Navaratri ಉತ್ಸವದ ಪ್ರಯುಕ್ತ ಕಾರವಾರದಲ್ಲಿ 'ನವರಾತ್ರಿ ದಾಂಡಿಯಾ' ಸ್ಪೆಷಲ್

By Govindaraj SFirst Published Oct 3, 2022, 9:48 PM IST
Highlights

ನವರಾತ್ರಿ ಅಂದಾಕ್ಷಣ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಮೊದಲು ನೆನಪಾಗೋದು ಹುಲಿವೇಷವಾದ್ರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಂಡಿಯಾ. ನವರಾತ್ರಿಯ ಒಂಭತ್ತು ದಿನಗಳ ಕಾಲ ಕಾರವಾರ ನಗರದಲ್ಲಿ ವಿವಿಧೆಡೆ ದಾಂಡಿಯಾ ಆಡುವ ಮೂಲಕ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. 

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ (ಅ.03): ನವರಾತ್ರಿ ಅಂದಾಕ್ಷಣ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಮೊದಲು ನೆನಪಾಗೋದು ಹುಲಿವೇಷವಾದ್ರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಂಡಿಯಾ. ನವರಾತ್ರಿಯ ಒಂಭತ್ತು ದಿನಗಳ ಕಾಲ ಕಾರವಾರ ನಗರದಲ್ಲಿ ವಿವಿಧೆಡೆ ದಾಂಡಿಯಾ ಆಡುವ ಮೂಲಕ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕೇವಲ ಗುಜರಾತ್, ರಾಜಸ್ಥಾನನಂತಹ ರಾಜ್ಯಗಳಲ್ಲಿ ಮಾತ್ರ ಪ್ರಚಲಿತದಲ್ಲಿರುವ ದಾಂಡಿಯಾ, ಗರ್ಬಾ ನೃತ್ಯವನ್ನು ನವರಾತ್ರಿ ಸಂದರ್ಭದಲ್ಲಿ ಆಡುವ ಮೂಲಕ ಕಾರವಾರಿಗರು ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. 

ಒಂದೆಡೆ ದೀಪಾಲಂಕೃತಗೊಂಡಿರುವ ಆವರಣದಲ್ಲಿ ಬಣ್ಣ ಬಣ್ಣದ ಸೀರೆಯನ್ನುಟ್ಟು, ಕೈಯಲ್ಲಿ ಕೋಲನ್ನು ಹಿಡಿದು ನೃತ್ಯದಲ್ಲಿ ಭಾಗಿಯಾಗಿರುವ ಮಹಿಳೆಯರು. ಇನ್ನೊಂದೆಡೆ ಇಂಪಾದ ಗಾಯನಕ್ಕೆ ಸೊಗಸಾಗಿ ಹೆಜ್ಜೆ ಹಾಕುತ್ತಿರುವ ಪುರುಷರು, ಯುವಕರು ಹಾಗೂ ಯುವತಿಯರು. ಮತ್ತೊಂದೆಡೆ ದಾಂಡಿಯಾ ನೃತ್ಯವನ್ನು ಕಣ್ತುಂಬಿಕೊಂಡು ಮೊಬೈಲಿನಲ್ಲೂ ಸೆರೆಹಿಡಿಯುತ್ತಾ ಸಂಭ್ರಮಿಸುತ್ತಿರುವ ಪ್ರೇಕ್ಷಕರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ. ಗೋವಾ ಗಡಿ ತಾಲೂಕಾದ ಕಾರವಾರದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ರಾಜಸ್ಥಾನ, ಪಂಜಾಬ್ ಹಾಗೂ ಗುಜರಾತ್ ಸಂಸ್ಕೃತಿಯಾದ ದಾಂಡಿಯ ಹಾಗೂ ಗರ್ಬಾ ನೃತ್ಯವನ್ನು ಆಡುವ ಮೂಲಕ ಇಲ್ಲಿನ ಜನರು ಸಂಭ್ರಮಿಸುತ್ತಿದ್ದಾರೆ. 

ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸದಂತೆ ಬೃಹತ್‌ ಪ್ರತಿಭಟನೆ

ನವರಾತ್ರಿ ಬಂತೆಂದರೆ ಸಾಕು ಕಾರವಾರ ತಾಲೂಕಿನ ವಿವಿಧೆಡೆ ರಾತ್ರಿ ವೇಳೆಗೆ ದಾಂಡಿಯಾ ಹಾಗೂ ಗರ್ಬಾ ನೃತ್ಯವನ್ನು ಆಯೋಜಿಸಲಾಗುತ್ತದೆ. ಕಾರವಾರದ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿ ದಾಂಡಿಯಾ ಆಟವನ್ನು ಆಯೋಜಕರು ಆಯೋಜಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ. ಕೇವಲ ರಾಜಸ್ಥಾನ, ಗುಜರಾತ್, ಪಂಜಾಬ್‌ನಂತಹ ಕೆಲವೇ ರಾಜ್ಯಗಳಿಗೆ ಸೀಮಿತ ಎನ್ನಲಾದ ದಾಂಡಿಯಾ, ಗರ್ಬಾ ನೃತ್ಯವನ್ನು ಹಲವಾರು ವರ್ಷದಿಂದ ಕಾರವಾರದ ಜನರೂ ಆಡುತ್ತಾ ಬರುತ್ತಿದ್ದಾರೆ. ನಗರದ ದೇವಳಿವಾಡದಲ್ಲಿ ಕಳೆದ ಹದಿನೈದು ವರ್ಷಗಳಿಂದ ಆಯೋಜನೆ ಮಾಡಲಾಗುತ್ತಿರೋ ದಾಂಡಿಯಾ ಈ ವರ್ಷ ಕೂಡಾ ಅದ್ದೂರಿಯಾಗಿ ನಡೆಯುತ್ತಿದೆ. 

ಕಳೆದೆರಡು ವರ್ಷ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ದಾಂಡಿಯಾ ಈ ಬಾರಿ ಮತ್ತೆ ನಡೆಯುತ್ತಿದ್ದು, ಜನರು ಕೂಡಾ ಸಂಭ್ರಮದಿಂದ ದಾಂಡಿಯಾ ಆಡುವ ಮೂಲಕ ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ನವರಾತ್ರಿ ಉತ್ಸವದ ಒಂಬತ್ತೂ ದಿನಗಳಲ್ಲಿ ಕಾರವಾರ ತಾಲ್ಲೂಕಿನಲ್ಲಿ ದಾಂಡಿಯಾ ನೃತ್ಯವನ್ನು ಆಯೋಜನೆ ಮಾಡಲಾಗುತ್ತದೆ. ಇಲ್ಲಿನ ಪ್ರಮುಖ ದೇವತೆಗಳಾದ ದುರ್ಗಾದೇವಿ, ಸಂತೋಷಿಮಾತಾ, ಕುಂಠಿ ಮಹಾಮಾಯಿ, ವಿಠೋಬಾ, ಗಣಪತಿ ಸೇರಿದಂತೆ ಅನೇಕ ದೇವಾಲಯಗಳ ಆವರಣದಲ್ಲಿ ದಾಂಡಿಯಾವನ್ನು ಆಯೋಜನೆ ಮಾಡಲಾಗಿದೆ. 

ಇದರೊಂದಿಗೆ ದುರ್ಗಾದೇವಿಗೆ ಆರಾಧಿಸುವ ತಲೆಯ ಮೇಲೆ ಕಳಸವನ್ನು ಹೊತ್ತ ಗರ್ಬಾ ನೃತ್ಯವನ್ನು ಸಹ ಕೆಲವೆಡೆ ಆಯೋಜನೆ ಮಾಡಲಾಗಿದೆ. ಅಲ್ಲದೇ, ವಿವಿಧ ಸ್ಪರ್ಧೆಗಳನ್ನೂ ಆಯೋಜಿಸುವುದರಿಂದ ಎಲ್ಲರೂ ನೃತ್ಯ ಆಡಿ ಸಂಭ್ರಮಿಸುತ್ತಾರೆ. ಇನ್ನು ಈ ನೃತ್ಯದಲ್ಲಿ ಯಾವುದೇ ಜಾತಿ ಧರ್ಮ ಭೇದ ಭಾವವಿಲ್ಲದೇ ಮಹಿಳೆಯರು, ಮಕ್ಕಳು, ಪುರುಷರು ಒಟ್ಟಾಗಿ ಪಾಲ್ಗೊಂಡು ಸಂತಸಪಡುತ್ತಾರೆ. ನವರಾತ್ರಿಯ ಒಂಭತ್ತು ದಿನಗಳಲ್ಲೂ ಕಾರವಾರದ ದೇವಳಿವಾಡ, ಸೋನಾರವಾಡ, ಬಾಂಡಿಶಿಟ್ಟಾ, ಸದಾಶಿವಗಡ ಸೇರಿದಂತೆ ವಿವಿಧೆಡೆ ದಾಂಡಿಯಾ ಆಯೋಜನೆ ಮಾಡುವುದರಿಂದ ಎಲ್ಲಾ ವರ್ಗದ ಜನರು, ಜಾತಿ ಭೇದವಿಲ್ಲದೇ ಬೇರೆಯುತ್ತಾರೆ. 

ಪೊರಕೆ ಹಿಡಿದು ಬಸ್‌ ನಿಲ್ದಾಣ ಸ್ವಚ್ಛಗೊಳಿಸಿದ ಸ್ಪೀಕರ್‌ ಕಾಗೇರಿ

ಯಾವುದೇ ವ್ಯಕ್ತಿ ಕುಡಿದು, ಪಾನ್ ಹಾಕಿಕೊಂಡು, ಚುಯಿಂಗ್ ಜಗಿದುಕೊಂಡು, ಚಪ್ಪಲಿ ಹಾಕಿ ದಾಂಡಿಯಾ ಆಡುವಂತಿಲ್ಲ.‌ ಅಲ್ಲದೇ, ಯಾವುದೇ ಅಸಭ್ಯ ವರ್ತನೆಗೆ ಇಲ್ಲಿ ಅವಕಾಶಗಳು ಇರೋದಿಲ್ಲ. ಈ ದಾಂಡಿಯಾ ವೀಕ್ಷಣೆಗೆ ಅಂತಾನೇ ತಾಲ್ಲೂಕಿನ ವಿವಿಧೆಡೆಯಿಂದ ನೂರಾರು ಜನರು ತಡರಾತ್ರಿವರೆಗೂ ಆಗಮಿಸಿ ದಾಂಡಿಯಾ ವೀಕ್ಷಣೆ ಮಾಡಿದ ಬಳಿಕ ತೆರಳುತ್ತಾರೆ. ಒಟ್ಟಿನಲ್ಲಿ ನವರಾತ್ರಿ ಉತ್ಸವದ ಹಿನ್ನೆಲೆ ಕಾರವಾರದಲ್ಲಿ ದಾಂಡಿಯಾ ನೃತ್ಯದಲ್ಲಿ ಭಾಗವಹಿಸುವ ಮೂಲಕ ಜನರು ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ಜನರಲ್ಲಿ ಸೌಹಾರ್ದತೆ, ಪ್ರೀತಿ ಬೆಳೆಸುವ ಇಂತಹ ಕಾರ್ಯಕ್ರಮಗಳು ಪ್ರತಿಬಾರಿ ಎಲ್ಲೆಡೆ ಆಯೋಜನೆ ಆಗುವಂತಾಗಲಿ ಅನ್ನೋದು ಸಾರ್ವಜನಿಕರ ಅಭಿಪ್ರಾಯ.

click me!