Offering flowers to god: ಯಾವ ದೇವರಿಗೆ ಯಾವ ಹೂವಿಟ್ಟರೆ ಶ್ರೇಷ್ಠ?

By Suvarna NewsFirst Published Dec 6, 2021, 10:41 AM IST
Highlights

ಗಣೇಶಗೆ ದರ್ಬೆ, ದೇವಿಗೆ ಶ್ವೇತ ಪುಷ್ಪ, ಶಿವನಿಗೆ ತುಂಬೆ, ಕೃಷ್ಣನಿಗೆ ತುಳಸಿ...ಹೀಗೆ ಒಂದೊಂದು ಹೂ, ಪತ್ರೆ ಒಂದೊಂದು ದೇವರಿಗೆ ಪ್ರೀತಿ. ಅವರನ್ನು ಪ್ರಸನ್ನರಾಗಿಸುವುದಕ್ಕಿಂತ ಇನ್ನೇನಿದೆ ಒಳ್ಳೆಯ ವಿಷಯ? ಹಾಗಿದ್ದರೆ ಯಾವ ಹೂ, ಯಾವ ದೇವರಿಗೆ ಪ್ರೀತಿ ಎಂದು ನೋಡೋಣ. 

'ದೈವಸ್ಯ ಮಸ್ತಕಂ ಕುರ್ಯಾತ್ಕುಸುಮೋಪಾಹಿತಾಂ ಸದಾ '
ದೇವರ ಶಿರವು ಯಾವಾಗಲೂ ತಾಜಾ ಹೂವು(flower)ಗಳಿಂದ ಅಲಂಕೃತವಾಗಿರಬೇಕು ಎನ್ನುತ್ತದೆ ಮೇಲಿನ ಶ್ಲೋಕ. ಹೂವುಗಳು ಈ ಲೋಕದ ವಿಶಿಷ್ಠ ಸೃಷ್ಟಿ. ಅವನ್ನು ಇಷ್ಟಪಡದ ಮನುಷ್ಯರಷ್ಟೇ ಅಲ್ಲ, ದೇವರೂ ಕೂಡಾ ಇಲ್ಲ. ಎಲ್ಲ ಹೂವುಗಳೂ ಸ್ವಭಾವತಃ ವಿಶೇಷವಾಗಿರುತ್ತವೆ. ಒಂದೊಂದರ ಸುಗಂಧ, ಬಣ್ಣ, ಗುಣ ಒಂದೊಂದು. ಕೆಲವು ರಾತ್ರಿ ಅರಳಿದರೆ, ಮತ್ತೆ ಕೆಲವು ಬೆಳಗ್ಗೆ ಅರಳುತ್ತವೆ. ಪುರಾಣ(mythology) ಪುಣ್ಯ ಕತೆಗಳಲ್ಲಿ ಎಲ್ಲ ಕಡೆಯೂ ಹೂವುಗಳ ಉಲ್ಲೇಖವಿರುತ್ತದೆ. ಎಷ್ಟೋ ಕತೆಗಳಲ್ಲಿ ದೇವರು ಕೆಲವು ಹೂವಿಗೆ ಒಲಿದ, ಮತ್ತೆ ಕೆಲವಕ್ಕೆ ಶಾಪ ಕೊಟ್ಟ ಪ್ರಸಂಗಗಳೂ ಇವೆ. ಅಂದರೆ, ದೇವರಿಗೂ ಕೆಲವೊಂದು ಹೂವುಗಳೆಂದರೆ ಹೆಚ್ಚೇ ಅಚ್ಚುಮೆಚ್ಚು ಎಂದಾಯಿತು. ನಿರ್ದಿಷ್ಠ ದೇವರ ದೈವೀಶಕ್ತಿ ನಿರ್ದಿಷ್ಟ ಹೂವುಗಳು ಹೀರಿಕೊಳ್ಳುತ್ತದೆ. ಹಾಗಿದ್ದರೆ, ಯಾವ ದೇವರಿಗೆ ಯಾವ ಹೂವು ಇಷ್ಟ? ಪೂಜಿಸುವಾಗ ಯಾವ ಹೂವನ್ನು ನಮ್ಮ ಇಷ್ಟ ದೇವ(deity)ರಿಗೆ ನೀಡಬೇಕು ನೋಡೋಣ. 

ಗಣಪತಿ(Ganesha)
ಗಣೇಶ ಪೂಜೆಯ ಸಂದರ್ಭದಲ್ಲಿ 21 ಬಗೆಯ ಹೂವುಪತ್ರೆಗಳನ್ನು ಬಳಸುವುದು ಶ್ರೇಷ್ಠ. ಅದರಲ್ಲೂ ಬಿಲ್ವ ಪತ್ರೆ, ಗರಿಕೆ ಹುಲ್ಲು, ಕೆಂಪು ದಾಸವಾಳವೆಂದರೆ ಗಣೇಶಗೆ ಅಚ್ಚುಮೆಚ್ಚು. ನಿತ್ಯ ಕನಿಷ್ಠ 6 ಗರಿಕೆ ಹುಲ್ಲು, ಉಳಿದಂತೆ ತುಳಸಿ ಹೊರತು ಪಡಿಸಿ ಗುಲಾಬಿ, ಮಲ್ಲಿಗೆ, ಚಂಪ ಸೇರಿದಂತೆ ಯಾವುದೇ ಹೂವನ್ನೂ ಗಣೇಶನಿಗೆ ಅರ್ಪಿಸಬಹುದು. 

ಶಿವ(Shiva)
ಶಿವನಿಗೆ ಬಿಲ್ವಪತ್ರೆ, ತುಂಬೆ ಹೂವು, ಕಣಗಿಲೆ ಹೂವು, ಲಿಂಗದ ಹೂವುಗಳು ಶ್ರೇಷ್ಠ. ಯಾವುದೇ ಬಿಳಿ ಹೂವು, ನೀಲಿ ತಾವರೆ, ದತ್ತೂರ, ನಾಗಕೇಸರಗಳು ಒಳ್ಳೆಯದು. ಆದರೆ, ಚಂಪ ಹಾಗೂ ಕೇತಕಿಯ ಹೂವು ಮಾತ್ರ ಶಿವನಿಗಿಡಬಾರದು. ಅವುಗಳು ಶಿವನಿಂದ ಶಾಪಗ್ರಸ್ಥವಾಗಿವೆ. 

Dharmasthala: ಜೈನ, ಶೈವರ ಜನಪ್ರಿಯ ದೇಗುಲ ಧರ್ಮಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು?

ಪಾರ್ವತಿ(Parvathy)
ಪಾರ್ವತಿಗೆ ದಾಸವಾಳ, ಮಲ್ಲಿಗೆ, ಬಿಳಿ ತಾವರೆ ಹಾಗೂ ಚಂಪಕ ಪುಷ್ಪ ಎಂದರೆ ಪ್ರೀತಿ. ಉಳಿದಂತೆ, ಶಿವನಿಗೆ ಇಷ್ಟವಾದ ಹೂವೆಲ್ಲವೂ ಪಾರ್ವತಿಗೆ ಇಷ್ಟವೇ. ಅರ್ಕ ಹಾಗೂ ಆಮ್ಲವನ್ನು ಪಾರ್ತತಿಗೆ ಅರ್ಪಿಸಬಾರದು. 

ವಿಷ್ಣು, ರಾಮ, ಕೃಷ್ಣ(Vishnu, Rama, Krishna)
ವಿಷ್ಣುವಿಗೆ ತಾವರೆ ಹಾಗೂ ತುಳಸಿ ಎಂದರೆ ಬಲು ಪ್ರೀತಿ. ಕೆಂಪು ತಾವರೆ, ಕೇವಾರ, ಚಂಪ, ಮಲ್ಲಿಗೆ ಹೂವುಗಳನ್ನು ವಿಷ್ಣುವಿಗೆ ಅರ್ಪಿಸಬಹುದು. ರಾಮನಿಗೆ ಅರಳಿ ಹೂವೊಂದನ್ನು ಬಿಟ್ಟು ಬೇರೆಲ್ಲ ಇಡಬಹುದು. ಕೃಷ್ಣನಿಗೆ ಎಲ್ಲಕ್ಕಿಂತ ತುಳಸಿಯೇ ಸರ್ವಶ್ರೇಷ್ಠ. ಮಹಾಭಾರತದಲ್ಲೊಮ್ಮೆ ಕೃಷ್ಣನು ತನಗೆ ಮುತ್ತುಗ, ಕುಮುದ, ಮಾಲತಿ ಲತೆಗಳಿಷ್ಟ ಎಂಬ ಹೇಳುವ ಉಲ್ಲೇಖವೂ ಇದೆ. 

Rahu kaal: ರಾಹುಕಾಲದ ಬಗ್ಗೆ ನೀವು ತಿಳ್ಕೊಳ್ಬೇಕಾಗಿರೋದಿಷ್ಟು

ಲಕ್ಷ್ಮಿ, ಸರಸ್ವತಿ(Lakshmi, Saraswati, Durga)
ಕಮಲ, ಸೇವಂತಿಗೆ, ಗುಲಾಬಿ ಬಣ್ಣದ ತಾವರೆ ಆಕೆಗೆ ಪ್ರಿಯವಾದ ಹೂವಾಗಿದೆ. ಪಾರಿಜಾತ ಹಾಗೂ ಬಿಳಿ ಕಮಲಕ್ಕೆ ಸರಸ್ವತಿ ಒಲಿಯುತ್ತಾಳೆ. ಇನ್ನು ದುರ್ಗಾ ದೇವಿಗೆ ಕೆಂಪು ಬಣ್ಣದ ಯಾವುದೇ ಹೂವಾಗಿದ್ದರೂ ಸರಿ, ಬಲು ಇಷ್ಟ. 

ಆಂಜನೇಯ(Hanuman)
ಆಂಜನೇಯನಿಗೆ ತುಳಸಿ ಹಾರ, ವಿಳ್ಯೆದೆಲೆ ಹಾರ, ಚಮೇಲಿ ಹೂವೆಂದರೆ ಇಷ್ಟ. ಇದಲ್ಲದೆ, ಶಕ್ತಿ ಹಾಗೂ ಧೈರ್ಯಕ್ಕೆ ಹೆಸರಾದವನು ಆಂಜನೇಯ. ಬಣ್ಣಗಳಲ್ಲಿ ಕೆಂಪು ಬಣ್ಣ ಈ ಗುಣಗಳನ್ನು ಪ್ರತಿನಿಧಿಸುತ್ತದೆ. ಹಾಗಾಗಿ, ಕೆಂಪು ಬಣ್ಣದ ಹೂವುಗಳನ್ನೂ ಆಂಜನೇಯನಿಗೆ ಅರ್ಪಿಸಬಹುದು. 

ಹೂವಿಗೂ ನಿಯಮಗಳು(rules)
- ಯಾವಾಗಲೂ ತಾಜಾ ಹೂವನ್ನೇ ದೇವರಿಗೆ ಅರ್ಪಿಸಬೇಕು. 
- ಹೂವನ್ನು ಹುಳ ತಿಂದು ಹಾಳು ಮಾಡಿರಬಾರದು.
- ಮೊಗ್ಗು, ಒಣಗಿದ ಹೂವು ದೇವರಿಗೆ ಸಲ್ಲದು. 
- ದೇವರಿಗೆ ಏರಿಸುವ ಹೂವನ್ನು ಎಡಗೈಲಿ ಮುಟ್ಟಿ ಮೂಸಿ ನೋಡುವುದು ಮಾಡಬಾರದು. 
- ಪರಿಮಳವೇ ಇಲ್ಲದ ಪುಷ್ಪ ಬಳಕೆ ಸಲ್ಲದು. 
- ಚಪ್ಪಲಿ ಹಾಕಿಕೊಂಡು, ಸ್ನಾನಕ್ಕೂ ಮುಂಚೆಯೇ ಹೂ ಕೊಯ್ಯಬಾರದು. 

click me!