ಜಗತ್ತು ಕಾಯೋ ಶಿವನಿಗಿದೆ 8 ಸಂತಾನ, ಯಾರು ಯಾರೆಂದು ಇಲ್ಲಿದೆ ಡೀಟೇಲ್..!

By Suvarna NewsFirst Published Apr 3, 2021, 4:56 PM IST
Highlights

ಪರಶಿವನ ಸಂತಾನದ ಬಗ್ಗೆ ಪುರಾಣಗಳು ಉಲ್ಲೇಖಿಸಿರುವಂತೆ ಪರಶಿವನಿಗೆ ಎಂಟು ಸಂತಾನವೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ತಿಳಿದಿರುವಂತೆ ಸುಬ್ರಮಣ್ಯ ಮತ್ತು ಗಣೇಶ ಶಿವನ ಸಂತಾನವೆಂದು ಹೇಳಲಾಗುತ್ತದೆ. ಪದ್ಮ ಪುರಾಣ ಮತ್ತು ಶಿವ ಪುರಾಣಗಳಲ್ಲದೇ, ಇನ್ನೂ ಅನೇಕ ಪುರಾಣಗಳಲ್ಲಿ ಮಹಾದೇವನ ಇತರ ಸಂತಾನಗಳ ಬಗ್ಗೆ ಉಲ್ಲೇಖವಿದೆ. ಹಾಗಾದರೆ ಮಹಾದೇವನ ಸಂತಾನಗಳ ಬಗ್ಗೆ ತಿಳಿಯೋಣ...

ಬೇಡಿದ್ದನ್ನೆಲ್ಲ ಕೊಡುವ ದೇವ ಮಹಾದೇವನೆಂದು ಹೇಳುವುದನ್ನು ಕೇಳಿದ್ದೇವೆ. ಭಕ್ತಿಯಿಂದ ಶಿವನನ್ನು ಆರಾಧಿಸಿದ ರಾವಣನಿಗೆ ತನ್ನ ಆತ್ಮಲಿಂಗವನ್ನೇ ಕೊಟ್ಟವ ಪರಶಿವ. ಹಾಗಾಗಿ ಭಕ್ತಿಯಿಂದ ಆತನನ್ನು ಆರಾಧಿಸಿದರೆ ಮನೋಕಾಮನೆಗಳೆಲ್ಲ ಪೂರ್ಣವಾಗುತ್ತವೆ. 

ಸಾಮಾನ್ಯವಾಗಿ ತಿಳಿದಿರುವಂತೆ ಶಿವನಿಗೆ ಎರಡು ಸಂತಾನ. ಗಣೇಶ ಮತ್ತು ಕಾರ್ತಿಕೇಯ ಅಥವಾ ಸುಬ್ರಮಣ್ಯನೆಂದು ಕರೆಯುತ್ತಾರೆ. ಆದರೆ ಪುರಾಣಗಳಲ್ಲಿ ಪರಶಿವನ ಸಂತಾನದ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಸಲಾಗಿದೆ. ಹಾಗಾಗಿ ಈಶ್ವರನು ಹೊಂದಿರುವ ಸಂತಾನಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಪುರಾಣಗಳಲ್ಲಿ ಹೇಳುವ ಪ್ರಕಾರ ಪರಶಿವನಿಗೆ ಎಂಟು ಸಂತಾನಗಳಿವೆ. ಅವರೆಲ್ಲ ಯಾರೆಂಬುದರ ಬಗ್ಗೆ ಉಲ್ಲೇಖಿಸಿದ್ದಾರೆ. ಹಾಗಾದರೆ ಪರಶಿವನ ಎಂಟು ಸಂತಾನಗಳ ಬಗ್ಗೆ ತಿಳಿಯೋಣ...

ಪ್ರಥಮ ಪೂಜಕ ಗಣೇಶ
ಗಣಪತಿಯು ಶಿವ-ಪಾರ್ವತಿಯರ ಪುತ್ರ. ಪುರಾಣಗಳ ಅನುಸಾರ ಪಾರ್ವತಿ ದೇವಿಯ ಬೆವರಿನಿಂದ ಹುಟ್ಟಿದವ ಗಣೇಶ. ನಂತರ ಪಾರ್ವತಿಯ ಆಜ್ಞೆಯನ್ನು ಪಾಲಿಸುವ ಗಣೇಶ, ಶಿವನ ಸಿಟ್ಟಿಗೆ ಗುರಿಯಾಗುತ್ತಾನೆ. ಸಿಟ್ಟಿನಿಂದ ಗಣಪತಿಯ ಶಿರವನ್ನು ಉರುಳಿಸುವ ಶಿವ, ಪಾರ್ವತಿಯ ಮನವಿ ಮೇರೆಗೆ, ಆನೆಯ ಶಿರವನ್ನು ಗಣೇಶನಿಗೆ ಜೋಡಿಸಿ ಜೀವವನ್ನು ನೀಡುತ್ತಾನೆ. 

ಇದನ್ನು ಓದಿ: ಈ ನಾಲ್ಕು ರಾಶಿಯವರಿಗೆ ಸಂಗಾತಿ ಹಣದ ಮೇಲೆ ವ್ಯಾಮೋಹವಂತೆ! 

ಕಾರ್ತಿಕೇಯ
ತಾರಕಾಸುರನ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ದೇವತೆಗಳಿಂದಲೂ ತಾರಕಾಸುರನ ವಧೆ ಸಾಧ್ಯವಿರಲಿಲ್ಲ. ಕಾರಣ ತಾರಕಾಸುರನು ಅಂತಹ ವರವನ್ನು ಪಡೆದಿದ್ದನು. ಅದೇನೆಂದರೆ ಶಿವ – ಪಾರ್ವತಿಯ ಸಂತಾನದಿಂದ ಮಾತ್ರ ತಾರಕಾಸುರನ ಹತ್ಯೆ ಸಾಧ್ಯವಾಗಬೇಕೆಂಬ ವರವನ್ನು ಪಡೆದಿದ್ದ. ಅದು ಸಾಧ್ಯವಾಗದ ಮಾತೆಂದು ಅಂದಕೊಂಡ ತಾರಕಾಸುರ ತಾನೇ ಬುದ್ಧಿವಂತ, ತನ್ನ ಅಂತ್ಯ ಅಸಾಧ್ಯವೆಂದು ಬೀಗುತ್ತಿದ್ದ. ಮನ ಬಂದಂತೆ ಸಿಕ್ಕವರನ್ನೆಲ್ಲ ಹಿಂಸಿಸುತ್ತಿದ್ದ. ಇತ್ತ ಕಡೆ ಮಹಾದೇವ ಘೋರವಾದ ತಪಸ್ಸಿನಲ್ಲಿ ಮುಳುಗಿದ್ದ. ಹಾಗಾಗಿ ದೇವತೆಗಳೆಲ್ಲ ಆತಂಕದಿಂದ ದಿನ ದೂಡುತ್ತಿದ್ದರು. ಮಹಾದೇವನ ತಪಸ್ಸಿಗೆ ಭಂಗ ತರಲು ಕಾಮದೇವನನ್ನು ಕಳಿಸಿದರೆ, ಶಿವ ತನ್ನ ಸಿಟ್ಟಿನ ಜ್ವಾಲೆಯಿಂದ ಕಾಮದೇವನನ್ನು ಭಸ್ಮ ಮಾಡಿದ. ಮಹಾದೇವನ ಸಿಟ್ಟಿನಿಂದ ಉತ್ಪತ್ತಿಯಾದ ಜ್ವಾಲೆಯನ್ನು ಸ್ವತಃ ಅಗ್ನಿದೇವನಿಗೂ ಸಹಿಸಲಾಗಲಿಲ್ಲ. ಅದನ್ನು ಗಂಗೆಯಲ್ಲಿ ಬಿಟ್ಟುಬಿಡುತ್ತಾನೆ. ಆಗ ಗಂಗೆಯ ತಟದಲ್ಲಿ ಆರು ತಲೆಯ ಬಾಲಕನ ಜನ್ಮವಾಗುತ್ತದೆ. ಅದನ್ನು ಪಾರ್ವತಿ ದೇವಿಯು ಒಂದು ಶಿರವನ್ನಾಗಿ ಮಾಡುತ್ತಾಳೆ. ಆ ಬಾಲಕನನ್ನು ಆರು ಅಪ್ಸರೆಯರು ಪೋಷಿಸುತ್ತಾರೆ. ಅವನೇ ಕಾರ್ತಿಕೇಯನಾಗುತ್ತಾನೆ. ಬಳಿಕ ತಾರಕಾಸುರನನ್ನು ವಧಿಸುತ್ತಾನೆ.



ಅಶೋಕ ಸುಂದರಿ
ಪದ್ಮ ಪುರಾಣದ ಪ್ರಕಾರ ಪಾರ್ವತಿ ದೇವಿ ತನ್ನ ಒಂಟಿತನ ಹಾಗೂ ಬೇಸರವನ್ನು ಹೋಗಲಾಡಿಸಲು ತನಗೊಂದು ಪುತ್ರಿ ಬೇಕು ಎಂದು ಕಲ್ಪವೃಕ್ಷದ ಬಳಿ ಮನದಿಚ್ಛೆಯನ್ನು ಹೇಳಿಕೊಳ್ಳುತ್ತಾಳೆ. ಆಗ ಪಾರ್ವತಿಗೆ ಪುತ್ರಿ ಪ್ರಾಪ್ತಿಯಾಗುತ್ತದೆ. ಆ ಪುತ್ರಿಗೆ ಅಶೋಕ ಸುಂದರಿ ಎಂದು ನಾಮಕರಣ ಮಾಡಲಾಗುತ್ತದೆ. 

ಇದನ್ನು ಓದಿ: ಫರ್ನಿಚರ್ ಖರೀದಿಸುವ ಮುನ್ನ ತಿಳಿದುಕೊಳ್ಳಬೇಕಾದ ವಾಸ್ತು ನಿಯಮಗಳು

ಮನಸಾ ದೇವಿ
ಪೌರಾಣಿಕ ಕಥೆಗಳಲ್ಲಿ ಹೇಳುವ ಪ್ರಕಾರ, ಮನಸಾದೇವಿಯು ಮಹಾದೇವನ ಮಾನಸ ಪುತ್ರಿ. ಮಾನಸ ಪುತ್ರಿಯಾಗಿರುವ ಕಾರಣ ಆಕೆಗೆ ಮನಸಾ ದೇವಿ ಎಂಬ ಹೆಸರು ಬಂದಿದೆ. ಇನ್ನೊಂದು ಕಥೆಯ ಪ್ರಕಾರ ವಾಸುಕಿ ನಾಗ ಮಹಾದೇವನಲ್ಲಿ ತನಗೊಂದು ಸಹೋದರಿ ಬೇಕು ಎಂದು ಕೇಳಿಕೊಂಡಾಗ ಮಹಾದೇವ ಮನಸಾ ದೇವಿಯನ್ನು ಸಹೋದರಿಯ ರೂಪದಲ್ಲಿ ಪ್ರದಾನ ಮಾಡುತ್ತಾನೆ. 

ದೇವಿ ಜ್ಯೋತಿ 
ಮಹಾದೇವನ ತೇಜಸ್ಸಿನಿಂದ ಉತ್ಪನ್ನ ಆದವಳೆ ದೇವಿ ಜ್ಯೋತಿ ಎಂದು ಕರೆಯುತ್ತಾರೆ. ಕೆಲವು ಇತರ ಕಥೆಗಳಲ್ಲಿ ಹೇಳುವಂತೆ ಆಕೆ ಪಾರ್ವತಿ ದೇವಿಯ ತೇಜಸ್ಸಿನಿಂದ ಜನ್ಮ ತಾಳಿದ್ದಾಳೆ ಎಂಬ ಉಲ್ಲೇಖವಿದೆ. ತಮಿಳುನಾಡಿನ ದೇವಸ್ಥಾನಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಜ್ಯೋತಿ ದೇವಿಯನ್ನು ಆರಾಧಿಸಲಾಗುತ್ತದೆ. 

ಅಂಧಕ
ಶಿವ ಪುರಾಣದಲ್ಲಿರುವ ಉಲ್ಲೇಖದಲ್ಲಿ ಮಂದರಾಚಲ ಪರ್ವತದಲ್ಲಿ ಶಿವ-ಪಾರ್ವತಿ ವಿಹರಿಸುತ್ತಿರುವ ಸಂದರ್ಭದಲ್ಲಿ, ಪಾರ್ವತಿಯು ತನ್ನ ಕೈಗಳಿಂದ ಶಿವನ ಕಣ್ಣುಗಳನ್ನು ಮುಚ್ಚಿ ಹಿಡಿಯುತ್ತಾಳೆ, ಆಗ ಜಗತ್ತು ಅಂಧಕಾರಮಯವಾಗುತ್ತದೆ. ಆ ಸಂದರ್ಭದಲ್ಲಿ ಪರಶಿವನ ಶರೀರದಿಂದ ಬೀಳುವ ಬೆವರಿನಿಂದ ಒಬ್ಬ ಬಾಲಕ ಅವತರಿಸುತ್ತಾನೆ. ಆತನ ರೂಪ ಅತ್ಯಂತ ಭಯಂಕರವಾಗಿರುತ್ತದೆ. ಅಂಧಕಾರದಲ್ಲಿ ಜನಿಸಿದ್ದ ಕಾರಣ ಆ ಬಾಲಕ ಅಂಧನಾಗಿದ್ದ, ಹಾಗಾಗಿ ಆತನನ್ನು ಅಂಧಕನೆಂದು ಕರೆಯಲಾಯಿತು. ನಂತರ ಆತನೇ ಅಂಧಕಾಸುರನೆಂದು ಕರೆಸಿಕೊಳ್ಳುತ್ತಾನೆ.

ಜಾಲಂಧರ
ಶ್ರೀಮದ್ ದೇವಿ ಭಗವತಿ ಪುರಾಣದ ಅನುಸಾರ, ಒಮ್ಮೆ ಈಶ್ವರನು ತನ್ನ ತೇಜಸ್ಸನ್ನು ಸಮುದ್ರಕ್ಕೆ ಸುಯುತ್ತಾನೆ. ಅದೇ ತೇಜಸ್ಸು ಸಮುದ್ರದಲ್ಲಿ ಜನ್ಮ ತಾಳುತ್ತದೆ. ಅವನೇ ಜಾಲಂಧರನೆಂದು ಕರೆಸಿಕೊಳ್ಳುತ್ತಾನೆ. ನಂತರ ಆತನು ಅಸುರರ ರಾಜನಾಗುತ್ತದೆ. ಪಂಜಾಬ್‌ನಲ್ಲಿರುವ ಜಲಂಧರ್ ಜಾಲಂಧರ್‌ನ ನಗರವೇ ಆಗಿತ್ತೆಂದು ಸಹ ಹೇಳಲಾಗುತ್ತದೆ.

ಇದನ್ನು ಓದಿ: ಸಂಗಾತಿಯೊಂದಿಗಿನ ಜಗಳ ನಿಭಾಯಿಸುವಲ್ಲಿ ಈ ರಾಶಿಯವರು ನಾಜೂಕು!

ಅಯ್ಯಪ್ಪ
ಮಹಾದೇವ ಮತ್ತು ವಿಷ್ಣುವು ಮೋಹಿನಿ ರೂಪವನ್ನು ತಾಳಿದ್ದಾಗ ಆದ ಸಂತಾನವೇ ಅಯ್ಯಪ್ಪನೆಂದು ಹೇಳಲಾಗುತ್ತದೆ. ಪುರಾಣಗಳ ಅನುಸಾರ ಸಹೋದರ ಮಹಿಷಾಸುರನ ಹತ್ಯೆಯಿಂದ ಸಿಟ್ಟಿಗೆದ್ದ ಮಹಿಷಿಯು, ಬ್ರಹ್ಮನನ್ನು ಪ್ರಸನ್ನಗೊಳಿಸಿಕೊಂಡು ಶಿವ ಮತ್ತು ವಿಷ್ಣುವಿನ ಸಂತಾನದಿಂದ ತನ್ನು ಹತ್ಯೆಯಾಗಬೇಕೆಂದು ವರ ಪಡೆಯುತ್ತಾಳೆ. ವರ ಪಡೆದ ಮಹಿಷಿ ಜಗತ್ತಿಗೇ ಕಂಟಕವಾಗತೊಡಗುತ್ತಾಳೆ. ಈ ಸಂದರ್ಭದಲ್ಲಿ ವಿಷ್ಣುವು ಮೋಹಿನಿಯ ರೂಪವನ್ನು ತಾಳುತ್ತಾನೆ. ಮಹಾದೇವ ಮತ್ತು ಮೋಹಿನಿಯ ಸಂತಾನವಾಗಿ ಅಯ್ಯಪ್ಪನ ಜನ್ಮವಾಗುತ್ತದೆ. ನಂತರ ಅಯ್ಯಪ್ಪನಿಂದ ಮಹಿಷಿಯ ಅಂತ್ಯವಾಗುತ್ತದೆ.

click me!