
Ganesh Chaturthi Chandra: ಗಣೇಶ ಚತುರ್ಥಿಯಂದು ಚಂದ್ರನನ್ನು (ಚಂದ್ರ ದರ್ಶನ) ಅಪ್ಪಿ-ತಪ್ಪಿಯೂ ನೋಡಬಾರದು ಎಂದು ಹೇಳುತ್ತಾರೆ. ಈ ದಿನ ಚಂದ್ರನನ್ನು ನೋಡಿದರೆ ಕಳ್ಳತನದ ಆರೋಪ ಬರುವುದು ಎಂದು ಕೆಲವರು ಹೇಳುತ್ತಾರೆ. ಇದು ಶತಮಾನಗಳಿಂದಲೂ ನಡೆದುಕೊಂಡ ಬಂದ ಪದ್ಧತಿಯಾಗಿದೆ.
ಚೌತಿ ಹಬ್ಬದಂದು ಚಂದ್ರನನ್ನು ನೋಡಬಾರದು ಎನ್ನುವ ಮಾತಿನ ಹಿಂದೆ ಪೌರಾಣಿಕ ಕಥೆಯಿದೆ. ಒಮ್ಮೆ ಗಣಪತಿಯು ತನ್ನ ವಾಹನ ಇಲಿಯ ಮೇಲೆ ಸವಾರಿ ಮಾಡುತ್ತಿದ್ದನು. ಆಗ ಗಣೇಶನ ಹೊಟ್ಟೆ ದೊಡ್ಡದಾಗಿತ್ತು. ಚಂದ್ರನು ಅವನನ್ನು ನೋಡಿ ಗೇಲಿ ಮಾಡಿದನು. ಗಣೇಶನಿಗೋ ದೊಡ್ಡ ತಲೆ, ದೊಡ್ಡ ಕಿವಿಯಿದ್ದು, ಅಷ್ಟು ದೈತ್ಯಾಕಾರವಾಗಿರುವ ಅವನು ಮೂಷಿಕ ವಾಹನದ ಮೇಲೆ ಸವಾರಿ ಮಾಡ್ತಿರೋದು ನೋಡಿ ಚಂದ್ರನಿಗೆ ನಗು ಬಂದಿತ್ತು. ಇದರಿಂದ ಸಿಟ್ಟಾದ ಗಣೇಶನು ಚಂದ್ರನಿಗೆ “ನನ್ನ ಚತುರ್ಥಿಯಂದು ಯಾರು ನಿನ್ನನ್ನು ನೋಡುತ್ತಾರೋ, ಅವರಿಗೆ ಅಪವಾದ, ದೋಷ, ತೊಂದರೆಗಳು ಬರುತ್ತವೆ" ಎಂದು ಶಾಪ ಕೊಟ್ಟಿದ್ದಾನೆ.
ಈ ಶಾಪ ಬರೋದು ಬೇಡ ಎಂದು ಗಣೇಶ ಚತುರ್ಥಿಯಂದು ಚಂದ್ರ ದರ್ಶನ ಮಾಡೋದಿಲ್ಲ. ಈ ಥರ ಚಂದ್ರ ದರ್ಶನ ಮಾಡಿದರೆ ಆ ವ್ಯಕ್ತಿಯ ಮೇಲೆ ತಪ್ಪು ಮಾಡದೆ ಆರೋಪ ಬರುವುದು, ದೂಷಿಸಲಾಗುತ್ತದೆ, ಅಥವಾ ಸಾಮಾಜಿಕವಾಗಿ ಅವಮಾನ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಭಕ್ತರು ಚೌತಿ ಚಂದ್ರನನ್ನು ನೋಡೋದಿಲ್ಲ. ಇದನ್ನು ಮಿಥ್ಯಾ ದೋಷ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಶ್ರೀಕೃಷ್ಣ ಪರಮಾತ್ಮನು ಶಮಂತಕ ಮಣಿ ಕದ್ದಿದ್ದನು ಎಂಬ ಆರೋಪ ಬಂದಿತ್ತು ಎನ್ನಲಾಗುವುದು.
ರಾತ್ರಿಯ ಸಮಯದಲ್ಲಿ ಹೊರಗಡೆ ಓಡಾಡಬೇಡಿ
ಮನೆಯ ಕಿಟಕಿಗಳಿಗೆ ಪರದೆ ಹಾಕಿ, ಕ್ಲೋಸ್ ಮಾಡಿ
ಚತುರ್ಥಿಯಂದು ಮನೆಯಲ್ಲಿ ಗಣೇಶನ ಪೂಜೆ, ಭಕ್ತಿಗೀತೆ, ಧಾರ್ಮಿಕ ಕಾರ್ಯಕ್ರಮ ಮಾಡುತ್ತ ಸಮಯ ಕಳೆಯಿರಿ
ಒಂದು ವೇಳೆ ಗೊತ್ತೋ ಗೊತ್ತಿಲ್ಲದೆಯೇ ಗಣೇಶ ಚತುರ್ಥಿಯಂದು ಆಕಸ್ಮಿಕವಾಗಿ, ಅನಿರೀಕ್ಷಿತವಾಗಿ ಚಂದ್ರನನ್ನು ನೋಡಿದರೆ, ಶಾಸ್ತ್ರಗಳಲ್ಲಿ ಕೆಲವು ಪರಿಹಾರಗಳನ್ನು ಕೂಡ ಹೇಳಲಾಗಿದೆ.
ಗಣೇಶನಿಗೆ ಪೂಜೆ ಸಲ್ಲಿಸಿ, "ಗಣೇಶ ಗಾಯತ್ರಿ ಮಂತ್ರ" ಅಥವಾ "ವಕ್ರತುಂಡ ಮಹಾಕಾಯ" ಮಂತ್ರವನ್ನು 108 ಬಾರಿ ಜಪಿಸಿ. ಓಂ ಏಕದಂತಾಯ ವಿಮಹೇ, ವಕ್ರತುಂಡಾಯ ಧೀಮಹಿ, ತನ್ನೋ ದಂತಿಃ ಪ್ರಚೋದಯಾತ್ ಈ ಮಂತ್ರ ಹೇಳಿ. ಇದು ಗಣೇಶನ ಕೃಪೆಯನ್ನು ಪಡೆಯಲು, ದೋಷವನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ.
ಚಂದ್ರನಿಗೆ ಕ್ಷಮೆಯಾಚಿಸುವ ಸಿಂಹಿಕಾಗರ್ಭ ಸಂಭೂತಂ, ತಂ ರಾಹುಂ ಪ್ರಣಮಾಮ್ಯಹಂ, ಕ್ಷಮಾಪನಂ ಕುರು ದೇವೇಶ, ದೋಷಂ ಚಂದ್ರ ಸಮುದ್ಭವಂ ಎಂಬ ಮಂತ್ರವನ್ನು 21 ಬಾರಿ ಪಠಿಸಿ, ನಮಸ್ಕರಿಸಿ.
ಬಡವರಿಗೆ ಆಹಾರ, ಬಿಳಿ ಬಟ್ಟೆ/ ಬೆಲ್ಲದ ದಾನ ಮಾಡಿ. ಗಣೇಶ ದೇವಸ್ಥಾನಕ್ಕೆ ತೆಂಗಿನಕಾಯಿ, ಮೋದಕ ದಾನವನ್ನು ಮಾಡಿ.
ಚಂದ್ರನನ್ನು ನೋಡಿದ ಮರುದಿನ ಬೆಳಿಗ್ಗೆ ಸ್ನಾನ ಮಾಡಿ, ಗಂಗಾಜಲವನ್ನು ತಾಮ್ರದ ಪಾತ್ರೆಯಲ್ಲಿ ತೆಗೆದುಕೊಂಡು ಗಣೇಶನಿಗೆ ಅರ್ಪಿಸಿ.
ಕೆಲವು ಶಾಸ್ತ್ರಗಳು ಹೇಳುವಂತೆ, ವಿಷ್ಣು ಸಹಸ್ರನಾಮವನ್ನು ಪಠಿಸಿ.
ಜ್ಯೋತಿಷ್ಯದ ಪ್ರಕಾರ, ಚಂದ್ರನು ಮನಸ್ಸಿನ ಮೇಲೆ ಪ್ರಭಾವ ಬೀರುವ ಗ್ರಹ. ಚೌತಿ ಚಂದ್ರನ ದರ್ಶನದಿಂದ ಮನಸ್ಸಿನಲ್ಲಿ ನೆಗೆಟಿವ್ ಯೋಚನೆ ಬರುವುದು ಎಂದು ಹೇಳಲಾಗುತ್ತದೆ.