Hindu Festival: ಇಂದು ಎಳ್ಳಮಾವಾಸ್ಯೆ, ತೀರ್ಥಸ್ನಾನದಿಂದ ಪಾಪ ಪರಿಹಾರ

By Suvarna NewsFirst Published Jan 2, 2022, 12:09 PM IST
Highlights

ಇಂದು ಎಳ್ಳಮಾವಾಸ್ಯೆ. ರೈತರು ಭೂ ತಾಯಿಯ ಪೂಜೆ ಮಾಡಿದರೆ, ಶ್ರಾದ್ಧ ಕರ್ಮಗಳಿಂದ ಪಿತೃಗಳನ್ನು ಸಂತೃಪ್ತಗೊಳಿಸಲೂ ಸುದಿನ.

ಇಂದು ದಕ್ಷಿಣಾಯನದ ಮಾರ್ಗಶಿರ ಮಾಸದ ಅಮಾವಾಸ್ಯೆಯ ದಿನ(no moon day). ಈ ದಿನವನ್ನು ಮೊದಲಿಂದಲೂ ಎಳ್ಳಮಾವಾಸ್ಯೆ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಎಳ್ಳು ಬೆಳೆ ಬರುವ ಅಮಾವಾಸ್ಯೆಯ ದಿನವಿದು. 

ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ರೈತರು ಎಳ್ಳಮಾವಾಸ್ಯೆಯನ್ನು ಆಚರಿಸುತ್ತಾರೆ. ಈ ದಿನಕ್ಕೊಂದು ಐತಿಹ್ಯವಿದೆ. ಪಾಂಡವರು ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ತಮ್ಮ ಬಂಧುಮಿತ್ರರಿಗಾಗಿ ಪಿಂಡ ಪ್ರದಾನ ಮಾಡಿದ ದಿನ ಈ ಎಳ್ಳಮವಾಸ್ಯೆ. ಈ ದಿನ ಮಲೆನಾಡು, ದಕ್ಷಿಣ ಕನ್ನಡ, ಉತ್ತರ ಕರ್ನಾಟಕಗಳಲ್ಲಿ ಒಂದೊಂದು ರೀತಿಯಲ್ಲಿ ಎಳ್ಳಮಾವಾಸ್ಯೆ ಆಚರಿಸಲಾಗುತ್ತದೆ. 

ರೈತರಿಗೆ ಸಂಭ್ರಮ
ಇಂದು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ರೈತರು ತಮಗೆ ಉತ್ತಮ ಇಳುವರಿ ಕೊಟ್ಟ ಭೂಮಿ ತಾಯಿಗೆ ಧನ್ಯವಾದ ಹೇಳುವ ದಿನವಾಗಿ ಎಳ್ಳಮಾವಾಸ್ಯೆಯನ್ನು ಆಚರಿಸುತ್ತಾರೆ. ಇಂದು ರೈತರು ತಮ್ಮ ಜಮೀನಿನಲ್ಲಿ ಎಲ್ಲೆಡೆ ಎಳ್ಳು ಹಾಗೂ ಬೆಲ್ಲವನ್ನು ಚಿಮ್ಮುತ್ತಾರೆ. ಈ ಎಳ್ಳು ಹಾಗೂ ಬೆಲ್ಲವು ಜಮೀನಿನಲ್ಲಿರುವ ಹುಳಗಳಿಗೆ ಆಹಾರ ಎಂದೂ ಹೇಳಲಾಗುತ್ತದೆ. ಎರೆಹುಳದಂತವು ಭೂತಾಯಿಯ ಫಲವತ್ತತೆಯನ್ನು ಕಾಪಾಡುತ್ತವೆ. ಅವುಗಳಿಗೆ ಆಹಾರದಂತೆ ಕೂಡಾ ಇದನ್ನು ಚಿಮ್ಮಲಾಗುತ್ತದೆ. ಕೆಲವು ಗದ್ದೆಗಳಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಾರೆ. ಮತ್ತೆ ಕೆಲವೆಡೆ ಹೊಲದಲ್ಲಿ ನಿಂತಿರುವ ಪೈರುಗಳ ಮಧ್ಯೆ ಬನ್ನಿ ಮರಕ್ಕೆ ಪೂಜೆ ಮಾಡಿ ಭೂಮಿ ತಾಯಿಗೆ ಚೆರಗ ಚೆಲ್ಲಾಗುತ್ತದೆ. 

ನಂತರ ಬೇಳೆಕಾಳುಗಳು ಹಾಗೂ ಹಸಿರು ಸೊಪ್ಪುಗಳನ್ನು ಬಳಸಿ ಸಸ್ಯಾಹಾರದ ಅಡುಗೆ(vegetarian dishes) ತಯಾರಿಸಲಾಗುತ್ತದೆ. ಭಜ್ಜಿ, ಪುಂಡಿ, ಚಿಕ್ಕಿ, ಬರ್ತಾ, ಜೋವರ್ ಕಡುಬು, ಸಜ್ಜೆ ಕಡುಬು, ಪಾಲಕ್ ಮೆಂತ್ಯೆ ಬಳಸಿದ ತಿಂಡಿಗಳು, ನಾನಾ ಬಗೆಯ ಚಟ್ನಿಗಳು ಎಳ್ಳಮಾವಾಸ್ಯೆಗೆ ವಿಶೇಷವಾಗಿ ತಯಾರಾಗುತ್ತವೆ. ನಂತರ ಎಲ್ಲ ರೈತಾಪಿ ವರ್ಗದವರು ಕುಟುಂಬ ಸಮೇತರಾಗಿ ಬಂಡಿಗಳಲ್ಲಿ ಸಂಭ್ರಮದಿಂದ ಹೊಲ ಗದ್ದೆ ತೋಟಗಳಿಗೆ ಹೋಗಿ ಒಟ್ಟಾಗಿ ಊಟ ಸವಿಯುತ್ತಾರೆ.

ಈ ವಸ್ತುಗಳನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬೇಡಿ !

Latest Videos

ದೇವಾಲಯಗಳಲ್ಲಿ ಪ್ರಾರ್ಥನೆ(prayer)
ಈ ದಿನ ಉತ್ತಮ ಇಳುವರಿಗಾಗಿ ಬೇಡಿಕೊಂಡು ದೇವಾಲಯಗಳಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಗುತ್ತದೆ. ಇನ್ನು, ಶನಿ ದೋಷವಿರುವವರು, ಸಾಡೇಸಾತಿ ನಡೆಯುತ್ತಿರುವವರು ಈ ದಿನ ಶನಿ(Lord Shani)ಯನ್ನು ಒಲಿಸಲು ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸುತ್ತಾರೆ. 

ಸಮುದ್ರ ಸ್ನಾನ
ದಕ್ಷಿಣ ಕನ್ನಡ, ಮಲೆನಾಡು ಭಾಗಗಳಲ್ಲಿ ಈ ದಿನ ತೀರ್ಥ ಸ್ನಾನವೇ ಪ್ರಮುಖವಾದುದು. ಎಳ್ಳಮಾವಾಸ್ಯೆಯ ದಿನ ತರ್ಪಣ ಬಿಡುವ ಮೊದಲು ದಕ್ಷಿಣ ಕನ್ನಡದ ಜನರು ಸಮುದ್ರದಲ್ಲಿ ಮುಳುಗು ಹಾಕಿದರೆ, ಇತರೆಡೆಯ ಜನರು ನದಿಗಳಲ್ಲಿ ತೀರ್ಥ ಸ್ನಾನ ಮಾಡಿ ಪಿತೃಗಳಲ್ಲಿ ಪ್ರಾರ್ಥಿಸುತ್ತಾರೆ. ಉಡುಪಿ(Udupi) ಜಿಲ್ಲೆಯ ಮಲ್ಪೆಯಲ್ಲಿರುವ ವಡಭಂಡೇಶ್ವರ ದೇವಾಲಯ(Vadabhandeshwara Temple)ದಲ್ಲಿ ಇಂದು ಬಲರಾಮನನ್ನು ದರ್ಶನ ಮಾಡುವುದರಿಂದ ಬಹಳಷ್ಟು ಒಳಿತಾಗುತ್ತದೆ ಎಂಬ ನಂಬಿಕೆ ಇದೆ. 

ಪಾಸಿಟಿವ್ ಎನರ್ಜಿಗಾಗಿ New Yearನಲ್ಲಿ ಮನೆ ವಾಸ್ತು ಹೀಗಿರಲಿ..

ಶ್ರಾದ್ಧ(Shradh)
ಮೊದಲೇ ಹೇಳಿದಂತೆ ಇಂದು ಪಾಂಡವರು ಮಹಾಭಾರತದಲ್ಲಿ ಮಡಿದ ತಮ್ಮವರಿಗಾಗಿ ತರ್ಪಣ ಬಿಟ್ಟ ದಿನ. ಅಂದರೆ, ಇದು ಶ್ರಾದ್ಧ ಕರ್ಮಗಳನ್ನು ನಡೆಸಲು ಸೂಕ್ತ ದಿನ. ಈ ದಿನ ತಿಲ ತರ್ಪಣ ಬಿಟ್ಟು, ಬಡವರಿಗೆ ಊಟ ಹಾಕಿ, ದಾನಗಳನ್ನು ನೀಡಿ ಶ್ರಾದ್ಧ ಕ್ರಿಯೆಗಳನ್ನು ನಡೆಸುವುದರಿಂದ ಬದುಕಿನಲ್ಲಿ ಶಾಂತಿ, ಸಮೃದ್ಧಿ(prosperity) ನೆಲೆಸುತ್ತದೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಇಂದು ಎಳ್ಳನ್ನು ದಾನ ಮಾಡಲಾಗುತ್ತದೆ. ಎಳ್ಳಿಗೆ ಪಾಪ ನಾಶ ಮಾಡುವ ಶಕ್ತಿಯಿದೆ. ಇಂದು ಜನರು ಪಿತ್ರಾಂತರ್ಯಾಮಿ ಶ್ರೀ ಹರಿ ಪೂಜೆ ಕೂಡಾ ಕೈಗೊಳ್ಳುತ್ತಾರೆ. ಇದರಿಂದ ಕುಟುಂಬದಲ್ಲಿ ಮಡಿದ ಎಲ್ಲ ಪೂರ್ವಜರೂ ಸಂತೋಷಗೊಂಡು ತಮ್ಮ ಮುಂದಿನ ತಲೆಮಾರುಗಳನ್ನು ಉತ್ತಮ ರೀತಿಯಲ್ಲಿ ಆಶೀರ್ವಾದ ಮಾಡಲಿದ್ದಾರೆ ಎನ್ನಲಾಗುತ್ತದೆ. 
 

click me!