Mysuru Dasara 2022: ಗಜಪಡೆ ಮಾವುತರು, ಕಾವಾಡಿಗಳಿಗೆ ಉಪಾಹಾರ; ಹೋಳಿಗೆ ಬಡಿಸಿದ ಎಸ್.ಟಿ.ಸೋಮಶೇಖರ್

By Kannadaprabha NewsFirst Published Sep 19, 2022, 12:20 PM IST
Highlights

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯೊಂದಿಗೆ ಬಂದಿರುವ ಮಾವುತರು ಮತ್ತು ಕಾವಾಡಿ ಕುಟುಂಬಗಳಿಗೆ  ಉಪಾಹಾರ ಕೂಟ ಏರ್ಪಡಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಮಾವುತರಿಗೆ ಹೋಳಿಗೆ ಬಡಿಸುವ ಮೂಲಕ ಚಾಲನೆ ನೀಡಿದರು

ಮೈಸೂರು (ಸೆ.19) : ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯೊಂದಿಗೆ ಬಂದಿರುವ ಮಾವುತರು ಮತ್ತು ಕಾವಾಡಿ ಕುಟುಂಬಗಳಿಗೆ ಮೈಸೂರು ಅರಮನೆ ಆವರಣದಲ್ಲಿ ಭಾನುವಾರ ಬೆಳಗ್ಗೆ ಉಪಾಹಾರ ಕೂಟವನ್ನು ಆಯೋಜಿಸಲಾಗಿತ್ತು. ಮೈಸೂರು ಅರಮನೆ ಮಂಡಳಿಯು ವ್ಯವಸ್ಥೆ ಮಾಡಿದ್ದ ಈ ಉಪಾಹಾರ ಕೂಟದಲ್ಲಿ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಮಾವುತರಿಗೆ ಹೋಳಿಗೆ ಬಡಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾವುತರು, ಕಾವಾಡಿಗಳೊಂದಿಗೆ ಕುಳಿತು ಉಪಾಹಾರ ಸೇವಿಸಿದರು.

ದಸರಾಗೆ ಪ್ರಧಾನಿ ಬರುವ ಬಗ್ಗೆ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ: ಪ್ರತಾಪ್ ಸಿಂಹ

ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರು ಇಡ್ಲಿ- ಚಟ್ನಿ- ಸಾಂಬಾರ್‌, ಉದ್ದಿನ ವಡೆ, ಉಪ್ಪಿಟ್ಟು- ಕೇಸರಿ ಬಾತ್‌, ದೋಸೆ- ಪಲ್ಯ- ಚಟ್ನಿ, ಬೇಳೆ ಹೋಳಿಗೆ- ತುಪ್ಪ, ಕಾಫಿ, ಟೀ ಸವಿದರು. ಆಟಿಕೆ ವಿತರಣೆ: ಇದೇ ವೇಳೆ ಮಾವುತರು ಮತ್ತು ಕಾವಾಡಿಗಳ ಮಕ್ಕಳಿಗೆ ಆಟದ ಸಾಮಗ್ರಿಗಳನ್ನು ವಿತರಿಸಿದ ಸಚಿವರು, ಕ್ರಿಕೆಟ್‌ ಬ್ಯಾಟ್‌ ಬೀಸಿ ಸಂತಸಪಟ್ಟರು. ನಂತರ ಜೆಎಸ್‌ಎಸ್‌ ಆಸ್ಪತ್ರೆಯ ವತಿಯಿಂದ ಆಯೋಜಿಸಿರುವ ಆರೋಗ್ಯ ತಪಾಸಣೆಯನ್ನು ವೀಕ್ಷಿಸಿ ಸಚಿವರು, ಬಿಪಿ ತಪಾಸಣೆ ಮಾಡಿಸಿಕೊಂಡರು. ಬಳಿಕ ಅರಮನೆಯಲ್ಲಿ ಜನಿಸಿದ ಮರಿಯಾನೆ ಶ್ರೀದತ್ತಾತ್ರೇಯ ಹಾಗೂ ತಾಯಿ ಲಕ್ಷ್ಮಿ ಆನೆಯನ್ನು ಸಚಿವರು ವೀಕ್ಷಿಸಿದರು.

ಸಂಸದ ಪ್ರತಾಪ್‌ ಸಿಂಹ, ವಿಧಾನ ಪರಿಷತ್ತು ಸದಸ್ಯ ಸಿ.ಎನ್‌. ಮಂಜೇಗೌಡ, ಮೇಯರ್‌ ಶಿವಕುಮಾರ್‌, ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯರ ಮಿರ್ಲೆ ಶ್ರೀನಿವಾಸಗೌಡ್‌, ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌, ಜಂಗಲ್‌ ಲಾಡ್ಜ್‌ ಮಾಜಿ ಅಧ್ಯಕ್ಷ ಎಂ. ಅಪ್ಪಣ್ಣ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ, ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್‌. ಮಂಜುನಾಥಸ್ವಾಮಿ, ಡಿಸಿಪಿ ಎಂ.ಎಸ್‌. ಗೀತಾ ಪ್ರಸನ್ನ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌. ಸುಬ್ರಮಣ್ಯಂ, ಎಸಿಪಿ ಚಂದ್ರಶೇಖರ್‌, ಡಿಸಿಎಫ್‌ ಡಾ.ವಿ. ಕರಿಕಾಳನ್‌, ಆನೆ ವೈದ್ಯ ಡಾ. ಮುಜೀಬ್‌ ಮೊದಲಾದವರು ಇದ್ದರು. Mysuru Dasara 2022: ಜಂಬೂ ಸವಾರಿ ಆನೆ ಲಕ್ಷ್ಮೀಗೆ ಗಂಡು ಮರಿ: ಮೈಸೂರಿನಲ್ಲಿ ಸಂಭ್ರಮ

ದಸರಾ ಸಂದರ್ಭದಲ್ಲಿ ಮಾವುತರು, ಕಾವಾಡಿಗರ ಪಾತ್ರ ಮಹತ್ತರವಾದದ್ದು. ದಸರಾ ಸಂದರ್ಭದಲ್ಲೇ ಲಕ್ಷ್ಮಿ ಆನೆ ಗಂಡು ಆನೆಗೆ ಜನ್ಮ, ನೀಡಿದ್ದು ಇದರ ಪ್ರಯುಕ್ತ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ದಸರಾಗೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆ ಅಂತಿಮ ಹಂತದಲ್ಲಿದೆ. ಸೋಮವಾರ ರಾಷ್ಟ್ರಪತಿ ಕಚೇರಿಯಿಂದ ಮಾಹಿತಿ ಬರಲಿದೆ. ದಸರಾ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಸೋಮವಾರ ಅಂತಿಮವಾಗಲಿದೆ.

- ಎಸ್‌.ಟಿ. ಸೋಮಶೇಖರ್‌, ಜಿಲ್ಲಾ ಉಸ್ತುವಾರಿ ಸಚಿವರು

click me!