Datta Jayanthi: ವಿಹಿಂಪ, ಬಜರಂಗದಳದ ದತ್ತಜಯಂತಿ ಇಂದಿನಿಂದ ಆರಂಭ: ಸಿಟಿ ರವಿ ಸೇರಿ 100 ಜನರ ಮಾಲಾರ್ಪಣೆ

By Sathish Kumar KHFirst Published Nov 28, 2022, 6:12 PM IST
Highlights

ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ನಡೆಯುತ್ತಿರುವ ದತ್ತಜಯಂತಿ ಗೆ ಚಾಲನೆ
ಚಿಕ್ಕಮಗಳೂರಿನ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಶಾಸಕ ಸಿ.ಟಿ.ರವಿ ಸೇರಿ ಹಲವರಿಂದ ಮಾಲಾಧಾರಣೆ
ಇಂದಿನಿಂದ ಡಿಸೆಂಬರ್ 8 ರವರೆಗೆ ನಡೆಯಲಿರುವ ದತ್ತಜಯಂತಿ
ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಜಯಂತಿ ಕಾರ್ಯಕ್ರಮ

ಚಿಕ್ಕಮಗಳೂರು (ನ.28) : ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠದಲ್ಲಿ ನಡೆಯಲಿರುವ ದತ್ತಜಯಂತಿಗೆ ಇಂದು ಚಾಲನೆ ನೀಡಲಾಗಿದೆ. ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳ ಹಮ್ಮಿಕೊಂಡಿರುವ ದತ್ತಮಾಲೆ ಹಾಗೂ ದತ್ತಜಯಂತಿ ಅಭಿಯಾನಕ್ಕೆ ಶಾಸಕ ಸಿ.ಟಿ.ರವಿ ಸೇರಿದಂತೆ ನೂರಾರು ಭಕ್ತರು ಮಾರ್ಗಶಿರ ಸಿದ್ದಸ್ಕಂದ ಪಂಚಮಿಯಂದು ಮಾಲಾಧಾರಣೆ ಮಾಡಿದರು.

ಚಿಕ್ಕಮಗಳೂರಿನ ರತ್ನಗಿರಿ ರಸ್ತೆಯ ಶ್ರೀ ಕಾಮಧೇನು ಮಹಾಶಕ್ತಿ ದೇವಾಲಯದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ನಂತರ ನೂರಾರು ದತ್ತ ಭಕ್ತರ ಸಮ್ಮುಖದಲ್ಲಿ ರಘುನಾಥ್ ಆವಧಾನಿಗಳ ನೇತೃತ್ವದಲ್ಲಿ ಗಣಹೋಮ ಪೂರ್ಣಾಹುತಿ ನೆರವೇರಿಸಲಾಯಿತು.ನಂತರ ದೇವಾಲಯದ ಆವರಣದಲ್ಲಿ ಶ್ರೀ ಗುರು ದತ್ತಾತ್ರೇಯ ಮೂರ್ತಿ ಪುಷ್ಪಾಲಂಕಾರ ಮಾಡಿ ಶ್ರೀ ದತ್ತಾತ್ರೇಯ , ಶ್ರೀರಾಮ ಭಜನೆ ಮೂಲಕ ಭಕ್ತರು ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಿದ ಬಳಿಕ ರಘುನಾಥ ಅವದಾನಿಗಳು ಬಜರಂಗದಳದ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಅವರಿಗೆ ಮಾಲೆ ಹಾಕುವ ಮೂಲಕ ದತ್ತಮಾಲೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ನಂತರ ಶಾಸಕ ಸಿ.ಟಿ.ರವಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಮಾಲಾಧಾರಣೆ ಮಾಡಿದರು.

ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದ: ಆಡಳಿತ ಮಂಡಳಿ ರಚನೆಗೆ ವಿರೋಧ

ಹಿಂದೂ ಆರ್ಚಕರ ನೇಮಕದ ಬೇಡಿಕೆ ಪೂರ್ಣ: 
ಶಾಸಕ ಸಿ.ಟಿ.ರವಿ ಮಾತನಾಡಿ, ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದ ಮೇರೆಗೆ ಸಂಪುಟದ ಉಪ ಸಮಿತಿ ರಚಿಸಿ ಅವರು ಕೊಟ್ಟ ಶಿಫಾರಸ್ಸು ಪರಿಗಣಿಸಿ ಸರ್ಕಾರ ನಿರ್ಣಯ ಕೈಗೊಂಡಿದ್ದು, ಈ ಪ್ರಕಾರ ಆಡಳಿತ ಮಂಡಳಿ ರಚನೆಯಾಗಿ ಹಿಂದೆ ಕಾಂಗ್ರೆಸ್ ಸರ್ಕಾರದಿಂದ ಅನ್ಯಾಯವಾಗಿದ್ದ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕದ ಬೇಡಿಕೆಯನ್ನು ಬಿಜೆಪಿ ನೇತೃತ್ವದ ಸರ್ಕಾರ ಈಡೇರಿಸಿ ನ್ಯಾಯಾಕೊಟ್ಟಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದಿಸುತ್ತೇನೆ. ಪ್ರತಿ ವರ್ಷದಂತೆ ದತ್ತ ಮಾಲೆ ಧಾರಣೆ ಮಾಡಿದ್ದೇವೆ ಇಂದಿನಿಂದ ಆರಂಭವಾಗಿದ್ದು ಡಿಸೆಂಬರ್  ರಂದು ಸತಿ ಅನಸೂಯಾದೇವಿ ಜಯಂತಿ 7ಕ್ಕೆ ಭಿಕ್ಷಾಟನೆ ಹಾಗೂ ನಗರದಲ್ಲಿ ಬೃಹತ್ ಶೋಭಾಯಾತ್ರೆ, ಡಿಸೆಂಬರ್ 8 ರಂದು ದತ್ತ ಜಯಂತಿಯೊಂದಿಗೆ ಕಾರ್ಯಕ್ರಮಗಳು ಪೂರ್ಣಗೊಳ್ಳುತ್ತದೆ ಎಂದರು.

ದತ್ತಪೀಠದ ಹೋರಾಟ ತಾರ್ಕಿಕ ಅಂತ್ಯ: ಬಜರಂಗದಳದ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಮಾತನಾಡಿ, ರಾಜ್ಯಾದ್ಯಂತ ಬಜರಂಗದಳ, ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಸೇರಿ ಸಾವಿರಾರು ದತ್ತ ಭಕ್ತರು ಮಾಲಾಧಾರಣೆ ಮಾಡಿದರು. ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ಹೋಮ ಹವನ, ಭಜನೆ ವಿಶೇಷ ಪೂಜೆ ಮೂಲಕ ನೂರಾರು ಭಕ್ತರು ಮಾಲಾಧಾರಣೆ ಮಾಡಿ ಚಾಲನೆ ನೀಡಲಾಗಿದೆ. ಡಿಸೆಂಬರ್ 6 ರಿಂದ 8 ರವರೆಗೆ ನಡೆಯುವ ದತ್ತಮಾಲಾ , ದತ್ತಜಯಂತಿಯಲ್ಲಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಮಹಿಳೆಯರ ಸಂಕೀರ್ತನಾಯಾತ್ರೆ, ಶೋಭಾಯಾತ್ರೆ, ಪಾಧುಕೆ ದರ್ಶನ ಇತ್ಯಾದಿ ಕಾರ್ಯಕ್ರಮ ಮಾಡಲಾಗುತ್ತದೆ. ಈ ಬಾರಿ ಜಿಲ್ಲಾಡಳಿತ ಯಾವ ಜಾಗವನ್ನು ನಿಗದಿಸಿದ್ದಾರೊ ಅದನ್ನು ಬಿಟ್ಟು ಗುಹಾಂತರ ದೇವಾಲಯದ ಮುಂಭಾಗವೆ ಹೋಮ ಹವನಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಒತ್ತಾಯಿಸಲಾಗಿದೆ. ಜಿಲ್ಲಾಡಳಿತ ಸಮರ್ಪಕವಾಗಿ ಸ್ಪಂದಿಸಿ ತುಳಸಿಕಟ್ಟೆ ಬಳಿ ದತ್ತಹೋಮ ನಡೆಸಲು ಅವಕಾಶಕ್ಕಾಗಿ ಆಗ್ರಹಿಸುತ್ತೇವೆ. 

Datta Jayanti: ಡಿ.8ರಂದು ದತ್ತಜಯಂತಿ: ಬಜರಂಗದಳ, ವಿಹಿಂಪ ನೇತೃತ್ವ

30 ಸಾವಿರ ಭಕ್ತರ ಆಗಮನ ನಿರೀಕ್ಷೆ: ದತ್ತ ಜಯಂತಿ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ 30 ಸಾವಿರಕ್ಕೂ ಹೆಚ್ಚು ದತ್ತ ಭಕ್ತರು ಆಗಮಿಸಿ ದತ್ತ ಪಾದುಕೆ ದರ್ಶನ ಮಾಡುವ ನಿರೀಕ್ಷೆ ಹೊಂದಲಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದಂತೆ ಅದೇ ಮಾದರಿಯಲ್ಲಿ ದತ್ತಪೀಠದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಬೇಡಿಕೆ ಈಡೇರುವ ಸಮಯ ಸನ್ನಿಹಿತವಾಗಿದೆ. ವಿಹೆಚ್‌ಪಿ ಹಾಗೂ ಬಜರಂಗದಳದ 40 ವರ್ಷಗಳ ಸುಧೀರ್ಘ ಹೋರಾಟ ಮತ್ತು ವಿಠಲರಾಯರಂತಹ ಹಿರಿಯರ ಹೋರಾಟದ ಬುನಾದಿ ತಾರ್ಕಿಕ ಅಂತ್ಯ ಕಾಣುವ ಹಂತದಲ್ಲಿದ್ದು ಸಂಘ ಪರಿವಾರಕ್ಕೆ ದೊಡ್ಡ ಜಯ ಸಿಕ್ಕಿದೆ. ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾದಾಗಿನಿಂದ ತ್ರಿಕಾಲ ಪೂಜೆಯಾಗಬೇಕು ಜೊತೆಗೆ ಯಾವರೀತಿ ವ್ಯವಸ್ಥೆ ಎಂಬುದು ಸಂಘ ಪರಿವಾರದ ಹಿರಿಯರು ನಿಶ್ಚಿಸಿದ್ದಾರೆ. ಭಕ್ತರಿಗೆ ಹೊಸ ಹುರುಪು ಬಂದಿದೆಯಾದರೂ ಗೋರಿಗಳು ಸ್ಥಳಾಂತರ ಮಾಡುವ ವರೆಗೂ ಹೋರಾಟ ಮುಂದುವರೆಯುತ್ತದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಜಿಲ್ಲಾ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಶಶಾಂಕ್ ಹೆರೂರ್, ಜಿಲ್ಲಾ ಸಹ ಸಂಚಾಲಕ್ ಅಮಿತ್ಗೌಡ, ಗುರು, ಶ್ಯಾಂ ವಿ ಗೌಡ, ಸುನೀಲ್ ಆಚಾರ್ಯ, ಪ್ರದೀಪ್, ಶಿವಣ್ಣ ಇದ್ದರು.

click me!