ಈ ರಾಶಿಗಳಿಗೆ ಜೀವನಪೂರ್ತಿ ಶನಿದೇವರ ಕೃಪೆ ಇರುತ್ತದೆ!

By Suvarna NewsFirst Published Jul 7, 2020, 5:08 PM IST
Highlights

ಶನಿದೇವರ ಕೃಪೆಯನ್ನು ಪಡೆಯಲು ತುಂಬಾ ಕಷ್ಟಪಡಬೇಕಾಗುತ್ತದೆ. ಜನರ ಕರ್ಮಕ್ಕೆ ಅನುಸಾರ ಫಲವನ್ನು ನೀಡುವವ ಶನಿದೇವ. ಎಲ್ಲರಿಗೂ ಕಷ್ಟಗಳನ್ನು ನೀಡುತ್ತಾನೆಂದಲ್ಲ, ಶನಿಗ್ರಹದಿಂದ ಒಳಿತಾಗಿದ್ದೂ ಉಂಟು. ಶನಿಗೆ ಪ್ರಿಯವಾದ ಈ ರಾಶಿಯವರಿಗೆ ಶನಿದೇವನ ಕೃಪೆ ಸದಾ ಇರುವುದಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಯಾವ್ಯಾವ ರಾಶಿಯವರಿಗಿದೆ ಈ ಕೃಪೆ ಸಿಗಲಿದೆ ತಿಳಿಯೋಣ ಬನ್ನಿ.

ಶನಿ ದೇವರೆಂದರೆ ಸರ್ವರಿಗೂ ಭಯದೊಂದಿಗೆ ಭಕ್ತಿಯೂ ಇರುತ್ತದೆ. ಅಧರ್ಮ, ಅನಾಚಾರಗಳು ಇದ್ದಲ್ಲಿ ಶನಿ ಬೇಗ ಬರುತ್ತಾನೆಂದು ಹೇಳುತ್ತಾರೆ. ಆದರೆ, ವಿಶೇಷ ಸಂಗತಿಯೆಂದರೆ ಶನಿ ದೇವರು ಕಷ್ಟಗಳನ್ನು ನೀಡುವಂತೆಯೇ, ಸುಖವನ್ನೂ ನೀಡುತ್ತಾನೆ. ಕೆಲವರು ಶನಿದೆಸೆ ಇದ್ದಾಗ ಸಂಪತ್ತು, ಅಭಿವೃದ್ಧಿಯನ್ನು ಪಡೆದ ನಿದರ್ಶನಗಳಿವೆ. ಹೀಗಾಗಿ ಶನಿಯ ಪ್ರೀತಿಯ ರಾಶಿಗಳೂ ಇವೆ ಎಂದರೆ ನೀವು ನಂಬಲೇಬೇಕು.

ಶನಿಯ ಸಾಡೇಸಾಥ್ ಅಥವಾ ಅರ್ಧಾಷ್ಟಮಗಳು ನಡೆಯುತ್ತಿರುವ ಸಂದರ್ಭದಲ್ಲಿ ಹೆಚ್ಚು ಸಮಸ್ಯೆಗೊಳಪಟ್ಟವರು ಹಲವರಿದ್ದಾರೆ. ಶನಿಯ ಅಶುಭ ದೃಷ್ಟಿ ವ್ಯಕ್ತಿಯ ಮೇಲೆ ಬಿದ್ದಾಗ ಆಗುವ ಕೆಲಸವೂ ಆಗುವುದಿಲ್ಲ, ಇಂಥ ಸಂದರ್ಭಗಳಲ್ಲಿ ವ್ಯಕ್ತಿಯ ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿ ಅಥವಾ ಸ್ಥಿತಿಯಲ್ಲಿರುವುದರ ಜೊತೆಗೆ ಪಾಪ ಕರ್ಮಗಳು ಕಾರಣವಾಗುತ್ತದೆ. ಜಾತಕದಲ್ಲಿ ಶನಿಯ ಅಶುಭ ಪ್ರಭಾವವಿದ್ದು, ವ್ಯಕ್ತಿಯು ಪುಣ್ಯದ ಕೆಲಸಗಳನ್ನು ಮಾಡಿದ್ದರೆ ಅಂಥವರ ಮೇಲೆ ಶನಿಯ ಪ್ರಭಾವ ಬೀಳುವುದಿಲ್ಲ. 

ಇದನ್ನು ಓದಿ: ಜುಲೈ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ! 

ಜ್ಯೋತಿಷ್ಯದಲ್ಲಿ ಹೇಳುವಂತೆ ಅಶುಭ ಗ್ರಹಗಳಲ್ಲಿ ಶನಿಗ್ರಹವು ಒಂದಾಗಿದೆ. ನವಗ್ರಹಗಳಲ್ಲಿ ಶನಿಗೆ ಏಳನೇ ಸ್ಥಾನವಿದೆ. ಗುರು, ಶುಕ್ರ, ರಾಹು ಮತ್ತು ಬುಧ ಶನಿಯ ಮಿತ್ರ ಗ್ರಹಗಳಾಗಿವೆ. ಹಾಗೆಯೇ ಮಿಥುನ, ವೃಷಭ, ಕನ್ಯಾ ಮತ್ತು ತುಲಾ ಮಿತ್ರರಾಶಿಗಳಾಗಿವೆ. ಪುಷ್ಯ, ಅನುರಾಧ ಮತ್ತು ಉತ್ತರಾಭಾದ್ರಾ ಶನಿಗೆ ಪ್ರಿಯವಾದ ನಕ್ಷತ್ರವೆಂದು ಹೇಳಲಾಗುತ್ತದೆ. ಶನಿಯು ಒಂದು ರಾಶಿಯಲ್ಲಿ ಮೂವತ್ತು ತಿಂಗಳು ಇರುತ್ತಾನೆ. ಏಕಾಂತ, ಗಂಭೀರ, ದೂರದೃಷ್ಟಿ, ತ್ಯಾಗ-ತಪಸ್ಸು, ನ್ಯಾಯ ಇವು ಶನಿಯ ಗುಣಸ್ವಭಾವಗಳು. 



ಕರ್ಮಫಲದಾತ ಎಂಬಂತೆ ಕರ್ಮಕ್ಕೆ ತಕ್ಕ ಫಲವನ್ನು ನೀಡುವವನು ಶನಿ. ನ್ಯಾಯ, ಅನ್ಯಾಯಗಳಿಗೆ ತಕ್ಕಂತೆ, ನ್ಯಾಯಯುತವಾಗಿ ಧರ್ಮದ ಮಾರ್ಗದಲ್ಲಿ ನಡೆಯುವವರಿಗೆ ಒಳಿಯನ್ನೇ ಮಾಡುತ್ತಾನೆ. ಹಾಗೇ ಅನ್ಯಾಯದ ಹಾದಿ ತುಳಿದವರಿಗೆ ತಕ್ಕ ಪಾಠವನ್ನು ಕಲಿಸುತ್ತಾನೆ ಶನಿದೇವರು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಗಳಿಗೆ ಶನಿದೇವರ ಕೃಪೆ ಯಾವಾಗಲೂ ಇರುತ್ತದೆ. ಶನಿಯು ಮಿತ್ರ ರಾಶಿಯ ಜಾತಕದವರ ಮೇಲೆ ಸದಾ ಕೃಪಾದೃಷ್ಟಿ ಇಟ್ಟಿರುತ್ತಾನೆ. ಹಾಗೇ ಈ ಮೂರು ರಾಶಿಯು ಶನಿಗೆ ಅತ್ಯಂತ ಪ್ರಿಯವಾದವು, ಇದಕ್ಕೆ ಈ ರಾಶಿಯ ಜಾತಕದ ಉತ್ತಮ ಕರ್ಮಗಳೇ ಕಾರಣವೆಂದು ಹೇಳಲಾಗುತ್ತದೆ. ಅವು ಯಾವುವು ನೋಡೋಣ. 

ತುಲಾ ರಾಶಿ
ಶನಿದೇವರಿಗೆ ಪ್ರಿಯವಾದ ರಾಶಿಗಳಲ್ಲಿ ತುಲಾ ರಾಶಿಯೂ ಒಂದು. ಈ ರಾಶಿಯ ಅಧಿಪತಿ ಶುಕ್ರನಾಗಿದ್ದು, ಈ ರಾಶಿಯವರು ಪರಿಶ್ರಮಿಗಳು, ಪ್ರಾಮಾಣಿಕ ಮತ್ತು ಪ್ರತಿಭಾವಂತರಾಗಿರುತ್ತಾರೆ. ಈ ವ್ಯಕ್ತಿಗಳು ಪರಿಶ್ರಮದಿಂದ ಕೆಲಸ ಮಾಡುವುದಲ್ಲದೇ, ಪ್ರಾಮಾಣಿಕತೆಯಿಂದಿರುವ ಕಾರಣ ಶನಿದೇವರು ಇವರ ಮೇಲೆ ಕೃಪಾದೃಷ್ಟಿಯನ್ನು ನೆಟ್ಟಿರುತ್ತಾನೆ. ಶುಕ್ರನ ಪ್ರಭಾವದಿಂದ ಸಹ ಈ ರಾಶಿಯವರು ಸುಖ-ಸಂತೋಷಗಳನ್ನು ಹೊಂದಿರುತ್ತಾರೆ.

ಇದನ್ನು ಓದಿ: ಗಂಡ-ಹೆಂಡತಿ ಸದಾ ಜಗಳವಾಡುತ್ತಿದ್ದರೆ ದಾರಿದ್ರ್ಯ ಗ್ಯಾರಂಟಿ.....

ಕುಂಭ ರಾಶಿ
ಕುಂಭ ರಾಶಿಯ ಅಧಿಪತಿ ಶನಿದೇವ. ಹಾಗಾಗಿ ಈ ರಾಶಿಯವರ ಮೇಲೆ ಶನಿಯ ವಿಶೇಷ ಕೃಪೆ ಇರುತ್ತದೆ. ಅಷ್ಟೇ ಅಲ್ಲದೆ ಈ ರಾಶಿಯ ವ್ಯಕ್ತಿಗಳ ಸಹಾಯಕ ಗುಣ ಶನಿದೇವರು ಪ್ರಸನ್ನಗೊಳ್ಳಲು ಕಾರಣವಾಗಿದೆ. ಶನಿದೆಸೆ ನಡೆಯುವ ಸಂದರ್ಭದಲ್ಲಿ ಈ ರಾಶಿಯವರು ಹೆಚ್ಚು ಒಳಿತನ್ನು ಕಾಣುತ್ತಾರೆ.

ಮಕರ ರಾಶಿ
ಶನಿಯು ಮಕರ ರಾಶಿಯ ಅಧಿಪತಿ. ಹಾಗಾಗಿ ಮಕರ ರಾಶಿಯವರ ಮೇಲೆ ಕೃಪಾ ದೃಷ್ಟಿ ಸಹಜವಾಗಿ ಇರುತ್ತದೆ. ಈ ಕಾರಣದಿಂದ ಈ ರಾಶಿಯವರಿಗೆ ಜೀವನದಲ್ಲಿ ಸಕಲ ಸುಖಗಳು ಪ್ರಾಪ್ತವಾಗುತ್ತದೆ. ಶನಿದೇವರ ಕೃಪೆಯಿಂದ ಇವರ ಎಲ್ಲ ಕೆಲಸಗಳು ಅಡ್ಡಿ-ಆತಂಕಗಳಿಲ್ಲದೆ ಪೂರ್ಣಗೊಳ್ಳುತ್ತವೆ. ಹಾಗಾಗಿ ಮಕರ ರಾಶಿಯ ಜಾತಕದವರು ಭಾಗ್ಯಶಾಲಿಗಳೆಂದು ಹೇಳಲಾಗುತ್ತದೆ.

ಇದನ್ನು ಓದಿ: ಚಾತುರ್ಮಾಸದಲ್ಲಿ ವಿಶೇಷ ಪುಣ್ಯಫಲ ಪಡೆಯಲು ಹೀಗೆ ಮಾಡಿ!

ಉಳಿದ ರಾಶಿಯವರು ಏನು ಮಾಡಬಹುದು?
ಹಾಗಂತ ಉಳಿದ ರಾಶಿಯವರಿಗೇನು ಶನಿಯಿಂದ ಒಳ್ಳೆಯದಾಗುವುದಿಲ್ಲವೆಂದೇನಲ್ಲ. ಅವರಿಗೂ ಅವರವರ ಜಾತಕಫಲಗಳ ಮೇಲೆ ಶನಿಯ ಪ್ರಭಾವ ಇದ್ದೇ ಇರುತ್ತದೆ. ಇನ್ನು ಶನಿಯ ದಿವ್ಯದೃಷ್ಟಿ ನಿಮ್ಮ ಮೇಲೂ ಬೀಳಬೇಕು. ಶನಿಮಹಾತ್ಮನಿಂದ ಒಳ್ಳೆಯದನ್ನು ಮಾಡಿಕೊಳ್ಳಬೇಕೆಂದಿದ್ದಲ್ಲಿ ಈ ಮಂತ್ರವನ್ನು ನೀವು ಜಪಿಸಿದರೂ ಸಾಕು. ಹಾಗಂತ ತುಲಾ, ಕುಂಭ ಹಾಗೂ ಮಕರ ರಾಶಿಯವರೂ ಇದನ್ನು ಜಪಿಸಿದರೆ ಇನ್ನೂ ಶುಭಫಲ ಸಿಗಲಿದೆ.

ಆ ಮಂತ್ರದ ಸಾಲುಗಳು ಹೀಗಿವೆ...
ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ/ಛಾಯಾ ಮಾರ್ತಾಂಡ ಸಂಭೂಂತಂ ತಂ ನಮಾಮಿ ಶನೈಶ್ಚರಮ್//
ಶನಿಯ ಈ ಮಂತ್ರವನ್ನು ಜಪಿಸುವುದರಿಂದ ಶನಿಯ ಅಶುಭ ಪ್ರಭಾವವನ್ನು ತಗ್ಗಿಸಬಹುದಾಗಿದೆ. ಶನಿ ಚಾಲೀಸಾ ಪಠಿಸುವುದರಿಂದ ಕಷ್ಟಗಳು ನಿವಾರಣೆಯಾಗುತ್ತವೆ ಮತ್ತು ಭಕ್ತಿ, ಶ್ರದ್ಧೆಯಿಂದ ಶನಿಯ ಯಾವುದಾದರೂ ಮಂತ್ರವನ್ನು ಜಪ ಮಾಡುವುದರಿಂದ ಒಳಿತಾಗುತ್ತದೆ. 

click me!