ಸೂರ್ಯನಿಗೇ ಹುಟ್ಟು ಹಬ್ಬದ ಸಂಭ್ರಮ, ರಥ ಸಪ್ತಮಿಯಂದು ರವಿಯ ಆರಾಧನೆ ಹೀಗಿರಲಿ!

By Suvarna NewsFirst Published Feb 13, 2024, 2:19 PM IST
Highlights

ಸೂರ್ಯ ದೇವನಿಗೆ ಪ್ರತಿ ದಿನ ಪೂಜೆ ಮಾಡುವ ಭಕ್ತರಿದ್ದಾರೆ. ಅದ್ರ ಜೊತೆ ರಥಸಪ್ತಮಿಯ ವಿಶೇಷ ದಿನ, ವಿಶೇಷ ಪೂಜೆ ನಡೆಯುತ್ತದೆ. ಈ ಬಾರಿ ಎಂದು ರಥಸಪ್ತಮಿ ಆಚರಣೆ ಮಾಡಲಾಗ್ತಿದೆ, ಆ ದಿನ ಏನೆಲ್ಲ ಮಾಡಬಾರದು ಎಂಬ ವಿವರ ಇಲ್ಲಿದೆ. 
 

ಇಡೀ ಜಗತ್ತಿಗೆ ಬೆಳಕು ಕೊಡುವವನು ಸೂರ್ಯ. ಅನೇಕ ಮಂದಿ ಪ್ರತಿನಿತ್ಯ ಬೆಳಿಗ್ಗೆ ಸೂರ್ಯನಿಗೆ ನಮಸ್ಕರಿಸಿ ಅರ್ಘ್ಯ ನೀಡುತ್ತಾರೆ. ಜಗತ್ತಿಗೆ ಬೆಳಕು ನೀಡುವ ಸೂರ್ಯದೇವನನ್ನು ರಥಸಪ್ತಮಿಯಂದು ವಿಶೇಷವಾಗಿ ಪೂಜಿಸಲಾಗುತ್ತದೆ. ಮಾಘ ಮಾಸ ಶುಕ್ಲ ಪಕ್ಷದ ಸಪ್ತಮಿಯ ದಿನವನ್ನು ರಥ ಸಪ್ತಮಿಯಾಗಿ ಆಚರಿಸಲಾಗುತ್ತದೆ. ಇದನ್ನು ಸೂರ್ಯ ಜಯಂತಿ ಮತ್ತು ಅಚಲಾ ಸಪ್ತಮಿ ಎಂದು ಕೂಡ ಕರೆಯಲಾಗುತ್ತದೆ. ಈ ದಿನ ಸೂರ್ಯ ದೇವನಿಗೆ ಅರ್ಘ್ಯವನ್ನು ನೀಡಿ ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ರಥ ಸಪ್ತಮಿಯ ದಿನದಂದು ಸೂರ್ಯನ ಆರಾಧನೆ ಮಾಡಿದರೆ ಆಯುಷ್ಯ, ಸಂಪತ್ತಿನ ವೃದ್ಧಿಯಾಗುತ್ತದೆ ಹಾಗೂ ಮನುಷ್ಯನ ಎಲ್ಲ ಪಾಪಗಳಿಗೂ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ.

ರಥ ಸಪ್ತಮಿ (Ratha Saptami) ಯಾವಾಗ? : ಈ ವರ್ಷ ಅಂದರೆ 2024ರ ರಥ ಸಪ್ತಮಿ ಫೆಬ್ರವರಿ 15 ರಂದು ಬೆಳಿಗ್ಗೆ 10.12 ಕ್ಕೆ ಆರಂಭವಾಗುತ್ತದೆ ಹಾಗೂ 16 ಫೆಬ್ರವರಿಯಂದು ಬೆಳಿಗ್ಗೆ 8.54 ಕ್ಕೆ ಮುಕ್ತಾಯವಾಗುತ್ತದೆ. ಉದಯ ತಿಥಿಯ ಆಧಾರದ ಮೇಲೆ ಫೆಬ್ರವರಿ 16 ರ ಶುಕ್ರವಾರ (Friday) ದಂದು ರಥಸಪ್ತಮಿಯನ್ನು ಆಚರಿಸಲಾಗುತ್ತದೆ. ಫೆಬ್ರವರಿ 16 ರಂದು ಬೆಳಿಗ್ಗೆ 5.17 ರಿಂದ 6.59 ರ ವರೆಗೆ ಸ್ನಾನದ ಮುಹೂರ್ತವಿದೆ. ಅಂದಿನ ದಿನ 6.59 ಕ್ಕೆ ಸೂರ್ಯೋದಯ (Sunrise) ವಾಗುತ್ತದೆ. ಸ್ನಾನದ ನಂತರವೇ ನೀವು ಸೂರ್ಯ ದೇವರಿಗೆ ಅರ್ಘ್ಯ ನೀಡಬೇಕು. ಅರ್ಘ್ಯ ಕೊಡುವ ನೀರಿಗೆ ಕೆಂಪು ಚಂದನ, ಕೆಂಪು ಹೂವು, ಅಕ್ಷತೆ ಮತ್ತು ಸಕ್ಕರೆಯನ್ನು ಹಾಕಬೇಕು. ರಥ ಸಪ್ತಮಿಯ ದಿನ ಸೂರ್ಯನಿಗೆ ದಾಳಿಂಬೆ, ಕೆಂಪು ಬಣ್ಣದ ಸಿಹಿ ಅಥವಾ ಬೆಲ್ಲದಿಂದ ಮಾಡಿದ ಸಿಹಿಯನ್ನು ನೈವೇದ್ಯ ಮಾಡಬೇಕು.

Latest Videos

ಮೀನದಲ್ಲಿ ಚಂದ್ರ, ಸಧ್ಯ ಯೋಗದಿಂದ ಈ ರಾಶಿಗೆ ತೊಂದರೆಯಿಂದ ಮುಕ್ತಿ, ಕಷ್ಟಗಳೆಲ್ಲಾ ಮಾಯ

ಈ ವರ್ಷದ ರಥ ಸಪ್ತಮಿಯ ದಿನ ಬ್ರಹ್ಮ ಯೋಗ ಮತ್ತು ಭರಣಿ ನಕ್ಷತ್ರವೂ ಇದೆ. ಬ್ರಹ್ಮ ಯೋಗ ಪ್ರಾತಃ ಕಾಲದಿಂದ ಮಧ್ಯಾಹ್ನ 3.18 ರ ತನಕ ಇದೆ. ಇದರ ನಂತರ ಇಂದ್ರ ಯೋಗ ಪ್ರಾರಂಭವಾಗುತ್ತದೆ. ಈ ದಿನ ಭರಣಿ ನಕ್ಷತ್ರ ಪ್ರಾತಃಕಾಲದಿಂದ ಬೆಳಿಗ್ಗೆ 8.47 ರ ತನಕ ಇದೆ. ಇದರ ನಂತರ ಕೃತಿಕಾ ನಕ್ಷತ್ರ ಆರಂಭವಾಗುತ್ತದೆ.

ರಥ ಸಪ್ತಮಿಯ ಮಹತ್ವ (Significance) : ಧಾರ್ಮಿಕ ನಂಬಿಕೆಗಳ ಪ್ರಕಾರ ಮಾಘ ಮಾಸದ ಶುಕ್ಲ ಪಕ್ಷದ ಏಳನೇ ದಿನದಂದು ಸೂರ್ಯ ದೇವರು ತನ್ನ ರಥದ ಮೇಲೆ ಸವಾರಿ ಮಾಡಿ ಜಗತ್ತಿಗೆ ಬೆಳಕು ನೀಡಲು ಪ್ರಾರಂಭಿಸಿದ. ಈ ಕಾರಣಕ್ಕಾಗಿಯೇ ಈ ದಿನವನ್ನು ಸೂರ್ಯ ಜಯಂತಿ ಎಂದು ಕೂಡ ಹೇಳಲಾಗುತ್ತದೆ. ರಥ ಸಪ್ತಮಿಯ ದಿನ ಸೂರ್ಯ ದೇವನ ಜನ್ಮದಿನ ಎಂಬ ಪ್ರತೀತಿ ಇದೆ. ರಥ ಸಪ್ತಮಿಯ ದಿನ ಸೂರ್ಯನ ಪೂಜೆ ಮಾಡಿದರೆ ಜೀವನದ ಕಷ್ಟಗಳು ನಿವಾರಣೆಯಾಗುತ್ತವೆ. ಅಂದಿನ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಅರ್ಘ್ಯ ನೀಡುವುದರಿಂದ ಜಾತಕದಲ್ಲಿನ ದೋಷಗಳು ಹಾಗೂ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

ಅತ್ತೆ ಮಾವನನ್ನು ಸ್ವಂತ ತಂದೆತಾಯಿಯಂತೆ ನೋಡಿಕೊಳ್ಳುತ್ತಾರೆ ಈ 4 ರಾಶಿಯವರು!

ರಥ ಸಪ್ತಮಿಯಂದು ಈ ಕೆಲಸ ಮಾಡಬೇಡಿ : ರಥ ಸಪ್ತಮಿಯ ಪೂಜೆಯ ಫಲ ನಮಗೆ ದೊರೆಯಬೇಕು ಎಂದಾದರೆ ಅಂದಿನ ದಿನ ಕೆಲವು ಕೆಟ್ಟ ಕೆಲಸಗಳನ್ನು ಮಾಡಬಾರದು. ಅಂದು ಕ್ರೌರ್ಯದಿಂದ ದೂರವಿರಬೇಕು ಮತ್ತು ಮನೆಯಲ್ಲಿ ಯಾವುದೇ ರೀತಿಯ ಕಲಹವಾಗದಂತೆ ನೋಡಿಕೊಳ್ಳಬೇಕು. ಅಂದು ಸೂರ್ಯನ ಪೂಜೆ ಮಾಡುವುದರಿಂದ ಆಲ್ಕೋಹಾಲ್ ಸೇವನೆಯನ್ನು ಮಾಡಬಾರದು. ಹಾಗೆಯೇ ಉಪ್ಪು, ಈರುಳ್ಳಿ, ಬೆಳ್ಳುಳ್ಳಿ ಮುಂತಾದ ತಾಮಸಿಕ ಆಹಾರಗಳ ಸೇವನೆಯಿಂದಲೂ ದೂರವಿರಬೇಕು. ಮನೆಯಲ್ಲಿ ಸೌಹಾರ್ದಯುತ ವಾತಾವರಣವನ್ನು ಕಾಪಾಡಿಕೊಳ್ಳಬೇಕು ಮತ್ತು ಬ್ರಹ್ಮಚರ್ಯವನ್ನು ಪಾಲಿಸಬೇಕು.

click me!