿಗೆ ಭಾರತದ ಆರ್ಚರ್ಗಳು ಏಷ್ಯನ್ ಆರ್ಚರಿ ಚಾಂಪಿಯನ್ಶಿಪ್ನಲ್ಲಿ ಒಟ್ಟು 7 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದ್ದಾರೆ. ಶುಕ್ರವಾರ ನಡೆದ ರೀಕರ್ವ್ ವಿಭಾಗದ ಫೈನಲ್ನಲ್ಲಿ ಕಪಿಲ್, ಪ್ರವೀಣ್ ಜಾಧವ್, ಪಾರ್ಥ್ ಸಾಲುಂಕೆ ಅವರನ್ನೊಳಗೊಂಡ ಪುರುಷರ ತಂಡ ಹಾಗೂ ಅಂಕಿತಾ, ಮಧು ವೆದ್ವಾನ್ ಹಾಗೂ ರಿಧಿ ಅವರಿದ್ದ ಮಹಿಳಾ ತಂಡ ದ.ಕೊರಿಯಾ ವಿರುದ್ಧ ಫೈನಲ್ನಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡವು.
ರೀಕರ್ವ್ ಮಿಶ್ರ ವಿಭಾಗದಲ್ಲಿ ಕಪಿಲ್ ಹಾಗೂ ಅಂಕಿತಾ ಜೋಡಿ ಉಜ್ಬೇಕಿಸ್ತಾನದ ಜೋಡಿ ವಿರುದ್ಧ ಗೆದ್ದು ಕಂಚಿನ ಪದಕ ಪಡೆಯಿತು. ಭಾರತ ಜ್ಯೋತಿ ಸುರೇಖಾ ಗೆದ್ದ ಒಂದು ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆಯಿತು. ಕಳೆದ ಆವೃತ್ತಿಯಲ್ಲೂ ಭಾರತ 7 ಪದಕಗಳನ್ನು ಗೆದ್ದಿತ್ತು.
ಇಂಡೋನೇಷ್ಯಾ ಮಾಸ್ಟರ್ಸ್: ಸೆಮೀಸ್ಗೆ ಸಿಂಧು, ಶ್ರೀಕಾಂತ್
ಬಾಲಿ(ಇಂಡೋನೇಷ್ಯಾ): ಹಾಲಿ ಚಾಂಪಿಯನ್ ಪಿ.ವಿ.ಸಿಂಧು (PV Sindhu) ಹಾಗೂ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್ (Kidambi Srikanth) ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ (Indonesia Masters) ಟೂರ್ನಿಯಲ್ಲಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
2 ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು, ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ನಲ್ಲಿ ಟರ್ಕಿಯ ನೆಸ್ಲಿಹನ್ ವಿರುದ್ಧ 21-13, 21-10 ನೇರ ಗೇಮ್ಗಳಿಂದ ಗೆಲುವು ಸಾಧಿಸಿ ಅಂತಿಮ 4ರ ಘಟ್ಟ ಪ್ರವೇಶಿಸಿದರು. ಕಳೆದ ತಿಂಗಳು ನಡೆದಿದ್ದ ಡೆನ್ಮಾರ್ಕ್ ಓಪನ್ನಲ್ಲೂ ನೆಸ್ಲಿಹನ್ರನ್ನು ಸೋಲಿಸಿದ್ದ ಸಿಂಧು, ಗೆಲುವಿನ ಓಟವನ್ನು 4-0ಗೆ ವಿಸ್ತರಿಸಿದ್ದಾರೆ. ಇನ್ನು, ಪುರುಷರ ಸಿಂಗಲ್ಸ್ನಲ್ಲಿ ಶ್ರೀಕಾಂತ್, ಭಾರತದವರೇ ಆದ ಎಚ್.ಎಸ್.ಪ್ರಣಯ್ ವಿರುದ್ಧ 21-7, 21-18ರಿಂದ ಗೆದ್ದು ಸೆಮೀಸ್ ತಲುಪಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.