Mahashivratri 2023 : ಹಬ್ಬದ ದಿನ ಶಿವನನ್ನು ಪೂಜಿಸಿದರೆ ಶಾಂತಗೊಳ್ಳುವುದು ಈ ಗ್ರಹ

By Suvarna NewsFirst Published Feb 8, 2023, 4:38 PM IST
Highlights

ಶಿವನ ಭಕ್ತರಿಗೆ ಶಿವರಾತ್ರಿ ವಿಶೇಷವಾದದ್ದು. ಜಾಗರಣೆ ಮಾಡ್ತಾ, ಶಿವನ ಪೂಜೆ ಮಾಡ್ತಾ ಭಕ್ತರು ಶಿವನ ಆಶೀರ್ವಾದ ಪಡೆಯುತ್ತಾರೆ. ಈ ದಿನ ಕೆಲ ಕೆಲಸಗಳನ್ನು ಮಾಡಿದ್ರೆ ಗ್ರಹ ದೋಷಗಳು ಕೂಡ ನಿವಾರಣೆಯಾಗುತ್ತವೆ. 
 

ಶಿವ ಶಿವ ಅಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ ಎಂಬಂತೆ ಶಿವನ ಪೂಜೆಯಿಂದ ಎಷ್ಟೋ ಜನ್ಮದ ಪಾಪಗಳು ಕಳೆದು ಪುಣ್ಯ ಪ್ರಾಪ್ತಿಯಾಗುತ್ತೆ. ದೇವತೆಗಳು, ರಾಕ್ಷಸರು ಸೇರಿದಂತೆ ಅನೇಕರು ಶಿವನಿಂದ ವರಪಡೆದಿದ್ದಾರೆ. ಭಕ್ತಿಯಿಂದ ಪೂಜಿಸಿದ ಎಲ್ಲರಿಗೂ ಶಿವ ವರನೀಡುತ್ತಾನೆ. ಸೃಷ್ಟಿಯ ಹುಟ್ಟು ಮತ್ತು ನಾಶ ಎರಡಕ್ಕೂ ಶಿವನೇ ಕಾರಣ. ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ, ಮಹೇಶ್ವರ ಅಂದರೆ ಶಿವನನ್ನು ವಿನಾಶದ ಅಧಿಪತಿ ಎಂದು ಹೇಳಲಾಗುತ್ತದೆ. 

ಈ ವರ್ಷ ಫೆಬ್ರವರಿ (February) 18ರಂದು ಮಹಾಶಿವರಾತ್ರಿ (Shivratri) ಎಲ್ಲೆಡೆ ನಡೆಯಲಿದೆ. ಶಿವನ ಪೂಜೆಯಿಂದ ನಾಲ್ಕು ಗ್ರಹ (Planet) ಗಳ ದೋಷದಿಂದ ಮುಕ್ತಿ ಪಡೆಯಬಹುದು. ಶಿವನ ಪೂಜೆಯನ್ನು ಹೇಗೆ ಮಾಡಬೇಕು, ಶಿವಪೂಜೆಯಿಂದ ಯಾವ ಯಾವ ಗ್ರಹದೋಷಗಳು ನಿವಾರಣೆಯಾಗುತ್ತವೆ ಎಂಬುದನ್ನು ತಿಳಿಯೋಣ.

ರಾಹು (Rahu) ದೋಷ :  ಜಾತಕದಲ್ಲಿ ರಾಹು ಪೀಡೆಯಿಂದ ವ್ಯಕ್ತಿಗೆ ಹೆಜ್ಜೆ ಹೆಜ್ಜೆಗೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ರಾಹುವಿನ ದೋಷದಿಂದ ಕೆಲವರು ಸಾವಿನಂತಹ ಕಷ್ಟಗಳನ್ನು ಕೂಡ ಎದುರಿಸಬೇಕಾಗಿ ಬರುತ್ತದೆ. ಶಾಸ್ತ್ರಗಳ ಪ್ರಕಾರ, ರಾಹುವಿನಿಂದ ಬರುವ ಕಷ್ಟಗಳು ಶಿವನನ್ನು ಪೂಜಿಸುವುದರಿಂದ ಶೀಘ್ರವೇ ದೂರವಾಗುತ್ತದೆ. ಮಹಾಶಿವರಾತ್ರಿಯಂದು ದೂರ್ವೆ ಮತ್ತು ದರ್ಬೆಯನ್ನು ನೀರಿಗೆ ಹಾಕಿ ಅದರಿಂದ ಶಿವನಿಗೆ ಅಭಿಷೇಕ ಮಾಡಬೇಕು. ಹೀಗೆ ಮಾಡುವುದರಿಂದ ರಾಹುವಿನ ಕೆಟ್ಟ ಪ್ರಭಾವವು ವ್ಯಕ್ತಿಯ ಮೇಲಾಗುವುದಿಲ್ಲ. ವ್ಯಕ್ತಿಯ ಜಾತಕದಲ್ಲಿ ರಾಹುವಿನ ಮಹಾದೆಸೆ ನಡೆಯುತ್ತಿದ್ದರೆ ಶಿವನ ಪಂಚಾಕ್ಷರಿ ಮಂತ್ರದ 11 ಮಾಲೆಗಳನ್ನು ಪಠಿಸಬೇಕು. ಇದರಿಂದ ಜೀವನದಲ್ಲಿ ಸುಖ ಸಂತೋಷ ಹೆಚ್ಚುತ್ತೆ.

SURYA GRAHAN 2023: ವರ್ಷದ ಮೊದಲ ಗ್ರಹಣ ಯಾವಾಗ?

ಶನಿ  ದೋಷ : ಶಿವನನ್ನು ಶನಿ ಗ್ರಹದ ಗುರು ಎನ್ನಲಾಗುತ್ತದೆ. ಶನಿಗೆ ದಂಡಾಧಿಕಾರಿಯ ಪದವಿಯನ್ನು ಸಾಕ್ಷಾತ್ ಶಿವನೇ ನೀಡಿದ್ದಾನೆ. ಹಾಗಾಗಿ ಶನಿಯ ಸಾಡೇ ಸಾತ್ ಮತ್ತು ಪ್ರಕೋಪಗಳಿಂದ ಸುರಕ್ಷಿತವಾಗಿರಲು ಕಬ್ಬಿನ ರಸ ಮತ್ತು ಕಪ್ಪು ಎಳ್ಳಿನಿಂದ ಶಿವನ ಪೂಜೆಯನ್ನು ಮಾಡಿ ಶಮಿ ಪತ್ರೆಯನ್ನು ಶಿವನಿಗೆ ಅರ್ಪಿಸಬೇಕು. ಶಿವನ ಪೂಜೆಯಾದನಂತರ ಶಿವಪುರಾಣವನ್ನು ಓದಬೇಕು ಇದರಿಂದ ಶನಿದೋಷಗಳು ದೂರವಾಗುತ್ತೆ.

ಮಂಗಳ ದೋಷ :  ಜಾತಕದಲ್ಲಿ ಮಂಗಳ ಗ್ರಹದ ದೋಷದಿಂದ ಮನುಷ್ಯನ ನೆಮ್ಮದಿ ದೂರವಾಗಿ ಸಣ್ಣಪುಟ್ಟ ವಿಷಯಕ್ಕೂ ಜಗಳಗಳು ಹೆಚ್ಚಾಗಬಹುದು. ನೌಕರಿ, ಬ್ಯುಸಿನೆಸ್  ಸಂಬಂಧ ಎಲ್ಲದರಲ್ಲೂ ಬಿರುಕು ಮೂಡಬಹುದು. ಮಂಗಳ ಗ್ರಹವನ್ನು ಶಾಂತಗೊಳಿಸಲು ಶಿವರಾತ್ರಿಯಂದು ಗಂಗಾಜಲಕ್ಕೆ ಕೆಂಪು ಚಂದನ, ಕೆಂಪು ಹೂವು ಮತ್ತು ಬೆಲ್ಲವನ್ನು ಸೇರಿಸಿ ಶಿವನಿಗೆ ಅಭಿಷೇಕ ಮಾಡಿ. ಅಭಿಷೇಕ ಮಾಡುವಾಗ `ಓಂ ನಮೋ ಭಗವತೇ ರುದ್ರಾಯ ನಮಃ’ ಎಂಬ ಮಂತ್ರವನ್ನು ಹೇಳಿ. ಈಶ್ವರನ ಪೂಜೆಯ ನಂತರ ಶಿವ ತಾಂಡವ ಸ್ತೋತ್ರದ ಪಠಣ ಮಾಡಬೇಕು. ಇದರಿಂದ ಮಂಗಳಗ್ರಹದ ಎಲ್ಲ ದೋಷಗಳಿಗೂ ಪರಿಹಾರ ಸಿಗುತ್ತೆ.

ಚಂದ್ರ  ದೋಷ : ಶಿವನು ಚಂದ್ರನನ್ನು ತನ್ನ ತಲೆಯ ಮೇಲೆ ಕೂರಿಸಿಕೊಂಡಿದ್ದಾನೆ. ಹಾಗಾಗಿ ಶಿವನ ಆರಾಧನೆ ಮಾಡುವವರ ಮೇಲೆ ಚಂದ್ರನ ಅಶುಭ ಪ್ರಭಾವ ಬೀರುವುದಿಲ್ಲ. ಮಹಾಶಿವರಾತ್ರಿಯಂದು ಚಂದ್ರನನ್ನು ಶಾಂತಗೊಳಿಸಲು ವಿಶೇಷ ಪೂಜೆ ನಡೆಸಲಾಗುತ್ತದೆ. ಶಿವರಾತ್ರಿಯಂದು ಬೆಳ್ಳಿಯ ಲೋಟದಲ್ಲಿ ಹಾಲನ್ನು ಹಾಕಿ ಶಿವನಿಗೆ ಅಭಿಷೇಕ ಮಾಡಬೇಕು. ಅಭಿಷೇಕ ಮಾಡುವಾಗ `ಓಂ ಶ್ರಾಂ ಶ್ರೀಂ ಶ್ರೌ ಸಃ ಚಂದ್ರಮಸೇ ನಮಃ’ ಮಂತ್ರವನ್ನು ರುದ್ರಾಕ್ಷಿಯೊಂದಿಗೆ ಜಪಿಸಬೇಕು. ಶಿವ ಈ ಆರಾಧನೆಯು ಮಾನಸಿಕ ಮತ್ತು ಶಾರೀರಿಕ ನೋವಿನಿಂದ ಮುಕ್ತಿ ಹೊಂದುವ ಮಾರ್ಗವಾಗಿದೆ.

ಮಹಾಶಿವರಾತ್ರಿ ದಿನ ರುದ್ರಾಕ್ಷಿ ಧಾರಣೆ ಸಮೃದ್ಧಿಯ ಸಂಕೇತ; ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು

ಗ್ರಹ ದೋಷ ನಿವಾರಣೆಯ ಜೊತೆ ಕುಬೇರನ ಕೃಪೆ ಪ್ರಾಪ್ತಿ : ಮಹಾಶಿವರಾತ್ರಿಯಂದು ಕುಬೇರನ ಮಂತ್ರ ಹೇಳಿದರೆ ವೈಭವ, ಸಂಪತ್ತು, ಹಣದ ಒಡೆಯನಾಗಿರುವ ಕುಬೇರನು ಪ್ರಸನ್ನನಾಗುತ್ತಾನೆ. ಶಿವರಾತ್ರಿಯಂದು ಶಿವನ ದೇವಸ್ಥಾನಕ್ಕೆ ಹೋಗಿ “ಮನುಜವಾಹ್ಯ ವಿಮಾನವರಸ್ಥಿತಂ ಗುರೂಡರತ್ನಾನಿಭಂ ನಿಧಿನಾಕಂ ಶಿವ ಸಂಖ ಯುಕ್ತಾದಿವಿ ಭೂಷಿತ ವರಗದೇ ದಧ ಗತಂ ಭಜತಾಂದಳಂ” ಮಂತ್ರವನ್ನು 108 ಬಾರಿ ಜಪಿಸುವುದರಿಂದ ಕುಬೇರನು ಪ್ರಸನ್ನನಾಗುತ್ತಾನೆ. ಈ ಮಂತ್ರವನ್ನು ಹೇಳುವಾಗ ಕೈಯಲ್ಲಿ ದುಡ್ಡನ್ನು ಹಿಡಿದುಕೊಳ್ಳಿ. ಮಂತ್ರ ಮುಗಿದ ಮೇಲೆ ಆ ಹಣವನ್ನು ನಿಮ್ಮ ಪರ್ಸ್ ನಲ್ಲೋ ಅಥವಾ ತ್ರಿಜೂರಿಯಲ್ಲೋ ಇಡಿ. ಹೀಗೆ ಮಾಡುವುದರಿಂದ ನಿಮಗೆ ಯಾವಾಗಲೂ ಹಣದ ಕೊರತೆಯಾಗುವುದಿಲ್ಲ.
 

click me!