ಕರ್ನಾಟಕದ ಅಳಿಯ, ಯುಕೆ ಪ್ರಧಾನಿ ಕೈಲಿ ಕೆಂಪು ರಕ್ಷಾ ಸೂತ್ರ; ಏನಿದರ ಮಹತ್ವ?

By Suvarna NewsFirst Published Oct 26, 2022, 5:18 PM IST
Highlights

ಇನ್ಫೋಸಿಸ್ ಕಂಪನಿಯ ಕಟ್ಟಾಳುಗಳಾದ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿಯವರ ಅಳಿಯ ರಿಷಿ ಸುನಾಕ್ ಯುಕೆಯ ಪ್ರಧಾನಿಯಾಗಿದ್ದಾರೆ. ಅವರ ಮೊದಲ ಭಾಷಣ ಸಂದರ್ಭದಲ್ಲಿ ಕೈಗೆ ಕಟ್ಟಿಕೊಂಡ ಕೆಂಪು ರಕ್ಷಾ ಸೂತ್ರ ಎಲ್ಲರ ಗಮನ ಸೆಳೆಯಿತು. ಇದನ್ನು ಏತಕ್ಕಾಗಿ ಕಟ್ಟಲಾಗುತ್ತದೆ?

ಕರ್ನಾಟಕದ ಅಳಿಯ, ಯುನೈಟೆಡ್ ಕಿಂಗ್‌ಡಮ್‌ನ ಸಂಸದ (MP)ರಾಗಿದ್ದ ರಿಷಿ ಸುನಕ್ ಅವರು ಅಕ್ಟೋಬರ್ 24ರಂದು, UKಯ ಮೊದಲ ಬಿಳಿಯರಲ್ಲದ ಪ್ರಧಾನಿಯಾಗಿ ನಿಯೋಜಿತರಾದರು. ಅಷ್ಟೇ ಅಲ್ಲ, ಹಿಂದೂ ಧರ್ಮ ಅನುಸರಿಸುವ ಮೊದಲ ಯುಕೆ ಪ್ರಧಾನಿ ಕೂಡಾ ಇವರಾಗಿದ್ದಾರೆ. 

ಅವರ ನೇಮಕಾತಿಯ ನಂತರ ಡೌನಿಂಗ್ ಸ್ಟ್ರೀಟ್ 10ರ ಮುಂದೆ ಅವರು ಭಾಷಣ ಮಾಡುವ ಮುನ್ನ ಪತ್ನಿ ಅಕ್ಷತಾ ಮೂರ್ತಿ ಸಮ್ಮುಖದಲ್ಲಿ ದಾರ ಕಟ್ಟಿಕೊಂಡರು. ಇಂಗ್ಲೆಂಡಿನ ಪ್ರಧಾನಿಯಾದರೂ ಭಾರತೀಯ ಹಿಂದೂ ಸಂಸ್ಕೃತಿಯನ್ನು ರಿಷಿ ಸುನಕ್‌ ಪಾಲಿಸುತ್ತಾರೆ ಎಂಬುದಕ್ಕೆ ಈ ದೃಶ್ಯ ಸಾಕ್ಷಿಯಾಯಿತು. ಅವರ ಕೈಲಿ ಕಟ್ಟಿಕೊಂಡಿದ್ದ ಕೆಂಪು ರಕ್ಷಾದಾರವು ಭಾರತ ಮತ್ತು ವಿದೇಶಗಳಲ್ಲಿನ ಅನೇಕರ ಗಮನವನ್ನು ಸೆಳೆಯಿತು. 

ಸುನಕ್ ಅವರು ಹಿಂದೂ ಧರ್ಮವನ್ನು ಅನುಸರಿಸುತ್ತಿರುವುದರಿಂದ ಮತ್ತು ಅವರ ಹಿಂದೂ ಬೇರುಗಳಿಗಾಗಿ ಯುಕೆಯಲ್ಲಿ ಆನ್‌ಲೈನ್ ದ್ವೇಷವನ್ನು ಸಹ ಎದುರಿಸುತ್ತಿರುವುದರಿಂದ, ಅವರು ಅಧಿಕಾರ ವಹಿಸಿಕೊಂಡ ನಂತರ ಅವರ ಕೈಯಲ್ಲಿ ಧರಿಸಿರುವ ಪವಿತ್ರ ದಾರವು ಚರ್ಚೆಯ ವಿಷಯವಾಗಿದೆ.

UK New PM Rishi Sunak: ಭಾರತೀಯ ಸಂಸ್ಕೃತಿಯಂತೆ ಕೈಗೆ ದಾರ ಕಟ್ಟಿಕೊಂಡ ರಿಷಿ

ಭಾರತದ ಹಿಂದೂಗಳು ಭಯ ನಿವಾರಣೆಗಾಗಿ, ರಕ್ಷಣೆಗಾಗಿ, ದೃಷ್ಟಿ ನಿವಾಳಿಸಲು, ಅದಷ್ಟ ಆಕರ್ಷಿಸಲು, ನೆಮ್ಮದಿಗಾಗಿ ಹೀಗೆ ವಿವಿಧ ಕಾರಣಗಳಿಗಾಗಿ ರಕ್ಷಾ ದಾರವನ್ನು ಕೈ, ಕೊರಳು, ಸೊಂಟ, ಕಾಲಿಗೆ ಕಟ್ಟಿಕೊಳ್ಳುತ್ತಾರೆ. ಒಂದೊಂದು ಬಣ್ಣದ ದಾರಕ್ಕೂ ಅದರದೇ ಆದ ಶಕ್ತಿ, ವಿಶೇಷತೆಗಳಿವೆ. ಬಣ್ಣದ ಅನುಸಾರ ಅವು ಬೇರೆ ಬೇರೆ ದೇವರಿಗೂ, ಗ್ರಹಗಳಿಗೂ ಸಂಬಂಧಿಸಿರುತ್ತವೆ. ಅಂದ ಹಾಗೆ ರಿಷಿ ಸುನಕ್ ಅವರ ಮಣಿಕಟ್ಟಿನಲ್ಲಿದ್ದ ಕೆಂಪು ರಕ್ಷಾ ದಾರದ ಮಹತ್ವವೇನು, ಏತಕ್ಕಾಗಿ ಇದನ್ನು ಕಟ್ಟುತ್ತಾರೆ ನೋಡೋಣ..

ಕೆಂಪು ದಾರ (kalava or Red thread)
ಇದು ಹಿಂದೂಗಳಲ್ಲಿ ಸಾಮಾನ್ಯವಾಗಿ ಬಳಸುವ ಬಣ್ಣವಾಗಿದೆ ಮತ್ತು ಮಂಗಳ ಗ್ರಹವನ್ನು ಪ್ರತಿನಿಧಿಸುತ್ತದೆ. ತಮ್ಮ ಬಲ ಮತ್ತು ಎಡ ಮಣಿಕಟ್ಟಿನ ಮೇಲೆ ಕ್ರಮವಾಗಿ ಸಣ್ಣ ಪೂಜೆಯ ನಂತರ ಪುರುಷರು ಮತ್ತು ಮಹಿಳೆಯರು ಈ ದಾರವನ್ನು ಧರಿಸಿರುವುದನ್ನು ನಾವು ಕಾಣಬಹುದು. ಇದು ಹತ್ತಿ ದಾರವಾಗಿದ್ದು ನೀವು ಯಾವುದೇ ದೇವಾಲಯದಲ್ಲಿ ಸುಲಭವಾಗಿ ಕಾಣಬಹುದು. ಈ ಬಟ್ಟೆಯನ್ನು ಮೊದಲು ದೇವರಿಗೆ ಅರ್ಪಿಸಲಾಗುತ್ತದೆ. ಭಾರತದ ಕೆಲವು ಭಾಗಗಳಲ್ಲಿ, ಇದು ರಕ್ಷೆಯನ್ನು ಸಂಕೇತಿಸುತ್ತದೆ. ಸಾಮಾನ್ಯವಾಗಿ ಮಂಗಳನನ್ನು ಜಾತಕದಲ್ಲಿ ಬಲಪಡಿಸಲು ಇದನ್ನು ಧರಿಸಲಾಗುತ್ತದೆ. 

ರಕ್ಷಾ ಸೂತ್ರ ಕೈಗೆ ಕಟ್ಟುವುದರಿಂದ ಬ್ರಹ್ಮ, ವಿಷ್ಣು, ಮಹೇಶ್ವರರ ಆಶೀರ್ವಾದದ ಜೊತೆಗೆ, ಲಕ್ಷ್ಮೀ, ಸರಸ್ವತಿ ಹಾಗೂ ಪಾರ್ವತಿಯ ವಿಶೇಷ ಅನುಗ್ರಹವೂ ದೊರೆಯುತ್ತದೆ. ಕೆಂಪು ಬಣ್ಣದ ಕಲಾವಾ ಕಟ್ಟುವುದರಿಂದ ಮಂಗಳ ಗ್ರಹಕ್ಕೆ ಬಲ ತುಂಬಬಹುದಾಗಿದೆ. ಹಳದಿ ಬಣ್ಣದ ಕಲಾವಾವು ಗುರು ಗ್ರಹಕ್ಕೆ ಬಲ ತುಂಬುತ್ತದೆ. ಶನಿ(planet Saturn) ತೊಂದರೆ ಇದ್ದಾಗ ಕಪ್ಪು ಬಣ್ಣದ ಕಲಾವಾ ಕಟ್ಟಲಾಗುತ್ತದೆ. 

ಹಿಂದಿನ ಪ್ರಧಾನಿ ಮಾಡಿದ್ದ ತಪ್ಪು ಸರಿಪಡಿಸಲು ನನ್ನ ಗೆಲ್ಸಿದ್ದಾರೆ: Rishi Sunak

ಕಲಾವಾ ಎಂಬುದು ರಕ್ಷಾ ಸೂತ್ರ. ನಂಬಿಕೆಗಳ ಪ್ರಕಾರ, ಬಹಳ ರೀತಿಯ ದೈವಿಕ ಶಕ್ತಿಗಳು ಈ ದಾರದಲ್ಲಿ ಅಡಗಿವೆ. ಈ ಕಲಾವಾ ಕಟ್ಟುವುದರ ಹಿಂದೊಂದು ಪುರಾಣ(Mythology)ದ ಕತೆ ಇದೆ. ಬಲಿ ಚಕ್ರವರ್ತಿ ಪಾತಾಳಕ್ಕೆ ಹೋದ ನಂತರ ವಿಷ್ಣುವೂ ಅವನೊಂದಿಗೆ ಭಕ್ತಿಯ ಸೆಳೆತಕ್ಕೆ ಸಿಕ್ಕಿ ಇರುತ್ತಾನೆ. ಇದರಿಂದ ಲಕ್ಷ್ಮಿಗೆ ಆತಂಕವಾಗುತ್ತದೆ. ಪತಿ ವೈಕುಂಠಕ್ಕೆ ಮರಳುತ್ತಿಲ್ಲ ಎಂದು ಭಯಗೊಂಡ ಆಕೆ, ಪಾತಾಳಕ್ಕೆ ತೆರಳಿ ಬಲಿಯ ಕೈಗೆ ಕಲಾವಾ ಕಟ್ಟಿ ಆತ ಸದಾ ಸುಖವಾಗಿರಲಿ, ಯಾವುದೇ ಬಾಧೆಗಳು ತಟ್ಟದಿರಲಿ ಎಂದು ಹಾರೈಸಿ ಪತಿಯನ್ನು ಜೊತೆ ಕಳುಹಿಸಿಕೊಡಲು ಕೋರುತ್ತಾಳೆ. ಅಂದಿನಿಂದ ರಕ್ಷಾಸೂತ್ರ ಕಟ್ಟುವ ಆಚರಣೆ ಜಾರಿಗೆ ಬಂತು ಎನ್ನಲಾಗುತ್ತದೆ. 

click me!