ಗಣಪನ ಮೆಚ್ಚಿಸೋಕೆ ಗರಿಕೆ ಹುಲ್ಲು ಸಾಕು! ಅವನಿಗೇಕೆ ದೂರ್ವೆ ಇಷ್ಟ?

By Suvarna NewsFirst Published Aug 27, 2022, 3:47 PM IST
Highlights

ಒಬ್ಬೊಬ್ಬ ದೇವರಿಗೂ ಅವರಿಷ್ಟದ ಸಾಕಷ್ಟನ್ನು ಕೊಟ್ಟು ಮೆಚ್ಚಿಸಲು ನೋಡುತ್ತೇವೆ. ಆದರೆ, ಗಣೇಶನನ್ನು ಒಲಿಸಿಕೊಳ್ಳಲು ಗರಿಕೆ ಹುಲ್ಲು ನೀಡಿದರೂ ಸಾಕಾಗುತ್ತದೆ. ಗಣೇಶನ ಗರಿಕೆ ಪ್ರೀತಿಯ ಹಿಂದಿನ ಕತೆಯೇನು?

ಶ್ರೀ ಗಣಪತಿಯ ಧಾರ್ಮಿಕ ಆರಾಧನೆಯಲ್ಲಿ ದೂರ್ವೆ ಎಂಬ ಪವಿತ್ರ ಹುಲ್ಲಿಗೆ ವಿಶೇಷ ಮಹತ್ವವಿದೆ. ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿಯೂ ಸಹ ಗಣೇಶನಿಗೆ ದೂರ್ವೆಯನ್ನು ಅರ್ಪಿಸಲಾಗುತ್ತದೆ. ಆದರೆ ದೂರ್ವೆ ಎಂದರೇನು ಮತ್ತು ಅದು ಏಕೆ ಗಣೇಶ ಪೂಜೆಯಲ್ಲಿ ಮುಖ್ಯವಾಗಿದೆ? 
ಪೂಜೆಗಳನ್ನು ಮಾಡುವಾಗ ನಿರ್ದಿಷ್ಟ ದೇವತೆಗಳಿಗೆ ನಿರ್ದಿಷ್ಟ ಅರ್ಪಣೆಗಳನ್ನು ಮಾಡಲಾಗುತ್ತದೆ. ಉದಾಹರಣೆಗೆ, ತುಳಸಿಯು ಭಗವಾನ್ ವಿಷ್ಣುವಿಗೆ (ಅಥವಾ ಕೃಷ್ಣ ಪರಮಾತ್ಮನಿಗೆ), ಮತ್ತು ಬಿಲ್ವ (ಬೆಲ್ ಪತ್ರ) ಭಗವಂತ ಶಿವನಿಗೆ. ಅದೇ ರೀತಿ, ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿಯೂ ಸಹ ಗಣೇಶನಿಗೆ ದೂರ್ವೆಯನ್ನು ಅರ್ಪಿಸಲಾಗುತ್ತದೆ. ಗರಿಕೆಯ ಮಹತ್ವ ತಿಳಿಯಲು ಮುಂದೆ ಓದಿ.

ದೂರ್ವಾ ಪದದ ಮೂಲ ಮತ್ತು ಅರ್ಥ
'ದುರ್ವೆ (दूर्वा)' ಪದವು 'ದುಹು' (दूः) ಮತ್ತು 'ಅವಂ' (अवम्) ಪದಗಳಿಂದ ಬಂದಿದೆ. 'ದುಹು' ಎಂದರೆ ದೂರವಿರುವದು ಮತ್ತು 'ಏವಂ' ಎಂದರೆ ಹತ್ತಿರ ತರುವಂಥದ್ದು. ಹೀಗೆ ಶ್ರೀ ಗಣಪತಿಯ ದೂರದ ಪವಿತ್ರಕಗಳನ್ನು ಹತ್ತಿರಕ್ಕೆ ತರುವದು ದೂರ್ವೆ.

ದೂರ್ವೆ ಪುರಾಣ 
ಒಮ್ಮೆ ಅನಲಾಸುರ ಎಂಬ ರಾಕ್ಷಸನ ಕಾಟ ತಾಳಲಾರದೆ ದೇವತೆಗಳೆಲ್ಲ ಸಹಾಯ ಬೇಡಿ ಗಣೇಶನ ಬಳಿ ಹೋದರು. ಅವರಿಗೆ ಅಭಯ ನೀಡಿದ ಗಣೇಶನು ಅನಲಾಸುರನ ಜೊತೆ ಹೋರಾಡತೊಡಗಿದ. ಆಗ ಅನಲಾಸುರ ಬೆಂಕಿಯ ಉಂಡೆಗಳಿಂದ ಗಣೇಶನನ್ನು ದಹಿಸಲು ಬಂದ. ಕೋಪದಿಂದ ತನ್ನ ವಿರಾಟ್ ರೂಪ ತೋರಿದ ಗಣೇಶ ಅನಲಾಸುರನನ್ನು ನುಂಗಿ ಬಿಟ್ಟ. ಆಗ ಅವನ ಹೊಟ್ಟೆಯೊಳಗಿನಿಂದ ಬೆಂಕಿಯಂಥ ಉರಿ ಕಾಣಿಸಿಕೊಳ್ಳಲಾರಂಭಿಸಿತು. ಆಗ ಚಂದ್ರನು ಗಣೇಶನು ಸಹಾಯಕ್ಕೆ ಬಂದು ಆತನನ್ನು ಶಾಂತವಾಗಿರಿಸಲು ತಲೆಯ ಮೇಲೆ ಕುಳಿತ. ವಿಷ್ಣುವು ಅವನನ್ನು ತಂಪಾಗಿಸಲು ಕಮಲ ನೀಡಿದ. ಶಿವನು ಗಣೇಶನ ಹೊಟ್ಟೆಗೆ ಹಾವನ್ನು ಸುತ್ತಿದ. ಅಷ್ಟಾದರೂ ಗಣೇಶನ ದೇಹದ ಉರಿ ಕಡಿಮೆಯಾಗಲಿಲ್ಲ. ಆಗ ಅಲ್ಲಿ ಬಂದ ಕೆಲವು ಋಷಿಗಳು 21 ದೂರ್ವೆಯನ್ನು ಗಣೇಶನ ತಲೆಯ ಮೇಲಿಟ್ಟರು. ಕೂಡಲೇ ಗಣೇಶನ ದೇಹದ ಉಷ್ಣತೆ ಇಳಿಯಿತು. ಅಂದಿನಿಂದ ಯಾರೇ ಗಣೇಶನನ್ನು ದೂರ್ವೆಯಿಂದ ಪೂಜಿಸಿದರೂ ಅವರಿಗೆ ಗಣಪತಿ ಆಶೀರ್ವದಿಸುತ್ತಾನೆ. 

ಆಯುರ್ವೇದದ ಪ್ರಕಾರ ಕಾರಣ
ಆಯುರ್ವೇದದ ಪ್ರಕಾರ, ದೂರ್ವೆಯ ರಸವು ದೇಹದಲ್ಲಿನ ಉರಿಯನ್ನು ಕಡಿಮೆ ಮಾಡುತ್ತದೆ.

ಗೌರಿ ಹಬ್ಬ ಯಾವಾಗ ಆಚರಿಸ್ಬೇಕು? ಗಣೇಶ ಹಬ್ಬದ ದಿನ ಗೌರಿ ಪೂಜೆ ಇದ್ಯಾ?

ಆಧ್ಯಾತ್ಮಿಕ ಕಾರಣ
 ನಾವು ಪೂಜಿಸುವ ವಿಗ್ರಹದಲ್ಲಿ ದೈವತ್ವವು ಹೆಚ್ಚಾಗಬೇಕು ಮತ್ತು ಚೈತನ್ಯದ (ದೈವಿಕ ಪ್ರಜ್ಞೆ) ಮಟ್ಟದಲ್ಲಿ ನಮಗೆ ಪ್ರಯೋಜನವಾಗಬೇಕು ಎಂಬುದು ಧಾರ್ಮಿಕ ಆರಾಧನೆಯ ಒಂದು ಗುರಿಯಾಗಿದೆ. ಆದ್ದರಿಂದ, ಆ ದೇವತಾ ತತ್ವದ ಗರಿಷ್ಠ ಪ್ರಮಾಣವನ್ನು ಆಕರ್ಷಿಸುವ ಆ ಪದಾರ್ಥಗಳನ್ನು ದೇವರಿಗೆ ಅರ್ಪಿಸುವುದು ಅನಿವಾರ್ಯವಾಗುತ್ತದೆ. ದೂರ್ವೆಯು ಶ್ರೀ ಗಣಪತಿ ತತ್ವವನ್ನು ಆಕರ್ಷಿಸುವ ಗರಿಷ್ಠ ಸಾಮರ್ಥ್ಯವನ್ನು ಹೊಂದಿದೆ; ಆದ್ದರಿಂದ ಇದನ್ನು ಶ್ರೀ ಗಣಪತಿಗೆ ಅರ್ಪಿಸಲಾಗುತ್ತದೆ.

ದೂರ್ವೆಯು ಹೇಗಿರಬೇಕು?
ಶ್ರೀ ಗಣಪತಿಗೆ ಅರ್ಪಿಸುವ ದೂರ್ವೆ ಕೋಮಲವಾಗಿರಬೇಕು. ಅಂದರೆ, ಎಳೆಯ ಹುಲ್ಲಾಗಿರಬೇಕು. 

ಎಷ್ಟು ದೂರ್ವೆ ಅರ್ಪಿಸಬೇಕು?
ಬೆಸ ಸಂಖ್ಯೆಗಳು ಶಕ್ತಿ ತತ್ವದೊಂದಿಗೆ ಸಂಬಂಧ ಹೊಂದಿವೆ. ದೂರ್ವೆಯನ್ನು ಹೆಚ್ಚಾಗಿ ಬೆಸ ಸಂಖ್ಯೆಗಳಲ್ಲಿ ನೀಡಲಾಗುತ್ತದೆ (ಕನಿಷ್ಠ 3 ಅಥವಾ 5, 7, 21 ಇತ್ಯಾದಿ). ಸಾಮಾನ್ಯವಾಗಿ ಶ್ರೀ ಗಣಪತಿಗೆ 21 ದೂರ್ವೆ ಅರ್ಪಿಸುವುದು ಉತ್ತಮ.  ಸಂಖ್ಯಾಶಾಸ್ತ್ರದ ಪ್ರಕಾರ 21 ಸಂಖ್ಯೆಯು 2 + 1 = 3 ಆಗಿದೆ. ಶ್ರೀ ಗಣಪತಿಯು ಸಂಖ್ಯೆ 3ರೊಂದಿಗೆ ಸಂಬಂಧ ಹೊಂದಿದ್ದಾನೆ. ಸಂಖ್ಯೆ 3 ಸೃಷ್ಟಿ, ಪೋಷಣೆ ಮತ್ತು ವಿಸರ್ಜನೆಯನ್ನು ಪ್ರತಿನಿಧಿಸುವುದರಿಂದ, 360 (ರಜ-ತಮ) ಅಲೆಗಳನ್ನು ಅದರ ಶಕ್ತಿಯಿಂದ ನಾಶ ಮಾಡಲು ಸಾಧ್ಯವಿದೆ. 

ಗಣೇಶನಿಗೆ ಮೊದಲ ಪೂಜೆ ಏಕೆ ಸಲ್ಲಬೇಕು? ಅವನನ್ನು ಏಕೆ ವಿಘ್ನ ನಿವಾರಕ ಎನ್ನುತ್ತಾರೆ?

ದೂರ್ವೆ ಅರ್ಪಿಸುವ ವಿಧಾನ
ಶ್ರೀ ಗಣಪತಿ ವಿಗ್ರಹದ ಮುಖವನ್ನು ಹೊರತುಪಡಿಸಿ ಇಡೀ ದೇಹವನ್ನು ದೂರ್ವೆಯಿಂದ ಮುಚ್ಚಬೇಕು. ಹೀಗೆ ದೂರ್ವೆಯ ಸುಗಂಧವು ವಿಗ್ರಹದ ಸುತ್ತಲೂ ಹರಡುತ್ತದೆ. 

click me!