ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ಹೊಡೆತ ಕೊಟ್ಟ ಹೂವಿನ ಬೆಲೆ, ಖರೀದಿಸಲು ಗ್ರಾಹಕರ ಹಿಂದೇಟು

Published : Aug 26, 2025, 12:08 PM IST
Flower Market

ಸಾರಾಂಶ

ಬೆಂಗಳೂರಿನಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮದ ನಡುವೆ ಹೂವು, ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರಿದೆ. ಮಳೆಯಿಂದಾಗಿ ಪೂರೈಕೆ ಕುಂಠಿತಗೊಂಡು, ದರಗಳು ದುಪ್ಪಟ್ಟಾಗಿವೆ. ಇದರಿಂದ ಗ್ರಾಹಕರು ಮತ್ತು ವ್ಯಾಪಾರಿಗಳು ತತ್ತರಿಸಿದ್ದಾರೆ.

ಬೆಂಗಳೂರು: ನಗರದಲ್ಲಿ ಗೌರಿ ಹಾಗೂ ಗಣೇಶ ಹಬ್ಬದ ಸಂಭ್ರಮ ಜೋರಾಗಿ ಮುಂದುವರಿದಿದೆ. ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಜಯನಗರ ಸೇರಿ ಹಲವು ಕಡೆ ಹೂವು, ಹಣ್ಣು ಹಾಗೂ ತರಕಾರಿ ಖರೀದಿಗೆ ಜನಸಾಗರವೇ ಹರಿದು ಬಂದಿದೆ. ಮುಂಜಾನೆ 3 ಗಂಟೆಯಿಂದಲೇ ಮಾರುಕಟ್ಟೆಗಳಲ್ಲಿ ಜನರ ದಂಡು ಕಿಕ್ಕಿರಿದು ಕಂಡು ಬರುತ್ತಿದ್ದು, ಬೆಳಗ್ಗೆ 4 ಗಂಟೆಯಿಂದ ಗೌರಿ ಹಬ್ಬದ ಶಾಪಿಂಗ್ ಜೋರಾಗಿ ಶುರುವಾಗಿದೆ. ಆದರೆ, ಈ ಸಂಭ್ರಮದ ನಡುವೆ ಹೂವಿನ ಗಗನಕ್ಕೇರಿದ ದರ ಗ್ರಾಹಕರಿಗೆ ದೊಡ್ಡ ಹೊಡೆತವಾಗಿದೆ. ಮಳೆಯಿಂದಾಗಿ ಹೂ, ಹಣ್ಣು ಮತ್ತು ತರಕಾರಿಗಳ ಬೆಳೆ ಹಾನಿಗೊಳಗಾಗಿದ್ದು, ಪೂರೈಕೆ ಕುಂದಿರುವುದರಿಂದ ದರಗಳು ಕಳೆದ ವಾರಕ್ಕೆ ಹೋಲಿಸಿದರೆ ಎರಡು ಪಟ್ಟು ಏರಿಕೆ ಕಂಡಿವೆ.

ಹೂಗಳ ದರ ಏರಿಕೆ (ಕೆಜಿ‌ಗೆ ಹೋಲಿಕೆ)

ಹೂವಿನ ಹೆಸರು ಇಂದಿನ ದರ / ಕಳೆದ ವಾರದ ದರ

ಕನಕಾಂಬರ ₹1000/ ₹500

ಮಳ್ಳೆ ಹೂ ₹10,000/ ₹500

ಸೇವಂತಿಗೆ ₹400/ ₹150

ಮಲ್ಲಿಗೆ ₹1000/ ₹500

ಗುಲಾಬಿ ₹300 ₹150

ಕನಗಿಲೆ ₹200 /₹150

ಮಾರುಕಟ್ಟೆಯಲ್ಲಿ ಜನಸಾಗರ ಮತ್ತು ಟ್ರಾಫಿಕ್ ಜಾಮ್

ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ ಇಷ್ಟು ಹೆಚ್ಚಾಗಿದೆ ಎಂದರೆ ಕಾಲಿಡಲು ಜಾಗವೇ ಇಲ್ಲದಂತಾಗಿದೆ. ಹೂವು, ಹಣ್ಣು, ತರಕಾರಿ ಖರೀದಿಸಲು ಗ್ರಾಹಕರು ಅತೀ ಹೆಚ್ಚು ಸಂಖ್ಯೆಯಲ್ಲಿ ಧಾವಿಸಿರುವ ಕಾರಣಕ್ಕೆ ಮಾರುಕಟ್ಟೆ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿದೆ. ವಾಹನಗಳು ಇಂಚಿಂಚಾಗಿ ಸಾಗುತ್ತಿದ್ದು, ಟ್ರಾಫಿಕ್ ಪೊಲೀಸರಿಗೂ ನಿಯಂತ್ರಣ ಕಷ್ಟವಾಗುತ್ತಿದೆ.

ವ್ಯಾಪಾರಿಗಳ ಬೇಸರ ಗ್ರಾಹಕರ ಕಷ್ಟ

ಹೂವಿನ ದರ ಗಗನಕ್ಕೇರಿದ ಕಾರಣದಿಂದ ಗ್ರಾಹಕರು ಬೇಕಾದಷ್ಟು ಹೂ ಖರೀದಿಸಲು ಹಿಂಜರಿಯುತ್ತಿದ್ದಾರೆ. “ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ದರ ಡಬಲ್ ಆಗಿದೆ. ಜನರು ಬೆಲೆ ಕೇಳಿ ಹಿಂತಿರುಗುತ್ತಿದ್ದಾರೆ, ಮಾರಾಟ ಕುಂಠಿತವಾಗಿದೆ ಎಂದು ಕೆ.ಆರ್.ಮಾರ್ಕೆಟ್‌ನ ಹೂ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತ, ಗ್ರಾಹಕರೂ ದರ ಏರಿಕೆಯಿಂದ ತತ್ತರಿಸಿದ್ದಾರೆ. ಹಬ್ಬದ ಸಂಭ್ರಮಕ್ಕೆ ಹೂ ಬೇಕೇ ಬೇಕು. ಆದರೆ ಇಷ್ಟು ಬೆಲೆ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಖರೀದಿಸುತ್ತಿದ್ದೇವೆ ಎಂದು ಖರೀದಿಗೆ ಬಂದವರು ಅಸಮಾಧಾನ ವ್ಯಕ್ತಪಡಿಸಿದರು.

ಹಬ್ಬದ ಸಂಭ್ರಮದ ನಡುವೆ ಬೆಲೆ ಏರಿಕೆ ಬಿರುಕು

ಗೌರಿ, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದಾದ್ಯಂತ ಶಾಪಿಂಗ್ ಗರಿಗೆದರುತ್ತಿದ್ದರೂ, ಹೂವಿನ ದರ ಏರಿಕೆ ಹಬ್ಬದ ಸಂಭ್ರಮಕ್ಕೆ ಬಿರುಕು ತಂದಿದೆ. ಪ್ರತೀ ವರ್ಷ ಹಬ್ಬದ ಸಮಯದಲ್ಲಿ ಹೂ-ಹಣ್ಣು-ತರಕಾರಿಗಳ ದರ ಏರಿಕೆಯಾಗುವುದು ಸಾಮಾನ್ಯ. ಆದರೆ ಈ ಬಾರಿ ಮಳೆ ಹಾಗೂ ಪೂರೈಕೆ ಕೊರತೆಯಿಂದ ಬೆಲೆ ಏರಿಕೆ ಇನ್ನಷ್ಟು ಹೆಚ್ಚಳವಾಗಿದೆ. ನಗರದ ಎಲ್ಲಾ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ಸಾಗುತ್ತಿದ್ದರೂ, ಹೂ, ಹಣ್ಣು ಮತ್ತು ತರಕಾರಿಗಳ ಬೆಲೆ ಏರಿಕೆ ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಕುಗ್ಗಿಸಿದೆ.

PREV
Read more Articles on
click me!

Recommended Stories

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Financial success by date of birth: ನಿಮ್ಮ ಜನ್ಮಸಂಖ್ಯೆ ನಿಮ್ಮ ಸಂಪತ್ತಿನ ರಹಸ್ಯವೇ?