ಕೃಷ್ಣನ ಆ'ರಾಧ'ನೆಯಲ್ಲೇ ದೈವತ್ವಕ್ಕೇರಿದಳು ರಾಧೆ...

By Suvarna NewsFirst Published Aug 18, 2020, 5:34 PM IST
Highlights

 ರಾಧೆಯನ್ನು ಕೃಷ್ಣನ ಸ್ತ್ರೀರೂಪ ಎಂದು ಪರಿಗಣಿಸಲಾಗುತ್ತದೆ. ಪ್ರತಿವರ್ಷ ರಾಧೆಯ ಹುಟ್ಟುಹಬ್ಬವನ್ನು ರಾಧಾಷ್ಟಮಿ ಎಂದು ಆಚರಿಸಲಾಗುತ್ತದೆ. ಕೃಷ್ಣನಿಗೆ ಸಹಸ್ರಾರು ಪತ್ನಿಯರಿದ್ದಾಗಲೂ ಕೇವಲ ಪ್ರೇಮಿಯಾಗಿಯೇ ಉಳಿದ ರಾಧೆ-ಕೃಷ್ಣನ ಪ್ರೇಮ ಎಲ್ಲಕ್ಕಿಂತ ಜನಪ್ರಿಯವಾಗಿದೆ, ಇಂದಿಗೂ ಜೀವಂತವಾಗಿದೆ ಎಂದರೆ ಅಷ್ಟು ಸಾಕಲ್ಲವೇ ಈ ಪ್ರೇಮ ದೈವತ್ವಕ್ಕೇರಿತ್ತು ಎಂದು ಅರಿವಾಗಲು... ರಾಧೆಯ ಕುರಿತ ಕೆಲ ಆಸಕ್ತಿಕರ ಸಂಗತಿಗಳು ಇಲ್ಲಿವೆ.
 

ಕೃಷ್ಣನ ಪ್ರೇಮದಲ್ಲಿ ಮುಳುಗಿದ್ದ ರಾಧೆ ತನ್ನನ್ನು ವಿವಾಹವಾಗುವಂತೆ ಕೇಳಿದಾಗ, ವಿವಾಹಕ್ಕೆ ಎರಡು ಆತ್ಮಗಳು ಬೇಕು, ನಮ್ಮಿಬ್ಬರದೂ ಒಂದೇ ಆತ್ಮ ಎರಡು ದೇಹವಾಗಿರುವಾಗ ನನ್ನನ್ನೇ ನಾನು ಹೇಗೆ ವಿವಾಹವಾಗಲಿ ಎಂದನಂತೆ ಕೃಷ್ಣ. ಕೃಷ್ಣ ರಾಧೆಯ ಸಂಬಂಧ ಅತ್ಯುನ್ನತ ಪ್ರೇಮಕ್ಕೆ ಉದಾಹರಣೆ. ಅಲ್ಲಿ ಭಕ್ತಿಯಿದೆ, ಪ್ರೀತಿಯಿದೆ, ತ್ಯಾಗವಿದೆ, ಬದ್ಧತೆಯಿದೆ... ಕೃಷ್ಣನಿಗೆ ಸಹಸ್ರಾರು ಪತ್ನಿಯರಿದ್ದಾಗಲೂ ಕೇವಲ ಪ್ರೇಮಿಯಾಗಿಯೇ ಉಳಿದ ರಾಧೆ-ಕೃಷ್ಣನ ಪ್ರೇಮ ಇಂದಿಗೂ ಜೀವಂತವಾಗಿದೆ ಎಂದರೆ ಅಷ್ಟು ಸಾಕಲ್ಲವೇ ಈ ಪ್ರೇಮ ದೈವತ್ವಕ್ಕೇರಿತ್ತು ಎಂದು ಅರಿವಾಗಲು... ರಾಧೆಯ ಕುರಿತ ಕೆಲ ಆಸಕ್ತಿಕರ ಸಂಗತಿಗಳು ಇಲ್ಲಿವೆ.

ಕೃಷ್ಣನಿಗಿಂತ ಹಿರಿಯಳು
ವೃಷಭಾನು ಹಾಗೂ ಕೀರ್ತಿ ದೇವಿಯ ಪುತ್ರಿ ರಾಧೆಯು ಕೃಷ್ಣನಿಗಿಂತ 5 ವರ್ಷ ದೊಡ್ಡವಳಾಗಿದ್ದು, ಸಣ್ಣ ವಯಸ್ಸಿಂದಲೇ ಕೃಷ್ಣನೊಂದಿಗೆ ಪ್ರೇಮಕ್ಕೆ ಬಿದ್ದಿದ್ದಳು. ಬಾಲ್ಯದ ಆಟದಲ್ಲಿ ಕೃಷ್ಣನೊಂದಿಗೆ ವಿವಾಹವೂ ಆಗಿದ್ದಳು ಎಂದು ಪುರಾಣ ಹೇಳುತ್ತದೆ. 

ರಾಧೆಯ ವಿವಾಹ
ಕೃಷ್ಣ ವೃಂದಾವನ ತೊರೆದ ಬಳಿಕ, ತಾಯಿಯ ಬಲವಂತಕ್ಕೆ ರಾಧೆ ವಿವಾಹವಾದಳು. ಆಕೆಗೆ ಒಂದು ಮಗುವೂ ಇತ್ತು. ಜಗತ್ತಿನಲ್ಲೇ ಅತಿ ಸುಂದರಿ ರಾಧೆ ಎಂಬ ಮಾತಿತ್ತು. 

ಕಪ್ಪೆಳ್ಳು ದಾನ ಮಾಡಿದ್ರೆ ಧನ ಲಾಭ..! ನೀವರಿಯದ ಕಪ್ಪೆಳ್ಳಿನ ಗುಣಗಳಿವು

ರಾಧಾರಾಣಿಗೆ ಪೂಜೆ
ರಾಧೆ, ರಾಧಿಕಾ, ಮಾಧವಿ, ಕೇಶವಿ, ರಸೇಶ್ವರಿ, ರಾಧಾರಾಣಿ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ರಾಧೆಯನ್ನು ಹಿಂದೂಗಳು, ಅದರಲ್ಲೂ ವೈಷ್ಣವರು ಪ್ರೀತಿಯ ದೇವತೆ ಎಂದು ಪೂಜಿಸುತ್ತಾರೆ. ಆಕೆ ಕೃಷ್ಣನ ಶಾಶ್ವತ ಸಂಗಾತಿಯಾಗಿದ್ದು, ಗೋಕುಲದಲ್ಲಿ ಕೃಷ್ಣನ ಜೊತೆ ಸದಾ ವಾಸವಿರುತ್ತಾಳೆ ಎಂಬ ನಂಬಿಕೆಯಿದೆ. ರಾಧೆಯ ಹೆಸರನ್ನು ಭಜಿಸುವವರೊಂದಿಗೆ ಕೃಷ್ಣನಿರುತ್ತಾನೆ. 

ಕೃಷ್ಣನ ಶಕ್ತಿ
ಕೃಷ್ಣನ ಆರಾಧಕರಾದ ಹಾಲು ಮಾರುವ ಗೋಪಿಯರ ಮುಖ್ಯಸ್ಥೆಯಾಗಿದ್ದಳು ರಾಧೆ. ಸ್ವಾರ್ಥರಹಿತ ಭಕ್ತಿ, ಪ್ರೀತಿಯ ಉದಾಹರಣೆಯಾಗಿರುವ ರಾಧೆ ಕೃಷ್ಣನ ಅಂತಃಶಕ್ತಿಯಾಗಿದ್ದಾಳೆ. ರಾಧೆಯನ್ನು ಕೃಷ್ಣನ ಸ್ತ್ರೀರೂಪ ಎಂದು ಪರಿಗಣಿಸಲಾಗುತ್ತದೆ. ಪ್ರತಿವರ್ಷ ರಾಧೆಯ ಹುಟ್ಟುಹಬ್ಬವನ್ನು ರಾಧಾಷ್ಟಮಿ ಎಂದು ಆಚರಿಸಲಾಗುತ್ತದೆ. ಕೃಷ್ಣಾಷ್ಟಮಿಯಾಗಿ 15 ದಿನಕ್ಕೆ ಇದನ್ನು ಆಚರಿಸಲಾಗುತ್ತದೆ. ಹರಿವಂಶ ಹಾಗೂ ಹರಿದಾಸರ ಗ್ರಂಥಗಳಲ್ಲಿ ರಾಧೆಯನ್ನು ಲಕ್ಷ್ಮಿಯ ಅವತಾರವಾಗಿ ನೋಡದೆ, ಕೃಷ್ಣನಾಗಿಯೇ ನೋಡಲಾಗುತ್ತದೆ. 

ಆಧ್ಯಾತ್ಮ
ಮಾನವನ ಆತ್ಮದ ರೂಪಕವಾಗಿದ್ದಾಳೆ ರಾಧೆ. ಆಕೆಯ ಕೃಷ್ಣನ ಮೇಲಿನ ಪ್ರೀತಿ ಹಾಗೂ ಬಯಕೆಗಳನ್ನು ಮಾನವನ ಆಧ್ಯಾತ್ಮದ ಬೆಳವಣಿಗೆ ಹಾಗೂ ದೇವರೊಂದಿಗೆ ಐಕ್ಯವಾಗುವುದರ ಪ್ರತೀಕವಾಗಿ ಭಾವಿಸಲಾಗುತ್ತದೆ. ಆಕೆಯು ಯೋಗಮಾಯಳ, ಶಕ್ತಿದೇವಿಯ ಪ್ರತಿರೂಪವಾಗಿದ್ದಾಳೆ ಎಂದು ರಸಿಕ್ ಸಂತರು ಹೇಳುತ್ತಾರೆ. 

ಲಾಠಿ ಹೋಳಿ
ರಾಧಾ ಬದುಕಿದ್ದ ಬರ್ಸಾನಾದಲ್ಲಿ ಇಂದಿಗೂ ಲಾಠಿಮಾರ್ ಹೋಳಿ ಆಚರಿಸಲಾಗುತ್ತದೆ. ಹಿಂದೆ ಕೃಷ್ಣ ಬರ್ಸಾನಾಕ್ಕೆ ಹೋಗಿ ರಾಧೆ ಹಾಗೂ ಇತರೆ ಗೋಪಿಕೆಯರನ್ನು ಪೀಡಿಸಿದ್ದ ಕಾರಣ ಅವರೆಲ್ಲ ಕೋಲು ಹಿಡಿದು ಕೃಷ್ಣನನ್ನು ಅಟ್ಟಿಸಿಕೊಂಡು ಹೋಗಿದ್ದರಂತೆ. ಇಂದಿಗೂ ಈ ಆಚರಣೆ ಜಾರಿಯಲ್ಲಿದ್ದು, ಹೋಳಿಯ ಮುನ್ನಾ ದಿನ ನಂದ ಹಳ್ಳಿಯಿಂದ ಯುವಕರು ಬರ್ಸಾನಾಕ್ಕೆ ಹೋಗುತ್ತಾರೆ. ಬರ್ಸಾನಾದ ಯುವತಿಯರು ಕೋಲು ಹಿಡಿದು ಇವರನ್ನು ಬೆರೆಸಲು ನಿಂತಿರುತ್ತಾರೆ. ಈ ಯುವತಿಯರ ಕೈಗೆ ಸಿಕ್ಕಿಬಿದ್ದ ಹುಡುಗರಿಗೆ ಸ್ತ್ರೀಯ ವೇಷ ಧರಿಸಿ ಎಲ್ಲರ ನಡುವೆ ನರ್ತಿಸುವಂತೆ ಮಾಡಲಾಗುತ್ತದೆ. 

ಪಾರಿಜಾತ ಪುರಾಣ; ಆರೋಗ್ಯಕ್ಕೆ ರಾಮಬಾಣ

ರಾಸಲೀಲೆ ನೃತ್ಯ
ರಾಸಲೀಲೆ ನೃತ್ಯವೆಂದರೆ ಕೃಷ್ಣ ರಾಧೆಯರ ಪ್ರೇಮಪರಿಣಯ ತುಂಬಿದ ನೃತ್ಯ. ಈ ರಾಸಲೀಲೆಯು ಚಿತ್ರಕಲೆ, ನೃತ್ಯ, ಸಂಗೀತ ಸೇರಿದಂತೆ ಹಲವಾರು ಕಲಾಪ್ರಕಾರಗಳಿಗೆ ಸ್ಪೂರ್ತಿಯಾಗಿದೆ. ಚೈತನ್ಯ ಚರಿತಾಮೃತದಲ್ಲಿ ಕೃಷ್ಣದಾಸ್ ಕವಿರಾಜ್ ಗೋಸ್ವಾಮಿ ಹೇಳುವಂತೆ, ರಾಧಾ ಕೃಷ್ಣ ಒಂದೇ ಆತ್ಮ, ಆದರೆ, ಎಲ್ಲ ರೀತಿಯ ರಸಗಳನ್ನು ಅನುಭವಿಸುವ ಸಲುವಾಗಿ ಎರಡು ದೇಹದಲ್ಲಿ ಜನಿಸಿದ್ದರು.

ಬ್ರಹ್ಮ ವಿವರ್ತದ ಪ್ರಕಾರ
ಬ್ರಹ್ಮ ವಿವರ್ತ ಪುರಾಣ ಹಾಗೂ ಗರಗ ಸಂಹಿತೆಯ ಪ್ರಕಾರ ರಾಧೆ ಮತ್ತು ಕೃಷ್ಣ ಬಂದಿರ್ವನ್ ಎಂಬ ಅರಣ್ಯದಲ್ಲಿ ಬ್ರಹ್ಮನ ಉಪಸ್ಥಿತಿಯಲ್ಲಿ ವಿವಾಹವಾಗಿದ್ದರು. ಶ್ರೀಮದ್ ಭಗವತಮ್‌ನ ಪದ್ಯವೊಂದು ರಾಧೆಯ ಬಗ್ಗೆ ಹೇಳುತ್ತಾ- ಈ ಗೋಪಿಯು ದೇವರ ಅವತಾರವಾದ ಗೋವಿಂದನನ್ನು ಯಾವುದೇ ಕುಂದಿಲ್ಲದಂತೆ ಪ್ರೀತಿಸಿದಳು. ಆಕೆಯ ಬಗ್ಗೆ ಕೃಷ್ಣ ಅದೆಷ್ಟು ಸಂತೋಷಪಟ್ಟನೆಂದರೆ ನಮ್ಮೆಲ್ಲರನ್ನೂ ಬಿಟ್ಟು ಆತ ರಾಧೆಯನ್ನು ಮಾತ್ರ ಏಕಾಂತ ಸ್ಥಳಕ್ಕೆ ಕರೆದೊಯ್ದ- ಎಂದಿದೆ. 

ರಾಧಾಕೃಷ್ಣ ಪ್ರೇಮಮಂದಿರ
ವೃಂದಾವನದಲ್ಲಿ ರಾಧಾ ಕೃಷ್ಣ ಪ್ರೇಮಮಂದಿರವಿದ್ದು, ರಾಧೆಯ ಆರಾಧಕರ ಬಹಳಷ್ಟು ಜನರಿದ್ದಾರೆ. ವೃಂದಾವನದ ಗೋಪಿಯರ ರಾಣಿಯಾಗಿದ್ದ ಆಕೆಯನ್ನು ವೃಂದಾವನೇಶ್ವರಿ ಎಂದೂ ಕರೆಯಲಾಗುತ್ತದೆ. 

ಸೀತೆ ಹಾಗೂ ರಾಧಾ
ಸೀತೆ ಹಾಗೂ ರಾಧೆಯರ ವ್ಯಕ್ತಿತ್ವ ಸಂಪೂರ್ಣ ವಿಭಿನ್ನವಾದುದಾದರೂ ಇಬ್ಬರನ್ನೂ ಹಿಂದೂ ಧರ್ಮ ಆರಾಧಿಸುತ್ತದೆ. ಸೀತೆಯು ರಾಣಿಯಾಗಿದ್ದು, ಪತಿಗೆ ತಕ್ಕ ಪತ್ನಿಯಾಗಿ, ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸುವವಳಾಗಿದ್ದರೆ, ರಾಧೆಯು ಕೇವಲ ತನ್ನ ಪ್ರೇಮಿಯೊಂದಿಗಿನ ರೊಮ್ಯಾಂಟಿಕ್ ಸಂಬಂಧದಿಂದಾಗಿ ಗುರುತಿಸಿಕೊಂಡವಳು. ಕೃಷ್ಣನನ್ನು ವಿವಾಹವಾಗದೆಯೂ ತೀವ್ರವಾಗಿ ಪ್ರೀತಿಸಿ ಸೈ ಎನಿಸಿಕೊಂಡವಳು. ಇವರು ನೈತಿಕತೆಯ ಎರಡು ತುದಿಯಲ್ಲಿದ್ದರೂ ಇಬ್ಬರನ್ನೂ ಹಿಂದೂ ಧರ್ಮ ಗೌರವಿಸುವ ಜೊತೆಗೆ, ದೇವಿಯರ ರೂಪವಾಗಿ ನೋಡುತ್ತದೆ 

click me!