ಮಹಿಳೆಯರು ತೆಂಗಿನ ಕಾಯಿಯನ್ನು ಒಡೆಯಬಾರದು… ಏಕೆ ಗೊತ್ತಾ..?

By Suvarna NewsFirst Published Dec 10, 2020, 3:14 PM IST
Highlights

ಹಿಂದೂ ಶಾಸ್ತ್ರದಲ್ಲಿ ಮಹಿಳೆಯರಿಗೆ ಕೆಲವೊಂದು ಆಚರಣೆ, ಪದ್ಧತಿಯನ್ನು ನಿಷೇಧವಿದೆ. ಅದಕ್ಕೆ ಪೂರ್ವಜರು ಹಲವು ಕಾರಣವನ್ನೂ ಕೊಟ್ಟಿದ್ದಾರೆ. ಅದರಂತೆ ತೆಂಗಿನ ಕಾಯಿಯನ್ನು ಮಹಿಳೆಯರು ಒಡೆಯಬಾರದು. ಕುಂಬಳಕಾಯಿಯನ್ನೂ ಸಹ ಮಹಿಳೆಯರು ಒಡೆಯುವುದಿಲ್ಲ. ಹೀಗಾಗಿ ಶ್ರೀಫಲ (ತೆಂಗಿನ ಕಾಯಿ) ವನ್ನು  ಮಹಿಳೆಯರು ಏಕೆ ಒಡೆಯಬಾರದು ಎಂಬ ಬಗ್ಗೆ ನೋಡೋಣ ಬನ್ನಿ…

ಹಿಂದೂ ಧರ್ಮದಲ್ಲಿ ಎಲ್ಲ ವಸ್ತುಗಳಿಗೂ ಆದ್ಯತೆಯನ್ನು ನೀಡಲಾಗಿದೆ. ಇದಕ್ಕೆ ತೆಂಗಿನ ಕಾಯಿ ಅಥವಾ ಶ್ರೀಫಲವೂ ಹೊರತಾಗಿಲ್ಲ. ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯದಲ್ಲಿ ತೆಂಗಿನ ಕಾಯಿ ಇರಲೇಬೇಕು. ಇದು ಎಲ್ಲ ಶುಭ ಕಾರ್ಯಗಳಿಗೂ ಬೇಕೇ ಬೇಕು. ಒಂದು ಕಲಶ ಸ್ಥಾಪನೆ ಮಾಡುವುದಿದ್ದರೂ ತೆಂಗಿನ ಕಾಯಿಯನ್ನು ಬಳಸುತ್ತಾರೆ. ಕುಂಭ ಮೇಳ ಸ್ವಾಗತಕ್ಕೂ ಕಾಯಿ ಬೇಕು ಎಂದರೆ ಅದರ ವಿಶೇಷ ಸ್ಥಾನ ಎಷ್ಟಿರಬಹುದು ಎಂಬುದನ್ನು ಪ್ರತ್ಯೇಕವಾಗಿ ನಾವು ಹೇಳಬೇಕಿಲ್ಲ. 

ತೆಂಗಿನ ಕಾಯಿಯನ್ನು ಸಹಜವಾಗಿ ಎಲ್ಲರೂ ಒಡೆಯುತ್ತಾರೆ. ಆದರೆ, ಇದಕ್ಕೂ ಒಂದು ಹಿನ್ನೆಲೆ ಅಥವಾ ಧರ್ಮಶಾಸ್ತ್ರದ ನಿಯಮ ಇದೆ ಎಂಬುದು ಬಹುತೇಕರಿಗೆ ಗೊತ್ತಿರುವುದಿಲ್ಲ. ಕಾರಣ, ಈ ತೆಂಗಿನ ಕಾಯಿಯನ್ನು ಪುರುಷರು ಮಾತ್ರ ಒಡೆಯಬೇಕು. ಮಹಿಳೆಯರು ಒಡೆಯಬಾರದು ಎಂದು ಹೇಳಲಾಗುತ್ತದೆ. ಆದರೆ, ಇದಕ್ಕೆ ಧರ್ಮಶಾಸ್ತ್ರದಲ್ಲಿ ಕಾರಣವನ್ನೂ ಕೊಡಲಾಗಿದೆ. ಹಿಂದೂ ಶಾಸ್ತ್ರದಲ್ಲಿ ಮಹಿಳೆಯರಿಗೆ ಕೆಲವೊಂದು ಆಚರಣೆ, ಪದ್ಧತಿಯನ್ನು ನಿಷೇಧಿಸಲಾಗಿದ್ದರೂ, ಅದಕ್ಕೆ ಅದರದ್ದೇ ಆದ ಹಿನ್ನೆಲೆ ಇದೆ ಎಂದು ಹೇಳುತ್ತಾರೆ. ಉದಾಹರಣೆಗೆ ಕುಂಬಳಕಾಯಿಯನ್ನೂ ಸಹ ಮಹಿಳೆಯರು ಒಡೆಯುವುದಿಲ್ಲ. 

ಇದನ್ನು ಓದಿ: ನೀವು ಹುಟ್ಟಿದ ವಾರ ಯಾವುದು? ವಾರದ ಪ್ರಕಾರ ನಿಮ್ಮ ಸ್ವಭಾವ ಹೇಗಿದೆ? 

ಮಹಿಳೆಯರು ಒಡೆಯಬಾರದು ಎಂಬುದಕ್ಕೆ ಪ್ರಮುಖ ಕಾರಣವಿದ್ದು, ತೆಂಗಿನ ಕಾಯಿಯನ್ನು ಒಡೆಯುವುದು ಬಲಿಯ ಸೂಚಕ ಎಂದು ಹೇಳಲಾಗುತ್ತದೆ. ಈ ಕಾರಣಕ್ಕೆ ಬಲಿಯಂತಹ ಕಾರ್ಯವನ್ನು ಪುರಷರಷ್ಟೇ ಮಾಡಬೇಕು. ಅಂಥ ಕಾರ್ಯಗಳಲ್ಲಿ ಹೆಣ್ಣುಮಕ್ಕಳು ತೊಡಗಿಕೊಳ್ಳಬಾರದು ಎಂಬ ನಿಯಮವನ್ನು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇನ್ನು ತೆಂಗಿನ ಕಾಯಿ ಬಗ್ಗೆ ವೈಜ್ಞಾನಿಕವಾಗಿ ಸೇರಿದಂತೆ ಹಲವು ರೀತಿಯಲ್ಲಿ ಉಪಯುಕ್ತ ಮಾಹಿತಿಯನ್ನು ಹೇಳಲಾಗುತ್ತದೆ. ಅವುಗಳೆಂದರೆ, ತೆಂಗಿನ ಕಾಯಿಯಿಂದ ಶಾರೀರಿಕ ದೌರ್ಬಲ್ಯ ದೂರವಾಗುತ್ತದೆ, ಇದರಲ್ಲಿ ಬಹಳ ಕ್ಯಾಲೋರಿ ಇರುತ್ತದೆ, ಇದರಲ್ಲಿರುವ ಎಳನೀರಲ್ಲಿ ಪೋಟ್ಯಾಶಿಯಂ ಸೇರಿ ಹಲವು ಉಪಯುಕ್ತ ಅಂಶಗಳಿರುವುದರಿಂದ ಇದನ್ನು ತಾಯಿ ಹಾಲಿಗೆ ಸಮವೆಂದೂ ಹೇಳಲಾಗುತ್ತದೆ. ಹಾಗಾದರೆ ಮಹಿಳೆಯರು ಏಕೆ ತೆಂಗಿನಕಾಯಿಯನ್ನು ಒಡೆಯಬಾರದು ಎಂಬ ಬಗ್ಗೆ ಇನ್ನಷ್ಟು ತಿಳಿಯೋಣ. 

ಇದನ್ನು ಓದಿ: ಸಂಪತ್ತು-ಸುಖ-ಸಮೃದ್ಧಿಗಾಗಿ ಅವಶ್ಯವಾಗಿ ಮನೆಯಲ್ಲಿರಬೇಕಾದ ವಸ್ತುಗಳಿವು....! 

ಸೃಷ್ಟಿಯ ಗುಣ
ತೆಂಗಿನ ಕಾಯಿಯಂದರೆ ಧಾರ್ಮಿಕ ಕಾರ್ಯಗಳಲ್ಲಿ, ಅಡುಗೆ ಪದಾರ್ಥದಲ್ಲಿ ಮಾತ್ರ ಬಳಸುವಂಥದ್ದಲ್ಲ. ಇದಕ್ಕೆ ಮರುಸೃಷ್ಟಿ ಹೊಂದುವ ಗುಣವೂ ಇರುತ್ತದೆ. ಅಂದರೆ, ಇದನ್ನು ಪುನಃ ಬೀಜ ಮಾಡಿ ಗಿಡ ಮಾಡಬಹುದು. ಇನ್ನು ಸ್ತ್ರೀ ಸಹ ಹೀಗೆಯೇ, ಆಕೆ ಸಹ ಇನ್ನೊಂದು ಜೀವಕ್ಕೆ ಜೀವಕೊಡವವಳು. ಅಂದರೆ ಸಂತಾನೋತ್ಪತ್ತಿ ಕಾರಕ ಸ್ವರೂಪಿ ಹೆಣ್ಣು. ಈ ಹಿನ್ನೆಲೆಯಲ್ಲಿ ಸ್ತ್ರಿಯಾದವಳು ತೆಂಗಿನ ಕಾಯಿ (ಶ್ರೀ ಫಲ) ಯನ್ನು ಒಡೆಯಬಾರದು ಎಂಬ ನಿಯಮವನ್ನು ಮಾಡಲಾಗಿದೆ. ಈ ರೀತಿಯಾಗಿ ಹೆಣ್ಣು ಮಕ್ಕಳು ತೆಂಗಿನ ಕಾಯಿಯನ್ನು ಒಡೆಯುವುದು ಧರ್ಮಶಾಸ್ತ್ರದ ಪ್ರಕಾರ ಅಶುಭ ಎಂದು ಹೇಳಲಾಗುತ್ತದೆ. ದೇವಿ / ದೇವತೆಗಳ ಪೂಜೆಯ ಸಂದರ್ಭದಲ್ಲಿ ಕೇವಲ ಪುರಷರಿಂದ ಮಾತ್ರ ತೆಂಗಿನ ಕಾಯಿಯನ್ನು ಒಡೆಸಲಾಗುತ್ತದೆ. 

ಇದನ್ನು ಓದಿ: ಮನಸ್ಸಿಗೆ ಇಷ್ಟವಾಗೋ ಜಾಬ್ ಪಡೆಯಲು ಈ ಉಪಾಯ ಮಾಡಿ..! 

ಮೂರು ದೇವತೆಗಳ ವಾಸ
ಶ್ರೀಫಲದಲ್ಲಿ ಮೂರು ದೇವತೆಗಳು ವಾಸವಾಗಿದ್ದಾರೆಂಬ ನಂಬಿಕೆ ಧರ್ಮಶಾಸ್ತ್ರದಲ್ಲಿದೆ. ಭೂಲೋಕದಲ್ಲಿ ವಿಷ್ಣುವು ಅವತಾರ ಎತ್ತಿದಾಗ ಮೂರು ವಸ್ತುಗಳನ್ನು ಭೂಲೋಕಕ್ಕೆ ತಂದಿದ್ದನಂತೆ. ಅದರಲ್ಲಿ ಒಂದು ಲಕ್ಷ್ಮೀ, ಮತ್ತೊಂದು ತೆಂಗಿನ ಮರ ಹಾಗೂ ಕೊನೆಯದಾಗಿ ಕಾಮಧೇನು ಇತ್ತು ಎಂದು ಪುರಾಣ ಹೇಳುತ್ತದೆ. ಹೀಗಾಗಿ ತೆಂಗಿನ ಮರಕ್ಕೆ ಕಲ್ಪವೃಕ್ಷ ಎಂದೂ ಕರೆಯಲಾಗುತ್ತದೆ. ತೆಂಗಿನ ಕಾಯಿಯಲ್ಲಿ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ನೆಲೆಸಿರುತ್ತಾರೆ ಎಂದು ಹೇಳಲಾಗಿದೆ. ಶಿವನಿಗೆ ಶ್ರೀಫಲ ಅತ್ಯಂತ ಪ್ರಿಯವಾಗಿದೆ. ಹಾಗೆಯೇ ತೆಂಗಿನ ಕಾಯಿಯಲ್ಲಿ ಮೂಡಿರುವ ಮೂರು ಕಣ್ಣುಗಳು ಶಿವನ ಮೂರು ಕಣ್ಣುಗಳು ಎಂದು ಹೋಲಿಕೆ ಇಲ್ಲವೇ ಮಾಡಲಾಗುತ್ತದೆ. ಹೀಗಾಗಿ ದೇವರಿಗೆ ತೆಂಗಿನ ಕಾಯಿಯನ್ನು ಅರ್ಪಿಸುವುದು ಇಲ್ಲವೇ ಒಡೆಯುವುದರಿಂದ ದೇವರು ಪ್ರಸನ್ನವಾಗಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗಿ ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದಾಗಿದೆ ಎಂದು ಸಹ ಹೇಳಲಾಗುತ್ತದೆ. 


ಹೀಗಾಗಿ ತೆಂಗಿನ ಕಾಯಿಯನ್ನು ಮಹಿಳೆಯರು ಒಡೆಯಲೇಬಾರದೆಂದೇನು ಹೇಳಲಾಗದು. ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ಮಹಿಳೆಯರೇ ಕಾಯಿ ಒಡೆಯುವುದುಂಟು. ಆದರೆ, ಮಾತೃ ಸ್ವರೂಪಿಯಾದವಳು ಒಡೆಯಬಾರದು ಎಂಬ ನಿಯಮವನ್ನು ತರಲಾಗಿದೆ. 

click me!