ಬೆಂಗಳೂರು: 12 ವರ್ಷಗಳ ಬಳಿಕ ಕಾಡು ಮಲ್ಲಿಕಾರ್ಜುನ ಮಹಾಕುಂಭಾಭಿಷೇಕ

By Kannadaprabha NewsFirst Published Nov 2, 2022, 9:00 AM IST
Highlights

ಗಂಗಾಧರ ದೀಕ್ಷಿತರ ನೇತೃತ್ವದಲ್ಲಿ 120 ಅರ್ಚಕರಿಂದ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಶೈವಾಗಮನದ ಮಾದರಿಯಲ್ಲಿ 24 ಹೋಮಕುಂಡದಲ್ಲಿ ಶಿವದೀಕ್ಷೆ ಪಡೆದವರಿಂದ ಹವನಗಳು ನಡೆಯಲಿವೆ. 

ಬೆಂಗಳೂರು(ನ.02):  ಹನ್ನೆರಡು ವರ್ಷದ ಬಳಿಕ ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ ಸ್ವಾಮಿ ರಾಜಗೋಪುರ ಮತ್ತು ವಿಮಾನಗೋಪುರ, ದಕ್ಷಿಣಮುಖ ನಂದಿ ತೀರ್ಥ ಕಲ್ಯಾಣಿ ದೇವಾಲಯದ ಮಹಾನಂದಿ ರಾಜಗೋಪುರ ಹಾಗೂ ಸುಬ್ರಹ್ಮಣೇಶ್ವರ ಸ್ವಾಮಿ ದೇವಸ್ಥಾನದ ವಿಮಾನ ಗೋಪುರಗಳ ಮಹಾ ಕುಂಭಾಭಿಷೇಕ ಹಾಗೂ ಸಹಸ್ರ ಕಳಶಾಭಿಷೇಕ ಮಹೋತ್ಸವ ನ.4ರಿಂದ 7ರವರೆಗೆ ಅದ್ಧೂರಿಯಾಗಿ ಜರುಗಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ, ಧಾರ್ಮಿಕ ದತ್ತಿ ಇಲಾಖೆ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಕಾಡುಮಲ್ಲೇಶ್ವರ ಗೆಳೆಯರ ಬಳಗದಿಂದ ಮಲ್ಲೇಶ್ವರದ ಕಾಡುಮಲ್ಲೇಶ್ವರ ಬಯಲು ರಂಗಮಂಟಪದಲ್ಲಿ ಕಾರ್ಯಕ್ರಮ ಆಯೋಜನೆ ಆಗಿದೆ. ಸುಮಾರು 3 ಲಕ್ಷ ಭಕ್ತರು ಆಗಮಿಸಲಿದ್ದು, ದರ್ಶನ, ಮತ್ತು ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ವೈವಾಹಿಕ ಜೀವನದಲ್ಲಿ ಸಮೃದ್ಧಿಗಾಗಿ ತುಳಸಿ ಹಬ್ಬದ ದಿನ ಇದನ್ನ ಮಾಡಿ

ಪ್ರಧಾನ ಅರ್ಚಕ ವೆಂಕಟೇಶ ದೀಕ್ಷಿತರು, ವಿಶೇಷ ಆಗಮಿಕರಾದ ಸೋಮಸುಂದರ ದೀಕ್ಷಿತರು ಹಾಗೂ ದೇವಸ್ಥಾನದ ಗಂಗಾಧರ ದೀಕ್ಷಿತರ ನೇತೃತ್ವದಲ್ಲಿ 120 ಅರ್ಚಕರಿಂದ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಶೈವಾಗಮನದ ಮಾದರಿಯಲ್ಲಿ 24 ಹೋಮಕುಂಡದಲ್ಲಿ ಶಿವದೀಕ್ಷೆ ಪಡೆದವರಿಂದ ಹವನಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ನ.4ರಂದು ಬೆಳಗ್ಗೆ 8.30ಕ್ಕೆ ಮಹಾಗಣಪತಿ ಪೂಜೆ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 4.30ಕ್ಕೆ ವಾಸ್ತುಶಾಂತಿ ಹೋಮ, ದ್ರವ್ಯಾಹುತಿ, ಕುಂಭಾಲಂಕಾರವಿದೆ. ನ.5ರಂದು ವೇದಪಾರಾಯಣ, ಸೋಮಕುಂಭಾರಾಧನೆ, ದಿಶಾಹೋಮ ನಡೆಯಲಿವೆ. ಸಂಜೆ ಚತುರ್ವೇದ ಪಾರಾಯಣ ಷೋಡಶೋಪಚಾರ, ಅಷ್ಟಾವಧಾನ ಪೂಜೆ ನಡೆಯಲಿವೆ ಎಂದು ತಿಳಿಸಿದರು.

ಮುಖ್ಯವಾಗಿ ನ.6ರಂದು ಕೋಡಿ ಮಠ ಮಹಾಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹಾಗೂ ಉಡುಪಿ ಪಲಿಮಾರು ಮಠ ಪೀಠಾಧಿಪತಿ ವಿದ್ಯಾಧೀಶತೀರ್ಥ ಶ್ರೀಪಾದರು 11.20ರಿಂದ 12.5ರವರೆಗೆ ಕಾಡುಮಲ್ಲಿಕಾರ್ಜುನ ಸ್ವಾಮಿ, ರಾಜಗೋಪುರಕ್ಕೆ ಮಹಾ ಕುಂಭಾಭಿಷೇಕ ನೆರವೇರಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ, ಮತ್ತು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಡಿ.ವಿ.ಸದಾನಂದಗೌಡ ಮತ್ತು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ತೋಟಗಾರಿಕೆ ಸಚಿವ ಮುನಿರತ್ನ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಪೋಲೀಸ್ ಅಧಿಕಾರಿಯಾಗಬೇಕಾ? ಜಾತಕದಲ್ಲಿ ಈ ಯೋಗವಿರಬೇಕು!

ಅಂದು ರಾತ್ರಿ ಅದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಾಲಾನಂದನಾಥ ಸ್ವಾಮೀಜಿ ಅವರು ಭಾರತದ ಪವಿತ್ರ ನದಿಗಳಿಂದ ಸಂಗ್ರಹಿಸಿದ ವಿಶೇಷ ಕಳಶಾಭಿಷೇಕ ನೆರವೇರಿಸುವರು. ಗಂಗಾ,ತುಂಗ,ಕಾವೇರಿ,ಕುಮಾರಧಾರ, ಘಟಪ್ರಭಾ 30ಕ್ಕೂ ಪವಿತ್ರ ನದಿಗಳ ನೀರನ್ನು ಕಾಡು ಮಲ್ಲಿಕಾರ್ಜುನ ಸ್ವಾಮಿಗೆ ಜಲಾಭಿಷೇಕ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ

ನ.4ರಂದು ಪ್ರವೀಣ ಕಾರಡಗಿ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮವಿದೆ. ನ.5ಕ್ಕೆ ಡಾ. ರಕ್ಷಾ ಕಾರ್ತಿಕ್‌ ವೃಂದದಿಂದ ಭರತನಾಟ್ಯವಿದೆ. ನ.6ರಂದು ಮಂಗಳೂರಿನ ಯಕ್ಷ ತರಂಗಿಣಿ ತಂಡದಿಂದ ‘ಯಕ್ಷಗಾನ ವೈವಿಧ್ಯ’ ಕಾರ್ಯಕ್ರಮ ನಡೆಯಲಿದೆ. ನ.7ಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಡಾ. ಲಕ್ಷ್ಮಣದಾಸ್‌ ಅವರು ಶಿವಕಥಾಮೃತ ಗಿರಿಜಾ ಕಲ್ಯಾಣ ನಡೆಸಿಕೊಡಲಿದ್ದಾರೆ.
 

click me!