ಮ.ಪ್ರ. ಸರ್ಕಾರದಿಂದ ಲವ- ಕುಶ ದೇಗುಲ ನಿರ್ಮಾಣ ಘೋಷಣೆ; ಲವ ಕುಶರ ಕತೆ ನಿಮಗೆ ಗೊತ್ತಾ?

By Suvarna NewsFirst Published May 16, 2023, 11:58 AM IST
Highlights

ಮಧ್ಯಪ್ರದೇಶ ಬಿಜೆಪಿ ಸರ್ಕಾರವು ಶ್ರೀರಾಮಚಂದ್ರನ ಪುತ್ರರಾದ ಲವ ಮತ್ತು ಕುಶರ ದೇಗುಲವನ್ನು ನಿರ್ಮಿಸುವುದಾಗಿ ಘೋಷಣೆ ಮಾಡಿದೆ. ಅಂದ ಹಾಗೆ ನಿಮಗೆಲ್ಲ ರಾಮ ಸೀತೆಯ ಕತೆ ತಿಳಿದೇ ಇದೆ. ಅವರ ಮಕ್ಕಳಾದ ಲವ ಕುಶರ ಕತೆ ಗೊತ್ತಾ?

ಕರ್ನಾಟಕ ಸೋಲಿನ ಬೆನ್ನಲ್ಲೇ ಮಧ್ಯಪ್ರದೇಶ ಬಿಜೆಪಿ ಸರ್ಕಾರ ಹಿಂದುಗಳ ಮತ್ತಷ್ಟುಓಲೈಕೆಗೆ ಮುಂದಾಗಿದೆ. ಶ್ರೀರಾಮಚಂದ್ರನ ಪುತ್ರರಾದ ಲವ ಮತ್ತು ಕುಶರ ದೇಗುಲವನ್ನು ನಿರ್ಮಿಸುವುದಾಗಿ ಸಿಎಂ ಶಿವರಾಜ ಸಿಂಗ್‌ ಚೌಹಾಣ್‌ ಘೋಷಿಸಿದ್ದಾರೆ. ಸಧ್ಯ ವಯನಾಡಲ್ಲಿ ಮಾತ್ರ ಲವ ಕುಶರಿಗಾಗಿ ದೇವಾಲಯವಿದೆ. 

ಅಂದ ಹಾಗೆ, ಬಹುತೇಕರಿಗೆ ರಾಮ ಸೀತೆಯ ಕತೆ ಗೊತ್ತು. ಆದರೆ ಲವ ಕುಶರ ಕತೆ ಹೆಚ್ಚಿನವರಿಗೆ ತಿಳಿದಿಲ್ಲ. ಲವ ಕುಶ ಜನ್ಮವೃತ್ತಾಂತ ಸೇರಿದಂತೆ ಅವರ ಕುರಿತ ವಿವರಗಳು ಇಲ್ಲಿವೆ.

ಉತ್ತರ ಕಾಂಡ
ಉತ್ತರ ಕಾಂಡದಲ್ಲಿ ಲವಕುಶರು ತಮ್ಮ ತಂದೆಯನ್ನು ಹೇಗೆ ಭೇಟಿಯಾದರು ಮತ್ತು ಅಯೋಧ್ಯೆಗೆ ಹಿಂದಿರುಗಿದರು ಎಂಬುದರ ಉಲ್ಲೇಖವಿದೆ. ಇದು ಮಹಾನ್ ಮಹಾಕಾವ್ಯ ರಾಮಾಯಣದ ಕೊನೆಯ ಅಧ್ಯಾಯವಾಗಿದೆ. ಈ ಅಧ್ಯಾಯದಲ್ಲಿ ವಾಲ್ಮೀಕಿಯ ಆಶ್ರಮದಲ್ಲಿ ರಾಮನ ಇಬ್ಬರು ಮಕ್ಕಳಾದ ಲವ ಮತ್ತು ಕುಶರ ಜನನದ ವಿವರಣೆಯನ್ನು ನೀಡುತ್ತದೆ ಮತ್ತು ಪ್ರಪಂಚದಲ್ಲಿ ರಾಮನ ಕೊನೆಯ ದಿನಗಳ ವಿವರಣೆಯೊಂದಿಗೆ ಪ್ರಸಂಗವು ಕೊನೆಗೊಳ್ಳುತ್ತದೆ.

ಸೀತೆಯ ಅಗ್ನಿ ಪರೀಕ್ಷೆ
ಅಯೋಧ್ಯೆಗೆ ಮರಳಿದ ನಂತರ, ರಾಮನು ಸೀತೆ ತನ್ನ ಪರಿಶುದ್ಧತೆಯನ್ನು ಸಾಬೀತುಪಡಿಸಬೇಕೆಂದು ಬಯಸಿದನು. ಅಶೋಕವನದಲ್ಲಿ ಸೀತೆಯನ್ನು ರಾವಣ ಅಪಹರಿಸಿ ಇರಿಸಿದ್ದರಿಂದ  ಸೀತೆಯನ್ನು ಅಗ್ನಿ ಪರೀಕ್ಷೆಗೆ ಒಳಪಡಿಸಲು ಕೇಳಲಾಯಿತು. ಸೀತೆಯ ಸಂಕಟ ಇಲ್ಲಿಗೆ ಮುಗಿಯಲಿಲ್ಲ. ಶೀಘ್ರದಲ್ಲೇ, ರಾಜ್ಯದ ನಾಗರಿಕರು ಸೀತೆಯ ಸಮಗ್ರತೆ ಮತ್ತು ಪರಿಶುದ್ಧತೆಯ ಬಗ್ಗೆ ಪ್ರಶ್ನಿಸಿದರು. ರಾಮನು ಸೀತೆಯನ್ನು ನಂಬಿದ್ದನು. ಆದರೆ ಅವನು ತನ್ನ ರಾಜ್ಯದ ಪ್ರಜೆಗಳ ಮನವಿಯನ್ನು ಕೇಳಬೇಕಾಗಿತ್ತು. ಹೀಗಾಗಿ, ಸೀತೆಯನ್ನು ಎರಡನೇ ಬಾರಿಗೆ ವನವಾಸಕ್ಕೆ ಕಳುಹಿಸಲಾಯಿತು. ರಾಮ ಲಕ್ಷ್ಮಣನಿಗೆ ಸೀತೆಯ ಜೊತೆಯಲ್ಲಿ ಹೋಗಿ ಅವಳನ್ನು ಕಾಡಿಗೆ ಬಿಡುವಂತೆ ಸೂಚಿಸಿದನು.

Shani Jayanti 2023: ಶನಿಗೂ ಸೂರ್ಯನಿಗೂ ಮುನಿಸೇಕೆ? ಶನಿಯ ಜನ್ಮವೃತ್ತಾಂತ ಬಲ್ಲಿರಾ?

ಲವ ಕುಶರ ಜನನ
ಸೀತೆಯನ್ನು ಕಾಡಿಗೆ ಬಿಟ್ಟಾಗ ಸೀತೆ ಆಗಲೇ ಗರ್ಭಿಣಿಯಾಗಿದ್ದಳು. ಈ ಸಮಯದಲ್ಲಿ, ಅವಳು ಕಾಡಿನಲ್ಲಿ ಒಬ್ಬಂಟಿಯಾಗಿದ್ದಳು. ವಾಲ್ಮೀಕಿ ಮಹರ್ಷಿಯು ತನ್ನ ಆಶ್ರಮದಲ್ಲಿ ಸೀತೆಗೆ ಆಶ್ರಯ ನೀಡುವಷ್ಟು ದಯೆ ತೋರಿದರು. ಈ ಆಶ್ರಮದಲ್ಲಿ ಸೀತೆ ಎರಡು ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಲವ ಮತ್ತು ಕುಶಗೆ ಜನ್ಮ ನೀಡಿದಾಗ ತಾಯಿ ಸೀತೆಗೆ 44 ವರ್ಷ ವಯಸ್ಸಾಗಿತ್ತು ಎಂದು ನಂಬಲಾಗಿದೆ. ವಾಲ್ಮೀಕಿ ಋಷಿಯು ಇಬ್ಬರು ಅವಳಿಗಳ ಜವಾಬ್ದಾರಿಯನ್ನು ತೆಗೆದುಕೊಂಡು ಅವರಿಗೆ ಅತ್ಯುತ್ತಮ ಶಿಕ್ಷಣ ನೀಡಿದರು. ಅವರಿಗೆ ಯುದ್ಧ ಕೌಶಲ್ಯಗಳನ್ನು ನೀಡಲಾಯಿತು ಮತ್ತು ಶೀಘ್ರದಲ್ಲೇ ಇಬ್ಬರು ಚಿಕ್ಕ ಮಕ್ಕಳು ಧೈರ್ಯಶಾಲಿ ಹಾಗೂ ಬುದ್ಧಿವಂತ ಯುವಕರಾಗಿ ಬೆಳೆದರು. ವಾಲ್ಮೀಕಿ ಅವರಿಗೆ ತಾನು ರಚಿಸಿದ ರಾಮಾಯಣವನ್ನು ಹಾಡಲು ಕೂಡಾ ಹೇಳಿಕೊಟ್ಟಿದ್ದರು. 

ಲವ ಕುಶ ಹೆಸರು ಬಂದಿದ್ದು ಹೀಗೆ
ಅದೇ ಅಧ್ಯಾಯವು ನಂತರ ಇಬ್ಬರು ಪುತ್ರರಿಗೆ ಲವ ಮತ್ತು ಕುಶ ಎಂಬ ಹೆಸರನ್ನು ಹೇಗೆ ಪಡೆಯುತ್ತದೆ ಎಂಬುದನ್ನು ವಿವರಿಸುತ್ತದೆ. ಮಕ್ಕಳ ಜನನದ ನಂತರ, ಅಲ್ಲಿದ್ದ ಶಿಷ್ಯರು ವಾಲ್ಮೀಕಿಗೆ ಈ ವಿಷಯವನ್ನು ತಿಳಿಸಿದರು ಮತ್ತು ನವಜಾತ ಮಕ್ಕಳನ್ನು ಪ್ರೇತ ಮತ್ತು ರಾಕ್ಷಸರಿಂದ ರಕ್ಷಿಸಲು ಹೇಳಿದರು.ಇದನ್ನು ಕೇಳಿದ ವಾಲ್ಮೀಕಿ ಮಹರ್ಷಿಗಳು ಕುಶ (ಹುಲ್ಲಿನ ಮೇಲಿನ ಭಾಗ) ಮತ್ತು ಲವ (ಹುಲ್ಲಿನ ಕೆಳಭಾಗ) ತೆಗೆದುಕೊಂಡು ಮಕ್ಕಳನ್ನು ನಕಾರಾತ್ಮಕ ಶಕ್ತಿಗಳ ವಿರುದ್ಧ ರಕ್ಷಿಸಲು ಮಂತ್ರದ ಸಹಾಯದಿಂದ ವ್ಯವಸ್ಥೆ ಮಾಡಿದರು. ಜೊತೆಗೆ, ಮಕ್ಕಳಿಗೂ ಲವ ಮತ್ತು ಕುಶ ಎಂದೇ ಹೆಸರಿಸಿದರು. 

ಅವರಿಬ್ಬರೂ ಪರಮ ಪರಾಕ್ರಮಿಗಳಾಗಿ ಕಾಡಿನಲ್ಲಿ ಬೆಳೆದರು. ಮುಂದೊಮ್ಮೆ ರಾಮ ಅಶ್ವಮೇಧ ಯಾಗ ನಡೆಸಿ ಎಲ್ಲ ರಾಜ್ಯಗಳನ್ನು ಗೆಲ್ಲುತ್ತಾನೆ. ಆಗ ಅಶ್ವಮೇಧದ ಕುದುರೆ ಕಾಡನ್ನು ಪ್ರವೇಶಿಸುತ್ತದೆ. ಅಲ್ಲಿದ್ದ ಲವ ಅದನ್ನು ಕಟ್ಟಿ ಹಾಕುತ್ತಾನಷ್ಟೇ ಅಲ್ಲದೆ ಎಲ್ಲ ಯೋಧರೊಂದಿಗೆ ಹೋರಾಡಿ ಗೆಲ್ಲುತ್ತಾನೆ. ಶತ್ರುಘ್ನ ಅವನನ್ನು ಕೆಡವಿ ರಾಜ್ಯದತ್ತ ಕೊಂಡೊಯ್ಯುವಾಗ ಕುಶ ಹೋಗಿ ಹೋರಾಡಿ ಶತ್ರುಘ್ನನನ್ನು ಕೆಳಗುರುಳಿಸುತ್ತಾನೆ. ಇದನ್ನು ಕೇಳಿದ ರಾಮ ಲಕ್ಷ್ಮಣ, ಹನುಮಂತ ಮುಂತಾದವರನ್ನೆಲ್ಲ ಯುದ್ಧಕ್ಕೆ ಕಳುಹಿಸುತ್ತಾನೆ. ಲವ ಕುಶರು ಅವರೆಲ್ಲರೆದುರು ತಮ್ಮ ಪರಾಕ್ರಮ ಮೆರೆಯುತ್ತಾರೆ. ವಿಷಯ ತಿಳಿದ ವಾಲ್ಮೀಕಿ ರಾಮನಿದ್ದಲ್ಲಿಗೆ ನಡೆದು, ಮಾತನಾಡುತ್ತಾರೆ. 

ರಾಮಾಯಣದ ಉತ್ತರಕಾಂಡದ ಮತ್ತೊಂದು ಉದ್ಧರಣದಲ್ಲಿ ಲವ ಮತ್ತು ಕುಶರ ಪಿತೃತ್ವದ ಬಗ್ಗೆ ವಾಲ್ಮೀಕಿ ರಾಮನಿಗೆ ಹೇಳುವುದು ಇಲ್ಲಿದೆ:
'ಹೇ ರಾಮನೇ, ಈ ಅದಮ್ಯ ಅವಳಿ ಸಹೋದರರು ನಿನ್ನ ಪುತ್ರರು. ರಘುವಿನ ವಂಶಸ್ಥರೆಂಬ ಸತ್ಯವನ್ನು ನಾನು ನಿನಗೆ ಹೇಳುತ್ತೇನೆ. ನಾನು ಪ್ರಚೇತನ ಹತ್ತನೆಯ ಮಗ, ಆದ್ದರಿಂದ, ಅಸತ್ಯವನ್ನು ಮಾತನಾಡುವುದಿಲ್ಲ. ಆದುದರಿಂದ ಈ ಅವಳಿ ಮಕ್ಕಳು ನಿನ್ನ ಮಕ್ಕಳೆಂಬ ಸತ್ಯ ನನಗೆ ಗೊತ್ತು.'

Gajkesari Yog: ಮೇಷ ಸೇರಿ 3 ರಾಶಿಗಳಿಗೆ ಲಾಭ ತರಲಿರುವ ಗುರು-ಚಂದ್ರ ಯುತಿ

ಇದನ್ನು ಕೇಳಿದ ರಾಮ ಅವರನ್ನು ಸಂತೋಷದಿಂದ ಆಸ್ಥಾನಕ್ಕೆ ಕರೆದುಕೊಳ್ಳುತ್ತಾನೆ. ಸೀತೆಯನ್ನು ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಆದರೆ, ಸೀತೆ, ಅರಮನೆಗೆ ಬರಲೊಪ್ಪದೆ ಮಕ್ಕಳನ್ನು ನೋಡಿಕೊಳ್ಳಲು ಹೇಳಿ ಭೂಮಿಯೊಳಗೆ ಸೇರಿ ಹೋಗುತ್ತಾಳೆ. ರಾಮನ ಮರಣದ ಬಳಿಕ ಲವ ಇಂದಿನ ಲಾಹೋರ್‌ಗೆ ತೆರಳಿದರೆ ಕುಶ ಚತ್ತೀಸ್‌ಗಢಕ್ಕೆ ತೆರಳಿ ನಾಗ ರಾಜಕುಮಾರಿಯನ್ನು ವಿವಾಹವಾಗುತ್ತಾನೆ. 

click me!