ಮಂಗಳೂರು ದಸರಾ 2022: ಕುದ್ರೋಳಿಯಲ್ಲಿ ಶಾರದೆ, ನವದುರ್ಗೆಯರ ಪ್ರತಿಷ್ಠಾಪನೆ

By Suvarna NewsFirst Published Sep 26, 2022, 3:28 PM IST
Highlights

ಮೈಸೂರು ದಸರಾಗೆ ಸರಿಸಮವೆನಿಸಿರುವ ಪ್ರಸಿದ್ಧ ಕುದ್ರೋಳಿ ಕ್ಷೇತ್ರದ ದಸರಾ ಆಚರಣೆ ಆರಂಭವಾಗಿದೆ. ಮೊದಲ ದಿನದ ಅಲ್ಲಿನ ವೈಭೋಗವೇನು ?

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ‌ಮಂಗಳೂರು

ಮಂಗಳೂರು: ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿರುವ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರ(Kudroli Gokarnatheshwara Temple)ದ ಮಂಗಳೂರು ದಸರಾ-ನವರಾತ್ರಿ ಮಹೋತ್ಸವ ಇಂದು ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠೆಯೊಂದಿಗೆ ವಿದ್ಯುಕ್ತವಾಗಿ ಪ್ರಾರಂಭಗೊಂಡಿತು. 

ಆದಿಶಕ್ತಿ, ಮಹಾಗಣಪತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಿ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿಯರ ಪ್ರತಿಷ್ಠಾಪನೆ ನೆರವೇರಿತು. ಶ್ರೀಶಾರದೆಯ ಮೂರ್ತಿ ಎಂದಿನಂತೆ ಅತ್ಯಾಕರ್ಷಕವಾಗಿ ರೂಪುಗೊಂಡಿದ್ದು ಭಕ್ತರ ಮನ ಸೆಳೆಯುತ್ತಿದೆ. ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ನವರಾತ್ರಿ ಉತ್ಸವ ಪ್ರಾರಂಭಗೊಂಡಿತು. ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ದೀಪ ಬೆಳಗಿಸಿ ಉತ್ಸವಕ್ಕೆ ಚಾಲನೆ ನೀಡಿದರು. 

Budh Margi: ಇನ್ನೊಂದು ವಾರದಲ್ಲಿ ಮೂರು ರಾಶಿಗಳಿಗೆ ಲಾಟ್ರಿ

ಶ್ರೀಶಾರದ ಮಾತೆ ಮತ್ತು ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ದಸರಾಗೆ ಚಾಲನೆ ನೀಡಲಾಯಿತು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ‌.ಪಾಟೀಲ್, ವಿಪಕ್ಷ ಉಪನಾಯಕ ಯು.ಟಿ.ಖಾದರ್, ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ್ ಕೋಟ್ಯಾನ್ ಉಪಸ್ಥಿತರಿದ್ದರು. ಪತ್ನಿ ‌ಮತ್ತು ಮಗಳ ಜೊತೆ ಆಗಮಿಸಿದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಶಾರದ ಮಾತೆಗೆ ಪೂಜೆ ಸಲ್ಲಿಸಿ ಬಳಿಕ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಆಶೀರ್ವಾದ ಪಡೆದರು. ಅನಾರೋಗ್ಯದ ಮಧ್ಯೆಯೂ ದಸರಾ ಉದ್ಘಾಟಿಸಿದ ಜನಾರ್ದನ ಪೂಜಾರಿ ಭಕ್ತರ ಜೊತೆ ಕೆಲ ಹೊತ್ತು ಬೆರೆತರು. ಇಂದಿನಿಂದ ಒಂಭತ್ತು ದಿನಗಳ ಕಾಲ ಮಂಗಳೂರಿನಲ್ಲಿ ದಸರಾ ಸಂಭ್ರಮ ಮೇಳೈಸಲಿದೆ.‌ ಇನ್ನು ಮಂಗಳೂರು ದಸರಾ ಭಾಗವಾಗಿ ಕುದ್ರೋಳಿಯಲ್ಲಿ ಎಲ್ಲಿ ನೋಡಿದರಲ್ಲಿ ಮೈ ನವಿರೇಳಿಸುವ ಬೆಳಕಿನ ಚಿತ್ತಾರವೇ ಮೂಡಿದೆ. ರಸ್ತೆಗಳಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರವಾಗಿದ್ದು, ನಗರದ ಪ್ರಮುಖ ಕಟ್ಟಡಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ. ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಪ್ರತಿನಿತ್ಯ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾನ ನಡೆಯಲಿದೆ.

Monday Astro Tips: ಸೋಮವಾರ ಈ ಕೆಲಸ ಮಾಡಿ ಕೈ ತುಂಬಾ ಹಣ ಎಣ್ಸಿ

ಈ ಸುಂದರ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಂಡ ನವದುರ್ಗೆಯರು ದೇಶ ವಿದೇಶದ ಭಕ್ತರನ್ನು ಸೆಳೆಯುತ್ತಾರೆ. ಗಣಪತಿ, ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ದಿದಾತ್ರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ ಮಹಾಗೌರಿಯರನ್ನು ಇಲ್ಲಿನ ಸುಂದರ ಕಲಾಕೃತಿಗಳ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಭೂಲೋಕದ ಸ್ವರ್ಗದಂತಿರುವ ಸಭಾಂಗಣದಲ್ಲಿ ಅತ್ಯಾಕರ್ಷಕ ಸಂಯೋಜನೆಯಲ್ಲಿ ಈ 12 ದೇವರುಗಳನ್ನು ನೋಡುವುದು ಭಕ್ತರ ಕಣ್ಣಿಗೊಂದು ಹಬ್ಬ. ಮೈಸೂರು ದಸರಾಕ್ಕೆ ಇದು ಸರಿಸಾಟಿ ಎಂದು ಭಕ್ತರು ಬಣ್ಣಿಸುತ್ತಾರೆ. ಈ ರೀತಿ ನವರಾತ್ರಿಯ ಸಂದರ್ಭ ದೇವರುಗಳ ಪ್ರತಿಷ್ಠಾಪನೆ ದೇಶದ ಬೇರೆಲ್ಲೂ ಆಗೋದಿಲ್ಲ ಅನ್ನುವುದು ಇಲ್ಲಿನ ವಿಶೇಷತೆ. ನವರಾತ್ರಿಯ ದಿನದಲ್ಲಿ ಪೂಜೆಗೊಳ್ಳುವ ಈ ಎಲ್ಲಾ ಮೂರ್ತಿಗಳನ್ನು ಹತ್ತನೇ ದಿನ ಅಂದ್ರೆ ಅಕ್ಟೋಬರ್ 5 ರಂದು ನಗರದ 7 ಕಿಲೋಮೀಟರ್ ರಾಜರಸ್ತೆಯಲ್ಲಿ ದಸರಾ ಮೆರವಣಿಗೆ ನಡೆದು ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುತ್ತದೆ.

click me!