ಚಿಕ್ಕಮಗಳೂರು: ವಿಜಯದಶಮಿ ಪ್ರಯುಕ್ತ ಆರದವಳ್ಳಿಯಲ್ಲಿ ಅಂಬು ಒಡೆಯುವ ಕಾರ್ಯ ಸಂಪನ್ನ

By Girish GoudarFirst Published Oct 5, 2022, 7:42 PM IST
Highlights

ಚಿಕ್ಕಮಗಳೂರು ತಾಲೂಕಿನ ಅಂಬಳೆ ಹೋಬಳಿ ಆರದವಳ್ಳಿ ಗ್ರಾಮದಲ್ಲಿ ಅಂಬು ಒಡೆಯುವ ಮೂಲಕ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು(ಅ.05): ನವರಾತ್ರಿಯ ಕೊನೆಯ ದಿನವಾದ ಇಂದು(ಬುಧವಾರ) ವಿಜಯದಶಮಿ ಆಚರಣೆಯನ್ನು ಚಿಕ್ಕಮಗಳೂರು ತಾಲೂಕಿನ ಅಂಬಳೆ ಹೋಬಳಿ ಆರದವಳ್ಳಿ ಗ್ರಾಮದಲ್ಲಿ ಅಂಬು ಒಡೆಯುವ ಮೂಲಕ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಗ್ರಾಮದ ಪಟೇಲ ವಂಶಸ್ಥರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್. ಮಹೇಶ್ ನೇತೃತ್ವದಲ್ಲಿ 25ನೇ ವರ್ಷದ ಅಂಬು ಮಹೋತ್ಸವ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳೊಂದಿಗೆ ಅತ್ಯಂತ ಸಂಭ್ರಮದಿಂದ ನೆರವೇರಿತು.

ಬಾಳೆಗೊನೆಗೆ ಬಿಲ್ಲು ಹೊಡೆಯುವ ಮೂಲ ಅಂಬಿನ ಉತ್ಸವ

ಗ್ರಾಮಸ್ಥರು ಗ್ರಾಮದೇವರನ್ನು ಹೊತ್ತು ಊರಿನ ಸುತ್ತ ಮೆರವಣಿಗೆ ನಡೆಸುವ ಮೂಲಕ ಅಂಬು ಒಡೆ ಯುವ ಸ್ಥಳಕ್ಕೆ ಸಾಗಿದರು. ಸಾಂಪ್ರದಾಯಿಕ ಅಲಂಕೃತ ಉಡುಗೆಯೊಂದಿಗೆ ಸಿಂಗಾರಗೊಂಡಿದ್ದ ಪಟೇಲ ವಂಶಸ್ಥರಾದ ಎ.ಎನ್.ಮಹೇಶ್ ಹಾಗೂ ಕುಟುಂಬಸ್ಥರನ್ನು ಊರಿನ ಮುಖಂಡರು, ಗ್ರಾಮಸ್ಥರುಗಳು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಗ್ರಾಮದ ಅಂಬು ಹೊಡೆಯುವ ದೊಡ್ಡಕೆರೆ ಬಳಿಗೆ ಕರೆ ತರಲಾಯಿತು. 

ಕೋಲಾರ: ತಲೆಯ ಮೇಲೆ ತೆಂಗಿನ ಕಾಯಿ ಒಡೆಸಿಕೊಳ್ಳುವ ಮೂಲಕ ಶಕ್ತಿ ಪ್ರದರ್ಶನ

ಆಂಜನೇಯ ಸ್ವಾಮಿ, ಮಲ್ಲೇಶ್ವರಸ್ವಾಮಿ, ಗ್ರಾಮದೇವತೆಗಳಾದ ಮಾರಮ್ಮದೇವಿ ಹಾಗೂ ಭೂತಪ್ಪ ದೇವರ ಉತ್ಸವದೊಂದಿಗೆ ಬನ್ನಿ ಮರಕ್ಕೆ ವಿಶೇ? ಪೂಜೆ ಸಲ್ಲಿಸಿ ಸಂಪ್ರದಾಯಿಕವಾಗಿ ಬಾಳೆ ಗೊನೆಗೆ ಬಿಲ್ಲು ಹೊಡೆಯುವ ಮೂಲ ಅಂಬಿನ ಉತ್ಸವವನ್ನು ಯಶಸ್ವಿಗೊಳಿಸಿದರು.ವಿಜಯದಶಮಿ ಅಂಬು ಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎ. ಎನ್.ಮಹೇಶ್ ವಿಜಯದಶಮಿ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದೆ.

ವಿಜಯನಗರ ಅರಸರ ಕಾಲದಿಂದಲೂ ದಸರಾ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ. ಮೈಸೂರು ಅರಸರ ಕಾಲದಲ್ಲಿ ನವರಾತ್ರಿ ದಸರಾಗೆ ಮತ್ತಷ್ಟು ಮಹತ್ವ ಬಂದಿದೆ ಎಂದರು.ರಾಜ ಪ್ರಜಾಪ್ರಭುತ್ವದ ಕಾಲದಲ್ಲಿ ಸ್ಥಳೀಯ ಆಡಳಿತ ನಡೆಸುವ ಪಟೇಲರನ್ನು ನೇಮಿಸಿ ಅವರಿಂದ ದಸರಾ ಆಚರಣೆಗೆ ಚಾಲನೆ ನೀಡಲಾಗುತ್ತಿತ್ತು. ಅಂದಿನಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ತಮ್ಮ ಕುಟುಂಬದ ಪೂರ್ವಜರು ಪಟೇಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದರು.

ಅಂಬು ಉತ್ಸವವು ಅನೇಕ ವರ್ಷಗಳಿಂದ ಆರದವಳ್ಳಿಯ ಗ್ರಾಮದಲ್ಲಿ ಪಟೇಲ ವಂಶಸ್ಥರಿಂದ ಚಾಲನೆ ದೊರೆಯುತ್ತಿದೆ. ವಿಜಯದಶಮಿಯಂದು ಅಂಬುಹೊಡೆಯುವ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಆಹ್ವಾನ ನೀಡುವ ಮೂಲಕ, ಸಂಪ್ರದಾಯಿಕ ಉಡುಗೆ, ವಾದ್ಯಗೋಷ್ಠಿಯೊಂದಿಗೆ ಕರೆತಂದು ವಿಶೇಷ ಗೌರವದಿಂದ ಕಾಣುತ್ತಾರೆ. ಇದಕ್ಕೆ ನಮ್ಮ ಪೂರ್ವಜರು, ಗ್ರಾಮಸ್ಥರು ಹಾಗೂ ಮುಖಂಡರ ಸಹಕಾರವೇ ಕಾರಣ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರುಗಳು, ಮಹಿಳೆಯರು, ವೃದ್ದರು, ಮಕ್ಕಳು ಭಾಗವಹಿಸಿ ಸಂಪ್ರದಾಯ ಕಾರ್ಯಕ್ರಮಕ್ಕೆ ಮೆರಗು ಮೂಡಿಸಿದರು.
 

click me!