ಶ್ರೀ ಕೃಷ್ಣ ಮಠದಲ್ಲಿ ತಪ್ತಮುದ್ರಾ ಧಾರಣೆ; ಯತಿಗಳಿಂದ ಮುದ್ರೆ ಹಾಕಿಸಿಕೊಳ್ಳಲು ಮುಗಿಬಿದ್ದ ಭಕ್ತರು

By Suvarna NewsFirst Published Jul 10, 2022, 4:56 PM IST
Highlights

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ತಪ್ತ ಮುದ್ರಾಧಾರಣೆಯನ್ನು ಶ್ರೀಗಳಿಂದ ಹಾಕಿಸಿಕೊಳ್ಳಲು ಸರ್ವೇಕಾದಶಿಯಂದು ಭಕ್ತರು ಮುಗಿ ಬಿದ್ದರು. 

ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್

ಇಂದು ಸರ್ವೇಕಾದಶಿ. ಮಾಧ್ವ(Madhwa) ಸಂಪ್ರದಾಯದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಈ ದಿನ ಮಠಾಧೀಶರ ಮೂಲಕ ಮುದ್ರಾಧಾರಣೆ ಮಾಡಿಕೊಳ್ಳುವ ಸಂಪ್ರದಾಯವಿದೆ. ಮಾಧ್ವ ಮತದ ಮೂಲಕೇಂದ್ರವಾಗಿರುವ ಉಡುಪಿಯ ಕೃಷ್ಣಮಠದಲ್ಲಿ ಸಾವಿರಾರು ಭಕ್ತರು ಮುದ್ರಾಧಾರಣೆ ಮಾಡಿಸಿಕೊಂಡರು. ತಪ್ತ ಮುದಾಧಾರಣೆಯ ಮಹತ್ವವೇನು ತಿಳಿದುಕೊಳ್ಳೋಣ ಬನ್ನೀ...

ತಪ್ತ ಮುದ್ರಾಧಾರಣೆ ವೈಷ್ಣವ ಸಂಪ್ರದಾಯದ ಒಂದು ವಿಶಿಷ್ಟ ಆಚರಣೆ. ಪ್ರಥಮ ಏಕಾದಶಿ(Ekadashi)ಯ ದಿನ ವಾರ್ಷಿಕ ಸಂಸ್ಕಾರವಾಗಿ ದೇಹದ ಮೇಲೆ ಮುದ್ರೆ ಹಾಕಿಸಿಕೊಳ್ಳಲಾಗುತ್ತೆ. ಆಚಾರ್ಯ ಮಧ್ವರ ಕಾಲದಿಂದ ಅಂದರೆ ಎಂಟ್ನೂರು ವರ್ಷಗಳಿಂದ ಈ ಆಚರಣೆ ಚಾಲ್ತಿಯಲ್ಲಿದೆ. ಉಡುಪಿ ಶ್ರೀ ಕೃಷ್ಣಮಠ(Udupi Sri Krishna Mutt)ದಲ್ಲಿ ಇಂದು ಸಾವಿರಾರು ಮಂದಿ ಪರ್ಯಾಯ ಮಠಾಧೀಶರಾದ ಕೃಷ್ಣಾಪುರದ ಶ್ರೀ ವಿದ್ಯಾಸಾಗರ ತೀರ್ಥರಿಂದ ಮುದ್ರಾ ಧಾರಣೆ ಮಾಡಿಸಿಕೊಂಡರು . ಈ ವೇಳೆ , ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು, ಅದಮಾರು ಮಠದ ಕಿರಿಯ ಶ್ರೀಗಳಾದ ಈಶಪ್ರಿಯ ತೀರ್ಥರು, ಶಿರೂರು ಮಠದ ವೇದವರ್ಧನ‌ತೀರ್ಥರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಕಿರಿಯ ಯತಿಗಳು ಪರ್ಯಾಯ ಕೃಷ್ಣಾಪುರ ಸ್ವಾಮೀಜಿಯಿಂದ ಮುದ್ರಾಧಾರಣೆ ಮಾಡಿಸಿಕೊಂಡರು. 

ಕೇವಲ ಯತಿಗಳಿಗೆ ಮಾತ್ರ ಮುದ್ರಾಧಾರಣೆ ಮಾಡುವ ಅಧಿಕಾರವಿದೆ. ಮಾಧ್ವ ಸಂಪ್ರದಾಯದ ಇತರ ಮಠಾಧೀಶರು ದೇಶದ ನಾನಾ ಭಾಗಗಳಲ್ಲಿ ಮುದ್ರಾಧಾರಣೆ ಮಾಡಿದರು.

ಗುರು ಪೂರ್ಣಿಮಾ 2022; ಹಿಂದೂ, ಜೈನ, ಬೌದ್ಧರೆಲ್ಲರಿಗೂ ಮಹತ್ವದ ದಿನ..

ನಾವು ದೇವರ ಪಕ್ಷದವರು ಎಂಬುದರ ಸಂಕೇತವಾಗಿ ವೈಷ್ಣವ ಚಿಹ್ನೆಗಳನ್ನು ಮೈ ಮೇಲೆ ಧರಿಸುವುದು ಈ ಆಚರಣೆಯ ವಿಶೇಷ. ಭಗವಂತನ ಕುರಿತಾದ ಶ್ರದ್ಧೆಯನ್ನು ಪ್ರಕಟಿಸುವುದು ಮುದ್ರಾಧಾರಣೆಯ ಮೂಲ ಉದ್ದೇಶ. 

ಸುದರ್ಶನ ಹೋಮ(Sudarshana homa)ವನ್ನು ನಡೆಸಿ, ಶಂಖ ಮತ್ತು ಚಕ್ರದ ಮುದ್ರೆಯನ್ನು ಅದರ ಶಾಖದಲ್ಲಿರಿಸಲಾಗುತ್ತೆ. ಬಳಿಕ ಆ ಚಿಹ್ನೆಗಳನ್ನು ಮಠಾಧೀಶರ ಮೂಲಕ ಮೈ ಮೇಲೆ ಹಾಕಿಸಿಕೊಳ್ಳಲಾಗುತ್ತೆ. ದೇವತೆಗಳು ಕೂಡಾ ಇಂದು ಮುದ್ರಾಧಾರಣೆ ಮಾಡಿಕೊಳ್ಳುತ್ತಾರೆ, ಶ್ರೀ ಮಧ್ವಾಚಾರ್ಯರು ಸ್ವರ್ಗದಲ್ಲಿ ಅವರಿಗೆ ಮುದ್ರಾಧಾರಣೆ ಮಾಡಿಸುತ್ತಾರೆ ಎಂಬ ನಂಬಿಕೆಯಿದೆ. 

ಮುದ್ರಾಧಾರಣೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಅನ್ನೋದು ಜನರ ವಿಶ್ವಾಸ, ಮಳೆಗಾಲದಲ್ಲಿ ಬಾಧಿಸುವ ಎಲ್ಲಾ ಬಗೆಯ ಚರ್ಮ ವ್ಯಾದಿಗಳಿಗೆ ಈ ಲೋಹಮುದ್ರೆಯಿಂದ ಪರಿಹಾರ ಕಾಣಬಹುದು ಅನ್ನೋದು ಭಕ್ತರ ಅಭಿಮತ.

ವೃಷಭ ರಾಶಿಯವರನ್ನು ಪ್ರೀತಿಸ್ತಿದೀರಾ? ಅವರ ಬಗ್ಗೆ ತಿಳ್ಕೋಬೇಕಾ?

ಜನ ಆಧುನಿಕರಾಗುತ್ತಿದ್ದಾರೆ, ಆದರೂ ಮೂಲ ಸಂಪ್ರದಾಯವನ್ನು ಇನ್ನೂ ಬಿಟ್ಟುಕೊಟ್ಟಿಲ್ಲ ಅನ್ನೋದಕ್ಕೆ ಮಾಧ್ವ ಸಂಪ್ರದಾಯದ ಈ ವಿಶಿಷ್ಟ ಆಚರಣೆಯೇ ಸಾಕ್ಷಿ. 

click me!