ವಟ ಸಾವಿತ್ರಿ ವ್ರತ ಆಚರಿಸಿ, ಶುಭ ಫಲ ನಿಮ್ಮದಾಗಿಸಿಕೊಳ್ಳಿ

By Suvarna NewsFirst Published Jun 10, 2021, 12:39 PM IST
Highlights

ವಟ ಸಾವಿತ್ರಿ ವ್ರತವನ್ನು ವಿವಾಹಿತ ಮಹಿಳೆಯರು ಪತಿಯ ಕ್ಷೇಮ ಮತ್ತು ದೀರ್ಘಾಯುಷ್ಯದ ಸಲುವಾಗಿ ಕೈಗೊಳ್ಳುವ ವ್ರತವಾಗಿದೆ. ಜೂನ್ 10ರಂದು ಈ ವ್ರತವನ್ನು ಆಚರಣೆ ಮಾಡಲಾಗುತ್ತದೆ. ಮಹಿಳೆಯರು ವ್ರತವನ್ನು ಆಚರಿಸಿ, ಆಲದ ಮರವನ್ನು ಪೂಜಿಸಿ, ಪ್ರದಕ್ಷಿಣೆ ಹಾಕಿ ಸೌಭಾಗ್ಯ ಸ್ಥಿರವಾಗಿರುವಂತೆ ಮಾಡೆಂದು ಪ್ರಾರ್ಥಿಸಿಕೊಳ್ಳುವ ಸಂಪ್ರದಾಯವಿದೆ.

ಹಿಂದೂ ಧರ್ಮದಲ್ಲಿ ಅನೇಕ ಹಬ್ಬ ಹರಿದಿನಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ವ್ರತ ಮತ್ತು ಉಪವಾಸಗಳ ಆಚರಣೆ ಸಹ ಶುಭಫಲವನ್ನು ತಂದುಕೊಡಲಿದೆ. ಪ್ರತಿ ಹಬ್ಬಗಳು ಮತ್ತು ವ್ರತಗಳಿಗೆ ಅದರದ್ದೇ ಆದ ಮಹತ್ವವಿರುತ್ತದೆ. ಹಾಗೆಯೇ ವಟ ಸಾವಿತ್ರಿ ವ್ರತ ಸಹ ಅಂಥದ್ದೊಂದು ಮಹತ್ವವನ್ನು ಹೊಂದಿದೆ. 

ಈ ಬಾರಿ ಇದೇ ಜೂನ್ 10ರಂದು ವಟ ಸಾವಿತ್ರಿ ವ್ರತವನ್ನು ಆಚರಿಸಲಾಗುತ್ತದೆ. ಅದೇ ದಿನ ಸೂರ್ಯಗ್ರಹಣವು ಸಂಭವಿಸಲಿದೆ. ಆದರೆ, ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಯಾವುದೇ ಆತಂಕವಿಲ್ಲದೆ ವ್ರತವನ್ನು ಆಚರಿಸಬಹುದಾಗಿದೆ. 

ಇದನ್ನು ಓದಿ: ಮನೆಯ ಸದಸ್ಯರೊಂದಿಗೆ ಭಿನ್ನಾಭಿಪ್ರಾಯವೇ? ಹಾಗಿದ್ದರೆ ಈ ಮೂರು ಅಭ್ಯಾಸಗಳ ಬಿಡಿ.. 

ಸೌಭಾಗ್ಯ ಸ್ಥಿರವಾಗಿರಲು ಮಾಡುವ ಪೂಜೆಯೇ ವಟ ಸಾವಿತ್ರಿ ವ್ರತವಾಗಿದೆ. ಇದನ್ನು ಜ್ಯೇಷ್ಠ ಮಾಸದ  ಪೂರ್ಣಿಮೆಯಂದು ಕರ್ನಾಟಕದಲ್ಲಿ ಆಚರಿಸಲಾಗುತ್ತದೆ. ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಮಹಾರಾಷ್ಟ್ರ, ಉತ್ತರ ಪ್ರದೇಶಗಳಲ್ಲಿ ಆಚರಿಸುತ್ತಾರೆ. ಈ ವ್ರತವನ್ನು ವಿವಾಹಿತ ಮಹಿಳೆಯರು ಪತಿಯ ಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಕೈಗೊಳ್ಳುತ್ತಾರೆ. ಪಾತಿವ್ರತ್ಯಕ್ಕೆ ಹೆಸರಾಗಿರುವ ಸತಿ ಸಾವಿತ್ರಿಯ ಪತಿವ್ರತಾ ಧರ್ಮ ಪಾಲನೆ ಮತ್ತು ಪತಿ ಸತ್ಯವಾನ್‌ನ ಪ್ರಾಣ ರಕ್ಷಣೆ ಮಾಡಿದ ದಿನವಾದ ಜ್ಯೇಷ್ಠ ಮಾಸದ ಅಮವಾಸ್ಯೆಯಂದು ಈ ವ್ರತವನ್ನು ಆಚರಿಸಲಾಗುತ್ತದೆ.

ವಟ ಪೂರ್ಣಿಮಾ ವ್ರತವನ್ನು ಆಚರಿಸುವ ವಿಧಾನ:
ವಟ ಪೂರ್ಣಿಮಾ ದಿನದಂದು ವಿವಾಹಿತ ಮಹಿಳೆಯರು ಪ್ರಾತಃಕಾಲದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ, ಶುಚಿರ್ಭೂತರಾಗಿ ಸಿದ್ಧರಾದ ನಂತರ ವ್ರತದ ಸಂಕಲ್ಪವನ್ನು ಕೈಗೊಳ್ಳುಬೇಕು. ಈ ದಿನ ಆಲದ ಮರವನ್ನು ಪೂಜಿಸುವ ಸಂಪ್ರದಾಯವಿದೆ. ಪುರಾಣಗಳಲ್ಲಿ ಉಲ್ಲೇಖಿಸಿದಂತೆ ಆಲದಮರದಲ್ಲಿ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರು ನೆಲೆಸಿರುತ್ತಾರೆ. ಸತ್ಯವಾನ್‌ನ ಶವವನ್ನು ಆಲದ ಮರದಡಿಯಲ್ಲಿ ಇಟ್ಟು ಕಾಯುವಂತೆ ಸಾವಿತ್ರಿ ಹೇಳಿರುವ ಕಾರಣ ಈ ದಿನ ಆಲದ ಮರವನ್ನು ಪೂಜಿಸುವ ರೂಢಿ ಇದೆ.

ಇದನ್ನು ಓದಿ: ಒಂದೇ ಮಾಸದಲ್ಲಿ ಎರಡು ಗ್ರಹಣ.. ವಿಶ್ವಕ್ಕೆ ಒಳಿತಲ್ಲ, ಭಾರತಕ್ಕೆ? 

ಶ್ರದ್ಧೆಯಿಂದ ಆಲದಮರಕ್ಕೆ ನೀರೆರೆದು, ಭಕ್ತಿಯಿಂದ ಪೂಜಿಸಿದ ನಂತರ ರಕ್ಷಾ ದಾರವನ್ನು ಮರಕ್ಕೆ ಕಟ್ಟುವುದು ನಂತರ ಏಳು ಪ್ರದಕ್ಷಿಣೆಗಳನ್ನು ಹಾಕಬೇಕು. ವಿಧಿ-ವಿಧಾನಗಳಿಂದ ಪೂಜೆ ಸಲ್ಲಿಸಿದ ನಂತರ ಸೌಭಾಗ್ಯ ಸ್ಥಿರವಾಗಿ ಇರುವಂತೆ ಮತ್ತು ಬೇಡಿಕೊಂಡು ಆಶೀರ್ವಾದವನ್ನು ಪಡೆಯಬೇಕು.
ಮಹಿಳೆಯರು ಸುಖ-ಸಮೃದ್ಧಿ ಮತ್ತು ಸೌಭಾಗ್ಯಕ್ಕಾಗಿ ಮಾಡುವ ಪೂಜೆ ಇದಾಗಿದೆ. ವಟ ಸಾವಿತ್ರಿ ಪೂಜೆಯನ್ನು ರೋಹಿಣಿ ನಕ್ಷತ್ರದಲ್ಲಿ ಆಚರಿಸುವುದು ಹೆಚ್ಚು ಶ್ರೇಷ್ಠವೆಂದು ಹೇಳಲಾಗುತ್ತದೆ. ಹಾಗಾಗಿ ಗುರುವಾರದ ಅಮಾವಾಸ್ಯೆಯಂದು ಬೆಳಗ್ಗೆ 10:45ರ ವರೆಗೆ ವೃಷಭದಲ್ಲಿ ಚಂದ್ರ ಮತ್ತು ರೋಹಿಣಿ ನಕ್ಷತ್ರವಿರುತ್ತದೆ. ಆ ಅವಧಿಯಲ್ಲಿ ಮುತ್ತೈದೆಯರು ಈ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುವುದಲ್ಲದೆ, ಸೌಭಾಗ್ಯ ಸ್ಥಿರವಾಗುತ್ತದೆ. ಅಷ್ಟೇ ಅಲ್ಲದೇ ಬೆಳಗ್ಗೆ 11:43ರ ತನಕವೂ ವಟ ಸಾವಿತ್ರಿ ವ್ರತ ಪೂಜೆಯನ್ನು ಮಾಡಿ, ವ್ರತ ಕತೆಯನ್ನು ಕೇಳಬಹುದಾಗಿದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರು ತುಂಬಾ ಸೆಲ್ಫಿಶ್‌, ನಿಮ್ಮ ಜೊತೆಗಿದ್ದಾರಾ ಅಂಥವರು? 

ವಟ ಸಾವಿತ್ರಿ ಕತೆ 
ಪುರಾಣದಲ್ಲಿ ಉಲ್ಲೇಖಿಸಿರುವ ಪ್ರಕಾರ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಿಂದ, ಅಮಾವಾಸ್ಯೆಯ ತನಕ ಮೂರು ದಿನಗಳ ಕಾಲ ವಟ ಸಾವಿತ್ರಿ ವ್ರತವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ವಟ ಪೂರ್ಣಿಮಾ ಅಂದರೆ ಹುಣ್ಣಿಮೆಯಂದು ಈ ವ್ರತವನ್ನು ಆಚರಿಸುವ ರೂಢಿ ಸಹ ಇದೆ. ಪತಿವ್ರತೆಯಾದ ಸಾವಿತ್ರಿಯ ಪತಿ ಸತ್ಯವಾನ್‌ನನ್ನು ಯಮನು ತನ್ನ ಪಾಶದಿಂದ ಪ್ರಾಣವನ್ನು ತೆಗೆಯಲು ಪ್ರಯತ್ನಿಸಿದ ದಿನ. ಆದರೆ, ಸತಿ ಸಾವಿತ್ರಿಯು ತನ್ನ ಪಾತಿವ್ರತ್ಯದ ಪ್ರಭಾವದಿಂದ ಯಮನಿಂದ ಪತಿಯ ಪ್ರಾಣವನ್ನು ವಾಪಸ್ ಪಡೆದು ಪಾತಿವ್ರತ್ಯದ ಶಕ್ತಿಯನ್ನು ಜಗತ್ತಿಗೆ ತಿಳಿಸುತ್ತಾಳೆ. ಪತಿವ್ರತಾ ಧರ್ಮವನ್ನು ಶ್ರದ್ಧೆಯಿಂದ ಪಾಲಿಸಿ ಸಫಲತೆಯನ್ನು ಕಂಡ ಸತಿ ಸಾವಿತ್ರಿಯ ರೂಪದಲ್ಲಿ ಸೌಭಾಗ್ಯವನ್ನು, ಮುತ್ತೈದೆತನವನ್ನು ಸ್ಥಿರವಾಗಿರಿಸೆಂದು ದೇವರಿಗೆ ಸಲ್ಲಿಸುವ ಪೂಜೆ ಇದಾಗಿರುತ್ತದೆ.

 

click me!