400 ವರ್ಷಗಳಿಂದ ಸೃಷ್ಟಿಕರ್ತನೆ ಇಲ್ಲಿ ಬಂಧಿ: ಕಾರಣವಂತೂ ಸಖತ್ ಚಿಂದಿ!

By Suvarna NewsFirst Published Jun 1, 2022, 4:36 PM IST
Highlights

ದೇವರಿಗೆ ದೊಡ್ಡ ಕಬ್ಬಿಣದ ಸರಪಳಿ ಹಾಕಿ ಬಂಧಿಸಿರುವ ಗ್ರಾಮಸ್ಥರು!
ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿದೆ ದೇವಾಲಯ
400 ವರ್ಷಗಳಿಂದ ಇಲ್ಲಿ ಕೆಂಚರಾಯ ದೇವರಿಗೆ ಸರಪಳಿಯ ಬಂಧನ
ಕಾರಣವಂತೂ ತುಂಬಾ ವಿಚಿತ್ರ

ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು.

ಚಿಕ್ಕಮಗಳೂರು ಜಿಲ್ಲೆ(Chikkamagaluru district) ಕಡೂರು ತಾಲೂಕಿನ ಸಖರಾಯ ಪಟ್ಟಣ(Sakaraya pattana)ದಲ್ಲಿ ಇತಿಹಾಸ ಪ್ರಸಿದ್ದ ಕೆಂಚರಾಯನ ದೇವಸ್ಥಾನವಿದೆ. ಸ್ವಜಿಲ್ಲೆ ಮಾತ್ರವಲ್ಲ, ಹೊರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ಈ ದೇವರ ದರ್ಶನ ಪಡೆಯುತ್ತಾರೆ. ಆದರೆ, ದೇವರೆಂದು ಪ್ರತಿ ದಿನ ಪೂಜಿಸಲ್ಪಡೋ ಈ ಕೆಂಚರಾಯ(Kencharaya)ನನ್ನು 400 ವರ್ಷಗಳಿಂದಲೂ ಸ್ಥಳೀಯರು ದೊಡ್ಡ ಸರಪಳಿಯಿಂದ ಕಟ್ಟಿ ಬಂಧಿಸಿಟ್ಟಿದ್ದಾರೆ. ಇದರ ಕಾರಣ ಬಹಳ ಅಚ್ಚರಿ ಹುಟ್ಟಿಸುವಂತಿದೆ. 

Latest Videos

ಕೆಂಚರಾಯ ಸ್ವಾಮಿಗೆ ಏಳುಗುಡ್ಡಗಳನ್ನ ಆವರಿಸಿಕೊಂಡಿರೋ 2038 ಎಕರೆ ಪ್ರದೇಶದ ನೀರು ಒಂದು ಹೊತ್ತಿನ ಊಟಕ್ಕೂ ಸಾಲೋದಿಲ್ಲ. ಮೂರೇ ಬೊಗಸೆಗೆ ಆ ನೀರಷ್ಟನ್ನೂ ಖಾಲಿ ಮಾಡಿಬಿಡುತ್ತಾನೆ. ಇದೇ ಕಾರಣದಿಂದ ಹೆದರಿರುವ ಜನ, ದೇವರನ್ನೇ ಕಬ್ಬಿಣದ ಸರಪಳಿಗಳಿಂದ ಬಂಧಿಸಿ ಪೂಜೆ ಮಾಡ್ತಿದ್ದಾರೆ. 

ಹೌದು, ಬಹಳ ಹಿಂದಿನ ಪುರಾಣ ಕತೆಯಿದು. ಈ ಕೆಂಚರಾಯ ದೇವಾಲಯದ ಪಕ್ಕದಲ್ಲೇ ಇರೋ ಅಯ್ಯನಕೆರೆ(Ayyanakere) ನೀರು ಊರೊಳಗಿನ ರಂಗನಾಥಸ್ವಾಮಿ(Ranganatha swamy)ಗೆ ಸ್ನಾನದ ಜೊತೆ ರೈತರ ಕೃಷಿ ಚಟುವಟಿಕೆಗಳಿಗೆ ಬೇಕಾಗ್ತಿತ್ತು. ಆದ್ರೆ, ಹಸಿವನ್ನ ತಾಳಲಾರದ ಕೆಂಚರಾಯ ಒಮ್ಮೆ ಒಂದೇ ಹೊತ್ತಿಗೆ ಇಷ್ಟೂ ಸ್ಥಳದ ನೀರನ್ನ ಖಾಲಿ ಮಾಡ್ತಿದ್ನಂತೆ. ಆ ನಂತರದಲ್ಲುಂಟಾದ ಬರಗಾಲಕ್ಕೆ ಹೆದರಿದ ಜನ, ಕಳೆದ ನಾನೂರು ವರ್ಷಗಳಿಂದ ದೇವರನ್ನ ಬಂಧಿಸಿದ್ದಾರೆ. ಒಂದು ವೇಳೆ, ದೇವರನ್ನ ಬಂಧನದಿಂದ ಮುಕ್ತ ಮಾಡಿದ್ರೆ ಅಯ್ಯನಕೆರೆ ನೀರು ಒಂದೇ ದಿನದಲ್ಲಿ ಖಾಲಿಯಾಗತ್ತೆ ಅನ್ನೋ ಭಯ, ನಂಬಿಕೆ ಸ್ಥಳೀಯರಲ್ಲಿದೆ. 

ಬುಧ ಮಾರ್ಗಿ: ಮೂರು ರಾಶಿಗಳಿಗೆ ಲಾಭಕಾರಿ, ಎರಡಕ್ಕೆ ಅಪಾಯಕಾರಿ!

ದೇವರಿಗೇ ನೀರು ಕೊಡದೆ ಬಂಧನ!
ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದಲ್ಲಿರುವ ಸಗನಿ ರಂಗನಾಥ ಸ್ವಾಮಿ ದೇವಸ್ಥಾನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ರಂಗನಾಥ ಸ್ವಾಮಿ , ಕೆಂಚರಾಯ ಸ್ವಾಮಿ ಅಣ್ಣ ತಮ್ಮ ಎನ್ನುವ ಪೌರಾಣಿಕಯನ್ನ ಕಥೆಯನ್ನು ಹೇಳಲಾಗುತ್ತದೆ. ಸಖರಾಯಪಟ್ಟಣಕ್ಕೆ ಬಂದ ಭಕ್ತರೆಲ್ಲಾ ರಂಗನಾಥ ಸ್ವಾಮಿಗೆ ಹಣ್ಣು-ಕಾಯಿ ಎಡೆ ಮಾಡಿ ಪೂಜೆ ಸಲ್ಲಿಸಿ ಹೋಗ್ತಿದ್ರು. ಕೆಂಚರಾಯನಿಗೆ ಪೂಜೆಯೂ ಇಲ್ಲ. ಎಡೆಯೂ ಇರ್ತಿರ್ಲಿಲ್ಲ. ಅದಕ್ಕಾಗಿ ಕೆಂಚರಾಯ ಹಸಿವು-ಹಸಿವು ಅಂತಾ ಏಳು ಗುಡ್ಡದ ನೀರನ್ನೆಲ್ಲಾ ರಾತ್ರೋರಾತ್ರಿ ಕುಡಿದು ಖಾಲಿ ಮಾಡ್ತಿದ್ದ. ಇದರಿಂದ ಕಂಗಾಲಾದ ಜನ, ಊರನ್ನ ಕಾಯೋ ದೇವರನ್ನೇ ಇಲ್ಲಿ ಬಂಧಿಯಾಗಿಸಿದ್ದಾರೆ. ಅಷ್ಟು ಎಚ್ಚರಿಕೆ ವಹಿಸಿದರೂ ಭಯ ತಾಳದೆ, ಕೆಂಚರಾಯನ ಹೊಟ್ಟೆ ತುಂಬಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. 

ತಿರುಪತಿಯಲ್ಲಿ ಕೂದಲು ಕೊಡೋದ್ರ ಹಿಂದಿದೆ ರೋಚಕ ಕತೆ!

ಈಗ ದಿನಂ ಪ್ರತಿ ರಂಗನಾಥನನ್ನ ನೋಡಲು ಬರೋ ಭಕ್ತರು ಕೆಂಚರಾಯನಿಗೆ ಕುರಿ, ಕೋಳಿಯನ್ನ ಬಲಿ ಕೊಟ್ಟು ದೇವರ ಹೊಟ್ಟೆ ತುಂಬಿಸ್ತಿದ್ದಾರೆ. ದೇವರ ಮೈ ಮೇಲಿನ ಕಬ್ಬಿಣದ ಸರಪಳಿಯನ್ನ ಕಳೆದ ನಾನೂರು ವರ್ಷಗಳಿಂದ ತೆಗಿದಿಲ್ವಂತೆ! ಕೆಂಚರಾಯನನ್ನ ಬಂಧಮುಕ್ತ ಮಾಡಿದ್ರೆ ಕೆಂಚರಾಯ ಮತ್ತಷ್ಟು ಹಸಿವಿನಿಂದ ಬಳಲುತ್ತಾನೆ.. ನೀರು ಖಾಲಿ ಆಗುತ್ತೆ ಎನ್ನುವ ಭಯ ಗ್ರಾಮಸ್ಥರದ್ದು. 

ಒಟ್ಟಾರೆ, ಕುಡಿಯೋ ನೀರಿಗಾಗಿ ದೇವರನ್ನೇ ಬಂಧಿಸಿದ್ದಾರೆಂದ್ರೆ ಅದು ಕಾಫಿನಾಡಲ್ಲಿ ಮಾತ್ರ ಅನ್ಸತ್ತೆ. ಇಲ್ಲಿನ ಜನ ಒಂದೇ ಒಂದು ಗಳಿಗೆಗೂ ಕೂಡ ದೇವರನ್ನ ಬಂಧಮುಕ್ತ ಮಾಡೋಕೆ ಯೋಚಿಸಿಲ್ಲ. ಆದ್ರೆ, ಸೃಷ್ಟಿಕರ್ತ ಕೂಡ ನರಮನುಷ್ಯರು ನನ್ನನ್ನೇ ಕಟ್ಟಿ ಹಾಕುವಷ್ಟು ದೊಡ್ಡವರಾಗಿದ್ದಾರಾ ಎಂದು ಕೋಪಗೊಂಡಿಲ್ಲ. ಯಾಕಂದ್ರೆ, ಬಂದ ಭಕ್ತರ ಕಷ್ಟವನ್ನೆಲ್ಲಾ ನೀಗಿಸಿ, ಬೇಡಿಕೆಗಳನ್ನೆಲ್ಲಾ ಈಡೇರಿಸ್ತಾ ಭಕ್ತರ ನೆಚ್ಚಿನ ದೇವನಾಗಿದ್ದಾನೆ ಕೆಂಚರಾಯ.

 

click me!