ಶಬರಿಮಲೆಗೆ ಹದಿನೇಳೇ ದಿನದಲ್ಲಿ 310 ಕೋಟಿ ರೂ. ಆದಾಯ

By Suvarna NewsFirst Published Jan 14, 2023, 3:20 PM IST
Highlights

ಶಬರಿಮಲೆ ಆದಾಯ 310.40 ಕೋಟಿ ರೂ.
ಜನವರಿ 14ರಂದು ಮಕರವಿಳಕ್ಕು ಆಚರಣೆ 
ತೀರ್ಥಯಾತ್ರೆಯ ಋತುವಿನ ಅಂತ್ಯ

ಪತ್ತನಂತಿಟ್ಟ: ಪ್ರಸಿದ್ಧ ಶಬರಿಮಲೆ ದೇವಸ್ಥಾನವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ), ಎರಡು ತಿಂಗಳ ವಾರ್ಷಿಕ ತೀರ್ಥಯಾತ್ರೆಯ ಭಾಗವಾಗಿ ಜನವರಿ 12 ರವರೆಗೆ ದೇಗುಲದಿಂದ ₹ 310.40 ಕೋಟಿ ಆದಾಯ ಬಂದಿದೆ ಎಂದು ಹೇಳಿದೆ.
ಸನ್ನಿಧಾನಂ ಅತಿಥಿಗೃಹದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಟಿಡಿಬಿ ಅಧ್ಯಕ್ಷ ಕೆ.ಅನಂತಗೋಪನ್, ‘ತಿರುವಾಭರಣ ಘೋಷಯಾತ್ರೆ’ ಗುರುವಾರದಿಂದ ಬೆಟ್ಟದ ಮೇಲಿನ ದೇಗುಲಕ್ಕೆ ಪವಿತ್ರ ಆಭರಣಗಳನ್ನು ಹೊತ್ತ ಮೆರವಣಿಗೆ ಆರಂಭವಾಗಿ, ಜನವರಿ 14 ರಂದು ಶರಮಕುತಿ ತಲುಪಿದೆ ಎಂದು ತಿಳಿಸಿದ್ದಾರೆ.

ಡಿಸೆಂಬರ್ 27ರಂದು 'ಮಂಡಲ ಪೂಜೆ' ನಡೆಯಿತು, ಇದು ಋತುವಿನ ಮೊದಲ ಪಾದದ ಮುಕ್ತಾಯವಾಗಿದೆ. ದೇಗುಲವನ್ನು ಮೂರು ದಿನಗಳ ಕಾಲ ಮುಚ್ಚಲಾಯಿತು ಮತ್ತು ಋತುವಿನ ಎರಡನೇ ಹಂತವಾದ 'ಮಕರವಿಳಕ್ಕು' ಸಮಾರಂಭಗಳಿಗಾಗಿ ಡಿಸೆಂಬರ್ 30ರಂದು ಪುನಃ ತೆರೆಯಲಾಯಿತು.

‘ ಡಿಸೆಂಬರ್ ಅಂತ್ಯದಿಂದ ಜ.12ರವರೆಗೆ  ₹ 310,40,97,309ರಲ್ಲಿ ಒಟ್ಟು ಆದಾಯ ಬಂದಿದೆ,' ಎಂದು ಅವರು ಹೇಳಿದರು.

ಬುಧ ಮಾರ್ಗಿಯಿಂದ ಈ 6 ರಾಶಿಗಳಿಗೆ ಹೆಚ್ಚಲಿದೆ ಚಿಂತೆ, ಇರಲಿ ಜಾಗ್ರತೆ

ಜನವರಿ 14 ರಂದು ಮಕರವಿಳಕ್ಕು ಆಚರಣೆ ನಡೆಯಲಿದೆ. ನಂತರ, ತೀರ್ಥಯಾತ್ರೆಯ ಅಂತ್ಯವನ್ನು ಸೂಚಿಸುವ ಮೂಲಕ ಜನವರಿ 20ರಂದು ದೇಗುಲವನ್ನು ಮುಚ್ಚಲಾಗುವುದು. ‘ತಿರುವಾಭರಣ’ ಹೊತ್ತ ಮೆರವಣಿಗೆಯನ್ನು ದೇವಸ್ವಂ ಅಧಿಕಾರಿಗಳು ಬರಮಾಡಿಕೊಂಡು ಸಂಜೆ 6.30ಕ್ಕೆ ಪೂಜೆ ಸಲ್ಲಿಸಲಿದ್ದಾರೆ.

ನಂತರ ಪೊನ್ನಂಬಲಮೆಟ್ಟುವಿನಲ್ಲಿ ಮಕರಜ್ಯೋತಿ ಕಾಣಲಿದ್ದು, ಮಕರವಿಳಕ್ಕು ಉತ್ಸವಕ್ಕೆ ನೂಕು ನುಗ್ಗಲು ನಿರೀಕ್ಷಿಸಿ ಮಂಡಳಿಯು ಸಕಲ ಸೌಕರ್ಯಗಳನ್ನು ಕಲ್ಪಿಸಿದೆ. ಹಬ್ಬಕ್ಕೆ ಮುನ್ನ ಪೊಲೀಸ್ ಹಾಗೂ ಅಗ್ನಿಶಾಮಕ ದಳದವರು ಸುರಕ್ಷತಾ ಮುನ್ನೆಚ್ಚರಿಕೆ ವಹಿಸಿದ್ದಾರೆ.

ಶಬರಿಮಲೆಯೊಳಗೆ ಪೋಸ್ಟರ್‌ಗಳಿಗಿಲ್ಲ ಪ್ರವೇಶ

ಸೆಲೆಬ್ರಿಟಿಗಳು, ರಾಜಕಾರಣಿಗಳು ಇತ್ಯಾದಿಗಳ ಪೋಸ್ಟರ್‌ಗಳು ಮತ್ತು ಬೃಹತ್ ಛಾಯಾಚಿತ್ರಗಳನ್ನು ಹೊಂದಿರುವ ಯಾವುದೇ ಯಾತ್ರಿಕರನ್ನು ಶಬರಿಮಲೆ ಸನ್ನಿಧಾನಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

ಅಯ್ಯಪ್ಪ ದೇವರ ಪೂಜ್ಯ ದೇಗುಲದೊಳಗೆ ತಮ್ಮ ನೆಚ್ಚಿನ ಚಲನಚಿತ್ರ ತಾರೆಯರನ್ನು ಪ್ರದರ್ಶಿಸಲು ಭಿತ್ತಿಪತ್ರಗಳು, ಧ್ವಜಗಳು ಮತ್ತು ಇತರ ಸಾಧನಗಳನ್ನು ಹೊತ್ತ ಭಕ್ತರಿಗೆ ಶಬರಿಮಲೆಯೊಳಗೆ ಪ್ರವೇಶ ನಿರಾಕರಿಸಲಾಗುವುದು ಎಂದು ಕೇರಳ ಹೈಕೋರ್ಟ್ ತೀರ್ಪು(Kerala High Court) ನೀಡಿದೆ.

ಶಬರಿಮಲೆ ಸನ್ನಿಧಾನಂನ ಸೋಪಾನಂನಲ್ಲಿ ಯಾತ್ರಾರ್ಥಿಗಳು ಚಲನಚಿತ್ರ ತಾರೆಯರ ಪೋಸ್ಟರ್‌ಗಳನ್ನು ಹಿಡಿದು ವಾದ್ಯಗಳೊಂದಿಗೆ ಪ್ರದರ್ಶನ ನೀಡಿದ ಘಟನೆಗಳೂ ನಡೆದಿದ್ದವು. ಇಂಥ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿರುವ ಕೇರಳ ಹೈ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿಜಿ ಅಜಿತ್‌ಕುಮಾರ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ. ದೇವಾಲಯದ ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ಇಂಥ ಪೋಸ್ಟರ್‌ಗಳನ್ನು ದೇಗುಲದೊಳಕ್ಕೆ ಅನುಮತಿಸುವುದಿಲ್ಲ ಎಂದಿದೆ. 

Makar Sankranti 2023: ಬಯಸಿದ ಭಾಗ್ಯಕ್ಕಾಗಿ ಸೂರ್ಯನನ್ನು ರಾಶಿ ಪ್ರಕಾರ ಪೂಜಿಸಿ

ಯಾತ್ರಾರ್ಥಿಗಳು ದೇವಾಲಯದ ಆವರಣದಲ್ಲಿ ಸೂಕ್ತ ರೀತಿಯಲ್ಲಿ ಪೂಜೆ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಶಬರಿಮಲೆ ದೇವಸ್ಥಾನದ(Sabarimala Temple) ಆಡಳಿತವನ್ನು ವಹಿಸಿಕೊಂಡಿರುವ ತಿರುವಾಂಕೂರು ದೇವಸ್ವಂ ಮಂಡಳಿ(Tiruvankur Devaswam Mandali)ಗೆ ಕೇರಳ ಹೈಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿತ್ತು.

ಶಬರಿಮಲೆ ಸನ್ನಿಧಾನಂನ ಸೋಪಾನಂನ ಮುಂದೆ ಸೆಲೆಬ್ರಿಟಿಗಳು, ರಾಜಕಾರಣಿಗಳು, ಇತ್ಯಾದಿ ಜನರ ಬೃಹತ್ ಛಾಯಾಚಿತ್ರಗಳನ್ನು ಪ್ರದರ್ಶಿಸಲು,ಡೋಲು ಅಥವಾ ಇತರ ರೀತಿಯ ವಾದ್ಯಗಳನ್ನು ನುಡಿಸಲು ಯಾವುದೇ ಯಾತ್ರಿಕರಿಗೆ ಅನುಮತಿ ಇಲ್ಲ. ಶಬರಿಮಲೆಯಲ್ಲಿನ ಆಚರಣೆ ಮತ್ತು ಸಂಪ್ರದಾಯಕ್ಕೆ ಒಳಪಟ್ಟು ಒಗ್ಗಿಕೊಂಡಿರುವ ರೀತಿಯಲ್ಲಿ ಅಯ್ಯಪ್ಪನ ಪೂಜೆ ಮಾಡುವುದು ಆರಾಧಕನ ಕರ್ತವ್ಯವಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!