ಕಲಬುರಗಿ: ಶರಣಬಸವೇಶ್ವರರ ಜಾತ್ರೆ, ಮಹಾ ದಾಸೋಹಿಯ ತೇರನ್ನೆಳೆದ ಭಕ್ತರು..!

By Kannadaprabha NewsFirst Published Mar 31, 2024, 7:01 AM IST
Highlights

ನಿಗದಿತ ಸಮಯಕ್ಕೆ ಶರಣಬಸವೇಶ್ವರ ಮೂರ್ತಿಯನ್ನು ಹೊತ್ತ ಅಲಂಕೃತ ರಥವನ್ನು ದೇಗುಲದ ಆವರಣದಲ್ಲಿ ಎಳೆಯಲಾಯಿತು. ರಥೋತ್ಸವದ ನಿಮಿತ್ಯ ಖಾರಿಕ್‌, ಉತ್ತತ್ತಿ, ಬಾಳೆಹಣ್ಣಿನ ಕಟ್ಟುಗಳನ್ನು ರಥಕ್ಕೆ ಎಸೆಯುತ್ತ, ಶರಣರನ್ನು ಸ್ಮರಿಸುತ್ತ ಸೇರಿದ್ದ ಸಾವಿರಾರು ಭಕ್ತರು ನಮನ ಸಲ್ಲಿಸಿ ಪುನೀತರಾದರು.

ಕಲಬುರಗಿ(ಮಾ.31): ಮಹಾ ದಾಸೋಹಿ, 18ನೇ ಶತಮಾನದ ಸಂತ, ಸಮಾಜ ಸುಧಾರಕ ಶರಣಬಸವೇಶ್ವರರ 202ನೇ ಪುಣ್ಯಸ್ಮರಣೆಯ ಅಂಗವಾಗಿ ಶನಿವಾರ ಇಳಿ ಹೊತ್ತಲ್ಲಿ ಕಲಬುರಗಿಯಲ್ಲಿ ನಡೆದ ಐತಿಹಾಸಿಕ ಶರಣಬಸವೇಶ್ವರರ ಮಹಾ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಕಳೆದೊಂದು ವಾರದಿಂದ ಕಲಬುರಗಿಯನ್ನು ಕಾಡುತ್ತಿರುವ ಉರಿ ಬಿಸಿಲಿನ ತಾಪ, ಉಷ್ಣ ಅಲೆ ಶನಿವಾರವೂ ಇತ್ತಾದರೂ ಇದನ್ನೆಲ್ಲ ಲೆಕ್ಕಿಸದೆ ಶರಣರ ದಾಸೋಹ ಅಂಗಳದಲ್ಲಿ ಸೇರಿದ್ದ ಲಕ್ಷಾಂತರ ಭಕ್ತರು ಸಂಜೆ ಬರೋಬ್ಬರಿ 6 ಗಂಟೆಗೆ ಸೂರ್ಯದೇವ ಇನ್ನೇನು ತನ್ನ ಪಡುವಣದ ಪಯಣ ಮುಂದುವರಿಸುತ್ತಿದ್ದಂತೆಯೇ ಶಂಖನಾದೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯ್ತು.

ನಿಗದಿತ ಸಮಯಕ್ಕೆ ಶರಣಬಸವೇಶ್ವರ ಮೂರ್ತಿಯನ್ನು ಹೊತ್ತ ಅಲಂಕೃತ ರಥವನ್ನು ದೇಗುಲದ ಆವರಣದಲ್ಲಿ ಎಳೆಯಲಾಯಿತು. ರಥೋತ್ಸವದ ನಿಮಿತ್ಯ ಖಾರಿಕ್‌, ಉತ್ತತ್ತಿ, ಬಾಳೆಹಣ್ಣಿನ ಕಟ್ಟುಗಳನ್ನು ರಥಕ್ಕೆ ಎಸೆಯುತ್ತ, ಶರಣರನ್ನು ಸ್ಮರಿಸುತ್ತ ಸೇರಿದ್ದ ಸಾವಿರಾರು ಭಕ್ತರು ನಮನ ಸಲ್ಲಿಸಿ ಪುನೀತರಾದರು.

ಲೇಡಿ ಪೈಲಟ್‌ಗೆ ನಮಸ್ಕರಿಸಿ ಅಯೋಧ್ಯೆಗೆ ಕರೆದೊಯ್ಯುವ ಲಕ್ಷ್ಮಿ ಎಂದ ಅಜ್ಜಿ, ವಿಡಿಯೋ ವೈರಲ್!

ಶರಣಬಸವೇಶ್ವರ ಮಹಾರಾಜ್‌ ಕೀ ಜೈ... ಎಂಬ ಲಕ್ಷಾಂತರ ಕಂಠಗಳ ಜಯಘೋಷ ಮೊಳಗುತ್ತಿದ್ದಂತಯೇ ಎತ್ತರದ ಪೀಠದ ಮೇಲೆ ಶರಣರು ಬಳಸುತ್ತಿದ್ದ ಪ್ರಸಾದ ಬಟ್ಟಲು, ಲಿಂಗ ಸಜ್ಜಿಕೆಗಳನ್ನು ಸೇರಿದ್ದ ಭಕ್ತರಿಗೆ ಪ್ರದರ್ಶಿಸಿವ 9ನೇ ಪೀಠಾಧಿಪತಿ ಚಿ. ದೊಡ್ಡಪ್ಪ ಅವರು ಶಂಖನಾದ ಮಾಡಿದರು. 8 ನೇ ಪೀಠಾಧಿಪತಿಗಳಾದ ಡಾ. ಶರಣಬಸವಪ್ಪ ಅಪ್ಪಾಜಿ, ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಸೇರಿದಂತೆ ದಾಸೋಹ ಮನೆಯತನದ ಪರಿವಾರದ ಸದಸ್ಯರೆಲ್ಲರೂ ಹಾಜರಿದ್ದು ಶರಣರನ್ನು ಮನದಲ್ಲೇ ನಮಿಸಿ ಪುಲಕಿತರಾದರು.

ಬೆಳಗ್ಗೆಯಿಂದಲೇ ಶರಣರ ಅಂಗಳಕ್ಕೆ ಹರಿದು ಬಂದ ಭಕ್ತರು:

ಇಂದು ಬೆಳಗಿನ ಜಾವದಿಂದಲೇ ಶರಣಬಸವೇಶ್ವರರ ದೇಗುಲದ ಆವರಣದಲ್ಲಿ ಭಕ್ತರು ತಂಡೋಪತಂಡವಾಗಿ ಸಾಗುತ್ತಿದ್ದರು ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಮನೆಯಿಂದ ಬರಿಗಾಲಿನಲ್ಲಿ ‘ನೇವೈದ್ಯ’ ದೊಂದಿಗೆ ದೇಗುಲಕ್ಕೆ ತೆರಳುವ ಮೂಲಕ ಶರಣಬಸವೇಶ್ವರರಿಗೆ ನಮನ ಮತ್ತು ನೇವೈದ್ಯವನ್ನು ಅರ್ಪಿಸಲು ದೇಗುಲದ ಮುಂದೆ ಸರತಿಯಲ್ಲಿದ್ದರು.

ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ, ಅವರ ಪುತ್ರ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರು ರಥೋತ್ಸವದ ಮೊದಲು ಹಾಗೂ ನಂತರದ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರು ಅಲಂಕರಿಸಿದ ರಥಕ್ಕೆ ಪ್ರದಕ್ಷಿಣೆ ಹಾಕಿ ರಥಕ್ಕೆ ಪೂಜೆ ಸಲ್ಲಿಸಿ ವಿಶೇಷವಾದ ನೇವೈದ್ಯ ಸಮರ್ಪಿಸಿದರು.

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದೇಗುಲ ಸಂಕೀರ್ಣ ಸುತ್ತೆಲ್ಲ ಜನಜಾತ್ರೆಯೇ ಸೇರಿತ್ತು. ಡಾ.ಅಪ್ಪಾಜಿ ಮತ್ತು ಚಿರಂಜೀವಿ ದೊಡ್ಡಪ್ಪ ಅಪ್ಪ ಶಂಖ ಊದುವ ಮೂಲಕ ಭಕ್ತರಿಗೆ ರಥ ಎಳೆಯುವಂತೆ ಸೂಚಿಸಿದರು. ಸಾಂಪ್ರದಾಯಿಕವಾಗಿ ಪೀಠಾರೋಹಣ ಎಂದು ಕರೆಯಲ್ಪಡುವ ಪೀಠದ ಉಸ್ತುವಾರಿಯನ್ನು ಸಮಸ್ಥಾನದ ಪೀಠಾಧಿಪತಿಗಳು ಔಪಚಾರಿಕವಾಗಿ ವಹಿಸಿಕೊಂಡರು.

ಪ್ರಸಾದ ಬಟ್ಟಲು (ಸಂತ ಶರಣಬಸವೇಶ್ವರರು ತಮ್ಮ ಆಹಾರವನ್ನು ತೆಗೆದುಕೊಂಡ ಬೆಳ್ಳಿಯ ತಟ್ಟೆ) ಮತ್ತು ಲಿಂಗ ಸಜ್ಜಿಕೆ (ಸಂತರು ಧರಿಸಿದ್ದ ಬೆಳ್ಳಿಯ ಪೆಟ್ಟಿಗೆಯಲ್ಲಿ ಇರಿಸಲಾದ ಪವಿತ್ರಲಿಂಗದ ವಿಗ್ರಹ) ದೇಗುಲದಲ್ಲಿ ನೆರೆದಿದ್ದ ಸಾವಿರಾರು ಭಕ್ತರಿಗೆ ಪ್ರದರ್ಶಿಸಿದಾಗ ಭಕ್ತರೆಲ್ಲರು ಇದನ್ನು ಕಣ್ತುಂಬಿಕೊಂಡರು.

ಇಡೀ ಕಲಬುರಗಿ ನಗರ ಪುಷ್ಪಗಳಿಂದ ಸಿಂಗರಿಸಿಕೊಂಡು ಹಬ್ಬದಂತೆ ಕಂಗೊಳಿಸುತ್ತಿತ್ತು, ಸಂತ ಶರಣಬಸವೇಶ್ವರರ ಬೋಧನೆ ಮತ್ತು ಆಚರಣೆಯ ದಾಸೋಹದ ಸಂಪ್ರದಾಯಗಳಿಗೆ ಅನುಗುಣವಾಗಿ, ಇಡೀ ನಗರವು ದಾಸೋಹ ಮಹಾಮನೆಯಾಗಿ ಮಾರ್ಪಟ್ಟಿತ್ತು. ಶರಣಬಸವೇಶ್ವರ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಉಚಿತ ಅನ್ನ-ನೀರು ನೀಡುವುದಕ್ಕಾಗಿ ಜನರು ಎಲ್ಲಾ ರಸ್ತೆಗಳಲ್ಲಿ ಪೆಂಡಾಲ್ ಹಾಕಿದ್ದರು ಮತ್ತು ವಿಶೇಷ ಮಳಿಗೆಗಳು ಕಂಗೊಳಿಸುತ್ತಿದ್ದವು.

ಶರಣಬಸವೇಶ್ವರರು ನಿಸ್ವಾರ್ಥ ಸೇವೆಗೆ ಮಾದರಿಯಾದವರು ಮತ್ತು ತಮ್ಮ ಜೀವಿತಾವಧಿಯಲ್ಲಿ ತಮ್ಮ ಭಕ್ತರಿಗೆ ಭರವಸೆ ಮತ್ತು ಮೋಕ್ಷದ ದಾರಿದೀಪವಾಗಿದ್ದವರು. ರಾಯಚೂರು, ವಿಜಯಪುರ, ಬೀದರ್ ಸೇರಿದಂತೆ ನೆರೆಯ ಜಿಲ್ಲೆಗಳು ಮತ್ತು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಗಡಿ ಜಿಲ್ಲೆಗಳು ಸೇರಿದಂತೆ ದೂರದ ತಮ್ಮ ತಮ್ಮ ಗ್ರಾಮಗಳಿಂದ ಮೈಲುಗಟ್ಟಲೆ ನಡೆದುಕೊಂಡು ಬಂದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು.
ಹಸುವಿನ ಹಾಲಿನಿಂದ ತಯಾರಿಸಿದ ತಾಜಾ ಮೊಸರು ಮತ್ತು ಹೊಸದಾಗಿ ಕೊಯ್ಲು ಮಾಡಿದ ಜೋಳದಿಂದ ತಯಾರಿಸಿದ ವಿಶೇಷ ಭಕ್ಷ್ಯವಾದ ‘ಹುಳಿ ಬಾನ’ ‘ನೇವೈದ್ಯ’ ಸೇರಿದಂತೆ ಎಲ್ಲಾ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸಿ ತಯಾರಿಸಲಾದ ಈ ಖಾದ್ಯವನ್ನು ವಿಶೇಷವಾಗಿ ನೇಮಿಸಿದ ವ್ಯಕ್ತಿಯಿಂದ ತಲೆಯ ಮೇಲಿಟ್ಟುಕೊಂಡು ರಥದ ಕಡೆಗೆ ಒಯ್ಯಲಾಯ್ತು. ಹುಳಿ ಬಾನವನ್ನು ತಲೆಯ ಮೇಲೆ ಹೊತ್ತ ಈ ವ್ಯಕ್ತಿಯು ರಥವನ್ನು ಎಳೆಯುವ ಮೊದಲು ಮತ್ತು ರಥವು ಅದರ ಮೂಲ ಸ್ಥಳಕ್ಕೆ ಹಿಂದಿರುಗಿದ ನಂತರ ಐದು ಬಾರಿ ರಥವನ್ನು ಪ್ರದಕ್ಷಿಣೆ ಹಾಕುವುದು ವಾಡಿಕೆ.

ಮಧ್ಯಾಹ್ನದ ಹೊತ್ತಿಗೆ ದೇವಸ್ಥಾನಕ್ಕೆ ಏಕೆ ಹೋಗಬಾರದು ಗೊತ್ತಾ?

ರಥೋತ್ಸವದವರೆಗೂ ಕಲಬುರಗಿ ನಗರದಲ್ಲಿ ಶರಣರ ಭಕ್ತರು ಉಪವಾಸವಿರುತ್ತಾರೆ, ನಂತರವಷ್ಟೇ ಪ್ರಸಾದ ಸೇವಿಸುವುದೂ ಕೂಡಾ ಇಲ್ಲಿನ ಪವಿತ್ರ ಆಚರಣೆಯಾಗಿದೆ. ಉಚ್ಛ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಅಪ್ಪಾಜಿಯವರ ಎಲ್ಲಾ ಕುಟುಂಬ ಸದಸ್ಯರು, ಕಲಬುರಗಿ ಸಂಸದ ಡಾ. ಉಮೇಶ ಜಾಧವ, ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮ ಪ್ರಭು ಪಾಟೀಲ, ಬಸವಕಲ್ಯಾಣ ಶಾಸಕ ಶರಣು ಸಲಗರ ಹಾಗೂ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಸೇರಿದಂತೆ ಇತರ ಪ್ರಮುಖರು ಶರಣಬಸವೇಶ್ವರರ 202ನೇ ರಥೋತ್ಸವಕ್ಕೆ ಸಾಕ್ಷಿಯಾದರು.

ಬಿಗಿ ಬಂದೋಬಸ್ತ್‌:

ಶರಣರ ಉಚ್ಚಾಯಿ ಸಂದರ್ಭದಲ್ಲಿಯೇ ನಿನ್ನೆಯಷ್ಟೇ ನಡೆದಿದ್ದ ಅಹಿತಕರ ಘಟನೆಯ ಕಹಿ ನೆನಪು ಇನ್ನೂ ಎಲ್ಲರ ಮನದಲ್ಲಿತ್ತು, ಈ ಹಿನ್ನೆಲೆಯಲ್ಲಿ ಅಲಂಕರಿಸಿದ ರಥವನ್ನು ಎಳೆಯುವಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸರು ಬ್ಯಾರಿಕೇಡ್‍ಗಳನ್ನು ಹಾಕಿದ್ದರು. ಪೊಲೀಸರು ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಜನತೆ ಬ್ಯಾರಿಕೇಡ್‍ಗಳನ್ನು ದಾಟಿ ನಿಷೇಧಿತ ಪ್ರದೇಶಕ್ಕೆ ಪ್ರವೇಶಿಸದಂತೆ ತಡೆಯಲಾಯಿತು. ಈ ವರ್ಷ ರಥೋತ್ಸವ ಮತ್ತು ವಾರ್ಷಿಕ ಯಾತ್ರೆಗೆ ಜನಸಂದಣಿ ಅಭೂತಪೂರ್ವವಾಗಿತ್ತು.

click me!